ಹಾವೇರಿ ರೈತನ ಮಗಳಿಗೆ ‘ವೀಸಾ’ ಕಂಪನಿಯಲ್ಲಿ 46.33 ಲಕ್ಷ ರೂ. ಬಂಪರ್ ಉದ್ಯೋಗ: ಆಳ್ವಾಸ್ ಕಾಲೇಜಿಗೆ ಹಿರಿಮೆ
ಹಾವೇರಿ ಜಿಲ್ಲೆಯ ರೈತನ ಮಗಳು ಸೃಷ್ಟಿ ಮಂಜುನಾಥ್ ಉಳ್ಳಾಗಡ್ಡಿ, ಮೂಡುಬಿದಿರೆಯ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಿಂದ ವಾರ್ಷಿಕ 46.33 ಲಕ್ಷ ರೂ. ಪ್ಯಾಕೇಜ್ಗೆ 'ವೀಸಾ' ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರಿಯಾದ ಮಾರ್ಗದರ್ಶನದಿಂದ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಸೃಷ್ಟಿ ಉದಾಹರಣೆ. ಅವರ ಇಂಟರ್ನ್ಶಿಪ್ ಅನುಭವ ಮತ್ತು ಆಳ್ವಾಸ್ ಬೆಂಬಲ ಈ ಯಶಸ್ಸಿಗೆ ಕಾರಣವಾಗಿದೆ.

ಮಂಗಳೂರು, ಸೆ.1: ಗ್ರಾಮೀಣ ಭಾಗದ ಶ್ರಮಿಕ ರೈತನ ಮಗಳೊಬ್ಬಳು ತನ್ನ ಪ್ರತಿಭೆಯಿಂದ ಜಾಗತಿಕ ಮಟ್ಟದ ಕಂಪನಿಯಲ್ಲಿ ಬೃಹತ್ ಪ್ರಮಾಣದ ಉದ್ಯೋಗ ಗಿಟ್ಟಿಸಿಕೊಂಡು ಸಾಧನೆ ಮಾಡಿದ್ದಾಳೆ. ಹಾವೇರಿ ಜಿಲ್ಲೆಯ ರೈತನ ಮಗಳು ಸೃಷ್ಟಿ ಮಂಜುನಾಥ ಉಳ್ಳಾಗಡ್ಡಿ, ಮೂಡುಬಿದಿರೆಯ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (AIET) ಇತಿಹಾಸದಲ್ಲೇ ಗರಿಷ್ಠ ಮೊತ್ತದ ಅಂದರೆ ವಾರ್ಷಿಕ 46.33 ಲಕ್ಷ ರೂ. ಪ್ಯಾಕೇಜ್ ಹಾಗೂ ಸೌಲಭ್ಯಗಳ ಉದ್ಯೋಗ ಗಿಟ್ಟಿಸಿಕೊಂಡು ಹೊಸ ದಾಖಲೆ ಬರೆದಿದ್ದಾರೆ.
ಡಿಜಿಟಲ್ ಪಾವತಿ ತಂತ್ರಜ್ಞಾನ ಸಂಸ್ಥೆಯಾದ ‘ವೀಸಾ’ (Visa) ಕಂಪನಿಯಲ್ಲಿ ಸೃಷ್ಟಿ ಅವರು ‘ಸಾಫ್ಟ್ವೇರ್ ಇಂಜಿನಿಯರ್’ ಆಗಿ ಆಯ್ಕೆಯಾಗಿದ್ದಾರೆ. ಹಾವೇರಿ ಜಿಲ್ಲೆಯ ಹತ್ತಿಮತ್ತೂರು ಗ್ರಾಮದ ರೈತ ಮಂಜುನಾಥ್ ಹಾಗೂ ಸುಜಾತಾ ದಂಪತಿಯ ಮಗಳಾದ ಸೃಷ್ಟಿ, ಆಳ್ವಾಸ್ ಕಾಲೇಜಿನಲ್ಲಿ ಮಾಹಿತಿ ವಿಜ್ಞಾನ ಇಂಜಿನಿಯರಿಂಗ್ (Information Science Engineering) ಕೊನೆಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ.
6ನೇ ಸೆಮೆಸ್ಟರ್ನಲ್ಲಿ ವೀಸಾ ಸಂಸ್ಥೆಯಲ್ಲಿ 10 ವಾರಗಳ ಇಂಟರ್ನ್ಶಿಪ್ ಪೂರ್ಣಗೊಳಿಸಿದ್ದ ಸೃಷ್ಟಿ, ಆ ಅವಧಿಯಲ್ಲಿ ಪ್ರತಿ ತಿಂಗಳು 90 ಸಾವಿರ ರೂ. ಸ್ಟೈಫಂಡ್ ಪಡೆಯುತ್ತಿದ್ದರು. ಕಠಿಣ ಸಂದರ್ಶನ ಹಾಗೂ ಅವರ ಕಾರ್ಯಕ್ಷಮತೆಯನ್ನು ಮೆಚ್ಚಿ ಸಂಸ್ಥೆಯು ಪ್ಲೇಸ್ಮೆಂಟ್ ಪೂರ್ವ ಆಫರ್ (Pre-Placement Offer) ನೀಡಿದೆ. ಈಗ ಈಕೆಗೆ ಸಿಕ್ಕ ಕೆಲಸದಲ್ಲಿ ವಾರ್ಷಿಕವಾಗಿ 35.58 ಲಕ್ಷ ರೂ. ವೇತನ, ಕುಟುಂಬ ವೈದ್ಯಕೀಯ ವಿಮೆ 7.5 ಲಕ್ಷ ರೂ. ಹಾಗೂ ಒಪಿಡಿ (OPD) ವೈದ್ಯಕೀಯ ನೆರವು 25 ಸಾವಿರ ರೂ., ಶೈಕ್ಷಣಿಕ ನೆರವು 3 ಲಕ್ಷ ರೂ. ಸಿಗಲಿದೆ. ಹಾಗೂ ಇತರ ಸೌಲಭ್ಯಗಳಾದ ಉಚಿತ ಜಿಮ್, ಕಚೇರಿ ಸಾರಿಗೆ ಮತ್ತು ವಾರ್ಷಿಕ ಆರೋಗ್ಯ ತಪಾಸಣೆ ಒಳಗೊಂಡು ಒಟ್ಟು ಪ್ಯಾಕೇಜ್ ಮೌಲ್ಯ 46.33 ಲಕ್ಷ ರೂ.
ಇದನ್ನೂ ಓದಿ: ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ಹಬ್ಬದ ಗಿಫ್ಟ್: ಮಂಗಳೂರು ಸೇರಿ 4 ವಿಶೇಷ ರೈಲುಗಳ ಸೇವೆ ನವೆಂಬರ್ವರೆಗೆ ವಿಸ್ತರಣೆ
“ಆಳ್ವಾಸ್ ಶಿಕ್ಷಣ ಸಂಸ್ಥೆಯು ಇಂಟರ್ನ್ಶಿಪ್ಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ವೀಸಾ ಕಂಪನಿಯಲ್ಲಿ ಸಿಕ್ಕ ಇಂಟರ್ನ್ಶಿಪ್ ಅವಕಾಶವೇ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಈ ಡ್ರೀಮ್ ಜಾಬ್ ಸಿಗಲು ಕಾರಣವಾಯಿತು.” ಎಂದು ಸೃಷ್ಟಿ ಹೇಳಿದ್ದಾರೆ. “ಸರಿಯಾದ ಮಾರ್ಗದರ್ಶನ ಹಾಗೂ ಅವಕಾಶಗಳು ಸಿಕ್ಕರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಸಹ ಜಾಗತಿಕ ಮಟ್ಟದ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೇರಬಹುದು ಎಂಬುದಕ್ಕೆ ಸೃಷ್ಟಿ ಅವರ ಸಾಧನೆಯೇ ಉದಾಹರಣೆ.” ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಡಾ. ಎಂ. ಮೋಹನ್ ಆಳ್ವ ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




