ರಾಜ್ಯ ಸರ್ಕಾರದ ಸೂಚನೆ ಮೇರೆಗೆ ವಕ್ಫ್ ಹೆಸರು ನಮೂದಿಸಿದ್ದಾರೆ: ಹುಬ್ಬಳ್ಳಿಯಲ್ಲಿ ಜಗದಾಂಬಿಕಾ ಪಾಲ್ ಗಂಭೀರ ಆರೋಪ

ಕರ್ನಾಟಕದಲ್ಲಿ ವಕ್ಫ್ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ ರಾಜ್ಯಕ್ಕೆ ಭೇಟಿ ನೀಡಿರುವ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಹುಬ್ಬಳ್ಳಿಯಲ್ಲಿ ರೈತರ ಅಹವಾಲು ಆಲಿಸಿದ್ದಾರೆ. ನಂತರ ಮಾತನಾಡಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಇದು ರಾಜ್ಯದಲ್ಲಿ ಮತ್ತೊಂದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಜಗದಾಂಬಿಕಾ ಪಾಲ್ ಹೇಳಿದ್ದೇನೆಂಬುದು ಇಲ್ಲಿದೆ.

ರಾಜ್ಯ ಸರ್ಕಾರದ ಸೂಚನೆ ಮೇರೆಗೆ ವಕ್ಫ್ ಹೆಸರು ನಮೂದಿಸಿದ್ದಾರೆ: ಹುಬ್ಬಳ್ಳಿಯಲ್ಲಿ ಜಗದಾಂಬಿಕಾ ಪಾಲ್ ಗಂಭೀರ ಆರೋಪ
ಹುಬ್ಬಳ್ಳಿಯಲ್ಲಿ ರೈತರ ಅಹವಾಲು ಆಲಿಸಿದ ಬಳಿಕ ಜಗದಾಂಬಿಕಾ ಪಾಲ್ ಮಾತನಾಡಿದರು.
Edited By:

Updated on: Nov 07, 2024 | 11:55 AM

ಹುಬ್ಬಳ್ಳಿ, ನವೆಂಬರ್ 7: ಆಡಳಿತ ವ್ಯವಸ್ಥೆಯ ಕೈವಾಡ ಇಲ್ಲದೆ ಈ ರೀತಿ ಎಲ್ಲ ಆಗಲು ಸಾಧ್ಯವಿಲ್ಲ, ರಾಜ್ಯ ಸರ್ಕಾರದ ಸೂಚನೆಯ ಮೇರೆಗೇ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂಬುದಾಗಿ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಆರೋಪಿಸಿದರು. ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರಾಗಿರುವ ಅವರು ಹುಬ್ಬಳ್ಳಿಗೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು. ಬಳಿಕ ಮಾತನಾಡಿದ ಅವರು, ರೈತರ ಜಮೀನು, ದೇಗುಲ, ಪಾರಂಪರಿಕ ತಾಣಗಳ ದಾಖಲೆಗಳಲ್ಲಿ ವಕ್ಫ್​ ಆಸ್ತಿ‌ ಎಂದು ನಮೂದಿಸಲಾಗಿದೆ. 10-15 ರೈತರ ನಿಯೋಗ ಮನವಿ ಸಲ್ಲಿಸುವ ನಿರೀಕ್ಷೆ ಇತ್ತು. ಆದರೆ, 70ಕ್ಕೂ ಹೆಚ್ಚು ಅಹವಾಲು ಬಂದಿದೆ ಎಂದರು.

ಆಡಳಿತದ ಕೈವಾಡವಿಲ್ಲದೆ ಇದೆಲ್ಲ ಸಾಧ್ಯವಿಲ್ಲ: ಪಾಲ್

ಆಡಳಿತ ವ್ಯವಸ್ಥೆಯ ಕೈವಾಡ ಇಲ್ಲದೆ ಇದೆಲ್ಲ ಆಗಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಸೂಚನೆಯಂತೆ ವಕ್ಫ್​ ಆಸ್ತಿ ಎಂದು ಘೋಷಿಸಲಾಗಿದೆ. ಈಗ ರೈತರಿಗೆ ಕೊಟ್ಟ ನೋಟಿಸ್ ಹಿಂಪಡೆಯುವುದಾಗಿ ಹೇಳಿದ್ದಾರೆ. ರಾಜ್ಯ ಸರ್ಕಾರದ ಕೈವಾಡ ಇಲ್ಲದೆ ಆಸ್ತಿ ಕಬಳಿಸಲು ಸಾಧ್ಯವಿಲ್ಲ. ಸರ್ಕಾರದ ಸೂಚನೆ ಇಲ್ಲದೆ ಅಧಿಕಾರಿಗಳು ಹೇಗೆ ಕೆಲಸ ಮಾಡ್ತಾರೆ? ಇದು ಅತ್ಯಂತ ಗಂಭೀರವಾದ ವಿಚಾರ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲ ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸಿ ವರದಿ ತಯಾರಿಸುತ್ತೇವೆ ಎಂದೂ ಜಗದಾಂಬಿಕಾ ಪಾಲ್ ಹೇಳಿದರು.

ಇದನ್ನೂ ಓದಿ: ವಕ್ಫ್ ವಿವಾದ: ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ, ಹುಬ್ಬಳ್ಳಿಯಲ್ಲಿ ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭರವಸೆ

ಮತ್ತೊಂದೆಡೆ, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ರೈತರ ಆಸ್ತಿ ದಾಖಲೆಗಳಲ್ಲಿ ವಕ್ಫ್ ಹೆಸರು ನಮೂದಿಸಲು ಸುತ್ತೋಲೆ ಹೊರಡಿಸಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ಮಧ್ಯೆ, ಜಗದಾಂಬಿಕಾ ಪಾಲ್ ನೇರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆಗಳಿವೆ.

ಏತನ್ಮಧ್ಯೆ, ವಿಜಯಪುರದಲ್ಲಿ ಬಿಜೆಪಿ ನಾಯಕರ, ರೈತರ ಅಹೋರಾತ್ರಿ ಧರಣಿ ಮುಂದುವರಿದಿದೆ. ಅಲ್ಲಿಗೂ ಜೆಪಿಸಿ ಅಧ್ಯಕ್ಷರು ಭೇಟಿ ನೀಡಲಿದ್ದು, ರೈಗತರ ಅಹವಾಲು ಆಲಿಸಲಿದ್ದಾರೆ.

ಕರ್ನಾಟಕ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ