ಕರ್ನಾಟಕಕ್ಕೆ ಬರ್ತಿತ್ತು ಕೇರಳದ ಕೊಳಚೆ ತ್ಯಾಜ್ಯ: ಟಿವಿ9 ವರದಿ ಬೆನ್ನಲ್ಲೇ ಮಂಗಳೂರು ಪಾಲಿಕೆಗೆ ಸಿಎಂ ಕಚೇರಿಯಿಂದ ಮಹತ್ವದ ಸೂಚನೆ
ಕೇರಳದ ಕೊಳಚೆ ತ್ಯಾಜ್ಯವನ್ನು ಮಂಗಳೂರಿನಲ್ಲಿ ಅಕ್ರಮವಾಗಿ ಸುರಿಯುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಟಿವಿ9 ಸುದ್ದಿ ಪ್ರಸಾರದ ಬಳಿಕ ಮುಖ್ಯಮಂತ್ರಿಗಳ ಕಚೇರಿಯಿಂದ ಪಾಲಿಕೆಗೆ ಸೂಚನೆ ನೀಡಲಾಗಿದೆ. ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿ, ಪೊಲೀಸ್ ದೂರು ದಾಖಲಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ತಿಳಿಸಿದೆ.

ಮಂಗಳೂರು, ಮಾರ್ಚ್ 19: ಕೇರಳ (Kerala) ರಾಜ್ಯದ ಕೊಳಚೆ ತ್ಯಾಜ್ಯವನ್ನು (Sewage waste) ಮಂಗಳೂರಿಗೆ (Mangaluru) ತಂದು ಸುರಿಯುತ್ತಿದ್ದ ಕುರಿತು ಟಿವಿ9 ಸುದ್ದಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರ ಬೆನ್ನಲ್ಲೇ ಮಂಗಳೂರು ಪಾಲಿಕೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿ ಪತ್ರ ಬರೆದಿದ್ದು, “ಅಗತ್ಯ ಕ್ರಮ ಕೈಗೊಳ್ಳುವಂತೆ” ಸೂಚನೆ ನೀಡಿದ್ದಾರೆ. ಈ ಕುರಿತು ಕ್ರಮ ಕೈಗೊಂಡ ಬಗ್ಗೆ ಸರ್ಕಾರಕ್ಕೆ ಮಂಗಳೂರು ಪಾಲಿಕೆ ಉತ್ತರ ನೀಡಿದ್ದು, ತ್ಯಾಜ್ಯ ಸುರಿದ ವಾಹನಗಳಿಗೆ ದಂಡ ವಿಧಿಸಲಾಗಿದೆ. ಹಾಗೇ, ಪೊಲೀಸ್ ಇಲಾಖೆಗೂ ದೂರು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ” ಎಂದು ಸರ್ಕಾರಕ್ಕೆ ಮಂಗಳೂರು ಪಾಲಿಕೆ ಆಯುಕ್ತರು ಪತ್ರ ಬರೆದಿದ್ದಾರೆ.
ಮಂಗಳೂರಿನಲ್ಲಿ ನಡೆಯುತ್ತಿತ್ತು ಕೇರಳದ ತ್ಯಾಜ್ಯ ವಿಲೇವಾರಿ ದಂಧೆ
ದಕ್ಷಿಣಕನ್ನಡ ಜಿಲ್ಲೆ ಕೇರಳ ರಾಜ್ಯದ ಜೊತೆ ಗಡಿಯನ್ನು ಹಂಚಿಕೊಂಡಿದೆ. ಕೇರಳದ ಕಾಸರಗೋಡು ಜಿಲ್ಲೆಯ ಅದೆಷ್ಟೋ ಮಂದಿ ಇಂದಿಗೂ ಶಿಕ್ಷಣ, ಉದ್ಯೋಗ, ಆರೋಗ್ಯ ಸೌಲಭ್ಯಕ್ಕಾಗಿ ಮಂಗಳೂರು ನಗರವನ್ನೇ ಆಶ್ರಯಿಸಿಕೊಂಡಿದ್ದಾರೆ. ಆದರೆ, ಇಷ್ಟು ಮಾತ್ರವಲ್ಲದೇ ಯಾವುದೇ ಸಮಸ್ಯೆಯಿರಲಿಲ್ಲ. ಆದರೆ, ಕೇರಳ ರಾಜ್ಯದ ಒಳಚರಂಡಿಯ ತ್ಯಾಜ್ಯ ನೀರನ್ನು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಡಂಪ್ ಮಾಡಲಾಗುತ್ತಿತ್ತು. ಖಾಸಗಿ ಟ್ಯಾಂಕರ್ನಲ್ಲಿ ತಂದು ಬೇಕಾಬಿಟ್ಟಿಯಾಗಿ ಸುರಿಯುವ ದಂಧೆ ಜೋರಾಗಿತ್ತು.
ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಕೈಗೆ ಖದೀಮರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಮಂಗಳೂರು ಪಾಲಿಕೆಗೆ ತನ್ನೊಳಗಿನ ಒಳಚರಂಡಿ ತ್ಯಾಜ್ಯ ನೀರಿನ ಸಮಸ್ಯೆ ಪರಿಹರಿಸುವುದೇ ದೊಡ್ಡ ಸವಾಲಾಗಿದೆ. ಈ ನಡುವೆ ಕೇರಳ ಭಾಗದಿಂದ ಖಾಸಗಿ ಟ್ಯಾಂಕರ್ ಮೂಲಕ ಕೊಳಚೆ ನೀರು ತಂದು ನಗರದ ಚರಂಡಿ, ವೆಟ್ವೆಲ್ಗೆ ಡಂಪ್ ಮಾಡಲಾಗುತ್ತಿತ್ತು. ಒಳಚರಂಡಿ ನೀರನ್ನು ನೇರವಾಗಿ ಬಿಡಲು ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರು ನಗರ ಹೊರವಲಯದಲ್ಲಿ ಹರಿಯುವ ನೇತ್ರಾವತಿ, ಫಲ್ಗುಣಿ ನದಿಗೆ ಕೊಳಚೆ ತ್ಯಾಜ್ಯವನ್ನು ಬಿಡಲಾಗುತ್ತಿತ್ತು. ಪರಿಣಾಮ ಜೀವನದಿಗಳ ನೀರು ಕಲುಷಿತವಾಗುತ್ತಿತ್ತು. ಈ ಸೀವೇಜ್ ಟ್ಯಾಂಕರ್ಗಳು ತಲಪಾಡಿ ಮತ್ತಿತರ ಗಡಿಭಾಗಗಳ ಮೂಲಕ ಮಂಗಳೂರಿಗೆ ಬರುತ್ತಿದ್ದವು.
ಹೀಗಾಗಿ. ಖಚಿತ ಮಾಹಿತಿ ಮೇರೆಗೆ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ತಲಪಾಡಿ ಟೋಲ್ ಗೇಟ್ ಮೂಲಕ ಪ್ರವೇಶ ಪಡೆದಿದ್ದ ಸೀವೇಜ್ ಟ್ಯಾಂಕರ್ನ್ನು ಪಾಲಿಕೆ ಅಧಿಕಾರಿಗಳು ಬೆನ್ನು ಹತ್ತಿದ್ದರು. ಈ ವೇಳೆ ಆ ಟ್ಯಾಂಕರ್ ಮಂಗಳೂರು ನಗರದ ಮಣ್ಣಗುಡ್ಡೆ ಪ್ರದೇಶಕ್ಕೆ ಆಗಮಿಸಿತ್ತು. ಕೇರಳದ ಸೀವೇಜ್ ಟ್ಯಾಂಕರ್ನಲ್ಲಿರುವ ಒಳಚರಂಡಿ ತ್ಯಾಜ್ಯವನ್ನು ಮಂಗಳೂರಿನಲ್ಲಿನ ಸೀವೇಜ್ ಟ್ಯಾಂಕರ್ಗೆ ವರ್ಗಾಯಿಸುತ್ತಿರುವುದು ಬೆಳಕಿಗೆ ಬಂದಿತ್ತು.ಈ ಮೂಲಕ ದಂಧೆಕೋರರು ಪಾಲಿಕೆ ಅಧಿಕಾರಿಗಳ ಮುಂದೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು.
ಇದನ್ನೂ ಓದಿ: ನೇತ್ರಾವತಿ ಒಡಲಿಂದ ಲೋಡ್ ಗಟ್ಟಲೆ ಬಟ್ಟೆ ರಾಶಿ ಹೊರತೆಗೆದ ಸ್ವಯಂಸೇವಕರು
ಈ ಖದೀಮರು ಇದಕ್ಕೂ ಮುಂಚೆ ಅನೇಕ ಬಾರಿ ಕೊಳಚೆ ನೀರು ಬಿಟ್ಟಿರುವುದು ಬೆಳಕಿಗೆ ಬಂದಿದೆ. ಹೀಗಾಗಿ, ಪಾಲಿಕೆ ಅಧಿಕಾರಿಗಳು ಸ್ಥಳೀಯ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರ ಜೊತೆ ಎರಡು ಟ್ಯಾಂಕರ್ಗಳಿಗೂ ತಲಾ 10 ಸಾವಿರ ದಂಡ ವಿಧಿಸಿದ್ದಾರೆ. ಕೇರಳದಲ್ಲಿ ಒಳಚರಂಡಿ ತ್ಯಾಜ್ಯ ಸಾಗಾಟ ವೆಚ್ಚ ಹೆಚ್ಚಿದ್ದು, ಅಲ್ಲಿ ವೆಟ್ವೆಲ್ ಸಮಸ್ಯೆ, ಜನರ ಆಕ್ಷೇಪ ಇರುವುದರಿಂದ ಸೀವೇಜ್ ಟ್ಯಾಂಕರ್ಗಳು ಕರ್ನಾಟಕ ಬರುತ್ತಿರುವ ಗುಮಾನಿಯಿದೆ.