ಬಳ್ಳಾರಿಯ ಅಂಗನವಾಡಿಯಲ್ಲಿ ಗರ್ಭಿಣಿ, ಬಾಣಂತಿಯರಿಗೆ ಅವಧಿ ಮೀರಿದ ಫುಡ್ ಕಿಟ್ ವಿತರಣೆ: ಗಂಭೀರ ಆರೋಪ
ಬಳ್ಳಾರಿಯ ಅಂಗನವಾಡಿಯೊಂದರಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಅವಧಿ ಮೀರಿದ ಪೌಷ್ಟಿಕ ಆಹಾರದ ಕಿಟ್ಗಳನ್ನು ವಿತರಿಸಿರುವ ಆರೋಪ ಕೇಳಿಬಂದಿದೆ. ಮೇ ತಿಂಗಳಿನಲ್ಲಿ ತಯಾರಾದ ಆಹಾರ ಸಾಮಗ್ರಿಗಳ ಬಳಕೆ ಅವಧಿ ಮುಗಿದಿದ್ದರೂ ನೀಡಲಾಗಿದ್ದು, ಕಳಪೆ ಆಹಾರದಿಂದ ಆರೋಗ್ಯ ಹದಗೆಟ್ಟರೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಮುಖ್ಯಾಂಶಗಳು
- ಬಳ್ಳಾರಿ ಅಂಗನವಾಡಿಯಲ್ಲಿ ಅವಧಿ ಮೀರಿದ ಕಿಟ್
- ಗರ್ಭಿಣಿ, ಬಾಣಂತಿಯರಿಗೆ ನೀಡಿದ ಆಹಾರ
- ನಿರ್ಲಕ್ಷ್ಯದ ವಿರುದ್ಧ ಪೋಷಕರಿಂದ ಆಕ್ರೋಶ
ಬಳ್ಳಾರಿ, ಸೆಪ್ಟೆಂಬರ್ 4: ರಾಜ್ಯದಲ್ಲಿ ಕಳಪೆ ಹಾಗೂ ಅವಧಿ ಮೀರಿದ ಆಹಾರದ ವಿರುದ್ಧ ಆಹಾರ ಇಲಾಖೆ ನಿರಂತರ ದಾಳಿ ನಡೆಸುತ್ತಿರುವ ನಡುವೆಯೇ, ಬಳ್ಳಾರಿಯಲ್ಲಿ ಅಂಗನವಾಡಿ ಕೇಂದ್ರದಲ್ಲೇ ಅವಧಿ ಮೀರಿದ ಫುಡ್ ಕಿಟ್ ವಿತರಿಸಿರುವ ಆರೋಪ ಕೇಳಿಬಂದಿದೆ. ಬಳ್ಳಾರಿ ನಗರದ 35ನೇ ವಾರ್ಡ್ನ ಎಂಕೆ ನಗರ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ನೀಡುವ ಫುಡ್ ಕಿಟ್ಗಳನ್ನು ವಿತರಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಅಂಗನವಾಡಿಯಲ್ಲಿ ಕೊಟ್ಟ ಫುಡ್ ಕಿಟ್ ಅನ್ನು ಮನೆಗೆ ತೆರಳಿ ಪರಿಶೀಲಿಸಿದಾಗ ಅದರಲ್ಲಿದ್ದ ಕೆಲವು ಆಹಾರ ಪದಾರ್ಥಗಳು ಅವಧಿ ಮೀರಿರುವುದು ಬೆಳಕಿಗೆ ಬಂದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮೇ 15ರಂದು ತಯಾರಾದ ಈ ಫುಡ್ ಕಿಟ್ಗೆ ತಯಾರಾದ ದಿನದಿಂದ ಮೂರು ತಿಂಗಳ ಅವಧಿ ನಿಗದಿಯಾಗಿತ್ತು. ಆದರೆ ಮೂರು ತಿಂಗಳ ಅವಧಿ ಮುಗಿದು ಸುಮಾರು 15 ದಿನ ಕಳೆದಿದ್ದರೂ ಅದೇ ಕಿಟ್ಗಳನ್ನು ವಿತರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಅವಧಿ ಮೀರಿದ ಆಹಾರ ಸೇವಿಸಿ ಅನಾಹುತವಾದರೆ ಯಾರು ಹೊಣೆ: ಸಾರ್ವಜನಿಕರ ಪ್ರಶ್ನೆ
ಫುಡ್ ಕಿಟ್ನಲ್ಲಿ ನೀಡಲಾದ ಪುಷ್ಟಿ ಪ್ಯಾಕೆಟ್, ಬೆಲ್ಲ ಹಾಗೂ ಸಕ್ಕರೆ ಸೇರಿದಂತೆ ಪದಾರ್ಥಗಳ ಅವಧಿ ಮುಗಿದಿರುವುದನ್ನು ಗಮನಿಸದೇ ಸೇವಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಅವಧಿ ಮೀರಿದ ಆಹಾರ ಸೇವನೆಯಿಂದ ಯಾವುದೇ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗೆ ಬೆಂಗಳೂರೂ ಸೇರಿದಂತೆ ರಾಜ್ಯಾದ್ಯಂತ ಹೋಟೆಲ್, ರೆಸ್ಟೋರೆಂಟ್ ಹಾಗೂ ಆಹಾರ ಮಳಿಗೆಗಳ ಮೇಲೆ ಆಹಾರ ಇಲಾಖೆ ದಾಳಿ ನಡೆಸಿ ಕಳಪೆ ಗುಣಮಟ್ಟದ ಮತ್ತು ಅವಧಿ ಮೀರಿದ ಆಹಾರ ವಶಪಡಿಸಿಕೊಂಡು ಕ್ರಮ ಕೈಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಹಾಗೂ ಗರ್ಭಿಣಿ, ಬಾಣಂತಿಯರ ಪೌಷ್ಟಿಕ ಆಹಾರ ವಿತರಣೆಯಲ್ಲೇ ಇಂತಹ ನಿರ್ಲಕ್ಷ್ಯದ ಆರೋಪ ಕೇಳಿಬಂದಿರುವುದು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಮಗುವಿಗೆ ‘ಫಾರ್ಮುಲಾ ಫೀಡ್’ ಕೊಡುವ ಮುನ್ನ ಎಚ್ಚರ! ಬೆಂಗಳೂರಿನಲ್ಲಿ3.7 ಮೆಟ್ರಿಕ್ ಟನ್ ಮಿಸ್ಬ್ರ್ಯಾಂಡೆಡ್ ಶಿಶು ಆಹಾರ ವಶ
ಅವಧಿ ಮೀರಿದ ಫುಡ್ ಕಿಟ್ ವಿತರಣೆ ಆರೋಪದ ಬಗ್ಗೆ ಸಂಬಂಧಪಟ್ಟ ಇಲಾಖೆ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Fri, 4 September 26



