ಚಿತ್ರದುರ್ಗ: ಕಾರು-ಲಾರಿ ಮುಖಾಮುಖಿ ಡಿಕ್ಕಿ, ಇಬ್ಬರು ಪುರುಷರು, ಓರ್ವ ಮಹಿಳೆ ಸಾವು
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶ ಮೂಲದ ಇನೊವಾ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಹೊಳಲ್ಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಚಿತ್ರದುರ್ಗ, ಮೇ 12: ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ (accident) ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪುರುಷರು ಸೇರಿದಂತೆ ಓರ್ವ ಮಹಿಳೆ ಸಾವನ್ನಪ್ಪಿರುವಂತ (death) ಘಟನೆ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಕಣಿವೆ ಬಳಿ ನಡೆದಿದೆ. ಸುನೀತಾ(34), ಶ್ಯಾಂ ಬಾಬು(17), ಶಿವನಾಗಲಿ(55) ಮೃತರು. ಮೃತರನ್ನು ಆಂಧ್ರಪ್ರದೇಶದ ಗುಂಟೂರಿನ ವೆಂಕಟಪುರಂ ಮೂಲದವರು ಎಂದು ಗುರುತಿಸಲಾಗಿದೆ. ಆಂಧ್ರದಿಂದ ಶಿವಮೊಗ್ಗಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಹೊಳಲ್ಕೆರೆ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಚಿತ್ರದುರ್ಗದಿಂದ ಹೊಳಲ್ಕೆರೆ ಕಡೆಗೆ ತೆರಳುತ್ತಿದ್ದ ಕಾರಿಗೆ, ಹೊಳಲ್ಕೆರೆಯಿಂದ ಚಿತ್ರದುರ್ಗ ಕಡೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಇನೊವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಟ್ರ್ಯಾಕ್ಟರ್ಗೆ ಓಮ್ನಿ ಡಿಕ್ಕಿ: ಒಂದೂವರೆ ವರ್ಷದ ಮಗು ಸೇರಿ ಇಬ್ಬರು ಸ್ಥಳದಲ್ಲೇ ಸಾವು
ಟ್ರ್ಯಾಕ್ಟರ್ಗೆ ಓಮ್ನಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಆಂಜನೇಯ ದೇಗುಲ ಬಳಿ ನಡೆದಿದೆ. ಒಂದೂವರೆ ವರ್ಷದ ಮಗು ಲಕ್ಷ್ಮೀ ಮತ್ತು ದಾಕ್ಷಾಯಿಣಿ(50) ಮೃತ ದುರ್ದೈವಿಗಳು.
ಇದನ್ನೂ ಓದಿ: ಟೆಲಿಗ್ರಾಮ್ ಆ್ಯಪ್ನಲ್ಲಿ ಕೆಲಸ ಹುಡುಕುವವರು ಎಚ್ಚರ! 3.5 ಲಕ್ಷ ರೂ ಕಳೆದುಕೊಂಡ ಯುವಕ
ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ಗೆ ಓಮ್ನಿ ಡಿಕ್ಕಿಯಾಗಿದೆ. ಗಾಯಾಳುಗಳಿಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಟಾಟಾ ಏಸರ್ ವಾಹನ ಹಾಗೂ ಕಾರು ಮಧ್ಯೆ ಮುಖಾಮುಖ ಡಿಕ್ಕಿ
ಓವರ್ ಟೇಕ್ ಮಾಡುವ ಭರದಲ್ಲಿ ಕಾರು ಹಾಗೂ ಎತ್ತುಗಳನ್ನು ಸಾಗಾಟ ಮಾಡುತ್ತಿದ್ದ ಟಾಟಾ ಏಸರ್ ವಾಹನ ಮಧ್ಯೆ ಮುಖಾಮುಖ ಡಿಕ್ಕಿ ಹೊಡೆದ ಘಟನೆ ಇತ್ತೀಚೆಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಕ್ರಾಸ್ ಬಳಿ ನಡೆದಿತ್ತು. ಡಿಕ್ಕಿಯ ರಭಸಕ್ಕೆ ಟಾಟಾ ಏಸರ್ ವಾಹನ ಪಲ್ಟಿಯಾಗಿತ್ತು.
ಕಾರು ಚಾಲಕ ಕಲಬುರಗಿ ಜಿಲ್ಲೆಯ ಅಫಜಲಫೂರ ತಾಲೂಕಿನ ಇಂಗಳಗಿ ಗ್ರಾಮದ ಮಲ್ಲು ಗೌರ್ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಇನ್ನು ಟಾಟಾ ಏಸರ್ನಲ್ಲಿದ್ದ ಚಾಲಕ ಬಸವನಬಾಗೇವಾಡಿ ಪಟ್ಟಣದ ಮಶ್ಯಾಕ ಕೊರಬು ಹಾಗೂ ಕ್ಲೀನರ್ ಬಸವನಬಾಗೇವಾಡಿ ತಾಲೂಕಿನ ಜೈನಾಪೂರ ಗ್ರಾಮದ ಹನುಮಂತ ಕವಡಿಗೆ ಗಾಯಗಳಾಗಿದ್ದವು.
ಇದನ್ನೂ ಓದಿ: ಬೆಂಗಳೂರು: ಪಕ್ಕದ ಮನೆಯವರ ಮೇಲಿನ ದ್ವೇಷಕ್ಕೆ ಬಾಲಕನನ್ನ ಅಪಹರಿಸಿ ಹತ್ಯೆ, ಕೊಲೆ ಸತ್ಯ ಬಿಚ್ಚಿಟ್ಟ ಆರೋಪಿ ಪುತ್ರಿ
ಇಬ್ಬರನ್ನು ಮುದ್ದೇಬಿಹಾಳ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ವಾಹನದಲ್ಲಿದ್ದ ಎತ್ತುಗಳಿಗೆ ಗಾಯಗಳಾಗಿಲ್ಲ. ಸ್ಥಳಕ್ಕೆ ಮುದ್ದೇಬಿಹಾಳ ಪೋಲಿಸರು ಭೇಟಿ ನೀಡಿ ಪರಿಶೀಲಿಸಿದ್ದರು. ರಸ್ತೆಯಲ್ಲಿ ಪಲ್ಟಿಯಾಗಿದ್ದ ವಾಹನವನ್ನು ಎತ್ತಿ ಬದಿಗೆ ಸರಿಸಿದ್ದು ವಾಹನ ಸಂಚಾರಕ್ಕೆ ಅನಕೂಲ ಮಾಡಿಕೊಟ್ಟಿದ್ದರು. ಮುದ್ದೇಬಿಹಾಳ ಪೋಲಿಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:22 am, Mon, 12 May 25







