ನೇಣುಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಮೃತದೇಹ ಪತ್ತೆ: ಗಂಡನ ಅನುಮಾನದ ಭೂತಕ್ಕೆ ಯುವತಿ ಬಲಿ?
ಚಿಕ್ಕಬಳ್ಳಾಪುರದಲ್ಲಿ ನವವಿವಾಹಿತೆ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮದುವೆಯಾಗಿ ಐದೇ ತಿಂಗಳಲ್ಲಿ ನಡೆದ ಈ ಘಟನೆ ತೀವ್ರ ಅನುಮಾನಕ್ಕೆ ಕಾರಣವಾಗಿದ್ದು, ಪತಿಯ ಅನುಮಾನದ ಭೂತವೇ ಇದಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಯುವತಿ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪೊಲೀಸರ ತನಿಖೆ ಬಳಿಕವೇ ಗೊತ್ತಾಗಬೇಕಿದೆ.

ಚಿಕ್ಕಬಳ್ಳಾಪುರ, ಏಪ್ರಿಲ್ 28: ಅನುಮಾನಾಸ್ಪದ ರೀತಿಯಲ್ಲಿ ನವವಿವಾಹಿತೆ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿಯಲ್ಲಿ ನಡೆದಿದೆ. ರೂಪಾ (30) ಮೃತ ಯುವತಿಯಾಗಿದ್ದು, ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. 5 ತಿಂಗಳ ಹಿಂದೆಯಷ್ಟೇ ಮುನಿರಾಜು ಜತೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ನಿವಾಸಿ ರೂಪಾ ಮದುವೆಯಾಗಿತ್ತು. ಪತಿಯ ಅನುಮಾನದ ಭೂತಕ್ಕೆ ರೂಪಾ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದ್ದು, ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಪತಿ ವಿರುದ್ಧವೇ ಕೊಲೆ ಆರೋಪ
ಇನ್ನು ಅನುಮಾನಾಸ್ಪದ ರೀತಿಯಲ್ಲಿ ಮನೆ ಮಗಳ ಸಾವಿನಿಂದ ಕಂಗಾಲಾಗಿರುವ ರೂಪಾ ಕುಟುಂಬಸ್ಥರು, ಆಕೆಯ ಪತಿ ಮುನಿರಾಜು ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಶವಾಗಾರದ ಬಳಿ ಮುನಿರಾಜು ತಾಯಿಗೆ ಮೃತ ರೂಪಾ ಸಂಬಂಧಿಕರು ಹಿಡಿಶಾಪವನ್ನೂ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರೂಪಾರದ್ದು ಆತ್ಮಹತ್ಯೆಯಾ ಅಥವಾ ಆಕೆಯ ಕುಟುಂಬಸ್ಥರು ದೂರಿರುವಂತೆ ಕೊಲೆಯಾ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ.
ಇದನ್ನೂ ಓದಿ: ಆ ಚೀಟಿಗಳಲ್ಲಿದೆಯಾ ಸಾವಿನ ಸೀಕ್ರೆಟ್? ಯುವತಿಯ ನಗ್ನ ಮೃತದೇಹ ಪತ್ತೆ ಪ್ರಕರಣದ ಹಿಂದೆ ಹಲವು ಅನುಮಾನ
ಪ್ರೀತಿ ವಿಚಾರಕ್ಕೆ ಯುವಕ ಆತ್ಮಹತ್ಯೆ
ಮಾಗಡಿ ತಾಲೂಕಿನ ಕುದೂರು ಕುದೂರು ರಸ್ತೆ ಮಲ್ಲಿಕುಂಟೆಯ ತೋಟದ ಮನೆಯಲ್ಲಿ ಪ್ರೀತಿ ವಿಚಾರಕ್ಕೆ ಮನನೊಂದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಾಜೇಶ್(35) ಮೃತನಾಗಿದ್ದು, ಪ್ರೀತಿಸಿದವಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಎಂದು ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಬೆಂಗಳೂರಿನ ಬಾಗಲೂರು-ಸಾತನೂರು ನಿವಾಸಿ ರಾಜೇಶ್ ಶಿವಣ್ಣ ಎಂಬುವವರ ಎರಡನೇ ಮಗನಾಗಿದ್ದು, ಡೆತ್ನೋಟ್ ಬಗ್ಗೆ ರಾಜೇಶ್ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜೇಶ್ನನ್ನು ಯಾರೋ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂಬ ಅನುಮಾನ ಇರೋದಾಗಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:33 pm, Tue, 28 April 26




