
ಬೆಂಗಳೂರು, (ಸೆಪ್ಟೆಂಬರ್ 11):‘ವಂದೇ ಮಾತರಂ’ಗೀತೆಯನ್ನು ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ರಾಜ್ಯ ಸರ್ಕಾರದ ಆದೇಶಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಇದಕ್ಕೆ ಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಪ್ರತಿಕ್ರಿಯೆ ತಮ್ಮ ಪಕ್ಷದ ನಿಲುವು ಸ್ಪಷ್ಟಪಡಿಸಿದ್ದಾರೆ. ಇಂದು (ಸೆ.11) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ‘ವಂದೇ ಮಾತರಂ’ ವಿಚಾರದಲ್ಲಿ ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ನಾವೇ ರಾಷ್ಟ್ರಗೀತೆ ತಂದವರು, ಅವರು (ಬಿಜೆಪಿ) ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಇನ್ನು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಪ್ರತಿಕ್ರಿಯಿಸಿದ್ದು, ನಮ್ಮನ್ನು ಜೈಲಿಗೆ ಕಳುಹಿಸಲಿ, ನಮ್ಮನ್ನು ಗಲ್ಲಿಗೆ ಹಾಕಲಿ, ನಾವು ಹೇಳೋದು ವಂದೇ ಮಾತರಂ ಎರಡೇ ಪ್ಯಾರಾ. ಅದು ಈ ದೇಶದ ಏಕತೆಗಾಗಿ ಮಾಡಿರುವ ನಿರ್ಧಾರ. ಸ್ವಾತಂತ್ರ್ಯ ಹೋರಾಟದ ಘೋಷಣೆ ಅದು. ಬ್ರಿಟಿಷರ ಬೂಟು ನೆಕ್ಕುವವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬೇಕಿದ್ದರೆ ಚಡ್ಡಿ ಹಾಕಿಕೊಂಡು ತಲೆಗೆ ಟೋಪಿ ಹಾಕಿಕೊಂಡು. ದೊಣ್ಣೆ ಹಿಡಿದುಕೊಂಡು ಶಾಖೆಯಲ್ಲಿ ರಾಷ್ಟ್ರಗೀತೆ ಹಾಡಲಿ. ಇವರು ಒಂದೇ ಒಂದು ದಿನ ಜನಗಣಮನ ಹೇಳಲ್ಲ. ಇವರು ಒಂದೇ ಒಂದು ದಿನ ಗಾಂಧಿ ಹೆಸರೂ ಹೇಳಲ್ಲ. ಇವರಿಗೆ ವಂದೇ ಮಾತರಂ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲ. ಈ ವಿಚಾರವಾಗಿ ಚರ್ಚೆಗೆ ಬರೋದಾದರೆ ಬರಲಿ. ಇವರು ಬ್ರಿಟಿಷ್ ಏಜೆಂಟ್ಗಳಾಗಿ ಗುಲಾಮರಾಗಿದ್ದರು. ಇವರು ಹೇಗೆ ಅವರ ಬೂಟು ನೆಕ್ತಿದ್ರು ಅಂತ ಹೇಳುತ್ತೇವೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಈ ಮೂಲಕ ಆದೇಶಿಸಲಾಗಿದೆ. ವಿನಾಯಿತಿಗಳು: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಮಾನ್ಯ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಹಾಗೂ ರಾಜ್ಯಪಾಲರು ಉಪಸ್ಥಿತರಿರುವ ಅಧಿಕೃತ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಉಳಿದೆಲ್ಲಾ ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಈ ನಿಯಮ ಅನ್ವಯವಾಗುತ್ತದೆ. ವಿವಿಐಪಿಗಳು ಭಾಗವಹಿಸುವ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರದ ನಿಗದಿತ ಶಿಷ್ಟಾಚಾರಗಳು ಅನ್ವಯವಾಗಲಿವೆ ಎಂದು ರಾಜ್ಯ ಸರ್ಕಾರದ ಆದೇಶದಲ್ಲಿದೆ.