ಮಂಗಳೂರು: ಪಾಕಿಸ್ತಾನದಿಂದ ಸೈಬರ್ ವಾರ್ ಆತಂಕ, ಸೈಬರ್ ತಜ್ಞರಿಂದ ಎಚ್ಚರಿಕೆ ಸಂದೇಶ
ಪಾಕಿಸ್ತಾನದ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯ ನಂತರ, ಪಾಕಿಸ್ತಾನದಿಂದ ಸೈಬರ್ ದಾಳಿಯ ಆತಂಕ ಹೆಚ್ಚಾಗಿದೆ. ಸೈಬರ್ ತಜ್ಞ ಡಾ. ಅನಂತ ಪ್ರಭು ಅವರು ಸರ್ಕಾರಿ ಮತ್ತು ಖಾಸಗಿ ವೆಬ್ಸೈಟ್ಗಳ ಮೇಲೆ ದಾಳಿ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಎಚ್ಚರಿಕೆ ವಹಿಸುವಂತೆ ಮತ್ತು ಸೆಕ್ಯೂರಿಟಿ ಆಡಿಟ್ ಮಾಡಿಸುವಂತೆ ಅವರು ಸಲಹೆ ನೀಡಿದ್ದಾರೆ.

ಮಂಗಳೂರು, ಮೇ 8: ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ವೈಮಾನಿಕ ದಾಳಿ (Indian Arm Air Strike) ನಡೆಸಿದ ನಂತರ ಇದೀಗ ಪಾಕಿಸ್ತಾನವು ಸೈಬರ್ ವಾರ್ (Cyber War) ನಡೆಸುವ ಆತಂಕ ಎದುರಾಗಿದೆ. ಈ ವಿಚಾರವಾಗಿ ಸೈಬರ್ ತಜ್ಞರು (Cyber Experts) ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ. ಭಾರತದ ಮೇಲೆ ಪಾಕಿಸ್ತಾನಿ ಹ್ಯಾಕರ್ಗಳ ಕಣ್ಣಿದ್ದು, ಅನೇಕ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಲು ಯತ್ನಿಸುವ ಸಾಧ್ಯತೆ ಇದೆ. ಸರ್ಕಾರಿ ವೆಬ್ಸೈಟ್ಗಳನ್ನೇ ಪಾಕಿಸ್ತಾನಿಯರು ಗುರಿ ಮಾಡುವ ಸಾಧ್ಯತೆ ಇದೆ ಎಂದು ಮಂಗಳೂರಿನಲ್ಲಿ ಸೈಬರ್ ತಜ್ಞ ಡಾ. ಅನಂತ ಪ್ರಭು ಹೇಳಿದ್ದಾರೆ.
‘ಟಿವಿ9’ ಜೊತೆ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬರೂ ಪಾಕಿಸ್ತಾನೀಯರಿಂದ ಎದುರಾಗಬಹುದಾದ ಸಂಭಾವ್ಯ ಸೈಬರ್ ವಾರ್ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಭೂ ಸೇನೆ, ನೌಕಾಪಡೆ ಮತ್ತು ವಾಯುಪಡೆ ರೀತಿಯಲ್ಲಿಯೇ ಸೈಬರ್ ವಿಂಗ್ ಕೂಡ ಇದೆ. ಕೃತಕ ಬುದ್ಧಿಮತ್ತೆ ಬಂದಮೇಲೆ ವೈರಸ್ ಸಿದ್ಧಪಡಿಸಿ ವೆಬ್ಸೈಟ್ಗಳನ್ನು ಹ್ಯಾಕ್ ಮಾಡುವ ಸುಲಭವಾಗಿದೆ. ಡಾರ್ಕ್ ವೆಬ್ ಮೂಲಕ ಭಾರತದ ವೆಬ್ಸೈಟ್ಗಳನ್ನು ಹ್ಯಾಕ್ ಮಾಡುವ ಆತಂಕವಿದೆ ಎಂದು ಅವರು ಹೇಳಿದ್ದಾರೆ.
ಬೇರೆ ದೇಶಗಳ ಸರ್ವರ್ ಉಳ್ಳ ವೆಬ್ಸೈಟ್ ಬಳಸುವಾಗ ಎಚ್ಚರ
ಪಾಕಿಸ್ತಾನಿ ಹ್ಯಾಕರ್ಗಳು ಬೇರೆ ರಾಷ್ಟ್ರಗಳ ಸಹಾಯ ಬಳಸಿ ಕೃತ್ಯ ಎಸಗುವ ಸಾಧ್ಯತೆ ಇದೆ. ಹೀಗಾಗಿ ನಾವು ವೆಬ್ಸೈಟ್ ಬಳಸುವ ವೇಳೆ ಯಾವ ದೇಶದ ಸರ್ವರ್ ಇದೆ ಎಂಬುದನ್ನು ಕೂಡ ಗಮನಿಸಿಕೊಳ್ಳಬೇಕು. ಶತ್ರು ರಾಷ್ಟ್ರದ ಸರ್ವರ ಇದ್ದರೆ ಅದರ ಮೂಲಕ ದಾಳಿ ಮಾಡುವ ಸಾಧ್ಯತೆ ಹೆಚ್ಚು ಎಂದು ಅವರು ಸುಳಿವು ನೀಡಿದ್ದಾರೆ.
ಆದಷ್ಟು ವೆಬ್ಸೈಟ್ಗಳ ಸೆಕ್ಯೂರಿಟಿ ಆಡಿಟ್ ಮಾಡಬೇಕು ಎಂದು ಸಲಹೆ ನೀಡಿರುವ ಅವರು, ಸೇನಾಪಡೆಗಳ ಸಿಬ್ಬಂದಿ ಕೂಡ ಈ ಸಂದರ್ಭದಲ್ಲಿ ಹೆಚ್ಚು ಜಾಗರೂಕರಾಗಿ ಇರಬೇಕು ಎಂದು ಸಲಹೆ ನೀಡಿದ್ದಾರೆ.
ಹನಿಟ್ರ್ಯಾಪ್ ಯತ್ನದ ಬಗ್ಗೆ ಎಚ್ಚರ
ಸೇನಾ ಅಧಿಕಾರಿಗಳಿಗೆ, ಯೋಧರಿಗೆ ಹಾಗೂ ಸಿಬ್ಬಂದಿಗೆ ಯುವತಿಯರ ಮೂಲಕ ವಿಡಿಯೋ ಕಾಲ್ ಮಾಡಿಸಿ ಸ್ಕ್ರೀನ್ ಶೇರ್ ಮೂಲಕ ಮಾಹಿತಿ ಕದಿಯುವ ಸಾಧ್ಯತೆ ಇದೆ. ಇದರಿಂದ ಡೇಟಾಗಳು ಕೂಡ ಲೀಕ್ ಆಗುತ್ತವೆ. ಈ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಡಾ ಅನಂತ ಪ್ರಭು ಹೇಳಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂದೂರ್: ಹ್ಯಾಮರ್, ಲಾಯ್ಟರಿಂಗ್ ಮ್ಯುನಿಶನ್ಗಳ ತಯಾರಿಸಿದ್ದು ಬೆಂಗಳೂರಿನ ಕಂಪನಿಗಳು
ಭಾರತೀಯ ಸೇನೆ ಬುಧವಾರ ನಸುಕಿನಲ್ಲಿ ಆಪರೇಷನ್ ಸಿಂದೂರ್ ನಡೆಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ದಾಳಿಯಲ್ಲಿ ಕನಿಷ್ಠ 80 ಉಗ್ರರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ