ಹುಬ್ಬಳ್ಳಿಯಲ್ಲೊಂದು ಕರುಳು ಹಿಂಡುವ ಘಟನೆ: ಮಗನ ಜೀವ ಉಳಿಸಲು ಕಿವಿಯೋಲೆ ಮಾರಿದ ತಾಯಿ
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಗನ ಜೀವ ಉಳಿಸಲು ಓರ್ವ ತಾಯಿ ಹೋರಾಡುತ್ತಿದ್ದಾರೆ. 11 ವರ್ಷದ ಮಗನಿಗೆ ಬಂದಿರುವ ಮಹಾಮಾರಿ ರೋಗಕ್ಕೆ ಚಿಕಿತ್ಸೆ ಅಗತ್ಯವಿದ್ದು, ದುಬಾರಿ ವೆಚ್ಚಕ್ಕೆ ತಮ್ಮ ಕಿವಿ ಓಲೆಯನ್ನೇ ಮಾರಿದ್ದಾರೆ. ದಯವಿಟ್ಟು ನನ್ನ ಮಗನನ್ನು ಬದುಕಿಸಿ ಅಂತ ತಾಯಿ ಕಣ್ಣೀರು ಹಾಕಿದ್ದಾರೆ.

ಹುಬ್ಬಳ್ಳಿ, ಮೇ 17: ಕಿತ್ತು ತಿನ್ನುವ ಬಡತನ ಒಂದೆಡೆ, ಮಗನಿಗೆ ಬಂದಿರೋ ಮಹಾಮಾರಿ ರೋಗ ಮತ್ತೊಂದೆಡೆ. ಖಾಸಗಿ ಆಸ್ಪತ್ರೆಗೆ ಕೊಡಲು ಲಕ್ಷ ಲಕ್ಷ ಹಣವಿಲ್ಲದೇ ಹೆತ್ತ ತಾಯಿ (Mother) ತನ್ನ ಕಿವಿಯೋಲೆಯನ್ನೇ ಮಾರಿ ಮಗನನ್ನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಹುಬ್ಬಳ್ಳಿ (Hubballi) ಕಿಮ್ಸ್ನಲ್ಲಿ ಕಣ್ಣೀರು ಹಾಕುತ್ತಾ ಪರದಾಟ ನಡೆಸಿರುವ ತಾಯಿಯನ್ನ ನೋಡಿದರೆ ಯಾರಿಗಾದರೂ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡುತ್ತವೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಈ ಹೃದಯವಿದ್ರಾವಕ ಘಟನೆಗೆ ಸಾಕ್ಷಿಯಾಗಿದೆ.
ಮುಖ್ಯಾಂಶಗಳು
- 11 ವರ್ಷದ ಬಾಲಕನಿಗೆ ಬೋನ್ ಮ್ಯಾರೋ ಸಮಸ್ಯೆ
- 26 ಲಕ್ಷ ರೂ. ಚಿಕಿತ್ಸಾ ವೆಚ್ಚ ಭರಿಸಲಾಗದೆ ಕೂಲಿ ಕಾರ್ಮಿಕ ದಂಪತಿ ಕಂಗಾಲು
- ಸಿಎಂ ಪರಿಹಾರ ನಿಧಿಯಿಂದ ನೆರವಿನ ಭರವಸೆ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಸುನಿತಾ ಕೆಂಚಪ್ಪನವರ್ ಎಂಬುವವರು ತನ್ನ ಮಗ ಸಾಗರ್ನ ಜೀವ ಉಳಿಸಲು ಹೋರಾಡುತ್ತಿದ್ದಾರೆ. 11 ವರ್ಷದ ಸಾಗರ್ ಹುಟ್ಟಿದಾಗಿನಿಂದ ಚೆನ್ನಾಗಿಯೇ ಇದ್ದ, ಆದರೆ ಇತ್ತೀಚೆಗೆ ರಕ್ತದ ಕೊರತೆಯಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ. ವೈದ್ಯರ ಬಳಿ ತಪಾಸಣೆ ನಡೆಸಿದಾಗ ಬಾಲಕನಿಗೆ ಬೋನ್ ಮ್ಯಾರೋ ಟ್ರಾನ್ಸಪ್ಲೆಂಟ್ (ಮೂಳೆ ಮಜ್ಜೆ ಕಸಿ) ಸಮಸ್ಯೆ ಇರುವುದು ಬೆಳಕಿಗೆ ಬಂದಿದೆ.
ಕಿವಿಯೋಲೆಯನ್ನೇ ಮಾರಿದ ತಾಯಿ
ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆ, ಜೈನ್ ಆಸ್ಪತ್ರೆ ಸೇರಿದಂತೆ ಹಲವು ಸರ್ಕಾರಿ ಆಸ್ಪತ್ರೆಗಳಿಗೆ ತಾಯಿ ಸುನಿತಾ ಅಲೆದಾಡಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕಾಯಿಲೆಗೆ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರೋಬ್ಬರಿ 20 ರಿಂದ 26 ಲಕ್ಷ ರೂ ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ. ದಿನವಿಡೀ ಕೂಲಿ ಕೆಲಸ ಮಾಡಿ ಜೀವನ ನಡೆಸುವ ದಂಪತಿಗೆ ಅಷ್ಟೊಂದು ದೊಡ್ಡ ಮೊತ್ತ ಹೊಂದಿಸುವುದು ಅಸಾಧ್ಯದ ಮಾತಾಗಿದೆ.
ಇದನ್ನೂ ಓದಿ: ಮಗುವಿನ ಹೊಟ್ಟೆಯಲ್ಲಿದ್ದ 25 ಸೆಂ.ಮೀ ಕೂದಲಿನ ಗುಡ್ಡೆ ಹೊರಗೆ ತೆಗೆದ ವೈದ್ಯರು!
ಸದ್ಯ ಆರೋಗ್ಯ ಭಾಗ್ಯ ಸಂಜೀವಿನಿ ಯೋಜನೆಯಡಿ ಮಗನಿಗೆ ಚಿಕಿತ್ಸೆಗೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿದೆಯಾದರೂ, ಚಿಕಿತ್ಸೆ ಆರಂಭಿಸಲು ಕನಿಷ್ಠ 2 ಲಕ್ಷ ರೂ ಹಣದ ತುರ್ತು ಅವಶ್ಯಕತೆ ಇದೆ. ಈ ವೆಚ್ಚವನ್ನು ಭರಿಸಲು ತಾಯಿ ತನ್ನ ಕಿವಿಯೋಲೆಯನ್ನೇ ಮಾರಿ ಹುಬ್ಬಳ್ಳಿ ಕಿಮ್ಸ್ಗೆ ಮಗನನ್ನು ಕರೆದುಕೊಂಡು ಬಂದಿದ್ದಾರೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಕೊಡಿಸುವುದಾಗಿ ಡಾ. ನಾಗಲಕ್ಷ್ಮಿ ಚೌದರಿ ಭರವಸೆ
ಇಂದು ಹುಬ್ಬಳ್ಳಿ ಕಿಮ್ಸ್ಗೆ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಮುಂದೆ ತಾಯಿ ಸುನಿತಾ ತನ್ನ ಕಣ್ಣೀರ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ತಾಯಿಯ ಅಳಲನ್ನು ಕೇಳಿ ಮನಕರಗಿದ ನಾಗಲಕ್ಷ್ಮಿ ಚೌದರಿ, ಸದ್ಯ ಚಿಕಿತ್ಸೆ ಆರಂಭಿಸಲು ಬೇಕಾಗಿರುವ 2 ಲಕ್ಷ ರೂ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೊಡಿಸುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಶಿರಸಿಯ 3ನೇ ಕ್ಲಾಸ್ ವಿದ್ಯಾರ್ಥಿಯಿಂದ ವಿಶ್ವದಾಖಲೆ: ಶೀರ್ಷಾಸನದಲ್ಲಿ ಶಿವತಾಂಡವ ಪಠಿಸಿದ ಬಾಲ ಪ್ರತಿಭೆ
ಒಟ್ಟಿನಲ್ಲಿ ಬೋನ್ ಮ್ಯಾರೋ ಟ್ರಾನ್ಸಪ್ಲೆಂಟ್ ಸಮಸ್ಯೆ ಹೊಂದಿರುವ 11 ವರ್ಷದ ಬಾಲಕ ಸಾಗರ್, ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ನರಳುತ್ತಿದ್ದಾನೆ. ಆತನನ್ನು ಬದುಕಿಸಲು ಹೆತ್ತವರು ಕಷ್ಟ ಪಡುತ್ತಿದ್ದಾರೆ. ಹೀಗಾಗಿ ಸರ್ಕಾರ ಚಿಕಿತ್ಸೆಗೆ ಅಗತ್ಯ ನೆರವು ನೀಡಿ, ಬಾಲಕನ ಜೀವ ಉಳಿಸುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
