
ಮಂಗಳೂರು, ಆಗಸ್ಟ್ 25: ಐಷಾರಾಮಿ ಫಾರ್ಚೂನರ್ ಕಾರಿನಲ್ಲಿ ಬಂದು ಕೆಲಸ ಮಾಡುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ. ರೋಡ್ನ ಸೇಸಪ್ಪ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಟ್ರೆಂಡಿಂಗಿನಲ್ಲಿದ್ದಾರೆ. ಬೆಳಗಿನ ಜಾವ ಬಿ.ಸಿ. ರೋಡ್ನ ರಸ್ತೆಗಳ ಜನ ಇನ್ನೂ ನಿದ್ರೆಯಲ್ಲಿರುವಾಗಲೇ ಕೈಯಲ್ಲಿ ಪೊರಕೆ ಹಿಡಿದು ರಸ್ತೆಗಳ ಸ್ವಚ್ಛತೆಗೆ ಇಳಿಯುವ ಇವರ ಬದುಕಿನ ಕಥೆ ಮಾತ್ರ ಸಾಮಾನ್ಯವಲ್ಲ. ಕೇವಲ ಮೂರನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಇವರು, ಕೆಲಸ ಆರಂಭಿಸಿದ್ದು ಕೇವಲ 50 ರೂ. ದಿನಗೂಲಿಯಿಂದ ಎಂಬುದನ್ನು ನೀವು ನಂಬಲೇಬೇಕು.
1996ರಲ್ಲಿ ಕೇವಲ 50 ರೂಪಾಯಿ ದಿನಗೂಲಿಗೆ ಕೆಲಸಕ್ಕೆ ಸೇರಿದ ಸೇಸಪ್ಪ, ಬಳಿಕ ಕಾಯಂ ನೌಕರರಾದರು. ಆರಂಭದ ದಿನಗಳಲ್ಲಿ ವೈಯಕ್ತಿಕ ಹಾಗೂ ಕೌಟುಂಬಿಕ ಕಾರಣಗಳಿಂದ ಕುಡಿತದ ಚಟಕ್ಕೆ ಒಳಗಾಗಿದ್ದರು. ಆದರೆ 2005ರ ಬಳಿಕ ಬದುಕನ್ನು ಬದಲಿಸಿಕೊಳ್ಳುವ ದೃಢ ನಿರ್ಧಾರ ಕೈಗೊಂಡರು. ಆಗ ಎಸ್ಐ ಆಗಿದ್ದ ಬೆಳ್ಳಿಯಪ್ಪ ಅವರ ಮಾತಿಗೆ ಬೆಲೆ ನೀಡಿ ಕುಡಿತವನ್ನು ಸಂಪೂರ್ಣವಾಗಿ ತ್ಯಜಿಸಿದರು. ಅಂದಿನಿಂದ ಅವರ ಬದುಕಿನ ದಿಕ್ಕೇ ಬದಲಾಯಿತು.
ಇದನ್ನೂ ಓದಿ: ಕರಾವಳಿಯಲ್ಲಿ ಇಂದು ಈದ್ ಮಿಲಾದ್ ಆಚರಣೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಇಂದಿಗೂ ಬೆಳಗ್ಗೆ 5 ಗಂಟೆಗೆ ಬಿ.ಸಿ. ರೋಡ್ಗೆ ಆಗಮಿಸುವ ಸೇಸಪ್ಪ, ಮಧ್ಯಾಹ್ನ 12 ಗಂಟೆಯವರೆಗೆ ನಗರದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ. ಇಂದು ಸ್ವಂತ ಪರಿಶ್ರಮದಿಂದ ಆರ್ಥಿಕವಾಗಿ ಸದೃಢರಾಗಿರುವ ಅವರು, ಕೆಲಸಕ್ಕೆ ಫಾರ್ಚೂನರ್ನಲ್ಲಿ ಕಾರಿನಲ್ಲಿ ಆಗಮಿಸುತ್ತಾರೆ. ಹೀಗಿದ್ದರೂ ತಮ್ಮ ಹಿಂದಿನ ದಿನಗಳನ್ನು ಮಾತ್ರ ಮರೆತಿಲ್ಲ. ಸ್ವಚ್ಛತಾ ಕೆಲಸದ ಜತೆಗೆ ಹೈನುಗಾರಿಕೆ , ಕೃಷಿಯಲ್ಲೂ ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ.
ಪೌರ ಕಾರ್ಮಿಕ ಸೇಸಪ್ಪ ಅವರಿಗೆ ಚಿಕ್ಕಂದಿನಿಂದಲೇ ಕಾರುಗಳ ಬಗ್ಗೆ ಕ್ರೇಜ್ ಇತ್ತು. ಆರಂಭದ ದಿನಗಳಲ್ಲಿ ಮಾರುತಿ 800, ಆಲ್ಟೋ, ಓಮ್ನಿ, ಸ್ಕಾರ್ಪಿಯೋ ಮತ್ತು ರಿಟ್ಜ್ ಕಾರುಗಳನ್ನ ಖರೀದಿಸಿದ್ದರು. ಕಾರುಗಳ ಮೇಲಿನ ವ್ಯಾಮೋಹವೀಗ ಫಾರ್ಚೂನರ್ವರೆಗೆ ಬಂದುನಿಂತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:43 am, Tue, 25 August 26