
ಚಿಕ್ಕಮಗಳೂರು, ಸೆಪ್ಟೆಂಬರ್ 04: ಒಂಬತ್ತು ತಿಂಗಳ ಗರ್ಭಿಣಿ ಪತ್ನಿಯನ್ನೇ ನಿರ್ದಯವಾಗಿ ಹತ್ಯೆ ಮಾಡಿದ್ದ 38 ವರ್ಷದ ವ್ಯಕ್ತಿಗೆ ಚಿಕ್ಕಮಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ, ಚಿಕ್ಕಮಗಳೂರು ನಗರದ ಶಂಕರಪುರ ನಿವಾಸಿ ಲಕ್ಷ್ಮಣಗೌಡ ಅವರ ಪುತ್ರ ಮಂಜುನಾಥ್ ಅಲಿಯಾಸ್ ಮಂಜು ಶಿಕ್ಷೆಗೆ ಗುರಿಯಾದ ವ್ಯಕ್ತಿಯಾಗಿದ್ದು, 2025ರ ಜನವರಿ 14ರಂದು ಈತ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಪರಿಣಾಮ ಮಗುವಿಗೆ ಜನ್ಮ ನೀಡಿ ಆಕೆ ಪ್ರಾಣಬಿಟ್ಟಿದ್ದಳು.
ಜನವರಿ 14ರಂದು ಸಂಜೆ 6ರ ಸುಮಾರಿಗೆ ಕೆಲಸ ಮುಗಿಸಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಮಂಜುನಾಥ್, ಪತ್ನಿ ಶಾರದಾ ಬಳಿ ಊಟ ಕೇಳಿದ್ದ. ಬಳಿಕ ಜಗಳ ಆರಂಭಿಸಿದ್ದ ಈತ ಆಕೆಯ ಕೂದಲನ್ನು ಹಿಡಿದು ಎಳೆದಾಡಿ ನೆಲಕ್ಕೆ ತಳ್ಳಿ, ತಲೆಗೆ ಗುದ್ದಿ, ಹೊಟ್ಟೆಗೆ ಕಾಲಿನಿಂದ ಒದ್ದು, ನಿನ್ನನ್ನೂ ಮಗುವನ್ನೂ ಕೊಲ್ಲುತ್ತೇನೆ ಎಂದು ಬೆದರಿಸಿದ್ದ. ಘಟನೆಯಲ್ಲೊ ಗಂಭೀರ ಗಾಯಗೊಂಡಿದ್ದ ಶಾರದಾ ಅವರನ್ನು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (HIMS) ದಾಖಲಿಸಲಾಗಿತ್ತು. ಅಲ್ಲಿ ಅವರು ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಗಾಯಗಳಿಂದಾಗಿ ಮೃತಪಟ್ಟಿದ್ದರು.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಆರೋಪಿಯ ಸುಳ್ಳಿನ ನಾಟಕ ಬಯಲು: ಚಿಕನ್ ಪಾರ್ಟಿ ಕೊಲೆಯಲ್ಲಿ ಅಂತ್ಯ
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರದಾ ಕುಟುಂಬದ ದೂರಿನ ಆಧಾರದ ಮೇಲೆ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಎಚ್.ಎಸ್. ಲೋಹಿತಾಶಾಚಾರ್ ಅವರು ಪ್ರಕರಣದ ವಾದ ಮಂಡಿಸಿದ್ದರು. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103ರ ಅಡಿಯಲ್ಲಿ ಮಂಜುನಾಥ್ ತಪ್ಪಿತಸ್ಥನೆಂದು ತೀರ್ಪು ನೀಡಿದ ನ್ಯಾಯಾಧೀಶ ಕಿರಣ್ ಕಿಣಿ, ಜೀವಾವಧಿ ಶಿಕ್ಷೆ ಹಾಗೂ 75,000 ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ 10 ತಿಂಗಳ ಸರಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತಿಳಿಸಿದ್ದಾರೆ.. ಅಲ್ಲದೆ, ಶಾರದಾ ಅವರ ತಾಯಿ ಶಂಕರಪುರದ ಸಿದ್ದಮ್ಮ ಅವರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (DLSA) ನ್ಯಾಯಾಲಯ ಶಿಫಾರಸು ಮಾಡಿದೆ ಎಂದು ಪೊಲೀಸರು ತಿಳಿಸಿರೋದಾಗಿ ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:58 am, Fri, 4 September 26