Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಅವರ ಪಾದಕ್ಕೆರಗಿ ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್​, ಶೀತಲ ಸಮರ ಇಲ್ಲ ಎಂಬ ಸಂದೇಶ ರವಾನೆ?

DK Shivakumar and Siddaramaiah: ಜನಧ್ವನಿ ಜಾಥಾಗೂ ಮುನ್ನ ಡಿ.ಕೆ.ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾದಕ್ಕೆರಗಿ ಆಶೀರ್ವಾದ ಪಡೆದಿದ್ದು, ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂಬ ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ಪಾದಕ್ಕೆರಗಿ ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್​, ಶೀತಲ ಸಮರ ಇಲ್ಲ ಎಂಬ ಸಂದೇಶ ರವಾನೆ?
ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ.ಶಿವಕುಮಾರ್​
Follow us
Skanda
| Updated By: ಸಾಧು ಶ್ರೀನಾಥ್​

Updated on: Mar 04, 2021 | 11:31 AM

ಬೆಂಗಳೂರು: ಮೈಸೂರು ಮೇಯರ್​ ಚುನಾವಣೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಮನಸ್ತಾಪ ಉಂಟಾಗಿದ್ದು, ಬಿಕ್ಕಟ್ಟು ಶಮನ ಮಾಡುವುದೇ ಕಾಂಗ್ರೆಸ್​ ನಾಯಕರಿಗೆ ದೊಡ್ಡ ತಲೆನೋವಾಗಿದೆ ಎಂಬ ಸಂಶಯಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಖುದ್ದು ಡಿ.ಕೆ.ಶಿವಕುಮಾರ್ ಮಾಡಿದ್ದಾರೆ. ನಿನ್ನೆ ಜನಧ್ವನಿ ಜಾಥಾಗೂ ಮುನ್ನ ಡಿ.ಕೆ.ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾದಕ್ಕೆರಗಿ ಆಶೀರ್ವಾದ ಪಡೆದಿದ್ದು, ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂಬ ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ.

ಈ ವೇಳೆ ಡಿ.ಕೆ.ಶಿವಕುಮಾರ್ ಅವರ ಬೆನ್ನು ತಟ್ಟಿ ಆಶೀರ್ವಾದ ಮಾಡಿರುವ ಸಿದ್ದರಾಮಯ್ಯ ಸಹ ಕಾರ್ಯಕರ್ತರಲ್ಲಿ ಹಾಗೂ ಬೆಂಬಲಿಗರಲ್ಲಿ ಮೂಡಿದ್ದ ಅನುಮಾನದ ಗೆರೆಯನ್ನು ಅಳಿಸಿ ಹಾಕುವ ಪ್ರಯತ್ನ ಮಾಡಿದ್ದಾರೆ. ಇಂತಹ ನಡೆಯಿಂದಾಗಿ ಇಬ್ಬರೂ ನಾಯಕರು ರಾಜಿ ಸಂದೇಶವನ್ನು ರವಾನಿಸಿದ್ದು, ಕಾಂಗ್ರೆಸ್​ ಪಕ್ಷದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಬಣಗಳು ರೂಪುಗೊಳ್ಳುತ್ತಿವೆ ಎಂಬ ವಿಷಯವನ್ನು ಈ ಮೂಲಕ ತಳ್ಳಿಹಾಕಿದ್ದಾರೆ. ಈ ವೇಳೆ ಡಿ.ಕೆ.ಶಿವಕುಮಾರ್​ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಕಾಲಿಗೂ ನಮಸ್ಕರಿಸಿದ್ದು, ಕಾಂಗ್ರೆಸ್​ನಲ್ಲಿ ಹಿರಿಯರಿಗೆ ಪ್ರಾಶಸ್ತ್ಯ ಇದೆ ಎಂಬ ವಿಚಾರವನ್ನೂ ಪರೋಕ್ಷವಾಗಿ ಎತ್ತಿಹಿಡಿದಿದ್ದಾರೆ.

ಈ ನಾಯಕರ ನಡುವಿನ ಮನಸ್ತಾಪ ಕೊನೆಗೊಳಿಸಲು ಎಐಸಿಸಿ ಸಂಧಾನಕಾರರಾಗಿ ಮಧುಯಕ್ಷಿ ಗೌಡ ರಾಜ್ಯಕ್ಕೆ ಆಗಮಿಸಿ ಇಬ್ಬರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೀಗ ಡಿ.ಕೆ.ಶಿವಕುಮಾರ್‌ ಸಿದ್ದರಾಮಯ್ಯ ಅವರ ಕಾಲಿಗೆ ಬೀಳುವ ಮೂಲಕ ಸಂಚಲನ ಮೂಡಿಸಿದ್ದಾರೆ. ಈ ಘಟನೆಯ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಶೀತಲ ಸಮರದ ಮಾತು ಬಂದಾಗ, ನನ್ನಿಂದ ತಪ್ಪಾಗಿದ್ದರೆ ತಿದ್ದಿಕೊಳ್ಳುವುದಕ್ಕೆ ಸಿದ್ಧ ಎಂದಿದ್ದ ಡಿ.ಕೆ.ಶಿವಕುಮಾರ್​ ಅವರು ಸಿದ್ದರಾಮಯ್ಯ ನಮ್ಮ ನಾಯಕರು ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಿ ಅಲ್ಲಿಯೂ ಇದೇ ಮಾತನ್ನು ಪುನರುಚ್ಛರಿಸಿದ್ದರು.

ಇದನ್ನೂ ಓದಿ: ನಾವು ಗಾಡಿಗಳಲ್ಲಿ ಮೆರವಣಿಗೆ ಮಾಡಿಕೊಂಡು ಬಂದಿಲ್ಲ, ನಿಮ್ಮ ಜೊತೆ ನಡೆದುಕೊಂಡು ಬಂದಿದ್ದೇವೆ: ಡಿ.ಕೆ.ಶಿವಕುಮಾರ್

ದೇಶಪ್ರೇಮಿ ಟಿಪ್ಪುವಿನ ಜನ್ಮಸ್ಥಳ ದೇವನಹಳ್ಳಿಯಿಂದ ಕಾಂಗ್ರೆಸ್ ಜನಧ್ವನಿ ಯಾತ್ರೆ ಆರಂಭ: ಸಿದ್ದರಾಮಯ್ಯ