ತೀವ್ರ ಸ್ವರೂಪ ಪಡೆದ ಜಮೀರ್ ಅಹ್ಮದ್‌ ಆಡಿಯೋ ಕೇಸ್: ಹೈಕಮಾಂಡ್​​​​ಗೆ ದೂರು

ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ, ಡಿಸಿಎಂ ಹುದ್ದೆ ಸೃಷ್ಟಿ ಅಂತೆಲ್ಲ ಚರ್ಚೆ ನಡೀತಿದೆ. ಇಂಥಾ ಹೊತ್ತಲ್ಲೇ ಸಿದ್ದರಾಮಯ್ಯ ಆಪ್ತ ಜಮೀರ್ ಅಹ್ಮದ್ ಖಾನ್​ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷವಿರೋಧಿ ಕೆಲಸ ಮಾಡಿದ್ದಾರೆ ಎನ್ನುವಂತೆ ಬಿಂಬಿಸಲಾಗ್ತಿದೆ. ಇದು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹೈಕಮಾಂಡ್​​​​​​ಗೆ ದೂರು ನೀಡಲಾಗಿದೆ. ಹಾಗಿದ್ರೆ ಆಡಿಯೋದಲ್ಲಿ ಇರೋದೇನು? ಆಡಿಯೋ ಬಗ್ಗೆ ಜಮೀರ್ ಹೇಳಿದ್ದೇನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

ತೀವ್ರ ಸ್ವರೂಪ ಪಡೆದ ಜಮೀರ್ ಅಹ್ಮದ್‌ ಆಡಿಯೋ ಕೇಸ್: ಹೈಕಮಾಂಡ್​​​​ಗೆ ದೂರು
Zameer And Dk Shivakumar

Updated on: Jun 01, 2026 | 9:42 PM

ದಾವಣಗೆರೆ, (ಜೂನ್ 01): ಜಮೀರ್ ಅಹ್ಮದ್ ಖಾನ್ (Zameer Ahmed Khan). ಚಾಮರಾಜಪೇಟೆಯ ಚತುರ. ಅಲ್ಪಸಂಖ್ಯಾತರ ಮತಗಳ ಮೇಲೆ ಹಿಡಿತ ಸಾಧಿಸಿರೋ ಲೀಡರ್. ಇದೀಗ ಇದೇ ಜಮೀರ್ ಅಹ್ಮದ್ ವಿರುದ್ಧ ಪಕ್ಷವಿರೋಧಿ ಆರೋಪ ಕೇಳಿಬಂದಿದೆ. ಸಚಿವ ಸಂಪುಟ ರಚನೆ ಹೊತ್ತಲ್ಲೇ ಜಮೀರ್​ರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಈ ಸಂಬಂಧ ಮಾಜಿ ಸಚಿವ ಜಮೀರ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹೌದು…ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ‌.ಬಸವರಾಜ್ ಹಾಗೂ ದಾವಣಗೆರೆ ಮಾಜಿ ಮೇಯರ್ ಕೆ.ಚಮನ್ ಸಾಬ್ ಎನ್ನುವರು ಹೈಕಮಾಂಡ್​​​​​ಗೆ ಪತ್ರದ ಮೂಲಕ ಜಮೀರ್ ವಿರುದ್ಧ ದೂರು ನೀಡಿದ್ದು, ಪಕ್ಷ ವಿರೋಧಿ ಆಡಿಯೋವನ್ನು ತನಿಖೆ ಮಾಡಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮುಖ್ಯಾಂಶಗಳು

  • ದಾವಣಗೆರೆ ದಕ್ಷಿಣ ಉಪಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ಆರೋಪ
  • ಮಾಜಿ ಸಚಿವ ಜಮೀರ್ ಅಹ್ಮದ್‌ಖಾನ್‌ ಅವರದ್ದು ಎನ್ನಲಾದ ಆಡಿಯೋ ವೈರಲ್
  • ಮಾಜಿ ಸಚಿವ ಜಮೀರ್ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು
  • ಹೈಕಮಾಂಡ್​ಗೆ ಪತ್ರದ ಮೂಲಕ ದೂರು ನೀಡಿದ ಕಾಂಗ್ರೆಸ್ ಮುಖಂಡರು
  • ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ‌.ಬಸವರಾಜ್ ಹಾಗೂ ದಾವಣಗೆರೆ ಮಾಜಿ ಮೇಯರ್ ಕೆ.ಚಮನ್ ಸಾಬ್ ದೂರು

ಜಮೀರ್ ವಿರುದ್ಧ ಹೈಕಮಾಂಡ್​​​ಗೆ ದೂರು

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ‌.ಬಸವರಾಜ್ ಹಾಗೂ ದಾವಣಗೆರೆ ಮಾಜಿ ಮೇಯರ್ ಕೆ.ಚಮನ್ ಸಾಬ್ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದು, ದಾವಣಗೆರೆ ದಕ್ಷಿಣ ಉಪಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಉದ್ದೇಶ ಪೂರ್ವಕವಾಗಿ ಮುಸ್ಲಿಮರು ಮನೆ ಬಿಟ್ಟು ಹೊರಹೋಗದಂತೆ ಹೇಳಿದ್ದಾರೆ. ಈ ಮೂಲಕ ಅಭ್ಯರ್ಥಿಯನ್ನು ಸೋಲಿಸಲು ಮಾಜಿ ಸಚಿವ ಜಮೀರ್ ಹುನ್ನಾರ ನಡೆಸಿದ್ದಾರೆ. ಪಕ್ಷದ್ರೋಹಿ ಜಮೀರ್​ರನ್ನ ತಕ್ಷಣ ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿಗೆ ಆಗ್ರಹಿಸಿದ್ದಾರೆ.

ಇದನ್ನು ನೋಡಿ: ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ರಾ ಜಮೀರ್? ಕಾಂಗ್ರೆಸ್‌ನಲ್ಲಿ ಆಡಿಯೋ ಸಂಚಲನ

ಜಮೀರ್ ಅಹಮ್ಮದ್ ಖಾನ್​​​ಗೆ ಸಂಕಷ್ಟ

ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿಲ್ಲವೆಂದು ಈಗಾಗಲೇ ದಾವಣಗೆರೆ ದಕ್ಷಿಣ ಕ್ಷೇತ್ರ ಬೈ ಎಲೆಕ್ಷನ್​​​ನಿಂದ ಜಮಿರ್ ದೂರ ಉಳಿದಿದ್ದರು. ಕ್ಷೇತ್ರಕ್ಕೆ ಬಂದಿದ್ದರೂ ಸಹ ಪ್ರಚಾರ ಮಾಡಿರಲಿಲ್ಲ. ಈ ಸಂಬಂಧ ಹೈಕಮಾಂಡ್ ಗರಂ ಆಗಿದ್ದು, ಕಟ್ಟು ನಿಟ್ಟಿನ ಕ್ರಮಕ್ಕೆ ಚಿಂತನೆ ನಡೆಸಿತ್ತು. ಇದರ ಮಧ್ಯೆ ಸದ್ಯ ಕಾಂಗ್ರೆಸ್​​​ನಲ್ಲಿ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ. ಇದರ ಮಧ್ಯೆ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಪಕ್ಷ ವಿರೋಧಿ ಚಟವಟಿಕೆ ಆರೋಪ ಕೇಳಿಬಂದಿದ್ದು, ಅವರ ಸಚಿವ ಸ್ಥಾನಕ್ಕೆ ಕುತ್ತ ತರುವ ಸಧ್ಯತೆಗಳಿವೆ.

ಆಡಿಯೋನಲ್ಲಿ ಏನಿದೆ?

ದಾವಣಗೆರೆ ಉಪಚುನಾವಣೆ ವೇಳೆ ಅಲ್ಪಸಂಖ್ಯಾತರು ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದರು. ತಮಗೆ ಟಿಕೆಟ್ ಸಿಕ್ಕಿಲ್ಲ ಎಂದು ನಾಯಕರು ಕೂಡ ಬೇಸರ ಹೋರಹಾಕಿದ್ದರು. ಆ ವೇಳೆ ಕೈ ಪಡೆಗೆ ಒಳೇಟು ಕೊಡಲು ತಂತ್ರವೂ ನಡೆದಿತ್ತು ಅನ್ನೋ ಮಾತು ಹರಿದಾಡಿತ್ತು. ಇದೀಗ ಮುಸ್ಲಿಂ ಮುಖಂಡರ ಜೊತೆಗೆ ಜಮೀರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಮುಸ್ಲಿಮರನ್ನ ಕಾಂಗ್ರೆಸ್​ಗೆ ವೋಟ್ ಹಾಕದಂತೆ ತಡೆಯಬೇಕು ಎಂಬ ಚರ್ಚೆ ಮಾಡಲಾಗಿದೆ. ದಾವಣಗೆರೆ ವಕ್ಫ್​ ಮಂಡಳಿ ಮಾಜಿ ಅಧ್ಯಕ್ಷ ಮೊಹಮ್ಮದ್ ಸಿರಾಜ್ ಜೊತೆ ಜಮೀರ್ ಮಾತನಾಡಿದ್ದಾರೆಂದು ಈ ಆಡಿಯೋವನ್ನ ಬಿಂಬಿಸಲಾಗ್ತಿದೆ. ಈ ಆಡಿಯೋದಲ್ಲಿ ಬಂಡಾಯ ಅಭ್ಯರ್ಥಿಯಾಗಿ, ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಪೈಲ್ವಾನ್ ಬಗ್ಗೆಯೂ ಮಾತನಾಡಲಾಗಿದೆ.

ಜಮೀರ್ ಅಹಮ್ಮದ್ ಕೊಟ್ಟ ಸ್ಪಷ್ಟನೆ ಏನು?

ಈ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಜಮೀರ್, ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ನನ್ನ ಕುರಿತ ಆಡಿಯೋ ನಕಲಿ ಆಗಿದೆ. ಎಐ ತಂತ್ರಜ್ಞಾನ ಬಳಸಿ ಆಡಿಯೋ ಮಾಡಲಾಗಿದೆ , ಇದೊಂದು ರಾಜಕೀಯ ಷಡ್ಯಂತ್ರ ಅಂತಾ ಜಮೀರ್ ಹೇಳ್ತಿದ್ದಾರೆ. ಗೊಂದಲ ಉಂಟು ಮಾಡಲು ಇದೆಲ್ಲವೂ ಸೃಷ್ಟಿ ಆಗಿದೆ, ಸೈಬರ್ ಠಾಣೆಗೆ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು, ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಕ್ರಮ ಆಗುತ್ತೆ. ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಆಡಿಯೋ ವಿರುದ್ಧ ದೂರು ದಾಖಲು

ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಅವರ ಆಪ್ತ ಮೊಹಮ್ಮದ್ ಸಿರಾಜ್ ನಡುವಿನ ಸಂಭಾಷಣೆ ಎನ್ನಲಾದ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ ಬೆನ್ನಲ್ಲೇ, ಪ್ರಕರಣ ಈಗ ಕಾನೂನು ಸಮರದ ರೂಪ ಪಡೆದುಕೊಂಡಿದೆ. ತಮ್ಮ ವಿರುದ್ಧ ಸುಳ್ಳು ಆಡಿಯೋ ಸೃಷ್ಟಿಸಿ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮೊಹಮ್ಮದ್ ಸಿರಾಜ್ ಅವರು ದಾವಣಗೆರೆಯ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:30 pm, Mon, 1 June 26

Loading...
Unable to load recommendations.
Follow Us