ಚಿತ್ರದುರ್ಗ: ಆಟೋದಲ್ಲಿ ಕಾಲೇಜಿಗೆ ಹೋಗಿಬರುವಾಗ ಸಲುಗೆ, ಪ್ರೀತಿಸಿ ಮದುವೆ -ಆ ಮೇಲೆ ಆಟೋ ಚಾಲಕ ಪತಿಯಿಂದಲೇ ಪತ್ನಿಯ ಹತ್ಯೆ
Love Marriage: ಆಟೋ ಚಾಲಕ ಚಿತ್ರಲಿಂಗಪ್ಪನ ಆಟೋದಲ್ಲಿ ಚಿತ್ರದುರ್ಗದ ಡಿಗ್ರಿ ಕಾಲೇಜಿಗೆ ತೆರಳುವ ವೇಳೆ ಪೂರ್ಣಿಮಾಳೊಂದಿಗೆ ಸಲುಗೆ ಬೆಳೆದಿತ್ತು. ಒಂದೂವರೆ ವರ್ಷದ ಹಿಂದೆ ಇಬ್ಬರೂ ಪ್ರೇಮ ವಿವಾಹ ಆಗಿದ್ದರು. ಈ ಮಧ್ಯೆ, ವರದಕ್ಷಿಣೆ ಕಿರುಕುಳಕ್ಕೆ ಯುವತಿ ಬಲಿಯಾದಳು.

ಆ ಚೆಲುವೆ ಆಟೋ ಚಾಲಕನ ಪ್ರೇಮ ಪಾಶಕ್ಕೆ ಸಿಲುಕಿದ್ದಳು. ವರ್ಷದ ಹಿಂದಷ್ಟೇ ಪೋಷಕರ ವಿರೋಧ ಲೆಕ್ಕಿಸದೆ ಪ್ರೇಮ ವಿವಾಹವನ್ನೂ ಆಗಿದ್ದರು. ಆದ್ರೆ, ಇದೀಗ ಆ ಚೆಲುವೆ ಪತಿಯ ಮನೆಯಲ್ಲೇ ಹೆಣವಾಗಿ ಪತ್ತೆ ಆಗಿದ್ದಾಳೆ. ಅಸಲಿಗೆ ಆಗಿದ್ದೇನು. ಇಲ್ಲಿದೆ ವಿವರ. ಪತಿಯ ಜತೆಗೆ ವಾಸವಿದ್ದ ಮನೆಯಲ್ಲೇ ಹೆಣವಾದ ಚೆಲುವೆ. ಮುಗಿಲು ಮುಟ್ಟಿದ ಪೋಷಕರ ಆಕ್ರಂದನ. ದಲಿತಳೆಂಬ ಕಾರಣಕ್ಕೆ ಜಾತಿ ಕಿರುಕುಳ, ವರದಕ್ಷಿಣೆ ಕಿರುಕುಳ (Dowry Harassment), ಹತ್ಯೆ ಆರೋಪ… ಹೌದು, ಚಿತ್ರದುರ್ಗ (Chitradurga) ತಾಲೂಕಿನ ಚಿಕ್ಕಪುರ ಗ್ರಾಮದ ಪೂರ್ಣಿಮಾ, ಕತ್ರೆಕಟ್ಟೆ ಗ್ರಾಮದ ಚಿತ್ರಲಿಂಗಪ್ಪ ಸುಮಾರು ಮೂರು ವರ್ಷದಿಂದ ಪರಿಚಿತರು. ಆಟೋ ಚಾಲಕನಾಗಿದ್ದ (Auto Driver) ಚಿತ್ರಲಿಂಗಪ್ಪನ ಆಟೋದಲ್ಲಿ ಪೂರ್ಣಿಮಾ ಚಿತ್ರದುರ್ಗದ ಡಿಗ್ರಿ ಕಾಲೇಜಿಗೆ ತೆರಳುವ ವೇಳೆ ಸಲುಗೆ ಬೆಳೆದಿತ್ತು. ಪರಿಚಯ ಪ್ರೇಮಕ್ಕೆ ತಿರುಗಿದ್ದು ಒಂದೂವರೆ ವರ್ಷದ ಹಿಂದೆ ಇಬ್ಬರೂ ಪ್ರೇಮ ವಿವಾಹ (Love Marriage) ಆಗಿದ್ದರು.
ಅಂತೆಯೇ ಚಿತ್ರದುರ್ಗ ತಾಲೂಕಿನ ಗಾರೆಹಟ್ಟಿ ಗ್ರಾಮದಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಆದ್ರೆ ಇತ್ತೀಚೆಗೆ ಚಿತ್ರಲಿಂಗಪ್ಪ ಮತ್ತು ಕುಟುಂಬದವರು ಪೂರ್ಣಿಮಾಗೆ ವರದಕ್ಷಿಣೆ ಕಿರುಕುಳ ನೀಡತೊಡಗಿದ್ದರಂತೆ. ಅಲ್ಲದೆ ಪೂರ್ಣಿಮಾ ದಲಿತ ಸಮುದಾಯದವಳೆಂಬ (ಚಲವಾದಿ ಸಮುದಾಯ) ಕಾರಣಕ್ಕೆ ನಾವು ಮೇಲ್ವರ್ಗದವರೆಂದು (ಗೊಲ್ಲ ಸಮುದಾಯ) ಚಿತ್ರಲಿಂಗಪ್ಪ ಮತ್ತು ಕುಟುಂಬಸ್ಥರು ನಿಂದಿಸುತ್ತಿದ್ದರಂತೆ. ಅದೇ ಕಾರಣಕ್ಕೆ ಗಲಾಟೆ ಮಾಡಿ ಹೊಡೆದು, ಪೂರ್ಣಿಮಾಳ (22) ಹತ್ಯೆ ಮಾಡಿದ್ದಾರೆ. ಬಳಿಕ ನೇಣಿಗೆ ಶರಣಾಗಿದ್ದಾಳೆಂದು ಹೇಳಿ ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ ನಡೆಸಿದ್ದಾರೆ ಎಂದು ಮೃತಳ ತಂದೆ ಪುಟ್ಟರಾಜು ಆರೋಪಿಸಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಮಹಿಳಾ ಠಾಣೆಯ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೂರ್ಣಿಮಾ ಮಕಾಡೆ ಮಲಗಿದ್ದ ರೀತಿಯಲ್ಲಿ ಶವವಾಗಿ ಪತ್ತೆ ಆಗಿದ್ದಾಳೆ. ಕತ್ತಿಗೆ ಸೀರೆ ಬಿಗಿದಿರುವುದು ಕಂಡು ಬಂದಿದೆ. ನೇಣು ಬಿಗಿದಿರುವುದನ್ನು ಕಂಡು ಕೆಳಗಿಳಿಸಿರುವುದಾಗಿ ಪತಿ ಪೊಲೀಸರೆದರು ಹೇಳಿದ್ದಾನೆ ಎನ್ನಲಾಗಿದೆ. ಅಂತೆಯೇ ಅದೇ ಕೊಠಡಿಯಲ್ಲಿ ಒಂದು ಹಾಳೆಯಲ್ಲಿ ದೇವರೆ ಸಾಕು ಜೀವನ ಎಂದು ಬರೆದಿರುವುದು ಪತ್ತೆ ಆಗಿದ್ದು ಪೊಲೀಸ್ರು ವಶ ಪಡಿಸಿಕೊಂಡಿದ್ದಾರೆ. ಆರೋಪಿ ಚಿತ್ರಲಿಂಗಪ್ಪನನ್ನು ಪೊಲೀಸ್ರು ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ ಎಂದು ಚಿತ್ರದುರ್ಗ ಎಸ್ಪಿ ಕೆ. ಪರಶುರಾಮ್ ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಗಾರೇಹಟ್ಟಿಯಲ್ಲಿ ಗೃಹಿಣಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಪ್ರೇಮಿಯ ನಂಬಿ ಪೋಷಕರ ಬಿಟ್ಟು ಹೋದವಳು ಹೆಣವಾಗಿ ಪತ್ತೆಯಾದ ದಾರುಣ ಘಟನೆ ನಡೆದಿದೆ. ಪತಿ ಮತ್ತು ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ, ಜಾತಿ ನಿಂದನೆ ಮತ್ತು ಹತ್ಯೆ ಪ್ರಕರಣ ದಾಖಲಾಗಿದೆ. ಪೊಲೀಸ್ರು ಕೂಲಂಕಶವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಮಾಡಬೇಕಿದೆ.
ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ