ಅಚ್ಚರಿ ಘಟನೆಗೆ ಸಾಕ್ಷಿಯಾದ ಮಂಗಳೂರು: 36 ವರ್ಷಗಳ ಬಳಿಕ ಒಂದಾದ ತಾಯಿ-ಮಗ, ನಿಜವಾಯ್ತು ದೈವ ನುಡಿ

ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಕೆಲಸಕ್ಕಾಗಿ ಮುಂಬೈಗೆ ಹೋಗಿ ಬಳಿಕ ಸಂಪರ್ಕಕ್ಕೆ ಸಿಗದ ಮಗ 36 ವರ್ಷಗಳ ಬಳಿಕ ವಾಪಸ್​ ತಾಯಿಯ ಮಡಿಲು ಸೇರಿದ್ದಾರೆ. ಆ ಮೂಲಕ ಮತ್ತೊಮ್ಮೆ ತುಳುನಾಡಿನ ಕಾರಣಿಕ ಮಂತ್ರದೇವತೆ ದೈವದ ನುಡಿ ನಿಜವಾಗಿದೆ.

ಅಚ್ಚರಿ ಘಟನೆಗೆ ಸಾಕ್ಷಿಯಾದ ಮಂಗಳೂರು: 36 ವರ್ಷಗಳ ಬಳಿಕ ಒಂದಾದ ತಾಯಿ-ಮಗ, ನಿಜವಾಯ್ತು ದೈವ ನುಡಿ
ಒಂದಾದ ತಾಯಿ-ಮಗ
Edited By:

Updated on: Jun 26, 2025 | 10:23 AM

ಮಂಗಳೂರು, ಜೂನ್​ 26: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಕೆಲಸಕ್ಕೆಂದು ಮುಂಬೈಗೆ ಹೋಗಿದ್ದ ಮಗ (son) 36 ವರ್ಷಗಳ ಬಳಿಕ ವಾಪಸ್ ಆಗಿದ್ದು, ಕಾದು ಕುಳಿತ ತಾಯಿಯ (mother) ಮಡಿಲು ಸೇರಿದ್ದಾರೆ. ಆ ಮೂಲಕ ತುಳುನಾಡಿನ ಕಾರಣಿಕ ಮಂತ್ರದೇವತೆ ದೈವದ ಭವಿಷ್ಯ ಮತ್ತೊಮ್ಮೆ ನಿಜವಾಗಿದೆ. ಮಗ ಮನೆಗೆ ಬಂದಿದ್ದರಿಂದ ಕುಟುಂಬಸ್ಥರು ಸಂತಸಗೊಂಡಿದ್ದಾರೆ.

ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮದ ಚಂದ್ರಶೇಖರ್,​​ ಕಳೆದ 36 ವರ್ಷಗಳ ಹಿಂದೆ ಕೆಲಸಕ್ಕೆಂದು ಮುಂಬೈಗೆ ಹೋಗಿದ್ದಾರೆ. ಸುಮಾರು 7 ತಿಂಗಳು ಪತ್ರದ ಮುಖೇನ ಮನೆಯವರ ಜೊತೆ ಸಂರ್ಪದಲ್ಲಿದ್ದಾರೆ. ಆ ಬಳಿಕ ಕುಟುಂಬದವರು ಹಾಗೂ ಪರಿಚಿತರ ಸಂಪರ್ಕಕ್ಕೆ ಸಿಗದೇ ದೂರವಾಗಿದ್ದಾರೆ.

ಮರಾಠಿ ಕುಟುಂಬದ ಆಸರೆ

ಕುಟುಂಬಸ್ಥರು ಸೇರಿ ಊರನ್ನು ಮರೆತು ಹೋಗುವಷ್ಟು ಮಾನಸಿಕ ಅನಾರೋಗ್ಯಕ್ಕೆ ಒಳಗಾದ ಚಂದ್ರಶೇಖರ್​​, ಮುಂಬೈಯ ಮಂದಿರ, ಊರು, ಕೇರಿಗಳಲ್ಲಿ ತಿರುಗಾಡಿಕೊಂಡು 10 ವರ್ಷಗಳನ್ನು ಕಳೆದಿದ್ದಾರೆ. ಕಳೆದ 25 ವರ್ಷಗಳ ಹಿಂದೆ ಚಂದ್ರಶೇಖರ್​ಗೆ ಮುಂಬೈನಲ್ಲಿ ಬಾಲು ಕಾಂಬ್ಳೆ ಎಂಬ ಮರಾಠಿ ಕುಟುಂಬದ ಆಸರೆ ಸಿಕ್ಕಿದೆ. ಬಾಲು ಕಾಂಬ್ಳೆ ತಮ್ಮ ಮನೆಗೆ ಕರೆದುಕೊಂಡು ಹೋಗಿ ಚಂದ್ರಶೇಖರ್​​ಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದು, ತಕ್ಕಮಟ್ಟಿಗೆ ಸರಿಯಾಗಿದ್ದರು. ಬಾಲು ಕಾಂಬ್ಳೆ ಅವರ ಹೋಟೆಲ್​ನಲ್ಲೇ ಉದ್ಯೋಗಕ್ಕೆ ಸೇರಿಕೊಂಡಿದ್ದಾರೆ.

ಇದನ್ನೂ ಓದಿ
ಪರಿಚಯವಾಗಿ ಹತ್ತೇ ದಿನಕ್ಕೆ ವಿವಾಹಿತ ಮಹಿಳೆ ಕೊಲೆ: ಚಿನ್ನಾಭರಣ ದೋಚಿದ ಯುವಕ
ನಿವೃತ್ತರಾಗಿ 15 ವರ್ಷ ಕಳೆದರೂ ಹುದ್ದೆಯಲ್ಲಿ ಮುಂದುವರಿದ ಅಧಿಕಾರಿ!
ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ
ಮಂಗಳೂರು: ಒಂದೇ ಮನೆಯ 7 ದನ ಕರುಗಳು ನರಳಿ ನರಳಿ‌ ನಿಗೂಢ ಸಾವು

ಮಂತ್ರದೇವತೆ‌ ದೈವ ಅಭಯ

ಇತ್ತ ಚಂದ್ರಶೇಖರ್ ಪತ್ತೆಗಾಗಿ ಕುಟುಂಬದವರಿಂದ ಹಲವು ಪ್ರಯತ್ನ ನಡೆದಿತ್ತು. ಹಲವು ಕಡೆ ಹರಕೆಗಳನ್ನು ಹೊತ್ತಿದ್ದರು. ಕೊನೆ ಕೊನೆಗೆ ಚಂದ್ರಶೇಖರ್ ವಾಪಸ್​ ಬರುವ ಆಸೆಯನ್ನು ಕುಟುಂಬ ಕೈಬಿಟ್ಟಿದ್ದರು. ಮನೆಯಲ್ಲಿಯೇ ‌ಮಂತ್ರದೇವತೆಯನ್ನು‌ ಆರಾಧಿಸಿಕೊಂಡು ಬಂದಿದ್ದ ಚಂದ್ರಶೇಖರ್ ಕುಟುಂಬಕ್ಕೆ ಕೆಲವು ತಿಂಗಳ ಹಿಂದೆ ಮಂತ್ರದೇವತೆ‌ ದೈವ ಅಭಯ ನೀಡಿತ್ತು. ಮಗ ಬದುಕಿದ್ದು, ಮುಂದೆ ನಡೆಯುವ ದರ್ಶನದಲ್ಲಿ ದೈವದ ಸೇವೆ ಹಿರಿಯ ಮಗನಿಂದಲೇ ನಡೆಯಬೇಕೆಂದು ಎಂದು ದೈವ ನುಡಿದಿತ್ತು. ಆ ಬಳಿಕ ನಡೆದದ್ದೆಲ್ಲಾ ಪವಾಡ.

ಇದನ್ನೂ ಓದಿ: ಶಿಸ್ತಿಲ್ಲದವರು, ಪಕ್ಷ ಹಿತಾಸಕ್ತಿಗಳಿಗೆ ಧಕ್ಕೆ ತರುವವರನ್ನು ವಾಪಸ್ಸು ಕರೆಯುವ ಪ್ರಶ್ನೆಯೇ ಇಲ್ಲ: ರಾಧಾ ಮೋಹನ್ ದಾಸ್

ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮುಂಬೈಯಲ್ಲಿ ನೆಲೆಸಿದ್ದ ಊರ ವ್ಯಕ್ತಿಯೊಬ್ಬರಿಂದ ಚಂದ್ರಶೇಖರ್ ಬಗ್ಗೆ ಸುಳಿವು ಸಿಕ್ಕಿದೆ. ಆ ಬಳಿಕ ಚಂದ್ರಶೇಖರ್ ಸಂಪರ್ಕಿಸಲು ಊರವರು, ಮುಂಬೈಯಲ್ಲಿ ನೆಲೆಸಿರುವ ಪರಿಚಯಸ್ಥರ ಪ್ರಯತ್ನಿಸಿದ್ದಾರೆ. ಕೊನೆಗೆ ಆಶ್ರಯ ನೀಡಿದ ಕುಟುಂಬದವರ ದೂರವಾಣಿ ಸಂಖ್ಯೆ ಲಭ್ಯವಾಗಿದೆ. ಕೊನೆಗೂ ಮೇ.29ರಂದು ನಡೆದ ದೈವ ದರ್ಶನದ ಮೂರು ದಿನಗಳ ಮೊದಲು ಚಂದ್ರಶೇಖರ್ ಮನೆ ಸೇರಿದ್ದಾರೆ. ಮನೆಗೆ ಬಂದ ಬಳಿಕ ಮಾನಸಿಕ ಅನಾರೋಗ್ಯದಿಂದ ಭಾಗಶಃ ಗುಣಮುಖರಾಗಿದ್ದಾರೆ. ಮಂತ್ರದೇವತೆ ದೈವದ ಕಾರಣಿಕವನ್ನು ಚಂದ್ರಶೇಖರ್ ಕುಟುಂಬ ಕೊಂಡಾಡಿದೆ.

ಇದನ್ನೂ ಓದಿ: ಸಾರಿಗೆ ಅಧಿಕಾರಿ ಉಸ್ತುವಾರಿಯಲ್ಲೇ ಭಾರಿ ತೆರಿಗೆ ವಂಚನೆ ದಂಧೆ: ಕೋಟಿ ರೂ. ಬೆಲೆಯ ಐಷಾರಾಮಿ ಕಾರಿಗೆ ಲಕ್ಷ ಮೌಲ್ಯದ ನೋಂದಣಿ!

ಮನೆ ಮಗನಂತೆ ಸಾಕಿದ ಬಾಲು ಕಾಂಬ್ಳೆ ಕುಟುಂಬವನ್ನು ಮರೆಯದ ಚಂದ್ರಶೇಖರ್, ಸದ್ಯ ದೈವದ ಸೇವೆಯ ಬಳಿಕ ವಾಪಸ್​ ಮುಂಬೈಗೆ ಹೋಗಿದ್ದಾರೆ. ಸ್ವಲ್ಪ ಕಾಲ ಅಲ್ಲಿಯೇ ದುಡಿಯುತ್ತೇನೆ. ಇನ್ನು ಮುಂದೆ ಮನೆಯಲ್ಲಿ ನಡೆಯುವ ದೈವ, ದೇವರ ಕೆಲಸ, ಸಮಾರಂಭಗಳಿಗೆ ತಪ್ಪದೇ ಬರುತ್ತೇನೆ ಎಂದು ವಾಗ್ದಾನ ಮಾಡಿದ್ದು, ಸದ್ಯ ಮನೆಯವರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಶೋಕ್​ ಪೂಜಾರಿ, ಮಂಗಳೂರು

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸುದ್ದಿಬಿಡುಗಡೆ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಪ್ರಜಾ ಟಿ.ವಿಯ ಉಡುಪಿ ಜಿಲ್ಲಾ ವರದಿಗಾರರಾಗಿ ಒಂದು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, ಒಂದು ವರ್ಷ ನಾಲ್ಕು ತಿಂಗಳಿನಿಂದ ಟಿ.ವಿ 9 ವಾಹಿನಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ ಇಂಡಿಯಾ ಟೆಲಿವಿಷನ್​ . ಕಾಮ್​ 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Follow Us