ಕಾಂಗ್ರೆಸ್ ಹೈಕಮಾಂಡ್ಗೆ ಮುಸ್ಲಿಂ ಸಮುದಾಯದ ಖಡಕ್ ಎಚ್ಚರಿಕೆ: 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿ ಏನೂ ಎಂಬುದನ್ನ ತೋರಿಸುತ್ತೇವೆ
ಹೊಸ ಕರ್ನಾಟಕ ಸರ್ಕಾರ ರಚನೆಯಾದ ಬೆನ್ನಲ್ಲೇ, ಮುಸ್ಲಿಂ ಸಮುದಾಯ ಸಚಿವ ಸಂಪುಟದಲ್ಲಿ ಯು.ಟಿ. ಖಾದರ್ ಹೊರತುಪಡಿಸಿ ಇನ್ನೂ 4 ಸ್ಥಾನಗಳಿಗೆ ತೀವ್ರ ಬೇಡಿಕೆ ಇಟ್ಟಿದೆ. ಈಡೇರದಿದ್ದರೆ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ಗೆ ಮತದಾನವಿಲ್ಲ ಎಂದು ಹುಬ್ಬಳ್ಳಿಯ ಮುಖಂಡರು ಎಚ್ಚರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ಗೆ ಮುಸ್ಲಿಂ ಸಮುದಾಯ ಇಕ್ಕಟ್ಟು ಸೃಷ್ಟಿಸಿದ್ದು, ಸಂಪುಟ ವಿಸ್ತರಣೆ ಸವಾಲಾಗಿದೆ.

ಹುಬ್ಬಳ್ಳಿ, ಜೂ.4: ರಾಜ್ಯದಲ್ಲಿ ಡಿಕೆ ಶಿವಕುಮಾರ್ ಅವರ ನೂತನ ಸರ್ಕಾರ ರಚನೆ ಆಗಿದೆ. 13 ಸಚಿವರ ಜತೆಗೆ ಮುಖ್ಯಮಂತ್ರಿಯಾಗಿ ನೆನ್ನೆ (ಜೂ.3) ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಜತೆಗೆ ಸಚಿವ ಸಂಪುಟ ಸಭೆಯನ್ನು ಮಾಡಿ ಮಹತ್ವದ ತಿರ್ಮಾನವನ್ನು ತೆಗೆದುಕೊಂಡಿದ್ದಾರೆ. ಇದೀಗ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ಮುಸ್ಲಿಂ ಸಮುದಾಯ ಮಹತ್ವದ ಬೇಡಿಕೆಯನ್ನು ಇಟ್ಟಿದೆ. ಈಗಾಗಲೇ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಯು.ಟಿ ಖಾದರ್ ಅವರಿಗೆ (ಅಲ್ಪಸಂಖ್ಯಾತ ಕೋಟಾದಡಿಯಲ್ಲಿ) ಸಚಿವ ಸ್ಥಾನ ನೀಡಲಾಗಿದೆ. ಇದೀಗ ಮತ್ತೆ 4 ಜನರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ಗೆ ಮುಸ್ಲಿಂ ಸಮುದಾಯ ಭಾರಿ ಇಕ್ಕಟ್ಟು ಸೃಷ್ಟಿಸಿದೆ. ನೂತನ ಸಂಪುಟದಲ್ಲಿ (New Cabinet) ಮುಸ್ಲಿಂ ಸಮುದಾಯದ ಐವರು ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹುಬ್ಬಳ್ಳಿಯಲ್ಲಿ ಸಮುದಾಯದ ಧರ್ಮಗುರುಗಳು ಹಾಗೂ ರಾಜಕೀಯ ನಾಯಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಶಕ್ತಿ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಮೌಲ್ವಿಗಳು ಖಡಕ್ ಸಂದೇಶ ರವಾನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಟಿವಿ9 ಮುಂದೆ ಧರ್ಮಗುರುಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ. “ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಏಕಪಕ್ಷೀಯ ಮತಗಳಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವು ಸಮುದಾಯದ ಋಣವನ್ನು ಮುಟ್ಟಿಸಬೇಕಾದ ಅನಿವಾರ್ಯತೆ ಇದೆ. ಮುಂಬರುವ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ತಕ್ಷಣವೇ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಭಾರಿ ರಾಜಕೀಯ ಹೊಡೆತ ಬೀಳುವುದು ನಿಶ್ಚಿತ” ಎಂದು ನಾಯಕರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ: ಬಿಕೆ ಹರಿಪ್ರಾಸದ್ ಒಂದೇ ದಿನ ಡಬಲ್ ಧಮಾಕ
ಈಗಾಗಲೇ ಯು.ಟಿ. ಖಾದರ್ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇದರೊಂದಿಗೆ ಸಮುದಾಯದ ಇತರ ನಾಲ್ವರು ಹಿರಿಯ ಶಾಸಕರುಗಳಾದ ಜಮೀರ್ ಅಹ್ಮದ್, ಎನ್.ಎ. ಹ್ಯಾರಿಸ್, ತನ್ವೀರ್ ಸೇಠ್ ಮತ್ತು ಸಲೀಂ ಅಹ್ಮದ್ ಅವರಿಗೆ ಕಡ್ಡಾಯವಾಗಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಪ್ರಾತಿನಿಧ್ಯ ನೀಡದಿದ್ದರೆ ಅಲ್ಪಸಂಖ್ಯಾತ ಮತಬ್ಯಾಂಕ್ ಕಾಂಗ್ರೆಸ್ ಕೈತಪ್ಪುವ ಮುನ್ಸೂಚನೆಯನ್ನು ಹುಬ್ಬಳ್ಳಿಯ ಮುಸ್ಲಿಂ ಒಕ್ಕೂಟ ನೀಡಿದೆ. ಇದೀಗ ಈ ಬಗ್ಗೆ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿದೆ. ಇನ್ನು ಎರಡನೇ ಹಂತದ ಸಚಿವ ಸಂಪುಟ ರಚನೆಯಲ್ಲಿ ಯಾರಿಗೆಲ್ಲ ಸ್ಥಾನ ಸಿಗಲಿದೆ ಎಂಬುದನ್ನು ನೋಡಬೇಕಿದೆ. ಯಾವ ಲೆಕ್ಕಚಾರದ ಮೇಲೆ ಸಚಿವರನ್ನು ಆಯ್ಕೆ ಮಾಡಲಿದೆ ಎಂಬ ಕುತೂಹಲ ರಾಜ್ಯ ರಾಜಕಾರಣದಲ್ಲಿ ಮೂಡಿಸಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:57 am, Thu, 4 June 26




