ಮಂಗಳೂರು: ನಗ್ನ ವಿಡಿಯೋ ಕರೆ ಮಾಡುವಂತೆ ಒತ್ತಾಯ, ಅನ್ಯ ಕೋಮಿನ ಯುವಕನಿಗೆ ಬಿತ್ತು ಗೂಸಾ
ಬೆಂಗಳೂರಿನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆ ಯುವಕ ರಂಜಾನ್ಗೆಂದು ಊರಿಗೆ ಹೋಗಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಎಂಬಲ್ಲಿನ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ರೂಪಕ್ಕೆ ಮಾರುಹೋಗಿದ್ದ. ಗೂಗಲ್ ಪೇ ನೆಪದಲ್ಲಿ ಫೋನ್ ನಂಬರ್ ಪಡೆಯಲು ಯತ್ನಿಸಿದ್ದ. ಯುವತಿ ನಂಬರನ್ನೇನೋ ನೀಡಿದ್ದಳು, ಆದರೆ ಅದು ಆಕೆಯದ್ದಾಗಿರಲಿಲ್ಲ. ನಂಬರ್ ಸಿಕ್ಕ ಖುಷಿಯಲ್ಲಿ ಆತ ಅಶ್ಲೀಲ ಚಾಟ್ ಮಾಡಲಾರಂಭಿಸಿದ್ದ. ಅಷ್ಟು ಸಾಲದೆಂಬಂತೆ, ನಗ್ನ ಕರೆ ಮಾಡುವಂತೆ ಒತ್ತಾಯಿಸಿದ್ದಾನೆ. ಆ ಬಳಿಕ ಯುವತಿಯನ್ನು ಭೇಟಿಯಾಗಲು ಹೋದವನಿಗೆ ಗೂಸಾ ಬಿದ್ದಿದೆ. ಹಾಗಾದರೆ, ನಡೆದಿದ್ದೇನು? ಪೂರ್ಣ ವಿವರ ಇಲ್ಲಿದೆ.

ಮಂಗಳೂರು, ಏಪ್ರಿಲ್ 7: ಯುವತಿಯೊಬ್ಬಳನ್ನು ಪಟಾಯಿಸಲು ಹೋಗಿ ಸಿಕ್ಕಿಹಾಕಿಕೊಂಡ ಅನ್ಯ ಕೋಮಿನ ಯುವಕನೊಬ್ಬ ಏಟು ತಿಂದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಬಂಟ್ವಾಳ (Bantwal) ತಾಲೂಕಿನ ವಿಟ್ಲ ಬಳಿಯ ಕನ್ಯಾನದಲ್ಲಿ (Kanyana) ನಡೆದಿದೆ. ನಡುರಾತ್ರಿ ನಗ್ನ ವಿಡಿಯೋ ಕರೆಗೆ ಒತ್ತಾಯಿಸಿದ್ದಲ್ಲದೆ, ಚಾಕೊಲೇಟ್ ಹಾಗೂ ಐಸ್ಕ್ರೀಂ ತೆಗೆದುಕೊಂಡು ಯುವತಿಯನ್ನು ಭೇಟಿಯಾಗಲೆಂದು ಹೋಗಿದ್ದ ಯುವಕನಿಗೆ ಶಾಕ್ ಕಾಡಿತ್ತು! ಅಷ್ಟಕ್ಕೂ, ಆತ ಯುವತಿ ಎಂದು ಭಾವಿಸಿ ಚಾಟ್ ಮಾಡಿದ್ದು ಹಾಗೂ ವಿಡಿಯೋ ಕರೆಗೆ ಒತ್ತಾಯಿಸಿದ್ದು ಮತ್ತೊಬ್ಬ ಯುವಕನೊಂದಿಗೆ!
ಕನ್ಯಾನ ನಿವಾಸಿ ಸವಾದ್ (26) ಎಂಬಾತ ಬೆಂಗಳೂರಿನಲ್ಲಿ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ. ರಂಜಾನ್ ಹಬ್ಬಕ್ಕೆಂದು ಊರಿಗೆ ಬಂದಿದ್ದ. ಈ ಸಂದರ್ಭದಲ್ಲಿ ವಿಟ್ಲದ ಕಚೇರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿಯ ನೋಡಿ ಮರುಳಾಗಿದ್ದಾನೆ. ಗೂಗಲ್ ಪೇ ಮೂಲಕ ಉಪಾಯದಿಂದ ಯುವತಿಯ ನಂಬರ್ ಪಡೆಯಲು ಯತ್ನಿಸಿದ್ದಾನೆ. ಆ ಸಂದರ್ಭದಲ್ಲಿ ಕಚೇರಿಯ ಸಹೋದ್ಯೋಗಿಯ ನಂಬರ್ ನೀಡಿದ್ದ ಯುವತಿ ಆತನನ್ನು ಸಾಗ ಹಾಕಿದ್ದರು. ಆದರೆ, ಅದು ಆ ಯುವತಿಯದ್ದೇ ಫೋನ್ ನಂಬರ್ ಎಂದು ಭಾವಿಸಿದ್ದ ಸವಾದ್ ನಿರಂತರ ಮೆಸೇಜ್ ಮಾಡಲು ಆರಂಭಿಸಿದ್ದ. ಆತನ ಎಲ್ಲ ಮೆಸೇಜ್ಗಳಿಗೂ ಆ ಯುವತಿಯ ಸಹೋದ್ಯೋಗಿ ಯುವಕ ಉತ್ತರಿಸಿ ಆಟವಾಡಿಸಿದ್ದ.
ಇದಾದ ನಂತರ ಸವಾದ್ ತಡರಾತ್ರಿ ಅಶ್ಲೀಲ ವಿಡಿಯೋಗಳನ್ನು ಕಳುಹಿಸಲು ಆರಂಭಿಸಿದ್ದ. ಅಂಗಾಂಗ ತೋರಿಸು ಎಂದು ವಾಯ್ಸ್ ಮೆಸೇಜ್ ಕಳುಹಿಸಿದ್ದ. ನಂತರ ಭೇಟಿಯಾಗುವಂತೆ ಮಸೇಜ್ ಮೂಲಕ ಒತ್ತಾಯಿಸಿದ್ದ. ಇದಕ್ಕೆ ಯುವತಿ ಹೆಸರಿನಲ್ಲಿ ಚಾಟ್ ಮಾಡುತ್ತಿದ್ದ ಯುವಕ ಒಪ್ಪಿದ್ದ. ಹೀಗಾಗಿ ಸವಾದ್, ಯುವತಿಗೆಂದು ಐಸ್ ಕ್ರೀಂ, ಚಾಕೊಲೇಟ್ ತೆಗೆದುಕೊಂಡು ತೆರಳಿದ್ದ. ಆತನಿಗಾಗಿ ಕಾದು ಕುಳಿತಿದ್ದ ಸ್ಥಳೀಯ ಯುವಕರು, ಸರಿಯಾಗಿ ಏಟು ಕೊಟ್ಟು ತದುಕಿದ್ದಾರೆ. ನಂತರ ಆತನನ್ನು ಹಿಡಿದು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಾಟ, ಮಂತ್ರ ನೆಪದಲ್ಲಿ ಲೈಂಗಿಕ ಕಿರುಕುಳ: ಮುಸ್ಲಿಂ ಧರ್ಮಗುರು ಬಂಧನ
ಮಾಟ, ಮಂತ್ರ ನಿವಾರಿಸುವ ನೆಪದಲ್ಲಿ ಮಹಿಳೆಗೆ ಲೈಂಕಿಕ ಕಿರುಕುಳ ನೀಡಿದ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ನಿವಾಸಿ, ಮುಸ್ಲಿಂ ಧರ್ಮಗುರು ಜಿ.ಅಬ್ದುಲ್ ಕರೀಮ್ ಅಲಿಯಾಸ್ ಕೂಳೂರು ಉಸ್ತಾದ್ ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬರಿಗೆ ಯಾರೋ ಮಾಟ, ಮಂತ್ರ ಮಾಡಿಸಿದ್ದಾರೆಂದು ನಂಬಿಸಿದ್ದ ಆರೋಪಿ ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ. ಚಿಕಿತ್ಸೆಯ ನೆಪದಲ್ಲಿ 1 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಎಂದು ಆರೋಪಿಸಲಾಗಿದೆ.
ಮಹಿಳೆ ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿದ್ದು, ಆಕೆಯ ಕುಟುಂಬದವರು ಹೆಜಮಾಡಿಯಲ್ಲಿದ್ದ ಕೂಳೂರು ಉಸ್ತಾದ್ನನ್ನು ಭೇಟಿ ಮಾಡಿದ್ದರು. ಮಹಳೆಯನ್ನು ನೋಡಿದ್ದ ಆತ, ಆಕೆಗೆ ಯಾರೋ ಮಾಟ ಮಾಡಿಸಿದ್ದಾರೆ ಎಂದು ನಂಬಿಸಿದ್ದ. ಚಿಕಿತ್ಸೆ ಕೊಡುತ್ತೇನೆ ಎಂದು ನಂಬಿಸಿ ಮಹಿಳೆಯನ್ನು ಆಗಾಗ ಬರಲು ಹೇಳುತ್ತಿದ್ದ. ಚಿಕಿತ್ಸೆ ಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಪಿಸಲಾಗಿದೆ. ಈ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಅಬ್ದುಲ್ ಕರೀಮ್ನನ್ನು ಬಂಧಿಸಿದ್ದಾರೆ.
ಪಿಎಸ್ಐ ಮಗನಿಂದಲೇ ಬಾಲಕಿ ಮೇಲೆ ನಿರಂತರ ಅತ್ಯಾಚಾರ
ಪಿಎಸ್ಐ ಮಗನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 17 ವರ್ಷದ ಕಾಲೇಜು ವಿದ್ಯಾರ್ಥಿನಿ ಮನೆಯಲ್ಲಿ ಒಬ್ಬಳೇ ನೀರು ಕೇಳುವ ನೆಪದಲ್ಲಿ ಹೋಗಿ ಅತ್ಯಾಚಾರ ಎಸಗಿದ್ದಾನೆ. ಅದಾದ ನಂತರ ಬಾಲಕಿಯನ್ನು ಬೆದರಿಸಿ ಏಳೆಂಟು ಬಾರಿ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಪ್ರಯತ್ನ: ಮಂಗಳೂರು ಬ್ಯಾಂಕ್ ದರೋಡೆ ಆರೋಪಿಗೆ ಖಾಕಿ ಫೈರಿಂಗ್
ಬಾಲಕಿ ಗರ್ಭಿಣಿ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಬಿಎನ್ಎಸ್ ಹಾಗೂ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಮಂಜುನಾಥ್ಗೆ ವಿವಾಹವಾಗಿದ್ದು, ಮಕ್ಕಳೂ ಇದ್ದಾರೆ.