‘ಸಂಪುಟ ವಿಸ್ತರಣೆ ಆಗೋವರೆಗೆ ಕಾದು ನೋಡಿ; ಕಾಂಗ್ರೆಸ್ನ ಒಂದು ದಂಡೇ ಬಿಜೆಪಿ ಸೇರಲಿದೆ’: ಮುರುಗೇಶ್ ನಿರಾಣಿ
ಸದ್ಯ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ನಿರ್ಣಾಯಕ ಘಟ್ಟ ತಲುಪಿದೆ. ಹೀಗಿರುವಾಗ ಸಚಿವ ಸಂಪುಟ ವಿಸ್ತರಣೆ ಆಗೋವರೆಗೆ ಕಾದು ನೋಡಿ, ರಾಜ್ಯ ಕಾಂಗ್ರೆಸ್ನಲ್ಲಿ ಭಿನ್ನಮತದ ಬಿರುಗಾಳಿ ಏಳಲಿದೆ. ಅಸಮಾಧಾನಿತರ ಕಾಂಗ್ರೆಸ್ ತಂಡ ಬಿಜೆಪಿಗೆ ಬರಲಿದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮುಖ್ಯಾಂಶಗಳು
- ಸಂಪುಟ ವಿಸ್ತರಣೆ ಬಳಿಕ ಭಿನ್ನಮತದ ಬಿರುಗಾಳಿ ಏಳಲಿದೆ
- ಸ್ಫೋಟಕ ಹೇಳಿಕೆ ನೀಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ
- 2028ರವರೆಗೂ ಕಾಂಗ್ರೆಸ್ ಪಕ್ಷಕ್ಕೆ ಜನ ಅಧಿಕಾರ ನೀಡಿದ್ದಾರೆ ಎಂದ ಮಾಜಿ ಸಚಿವ
ಗದಗ, ಆಗಸ್ಟ್ 01: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಅಂತಿಮ ಹಂತ ತಲುಪಿದೆ. ಹೈಕಮಾಂಡ್ ರಾತ್ರಿ ವೇಳೆಗೆ ಪಟ್ಟಿ ಫೈನಲ್ ಮಾಡಲಿದೆ. ಈ ಮಧ್ಯೆ ‘ಸಂಪುಟ ವಿಸ್ತರಣೆ ಬಳಿಕ ಭಿನ್ನಮತದ ಬಿರುಗಾಳಿ ಏಳಲಿದೆ. ಕಾಂಗ್ರೆಸ್ನ (Congress) ಒಂದು ದೊಡ್ಡ ದಂಡೇ ಬಿಜೆಪಿ (BJP) ಸೇರಲಿದೆ. ಸಚಿವ ಸಂಪುಟ ವಿಸ್ತರಣೆ ಆಗೋವರೆಗೆ ಕಾದು ನೋಡಿ’ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಖಾತೆಗಳ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಗೊಂದಲ
ಗದಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ, ‘ರಾಜ್ಯ ಕಾಂಗ್ರೆಸ್ನಲ್ಲಿ ಭಿನ್ನಮತದ ಬಿರುಗಾಳಿ ಏಳಲಿದೆ. ಖಾತೆಗಳ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಗೊಂದಲ ಆಗುತ್ತವೆ. ಅಸಮಾಧಾನಿತರ ಕಾಂಗ್ರೆಸ್ ತಂಡ ಬಿಜೆಪಿಗೆ ಬರಲಿದೆ. 2028ರ ಚುನಾವಣೆಯಲ್ಲಿ ದೊಡ್ಡ ತಂಡ ಬಿಜೆಪಿ ಸೇರಲಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಹಗ್ಗಜಗ್ಗಾಟ ಕೊನೆಗೂ ಅಂತ್ಯ: ಸಿಕ್ತು ಹೈಕಮಾಂಡ್ ಗ್ರೀನ್ ಸಿಗ್ನಲ್! ಸೋಮವಾರ ಪ್ರಮಾಣವಚನ ಸಾಧ್ಯತೆ
‘ಕಾಂಗ್ರೆಸ್ನ ಸಾಕಷ್ಟು ಜನರು ಸಂಪರ್ಕದಲ್ಲಿ ಇದ್ದೇ ಇರ್ತಾರೆ. ಸಚಿವ ಸಂಪುಟ ವಿಸ್ತರಣೆ ರಿಸಲ್ಟ್ ಬಂದ ಬಳಿಕ ನೋಡಿ. 2028ರವರೆಗೂ ಕಾಂಗ್ರೆಸ್ ಪಕ್ಷಕ್ಕೆ ಜನ ಅಧಿಕಾರ ನೀಡಿದ್ದಾರೆ. ಅಲ್ಲಿವರೆಗೂ ಬಿಜೆಪಿ ಸುಮ್ಮನೇ ಇರುತ್ತೆ’ ಎಂದಿದ್ದಾರೆ.
ಶಾಸಕ ಯತ್ನಾಳ್, ಈಶ್ವರಪ್ಪ ಬಿಜೆಪಿಗೆ ಬಂದರೆ ಬಲ ಹೆಚ್ಚುತ್ತೆ: ಮುರುಗೇಶ್ ನಿರಾಣಿ
‘ಶಾಸಕ ಯತ್ನಾಳ್, ಈಶ್ವರಪ್ಪ ಬಿಜೆಪಿಗೆ ಬಂದರೆ ಬಲ ಹೆಚ್ಚುತ್ತೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಪಕ್ಷ ಬಿಟ್ಟು ಹೋದವರನ್ನು ವಾಪಸ್ ಕರೆತಂದರೆ ಬಲ ಹೆಚ್ಚಾಗಲಿದೆ. ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಇನ್ನೂ ಸಾಕಷ್ಟು ಜನ ಇದ್ದಾರೆ. ಅವರನ್ನೆಲ್ಲಾ ಪಕ್ಷಕ್ಕೆ ಕರೆತರಬೇಕು’ ಎಂದರು.
ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಆಗ್ರಹ
ಇನ್ನು ರೈತರ ಸಾಲ ಮನ್ನಾ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಎದುರಾಗಿದೆ, ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ರಾಜ್ಯದಲ್ಲಿ ಶೇಕಡಾ 40ರಷ್ಟು ಮಳೆ ಕಡಿಮೆಯಾಗಿದೆ. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ರೈತರ ಜತೆಗಿರಬೇಕು. ಕಾಂಗ್ರೆಸ್ ವಿಪಕ್ಷದಲ್ಲಿದ್ದಾಗ ರೈತರಪರ ಗಟ್ಟಿ ಧ್ವನಿ ಆಗಿತ್ತು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರೈತ ಪರ ಮಾತನಾಡುತ್ತಿದ್ದರು. ಈಗ ದೇವರು ಸಾಲಮನ್ನಾ ಮಾಡುವ ಶಕ್ತಿ ನೀಡಿದ್ದಾನೆ. ಸಾಲಮನ್ನಾ ಮಾಡಿದರೆ ರೈತರು ನಿಮ್ಮನ್ನ ಎಂದೂ ಮರೆಯಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




