ಬಿಜೆಪಿ ಭದ್ರಕೋಟೆಯೇ ಡಿಕೆ ಶಿವಕುಮಾರ್ ಟಾರ್ಗೆಟ್: ನೆಲೆ ಇಲ್ಲದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಸಾಫ್ಟ್ ಹಿಂದುತ್ವದ ಮಂತ್ರ
ಬಿಜೆಪಿಯ ಭದ್ರಕೋಟೆ ಎನ್ನಲಾದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಓಡಾಟ ಹೆಚ್ಚಾಗಿದೆ. ಸಾಫ್ಟ್ ಹಿಂದುತ್ವದ ಮೂಲಕ ಬಿಜೆಪಿಯ ಕೋಟೆ ಬೇಧಿಸಲು ಅವರು ರಣತಂತ್ರ ಹೂಡಿದ್ದಾರೆ ಎನ್ನಲಾಗಿದೆ. ಹಾಗಾದರೆ, ಡಿಸಿಎಂ ಡಿಕೆ ಶಿವಕುಮಾರ್ ಅವರ ಕರಾವಳಿ ಶಿಕಾರಿ ರಹಸ್ಯ ಏನು? ಬಂಡೆ ಹೆಜ್ಜೆಯಲ್ಲಿನ ರಣತಂತ್ರದ ಹೆಗ್ಗುರುತುಗಳು ಹೇಗಿವೆ? ಇಲ್ಲಿದೆ ನೋಡಿ.

ಮಂಗಳೂರು, ಏಪ್ರಿಲ್ 19: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕರ್ನಾಟಕ ಕಾಂಗ್ರೆಸ್ನಲ್ಲಿ (Congress) ಟ್ರಬಲ್ ಶೂಟರ್ ಎಂದೇ ಪ್ರಸಿದ್ಧರು. ಹಾಗೆಯೇ ಸಂಘಟನಾ ಚತುರರೂ ಹೌದು. ಕೆಪಿಸಿಸಿ ಅಧ್ಯಕ್ಷ ಗಾದಿ ವಹಿಸಿಕೊಂಡಾಗಿನಿಂದ ಹಿಡಿದು ಪ್ರಸ್ತುತ ಡಿಸಿಎಂ ಪಟ್ಟಕ್ಕೇರಿದರೂ ಹೆಜ್ಜೆ ಹೆಜ್ಜೆಗೂ ಸಂಘಟನಾ ಮಂತ್ರವನ್ನೇ ಜಪಿಸಿಕೊಂಡು ಬರುತ್ತಿರುವ ಪ್ರಭಾವಿ ನಾಯಕ. ಇಷ್ಟೇ ಅಲ್ಲ, ತನ್ನದೇ ಅಜೆಂಡಾದಲ್ಲಿ ಹಿಂದುತ್ವವನ್ನ ಟ್ರೆಂಡ್ ಸೆಟ್ ಮಾಡಿಕೊಂಡವರು. ಡಿಕೆ ಶಿವಕುಮಾರ್ ಅವರ ಈ ಹಿಂದುತ್ವ, ಎಲ್ಲೋ ಒಂದು ಕಡೆ ಬಿಜೆಪಿಯವರ ನಿದ್ದೆಗೆಡಿಸಿದ್ದೂ ಇದೆ. ಹೀಗಾಗಿ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಒಂದು ಸಮಯದಲ್ಲಿ ಲೇವಡಿಯ ಯುದ್ಧ ಸಾರಿದ್ದಲ್ಲದೇ, ದೆಹಲಿಯ ಕಾಂಗ್ರೆಸ್ ಮನೆಯಂಗಳಕ್ಕೂ ಟೀಕೆಗಳ ಬಾಣಗಳನ್ನು ಹೂಡಿತ್ತು. ಹೀಗಿದ್ದರೂ ಡಿಕೆ ಶಿವಕುಮಾರ್ ಮಾತ್ರ ತಮ್ಮ ಹಿಂದುತ್ವದ ಬಗ್ಗೆ ಸ್ಪಷ್ಟನೆ ಕೊಡುತ್ತಾ ಬಿಜೆಪಿಯವರ ಬಾಯಿ ಮುಚ್ಚಿಸಿದ್ದರು.
ಡಿಕೆ ಶಿವಕುಮಾರ್ ಹಿಂದುತ್ವ ಈಗಲೂ ಒಳಗೊಳಗೆ ಭಿನ್ನವಾಗಿದೆ. ಅವರ ಹಿಂದುತ್ವದ ಸದ್ದಿನ ಹಿಂದೆ ಸಂಘಟನೆಯ ಜತೆಗೆ, ಬಿಜೆಪಿ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಕರಾವಳಿ ಕರ್ನಾಟಕದ ಮೇಲೆ ಕಣ್ಣಿಟ್ಟಿರುವ ಕಥೆಯೂ ಅನಾವರಣ ಆಗುತ್ತಿದೆ.
ನೆಲೆ ಇಲ್ಲದ ಕಡೆ ಕಾಂಗ್ರೆಸ್ ಬಾವುಟ ಹಾರಿಸಲು ಡಿಕೆ ಶಿವಕುಮಾರ್ ರಣತಂತ್ರ
ಕರ್ನಾಟಕ ಕರಾವಳಿ ಬಿಜೆಪಿಯ ಭದ್ರಕೋಟೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 2 ಕ್ಷೇತ್ರ ಬಿಟ್ಟು, ಉಳಿದ 6 ಕಡೆ ಕೇಸರಿ ಪತಾಕೆಯೇ ಹಾರುತ್ತಿದೆ. ಉಡುಪಿಯ 5 ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಬುಟ್ಟಿಯಲ್ಲಿವೆ. ಇಷ್ಟೇ ಅಲ್ಲ, ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರಿನಲ್ಲಿ ಬಿಜೆಪಿಯೇ ಕಮಾಲ್ ಮಾಡಿದೆ. ಹೀಗಿದ್ದರೂ ಕಾಂಗ್ರೆಸ್ನ ಕಟ್ಟಾಳು, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಎಲ್ಲೂ ಎದೆಗುಂದದೆ, ಬಿಜೆಪಿ ಕೋಟೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲೇಬೇಕು ಎಂದು ಪಣ ತೊಟ್ಟಿದ್ದಾರೆ. ಸಾಫ್ಟ್ ಹಿಂದುತ್ವದ ಮೂಲಕ ಕರಾವಳಿ ಮರು ವಶಕ್ಕೆ ಟೊಂಕ ಕಟ್ಟಿದ್ದಾರೆ.
ಕರಾವಳಿ ಮೇಲೆ ಡಿಕೆ ಶಿವಕುಮಾರ್ ಕಣ್ಣು
ಸಾಫ್ಟ್ ಹಿಂದುತ್ವದ ಮೂಲಕ ಡಿಕೆ ಶಿವಕುಮಾರ್ ಕರಾವಳಿಯಲ್ಲಿ ಸಂಘಟನಾ ಸೂತ್ರ ಹೆಣೆದಿದ್ದಾರೆ. ಪ್ರಮುಖವಾಗಿ ಕರಾವಳಿಯ ದೇವಸ್ಥಾನಗಳ ಭೇಟಿ, ಕಂಬಳ, ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗುತ್ತ ಸಕ್ರಿಯರಾಗಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಪಕ್ಷ ಬಲವರ್ಧನೆಗೆ ಒತ್ತು ನೀಡಿರುವ ಅವರು, ಕಾಂಗ್ರೆಸ್ ನಾಯಕರ ಪ್ರತಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ತನ್ನ ಕಟ್ಟಾಳುಗಳಿಗೆ ಪಕ್ಷ ಬಲವರ್ಧನೆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲು ಡಿಕೆ ಸೂಚನೆ ಕೊಟ್ಟಿದ್ದಾರೆ.
ಗುರುಪುರ ಕಂಬಳ ಬೆನ್ನಲ್ಲೇ ಮತ್ತೆ ಕರಾವಳಿಗೆ ಡಿಕೆ ಭೇಟಿ ನೀಡುತ್ತಿದ್ದಾರೆ. ಮೊದಲು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದು, ಏಪ್ರಿಲ್ 20 ರಂದು ಬೆಳ್ತಂಗಡಿಯಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕರಾವಳಿಯಲ್ಲಿ ಕಾಂಗ್ರೆಸ್ ಬಲ ಕಡಿಮೆ ಇದ್ದರೂ ಡಿಕೆ ಶಿವಕುಮಾರ್ ಪದೇ ಪದೆ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯಗಿಂತಲೂ ಹೆಚ್ಚಾಗಿ ಮಂಗಳೂರಿಗೆ ಡಿಕೆ ಶಿವಕುಮಾರ್ ಭೇಟಿ ನೀಡಿದ್ದು ಗಮನಾರ್ಹ.