AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನಕ್ಕೆ 400 ರೂ. ಆಸೆ ತೋರಿಸಿ 13 ಸಾವಿರ ಜನರನ್ನು ಲೂಟಿ ಮಾಡಿದ ಕ್ರಿಪ್ಟೋ ಗ್ಯಾಂಗ್! ಪ್ರಮುಖ ಆರೋಪಿ ಅರೆಸ್ಟ್

ದಾವಣಗೆರೆಯಲ್ಲಿ ‘ನಾವಾಬಿಟ್‌’ ಎಂಬ ನಕಲಿ ಆ್ಯಪ್ ಮೂಲಕ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ 13,000 ಅಮಾಯಕ ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ತಮಿಳುನಾಡು ಮೂಲದ ಪ್ರಮುಖ ಆರೋಪಿಯನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ. 10,000 ರೂ. ಹೂಡಿಕೆಗೆ ನಿತ್ಯ 400 ರೂ. ಲಾಭದ ಆಮಿಷ ಒಡ್ಡಿ, ಸ್ಥಳೀಯ ಶಾಲಾ ಮುಖ್ಯೋಪಾಧ್ಯಾಪಕಿಯನ್ನು ಬಳಸಿಕೊಂಡು ಬಡ ಜನರನ್ನು ಲೂಟಿ ಮಾಡಿರುವ ಜಾಲ ಬಯಲಾಗಿದೆ.

ದಿನಕ್ಕೆ 400 ರೂ. ಆಸೆ ತೋರಿಸಿ 13 ಸಾವಿರ ಜನರನ್ನು ಲೂಟಿ ಮಾಡಿದ ಕ್ರಿಪ್ಟೋ ಗ್ಯಾಂಗ್! ಪ್ರಮುಖ ಆರೋಪಿ ಅರೆಸ್ಟ್
ಅರೆಸ್ಟ್ ಆದ ಆರೋಪಿ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: May 27, 2026 | 12:10 PM

Share

ದಾವಣಗೆರೆ, ಮೇ 27: ಕಡಿಮೆ ಹಣ ಹೂಡಿಕೆ ಮಾಡಿ, ದಿನ ಬೆಳಗಾಗುವುದರೊಳಗೆ ಶ್ರೀಮಂತರಾಗಿ ಎಂಬ ಸೈಬರ್ ವಂಚಕರ ಆಮಿಷಕ್ಕೆ ದಾವಣಗೆರೆಯ ಬರೋಬ್ಬರಿ 13 ಸಾವಿರ ಜನ ಮೋಸಹೋಗಿದ್ದಾರೆ. ಕ್ರಿಪ್ಟೋ ಕರೆನ್ಸಿ (Crypto currency) ಹೆಸರಿನಲ್ಲಿ ನಕಲಿ ಆ್ಯಪ್ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಅಂತರರಾಜ್ಯ ಸೈಬರ್ ವಂಚಕರ ಜಾಲದ ಪ್ರಮುಖ ಆರೋಪಿಯನ್ನು ದಾವಣಗೆರೆ ಸಿಇಎನ್ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತಮಿಳುನಾಡಿನ ಮಧುರೈ ನಿವಾಸಿ ಚೆಲ್ಲಪಂಡಿ ಸುಬ್ರಹ್ಮಣಿ (42) ಎಂದು ಗುರುತಿಸಲಾಗಿದೆ. ಈತನೊಂದಿಗೆ ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವೆಡೆ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಮುಖ್ಯಾಂಶಗಳು

  • ದಾವಣಗೆರೆಯಲ್ಲಿ ನಕಲಿ ಕ್ರಿಪ್ಟೋ ಆ್ಯಪ್ ವಂಚನೆ ಜಾಲದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
  • ಹತ್ತು ಸಾವಿರ ಹೂಡಿಕೆಗೆ ನಿತ್ಯ ನಾಲ್ಕುನೂರು ರೂಪಾಯಿ ಲಾಭದ ಆಮಿಷ ಒಡ್ಡಿದ್ದರು.
  • ಜಿಲ್ಲೆಯ ಹದಿಮೂರು ಸಾವಿರ ಬಡ ಜನರು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ.

ವಂಚನೆ ನೆಟ್‌ವರ್ಕ್ ಕೆಲಸ ಮಾಡಿದ್ದು ಹೇಗೆ?

ಖದೀಮರ ಗ್ಯಾಂಗ್ ನಾವಾಬಿಟ್‌.ಇನ್‌ (Navabit.in) ಎಂಬ ನಕಲಿ ಜಾಲತಾಣ ಹಾಗೂ ಆ್ಯಪ್ ರೂಪಿಸಿತ್ತು. ಇದರಲ್ಲಿ ಕನಿಷ್ಠ 10,000 ರೂಪಾಯಿ ಹೂಡಿಕೆ ಮಾಡಿದರೆ, ಅದನ್ನು ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸಿ ದಿನಕ್ಕೆ 300 ರಿಂದ 400 ರೂಪಾಯಿ ಲಾಭಾಂಶ ನೀಡುವುದಾಗಿ ನಂಬಿಸಲಾಗಿತ್ತು. ಆರಂಭದಲ್ಲಿ ಜನರ ಬ್ಯಾಂಕ್ ಖಾತೆಗಳಿಗೆ ನಿಯಮಿತವಾಗಿ ಹಣವನ್ನು ಜಮೆ ಮಾಡಿ ನಂಬಿಕೆ ಗಳಿಸುತ್ತಿದ್ದರು. ಈ ಜಾಲಕ್ಕೆ ಸ್ಥಳೀಯರನ್ನೇ ದಾಳವಾಗಿ ಬಳಸಿಕೊಳ್ಳಲಾಗಿತ್ತು.

ಒತ್ತಡ ಹೇರಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಗ್ಯಾಂಗ್

ಈ ವಂಚನೆ ಜಾಲದ ಆಳ ಎಷ್ಟು ಭೀಕರವಾಗಿದೆ ಎಂದರೆ, ಸ್ಥಳೀಯ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯೇ ಈ ದಂಧೆಯಲ್ಲಿ ಭಾಗಿಯಾಗಿ ಜನರನ್ನು ಸೆಳೆಯುತ್ತಿದ್ದರು. ವಂಚನೆಗೆ ಒಳಗಾದ ಸಾದಿಕ್ ಎಂಬುವವರು ಮಾತನಾಡಿ, ಮುಖ್ಯೋಪಾಧ್ಯಾಯಿನಿ ಒತ್ತಡ ಹೇರಿ ನನ್ನಿಂದ ಮೊದಲು 10,000 ರೂ. ಹೂಡಿಕೆ ಮಾಡಿಸಿದ್ದರು. ಒಂದು ತಿಂಗಳು ದಿನಾಲೂ 300 ರೂ. ಬಂತು. ಆಮೇಲೆ ದೊಡ್ಡ ಆಫರ್ ಇದೆ ಎಂದು ನಂಬಿಸಿ 50 ಸಾವಿರದಿಂದ 5 ಲಕ್ಷದವರೆಗೆ ಹೂಡಿಕೆ ಮಾಡಿಸಿಕೊಂಡರು. ಸಾಲ ಮಾಡಿ ಹಣ ಹಾಕಿದ್ದೆವು, ಆದರೆ ರಂಜಾನ್ ಹಬ್ಬದ ವೇಳೆ ಹಣ ಡ್ರಾ ಮಾಡಲು ಹೋದಾಗ ಖಾತೆ ಬ್ಲಾಕ್ ಆಗಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ ಕರ್ನಾಟಕದಲ್ಲಿ ‘ಹೌಸ್ ಪಾರ್ಟಿ’ ಪ್ರಿಯರಿಗೆ ಬಿಗ್ ಶಾಕ್: ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ!

ಬಡ ಮಹಿಳೆಯರು, ಕೂಲಿ ಕಾರ್ಮಿಕರೇ ಇವರ ಟಾರ್ಗೆಟ್!

ಈ ಸೈಬರ್ ಖದೀಮರು ಪ್ರಮುಖವಾಗಿ ಅಮಾಯಕ ಬಡ ಮಹಿಳೆಯರು, ದಿನಗೂಲಿ ನೌಕರರು ಮತ್ತು ಸಣ್ಣಪುಟ್ಟ ವ್ಯಾಪಾರಿಗಳನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದರು. ದಾವಣಗೆರೆ ಜಿಲ್ಲೆಯೊಂದರಲ್ಲೇ ಸುಮಾರು 13,000 ಜನ ಈ ಆ್ಯಪ್ ನಂಬಿ ಹಣ ಕಳೆದುಕೊಂಡಿದ್ದಾರೆ. ಈ ಕುರಿತು ಏಪ್ರಿಲ್ 4 ರಂದೇ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಚುರುಕುಗೊಳಿಸಿರುವ ಪೊಲೀಸರು ತಮಿಳುನಾಡಿನಲ್ಲಿ ಮುಖ್ಯ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದು, ಸ್ಥಳೀಯ ದಾವಣಗೆರೆಯ ಮೂವರು ಆರೋಪಿಗಳು ಸೇರಿದಂತೆ ಉಳಿದ ಖದೀಮರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Doddamani
Basavaraj Doddamani

ಬಸವರಾಜ ದೊಡ್ಡಮನಿ ಟಿವಿ9 ಕನ್ನಡ ವರದಿಗಾರರಾಗಿದ್ದು, ವಿಶೇಷವಾಗಿ ದಾವಣಗೆರೆ ಜಿಲ್ಲಾ ಪ್ರಾದೇಶಿಕ ಸುದ್ದಿಗಳ ಮೇಲೆ ಕೇಂದ್ರೀಕರಿಸುತ್ತಾರೆ.

Read More