ಬಾಲ ಬಿಚ್ಚಿದರೆ ಗಡೀಪಾರು: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ರೌಡಿಗಳಿಗೆ ಕಮಿಷನರ್ ಖಡಕ್ ಎಚ್ಚರಿಕೆ
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹುಬ್ಬಳ್ಳಿಯಲ್ಲಿ ನಡೆಸಿದ ರೌಡಿ ಪರೇಡ್ನಲ್ಲಿ ಪುಡಿ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಬಾಲ ಬಿಚ್ಚಿದರೆ ಗಡೀಪಾರು ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಸನ್ನಡತೆ ತೋರಿದ 816 ಜನರನ್ನು ರೌಡಿ ಪಟ್ಟಿಯಿಂದ ಕೈಬಿಡಲಾಗಿದ್ದು, ಬಾಲ ಬಿಚ್ಚುವ ರೌಡಿಗಳಿಗೆ ಗಡಿಪಾರಿನ ವಾರ್ನಿಂಗ್ ನೀಡಲಾಗಿದೆ.

ಹುಬ್ಬಳ್ಳಿ, ಏಪ್ರಿಲ್ 9: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ (Hubballi-Dharawad) ಇತ್ತೀಚೆಗೆ ಪುಡಿ ರೌಡಿಗಳ ಉಪಟಳ ಮತ್ತು ಚಾಕು ಇರಿತದಂತಹ ಕೃತ್ಯಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಗರದ ಹಳೆ ಸಿಎಆರ್ (CAR) ಮೈದಾನದಲ್ಲಿ ಇಂದು ನಡೆದ ಬೃಹತ್ ರೌಡಿ ಪರೇಡ್ನಲ್ಲಿ 450ಕ್ಕೂ ಹೆಚ್ಚು ರೌಡಿ ಶೀಟರ್ಗಳು ಭಾಗಿಯಾಗಿದ್ದರು.
ಬಾಲ ಬಿಚ್ಚಿದರೆ ಗುಂಡಾ ಕಾಯ್ದೆ
ನೆತ್ತಿ ಸುಡುವ ಬಿಸಿಲಿನಲ್ಲಿ ನಡೆದ ಈ ಪರೇಡ್ನಲ್ಲಿ ಒಬ್ಬೊಬ್ಬರ ಹಳೆಯ ಇತಿಹಾಸ (Criminal Records) ಕೆದಕಿದ ಕಮಿಷನರ್, ಸಾರ್ವಜನಿಕರ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಕೆಲಸ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಯಾರಾದರೂ ಬಾಲ ಬಿಚ್ಚಿದರೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನಗರದಿಂದ ಗಡಿಪಾರು ಮಾಡಲಾಗುವುದು ಎಂದು ಅವರು ಗುಡುಗಿದರು. ಈಗಾಗಲೇ ಈ ವರ್ಷ 30ಕ್ಕೂ ಹೆಚ್ಚು ರೌಡಿಗಳನ್ನು ಗಡಿಪಾರು ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
816 ಜನರಿಗೆ ರೌಡಿ ಪಟ್ಟಿಯಿಂದ ಮುಕ್ತಿ
ಇದೇ ವೇಳೆ, ಅಪರಾಧ ಲೋಕವನ್ನು ಬಿಟ್ಟು ಸನ್ನಡತೆಯಿಂದ ಬದುಕುತ್ತಿರುವವರಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ. 2026ರ ಆರಂಭದಲ್ಲಿ ಅವಳಿ ನಗರದಲ್ಲಿ 1,320 ರೌಡಿ ಶೀಟರ್ಗಳಿದ್ದರು. ಅವರಲ್ಲಿ ಸನ್ನಡತೆ ತೋರಿದ 816 ಜನರನ್ನು ರೌಡಿ ಪಟ್ಟಿಯಿಂದ ಕೈಬಿಡಲಾಗಿದೆ. ಪ್ರಸ್ತುತ ನಗರದಲ್ಲಿ 510 ಸಕ್ರಿಯ ರೌಡಿ ಶೀಟರ್ಗಳಿದ್ದು, ಈ ವರ್ಷ ಹೊಸದಾಗಿ 100ಕ್ಕೂ ಹೆಚ್ಚು ಜನರ ಮೇಲೆ ನಿಗಾ ಇರಿಸಿ ರೌಡಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಇದನ್ನೂ ಓದಿ: ಮನೆ ಮುಂದಿನ ಹಿಂದೂ ಮಹಿಳೆ ಜತೆ ಮುಸ್ಲಿಂ ವ್ಯಕ್ತಿ ಜೂಟ್: ಕಣ್ಣೀರಿಟ್ಟ ತಾಯಿ
ಒಟ್ಟಾರೆಯಾಗಿ, ಹುಬ್ಬಳ್ಳಿ-ಧಾರವಾಡದಲ್ಲಿ ಶಾಂತಿ ಕಾಪಾಡಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಅಪರಾಧ ಕೃತ್ಯಗಳಲ್ಲಿ ತೊಡಗುವವರಿಗೆ ಜೈಲೇ ಗತಿ ಎಂಬ ಸಂದೇಶ ರವಾನಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



