ಒಕ್ಕಲಿಗರಲ್ಲಿ ಬಡವರಿಲ್ವಾ? ಲಿಂಗಾಯತರಲ್ಲಿ ಬಡವರಿಲ್ವಾ: ಜಾತಿ ಗಣತಿ ಚರ್ಚೆ ವೇಳೆ ಏರು ಧ್ವನಿಯಲ್ಲಿ ಪ್ರಶ್ನಿಸಿದ ಡಿಕೆ ಶಿವಕುಮಾರ್
ಜಾತಿ ವರ್ಗೀಕರಣಕ್ಕೆ ಡಿಕೆ ಶಿವಕುಮಾರ್ ಅಸಮಾಧಾನ: ಜಾತಿ ಗಣತಿ ವಿಚಾರವಾಗಿ ಗುರುವಾರ ನಡೆದ ಕರ್ನಾಟಕ ಸಚಿವ ಸಂಪುಟ ವಿಶೇಷ ಸಭೆ ಒಕ್ಕಲಿಗ ಹಾಗೂ ಲಿಂಗಾಯತ ಸಚಿವರ ತೀವ್ರ ವಿರೋಧಕ್ಕೆ ಸಾಕ್ಷಿಯಾಯಿತು. ಇದೇ ವೇಳೆ, ಡಿಸಿಎಂ ಡಿಕೆ ಶಿವಕುಮಾರ್ ಜಾತಿ ವರ್ಗೀಕರಣ ವಿಚಾರವಾಗಿ ಜೋರಾದ ದನಿಯಲ್ಲಿ ಮಾತನಾಡಿದರು.

ಬೆಂಗಳೂರು, ಏಪ್ರಿಲ್ 18: ಕಳೆದೊಂದು ವಾರದಿಂದ ಕರ್ನಾಟಕದಾದ್ಯಂತ ದೊಡ್ಡ ಕೋಲಾಹಲ ಎಬ್ಬಿಸಿದ್ದ ಜಾತಿ ಗಣತಿ ವರದಿ (Caste Census Report) ವಿಚಾರವಾಗಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳ (Vokkaligas and Lingayats) ಸಚಿವರು ಜೋರಾದ ದನಿಯಲ್ಲಿ ಮಾತನಾಡಿ ಆಕ್ಷೇಪ ವ್ಯಕ್ತಪಡಿಸಿದ್ದ ಕಂಡುಬಂತು. ಜಾತಿ ವರ್ಗೀಕರಣ ವಿಷಯ ಸಂಬಂಧ ಡಿಕೆ ಶಿವಕುಮಾರ್, ಜೋರಾದ ದನಿಯಲ್ಲೇ ಅಸಮಾಧಾನ ವ್ಯಕ್ತಪಡಿಸಿದರು. ನಮ್ಮಲ್ಲೂ ಬಡವರಿಲ್ಲವೇ ಎಂದು ಅವರು ಪ್ರಶ್ನಿಸಿದರು ಎಂದು ಮೂಲಗಳು ತಿಳಿಸಿವೆ.
ಕೆಲವು ನಿಗದಿತ ಜಾತಿಗಳನ್ನು ಮಾತ್ರ ಕೆಟಗರಿ 1ಕ್ಕೆ ಸೇರ್ಪಡೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, ಒಕ್ಕಲಿಗರಲ್ಲಿ ಬಡವರಿಲ್ವಾ? ಲಿಂಗಾಯತರಲ್ಲಿ ಬಡವರಿಲ್ವಾ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಇದೇ ವೇಳೆ, ಡಿಕೆ ಶಿವಕುಮಾರ್ ಮಾತಿಗೆ ಲಿಂಗಾಯತ ಸಚಿವರು ದನಿಗೂಡಿಸಿದರು. ನಮ್ಮವರೂ ಕೇವಲ ಒಂದೇ ದನ ಕಟ್ಟಿಕೊಂಡು ಜೀವನ ನಡೆಸುವವರಿದ್ದಾರೆ, ಅವರೆಲ್ಲ ಶ್ರೀಮಂತರಲ್ಲ ಎಂದರು.
ಜಾತಿಗಣತಿ ವರದಿಗೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ ತೀವ್ರ ಆಕ್ಷೇಪ
ಜಾತಿಗಣತಿ ವರದಿಗೆ ಕ್ಯಾಬಿನೆಟ್ನಲ್ಲಿ ಲಿಂಗಾಯತ ಸಚಿವರೂ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವರದಿಯೇ ಸರಿಯಿಲ್ಲ, ನಮ್ಮ ಸಮುದಾಯದ ಉಪ ಪಂಗಡಗಳನ್ನು ವಿಭಜಿಸಲಾಗಿದೆ. ಲಿಂಗಾಯತ, ಉಪ ಪಂಗಡ ವಿಂಗಡಿಸಿ ನಮೂದಿಸಿರುವುದು ತಪ್ಪು ಎಂದು ಸಚಿವ ಎಸ್ಎಸ್ ಮಲ್ಲಿಕಾರ್ಜುನ ಆಕ್ಷೇಪ ವ್ಯಕ್ತಪಡಿಸಿದರು. ಈ ವರದಿಯನ್ನು ಒಪ್ಪುವುದು ಹೇಗೆ ಎಂದು ಅವರು ಪ್ರಶ್ನಿಸಿದರು. ಇದೇ ವೇಳೆ, ಮಲ್ಲಿಕಾರ್ಜುನ ಮಾತಿಗೆ ದನಿಗೂಡಿಸಿದ ಸಚಿವ ಈಶ್ವರ ಖಂಡ್ರೆ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಯನ ವರದಿ ಉಲ್ಲೇಖಿಸಿದರು. ಆ ವರದಿಯನ್ನು ಸಂಪುಟ ಸಭೆಯಲ್ಲಿ ಉಲ್ಲೇಖಿಸಿದರು.
ಲಿಂಗಾಯತ ಸಮುದಾಯದ ಕಡಿಮೆ ತೋರಿಸಿರುವ ಬಗ್ಗೆ ಖಂಡ್ರೆ ಆಕ್ಷೇಪ ವ್ಯಕ್ತಪಡಿಸಿದರು. ಶೇಕಡಾ 94ರಷ್ಟು ನಿಖರತೆ ಇದೆ ಎಂದು ಕೆಲ ಸಚಿವರು ಆಕ್ಷೇಪ ತೆಗೆದರು. ಕೊನೆಯದಾಗಿ, ಎಲ್ಲವನ್ನು ನೋಡಿ ತೀರ್ಮಾನಿಸೋಣ ಬಿಡಿ ಎಂದ ಸಿಎಂ ಸಿದ್ದರಾಮಯ್ಯ, ಮೇ 2 ರ ಸಂಪುಟ ಸಭೆಯಲ್ಲಿ ಜಾತಿ ಗಣತಿ ವಿಚಾರ ಮತ್ತೆ ಚರ್ಚಿಸೋಣ ಎಂದರು.
ಪ್ರತ್ಯೇಕ ಧರ್ಮ ವಿಚಾರದಲ್ಲಿ ಕೈಸುಟ್ಟುಕೊಂಡಿದ್ದೆವು: ಶಿವಾನಂದ ಪಾಟೀಲ್
ಸಂಪುಟ ಸಭೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಬಗ್ಗೆಯೂ ಪ್ರಸ್ತಾಪವಾಯಿತು. 2018ರಲ್ಲಿ ಪ್ರತ್ಯೇಕ ಧರ್ಮ ವಿಚಾರ ಪ್ರಸ್ತಾಪಿಸಿ ಕೈಸುಟ್ಟುಕೊಂಡಿದ್ದೆವು. ಲಿಂಗಾಯತ ವಿಚಾರಕ್ಕೆ ಕೈಹಾಕಿ ಕೈಸುಟ್ಟುಕೊಂಡಿದ್ದೆವು. ಈಗ ಮತ್ತೆ ಅದೇ ರೀತಿಯಾದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹೀಗಾಗಿ ಜಾತಿ ಗಣತಿ ತೀರ್ಮಾನಿಸುವ ಮೊದಲು ಯೋಚಿಸಿ ಎಂದು ಶಿವಾನಂದ ಪಾಟೀಲ್ ಹೇಳಿದರು. ಇದಕ್ಕೆ ಸಚಿವ ಎಂಬಿ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಕೋಲಾಹಲ: ಸಚಿವರ ಏರು ಧ್ವನಿ, ಇಲ್ಲಿದೆ ಇನ್ಸೈಡ್ ಡಿಟೇಲ್ಸ್
ಆ ವಿಷಯಕ್ಕೂ ಇದಕ್ಕೂ ಏನು ಸಂಬಂಧವೆಂದು ಎಂಬಿ ಪಾಟೀಲ್ ಪ್ರಶ್ನಿಸಿದರು. ಲಿಂಗಾಯತ ಧರ್ಮ ವಿಚಾರ ಬೇರೆ, ಜಾತಿಗಣತಿಯೇ ಬೇರೆ. ಒಂದಕ್ಕೊಂದು ಸಂಬಂಧ ಇಲ್ಲದೆ ಇರುವುದನ್ನು ಮಾತಾಡಬಾರದು ಎಂದು ಅವರು ಆಕ್ಷೇಪಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ಆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದರು.