ಅನೈತಿಕ ಚಟುವಟಿಕೆ ಆರೋಪ: ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಮೇಲೆ ರಾಮಸೇನೆ ದಾಳಿ

ಮಂಗಳೂರಿನ ಬಿಜೈಯಲ್ಲಿರುವ ಕಲರ್ಸ್ ಎಂಬ ಮಸಾಜ್ ಸೆಂಟರ್ ಮೇಲೆ ರಾಮಸೇನೆ ಸಂಘಟನೆಯಿಂದ ದಾಳಿ ಮಾಡಲಾಗಿದೆ. ಅನೈತಿಕ ಚಟುವಟಿಕೆಗಳು ನಡೆಸುತ್ತಿರುವ ಆರೋಪ ಮೇಲೆ ದಾಳಿ ಮಾಡಲಾಗಿದೆ. ಸದ್ಯ ಮಂಗಳೂರಿನ ಎಲ್ಲಾ ಮಸಾಜ್ ಸೆಂಟರ್‌ಗಳನ್ನು ಮುಚ್ಚಿಸುವಂತೆ ರಾಮಸೇನೆ ಒತ್ತಾಯಿಸಿದೆ. ದಾಳಿ ಮಾಡಿದ್ದವರನ್ನು ಬಂಧಿಸುವಂತೆ ಗೃಹ ಸಚಿವ ಸೂಚಿಸಿದ್ದಾರೆ.

ಅನೈತಿಕ ಚಟುವಟಿಕೆ ಆರೋಪ: ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಮೇಲೆ ರಾಮಸೇನೆ ದಾಳಿ
Edited By:

Updated on: Jan 23, 2025 | 3:25 PM

ಮಂಗಳೂರು, ಜನವರಿ 23: ಅನೈತಿಕ ಚಟುವಟಿಕೆ ಆರೋಪಿಸಿ ಮಸಾಜ್ ಸೆಂಟರ್ (Massage Parlor)​ ಮೇಲೆ ರಾಮಸೇನೆ ಸಂಘಟನೆಯಿಂದ ದಾಳಿ ಮಾಡಿರುವಂತಹ ಘಟನೆ ಬಿಜೈ ಕೆಎಸ್ಆರ್ ಟಿಸಿ ಬಳಿ ಕಲರ್ಸ್ ಹೆಸರಿನ ಮಸಾಜ್ ಸೆಂಟರ್​ನಲ್ಲಿ ನಡೆದಿದೆ. ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ಮಸಾಜ್ ಸೆಂಟರ್​ ಮೇಲೆ ದಾಳಿ ನಡೆಸಿ ಪೀಠೋಪಕರಣ ಧ್ವಂಸ ಮಾಡಲಾಗಿದೆ.

ಮಸಾಜ್ ಸೆಂಟರ್​ನ ಗಾಜುಗಳನ್ನು ಪುಡಿಗೈದು ರಾಮ ಸೇನಾ ಸಂಘಟೆನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರು ನಗರದಾದ್ಯಂತ ಇರುವ ಮಸಾಜ್ ಸೆಂಟರ್​ಗಳ‌ನ್ನು ಮುಚ್ಚುವಂತೆ ರಾಮ ಸೇನಾ ಆಗ್ರಹಿಸಿದ್ದಾರೆ.

ಡ್ರಗ್ಸ್ ನೀಡಿ ವೇಶ್ಯಾವಾಟಿಕೆ ನಡೆಸುತ್ತಿದ್ದರು: ಪ್ರಸಾದ್ ಅತ್ತಾವರ ಆರೋಪ

ಟಿವಿ9ಗೆ ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಪ್ರತಿಕ್ರಿಯಿಸಿದ್ದು, ನಮ್ಮ ರಾಮಸೇನೆ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ‘ಮಸಾಜ್​ ಸೆಂಟರ್​ನಲ್ಲಿ ಡ್ರಗ್ಸ್ ನೀಡಿ ವೇಶ್ಯಾವಾಟಿಕೆ ನಡೆಸುತ್ತಿದ್ದರು’ 16, 17 ವರ್ಷದ ಹೆಣ್ಣುಮಕ್ಕಳನ್ನು ಬಳಸಿಕೊಳ್ತಿದ್ದರೆಂದು ಆರೋಪ ಮಾಡಿದ್ದಾರೆ. ನಮ್ಮ ಕಾರ್ಯಕರ್ತನ ಸಂಬಂಧಿ ಯುವತಿ ಇದರಲ್ಲಿ ಸಿಲುಕಿದ್ದಾಳೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದೇವೆ ಎಂದರು.

ಇದನ್ನೂ ಓದಿ: ಕೋಟೆಕಾರು ಬ್ಯಾಂಕ್ ದರೋಡೆಕೋರನ ಕಾಲಿಗೆ ಪೊಲೀಸ್ ಗುಂಡು, ಕ್ರೈಮ್ ಸ್ಪಾಟ್​ನಿಂದ ಟಿವಿ9 ವರದಿ

ಮಂಗಳೂರಿನಲ್ಲಿ ಸುಮಾರು 25 ಮಸಾಜ್ ಪಾರ್ಲರ್​ಗಳಿವೆ. ಖಚಿತ ಮಾಹಿತಿ ಮೇರೆಗೆ ಅದೆಲ್ಲವನ್ನೂ ಬಿಟ್ಟು ಈ ಮಸಾಜ್ ಪಾರ್ಲರ್​ ಮೇಲೆ ರಾಮಸೇನೆ ಸಂಘಟನೆ ದಾಳಿ ನಡೆಸಿದೆ. ಮಸಾಜ್ ಪಾರ್ಲರ್​ಗೆ ಅನುಮತಿ ಇತ್ತೋ ಇಲ್ಲವೋ ನಮಗೆ ಗೊತ್ತಿಲ್ಲ. ಹೆಣ್ಣುಮಕ್ಕಳ ರಕ್ಷಣೆ ಉದ್ದೇಶದಿಂದ ನಾವು ದಾಳಿ ನಡೆಸಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಸಾಜ್ ಸೆಂಟರ್ ಮಾಲೀಕ ಸುಧೀರ್ ಹೇಳಿದ್ದಿಷ್ಟು 

ಟಿವಿ9ಗೆ ಮಸಾಜ್ ಸೆಂಟರ್ ಮಾಲೀಕ ಸುಧೀರ್ ಪ್ರತಿಕ್ರಿಯೆ ನೀಡಿದ್ದು, ದಾಳಿ ಮಾಡಿದ್ದವರೇ ಕೆಲವು ವಸ್ತುಗಳನ್ನು ತಂದು ಬಿಸಾಡಿದ್ದಾರೆ. ವಾರಕ್ಕೊಮ್ಮೆ ಅಧಿಕಾರಿಗಳು ಮಸಾಜ್ ಸೆಂಟರ್ ಪರಿಶೀಲಿಸುತ್ತಿದ್ದಾರೆ. ಕಾನೂನು ಪ್ರಕಾರ ಅನುಮತಿ ಪಡೆದು ಕಳೆದ 2 ವರ್ಷದಿಂದ ನಾವು ಮಸಾಜ್ ಸೆಂಟರ್ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಸುಮಾರು 12 ಜನರ ತಂಡ ಇಂದು ಏಕಾಏಕಿ ದಾಳಿ ನಡೆಸಿ ಎಲ್ಲಾ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಈ ರೀತಿ ದಾಳಿ ಮಾಡಿದರೆ ನಾವು ವ್ಯವಹಾರ ನಡೆಸುವುದು ಹೇಗೆ. ದಾಳಿ ನಡೆಸಿದವರ ಪೈಕಿ ನಮಗೆ ಯಾರೂ ಗೊತ್ತಿಲ್ಲ, ಶತ್ರುಗಳಲ್ಲ. ಘಟನೆ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ದಾಳಿ ಮಾಡಿದ್ದವರನ್ನು ತಕ್ಷಣ ಬಂಧಿಸುವಂತೆ ಜಿ.ಪರಮೇಶ್ವರ್ ಸೂಚನೆ

ಘಟನೆ ಬಗ್ಗೆ ಉಡುಪಿಯಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದು, ದಾಳಿ ಮಾಡಿದ್ದವರನ್ನು ತಕ್ಷಣ ಬಂಧಿಸಲು ನಾನು ಸೂಚಿಸಿದ್ದೇನೆ. ಯಾವ ಉದ್ದೇಶಕ್ಕೆ ದಾಳಿಯಾಗಿದೆ ಗೊತ್ತಿಲ್ಲ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಟ್ಟಿದ್ದೇನೆ. ಇಂತಹ ಕೃತ್ಯಗಳು ನಡೆಯಬಾರದು. ಯಾರಿಗೂ ವ್ಯಾಪಾರ ಮಾಡಿಕೊಳ್ಳುವುದಕ್ಕೆ ಅಡ್ಡಿಪಡಿಸಬಾರದು. ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರು: ರಥೋತ್ಸವದ ವೇಳೆ ವಿಟ್ಲ ಪಂಚಲಿಂಗೇಶ್ವರ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​

ಅನೈತಿಕ ಚಟುವಟಿಕೆ ನಡೆಸುವ ಪಾರ್ಲರ್​​ಗಳಿದ್ದರೆ ದೂರು ಕೊಡಿ. ದೂರು ಕೊಟ್ಟರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಕಾರ್ಪೊರೇಷನ್​ನವರು ಟ್ರೇಡ್ ಲೈಸೆನ್ಸ್ ಕೊಟ್ಟಿರುತ್ತಾರೆ. ಯಾವ ಕಂಡೀಷನ್ ಹಾಕಿ ಕೊಟ್ಟಿರ್ತಾರೆ ಅದನ್ನು ಪಾಲಿಸದಿದ್ದರೆ, ನಿಯಮಾವಳಿಗಳನ್ನು ಮೀರಿ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದಿದ್ದಾರೆ.

ಜಯರಾಮ ಅಂಬೆಕಲ್ಲು ಸ್ಪಷ್ಟನೆ 

ಘಟನೆ ಕುರಿತಾಗಿ ಶ್ರೀರಾಮಸೇನೆ ಸಂಘಟನೆ ಅಧ್ಯಕ್ಷ ಜಯರಾಮ ಅಂಬೆಕಲ್ಲು ಮಾತನಾಡಿದ್ದು, ಆ ದಾಳಿಗೂ ಶ್ರೀರಾಮಸೇನೆ ಸಂಘಟನೆಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:16 pm, Thu, 23 January 25

Loading...
Unable to load recommendations.
Follow Us