ಮಂಗಳೂರಿನಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರಿಕೆ: ಜನರು ತತ್ತರ, ಆರೋಗ್ಯ ಇಲಾಖೆ ಕೊಟ್ಟ ಸೂಚನೆ ಏನು?
ಮಂಗಳೂರಿನಲ್ಲಿ ದಾಖಲೆಯ ಪ್ರಮಾಣದಲ್ಲಿ ತಾಪಮಾನ ಏರಿಕೆಯಾಗಿದ್ದು, ರಾಜ್ಯ ಕರಾವಳಿ ಬಿಸಿಲಿನಿಂದ ತತ್ತರಿಸಿದೆ. ನಡು ಮಧ್ಯಾಹ್ನ ಹೊರಗಡೆ ಹೋಗುವುದು ಕಷ್ಟವಾಗಿದೆ. ಆರೋಗ್ಯ ಇಲಾಖೆ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದು, ಸಾಕಷ್ಟು ನೀರು ಕುಡಿಯಲು, ಬಿಸಿಲಿನಿಂದ ರಕ್ಷಿಸಿಕೊಳ್ಳುವುದು ಅಗತ್ಯವಾಗಿದೆ. ಹೀಗಾಗಿ ಜನ ಅತೀ ಹೆಚ್ಚಿನ ಮುಂಜಾಗ್ರತೆ ಕ್ರಮ ವಹಿಸಬೇಕಾದ ಅನಿವಾರ್ಯತೆಯಿದೆ.

ಮಂಗಳೂರು, ಮಾರ್ಚ್ 02: ರಾಜ್ಯ ಕರಾವಳಿ ರಣ ಬಿಸಿಲಿಗೆ (Heatwave) ತತ್ತರಿಸಿದೆ. ನಡು ಮಧ್ಯಾಹ್ನ ಹೊರಗಡೆ ಬರುವುದು ಕಷ್ಟವಾಗಿದೆ. ಮಂಗಳೂರಿನಲ್ಲಿ ದಾಖಲೆಯ ಪ್ರಮಾಣದ ತಾಪಮಾನ ದಾಖಲಾಗಿದ್ದು, ಜನ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ಹೊರಡಿಸಿದೆ.
ಮಂಗಳೂರಿನಲ್ಲಿ ಹೆಚ್ಚಾದ ಟೆಂಪರೇಚರ್
ಮಂಗಳೂರಿನಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ರಣ ಬಿಸಿಲಿನಲ್ಲಿ ಜನ ತತ್ತರಿಸಿದ್ದಾರೆ. ಉರಿ ಸೆಕೆಗೆ ಬೆವೆತು ಹೋಗಿದ್ದಾರೆ. ಜನ ಆಗಾಗ ಎಳನೀರು, ಕಬ್ಬಿಣ ಹಾಲು, ತಂಪು ಪಾನೀಯಗಳ ಮೊರೆ ಹೋಗುತ್ತಿರುವ ದೃಶ್ಯ ಸರ್ವೆ ಸಾಮಾನ್ಯವಾಗಿದೆ. ಈ ನಡುವೆ ಶಾಖಾಘಾತದ ಭೀತಿಯು ಎದುರಾಗಿದೆ. ವೈದ್ಯರು ಎಚ್ಚರಿಕೆಯಿಂದ ಇರಿ ಅಂತ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬೇಸಿಗೆ ಜೊತೆಗೆ ಮಕ್ಕಳಲ್ಲಿ ಶುರುವಾಯ್ತು ಇನ್ಫೆಕ್ಷನ್ ಹಾವಳಿ: ಪೋಷಕರಿಗೆ ವೈದ್ಯರ ಸಲಹೆ ಏನು?
ಒಂದು ಪ್ರದೇಶದ ಸಾಮಾನ್ಯ ಉಷ್ಣತೆಗಿಂತ 4.5 ರಿಂದ 6.4ರಷ್ಟು ಹೆಚ್ಚಾದಲ್ಲಿ ಶಾಖಾಘಾತ ಸಂಭವಿಸುತ್ತದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೆಂಪರೇಚರ್ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ನಿನ್ನೆ ರಾಜ್ಯದಲ್ಲೇ ಅತೀ ಹೆಚ್ಚು ಅಂದ್ರೆ 40.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಜಿಲ್ಲೆಯ ಮಂಗಳೂರು, ಸುಳ್ಯದಲ್ಲಿ ದಾಖಲಾಗಿದೆ. ಈ ರೀತಿ ತಾಪಮಾನ ಹೆಚ್ಚಾಗಿರುವುದರ ಪರಿಣಾಮ ಸನ್ ಸ್ಟ್ರೋಕ್ ಆಗುತ್ತೆ ಎಂಬ ಎಚ್ಚರಿಕೆಯನ್ನು ಆರೋಗ್ಯ ಇಲಾಖೆ ನೀಡಿದೆ.
ಇದರಿಂದ ಕೈಕಾಲುಗಳಲ್ಲಿ ಊತ, ಮೈಮೇಲೆ ಬೆವರುಸಾಲೆ ಮೂಡುವುದು, ಮಾಂಸಖಂಡಗಳ ಸೆಳೆತ ಉಂಟಾಗುತ್ತದೆ. ಇದು ಎದೆಯಲ್ಲಿ ಸೆಳೆತ ಉಂಟು ಮಾಡುವ ಸಾಧ್ಯತೆಯಿದೆ. ಪರಿಣಾಮ ಹೃದಯಾಘಾತ ಸಂಭವಿಸಬಹುದು. ತಲೆಸುತ್ತುವಿಕೆ ಉಂಟಾಗಬಹುದು. ಅಲ್ಲದೆ ಶಾಖಾಘಾತದಿಂದಾಗಿ ಹೆಚ್ಚಾಗಿ ಮರಣ ಸಂಭವಿಸುವ ಸಾಧ್ಯತೆಯಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್ ತಿಮ್ಮಯ್ಯ ಹೇಳಿದ್ದಾರೆ.
ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ ಸೂಚನೆ
ಇನ್ನು ಕೆಲ ದಿನಗಳ ಕಾಲ ತೀವ್ರ ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಆದಷ್ಟು ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕಿದೆ. ಮಕ್ಕಳನ್ನು ಬಿಸಿಲಿನಲ್ಲಿ ಆಟವಾಡದಂತೆ ನೋಡಿಕೊಳ್ಳುವುದು ಉತ್ತಮ. ಹೀಗಾಗಿ ಶಾಲೆಗಳಿಗೆ ಹಾಗೂ ಹೆತ್ತವರಿಗೆ ಮಾಹಿತಿ ನೀಡಲು ಆರೋಗ್ಯ ಇಲಾಖೆ ಸುತ್ತೋಲೆಯನ್ನು ಕಳುಹಿಸಿದೆ. ಜನರು ಸಾಕಷ್ಟು ನೀರು ಕುಡಿಯಬೇಕು, ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ, ಕಾರ್ಬೋನೇಟೆಡ್ ಪಾನೀಯಗಳನ್ನ ಕುಡಿಯದಂತೆ ಸೂಚಿಸಲಾಗಿದೆ.
ಹಗುರವಾದ ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಲು ಸೂಚಿಸಿದ್ದು, ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳನ್ನು, ಛತ್ರಿ, ಟೋಪಿ, ಬೂಟುಗಳು ಅಥವಾ ಚಪ್ಪಲ್ ಬಳಸುವಂತೆ ಶಾಖಾಘಾತ ನಿಗಾ ಉಸ್ತುವಾರಿ ಅಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬಿಸಿಲ ಶಾಖಕ್ಕೆ ಎಸಿ, ಕೂಲರ್ ಖರೀದಿಯತ್ತ ಮುಖ ಮಾಡಿದ ಸಿಟಿ ಮಂದಿ: ಬೆಲೆ ಕೇಳೇ ಮತ್ತಷ್ಟು ಬೆವೆತ ಜನ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಷ್ಟು ಗರಿಷ್ಠ ತಾಪಮಾನ ಏರಿಕೆಗೆ ಹಸಿರು ಪರಿಸರ ನಾಶವೇ ಕಾರಣ ಎಂಬ ಅಭಿಪ್ರಾಯವು ಇದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಜನ ಅತೀ ಹೆಚ್ಚಿನ ಮುಂಜಾಗ್ರತೆ ಕ್ರಮ ವಹಿಸಬೇಕಾದ ಅನಿವಾರ್ಯತೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







