ನೂತನ ಸಚಿವರಿಗೆ ಖಾತೆ ಹಂಚಿಕೆ:ಪ್ರಿಯಾಂಕ್ ಖರ್ಗೆಗೆ ಗೃಹ, ಇನ್ನುಳಿದ ಯಾರಿಗೆ ಯಾವ ಖಾತೆ?
ಕರ್ನಾಟಕದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಹದಿಮೂರು ಶಾಸಕರು ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದು, ಇದೀಗ ಅವರಿಗೆ ಖಾತೆಗಳನ್ನು ಸಹ ಹಂಚಿಕೆ ಮಾಡಲಾಗಿದೆ. ತಮಗೆ ಆ ಖಾತೆ ಬೇಕು, ಈ ಖಾತೆ ಬೇಕೆಂದು ಸಚಿವರು ಬೇಡಿಕೆ ಇಟ್ಟಿದ್ದರಿಂದ ಹಲವು ಗೊಂದಲಗಳು ಉಂಟಾಗಿದ್ದು, ಅಂತಿಮವಾಗಿ ಸಿಎಂ ಡಿಕೆ ಶಿವಕುಮಾರ್ ಮಾತುಕತೆ ಮೂಲಕ ಬಗೆಹರಿಸಿ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಹಾಗಾದ್ರೆ, ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಜೂನ್ 04): ಡಿಕೆ ಶಿವಕುಮಾರ್ (DK Shivakumar) ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಡಿಕೆ ಶಿವಕುಮಾರ್ ಜೊತೆ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವ ವಚನ ಸ್ವೀಕರಿಸಿದ್ದ 13 ನೂತನ ಸಚಿವರಿಗೆ ಇಲಾಖೆಗಳ (Portfolios) ಜವಾಬ್ದಾರಿ ನೀಡಲಾಗಿದೆ. ಈ ಪೈಕಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಣಕಾಸು ಇಲಾಖೆ, DPAR ಸೇರಿದಂತೆ ಇತರೆ ಕೆಲ ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದು, ಇನ್ನುಳಿದ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಇದರೊಂದಿಗೆ ಆಯಕಟ್ಟಿನ ಹಣಕಾಸು, ಜಲಸಂಪನ್ಮೂಲ, ಗೃಹ, ಲೋಕೋಪಯೋಗಿ, ಬೆಂಗಳೂರು ಅಭಿವೃದ್ದಿ ಮುಂತಾದ ಖಾತೆಗಳು ಯಾರಿಗೆ ಹಂಚಿಕೆಯಾಗಲಿದೆ ಎನ್ನುವ ಗೊಂದಲಗಳಿಗೆ ತೆರೆ ಬಿದ್ದಿದೆ.
ಮುಖ್ಯಾಂಶಗಳು
- 13 ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್
- ರಾಜ್ಯಪಾಲರಿಗೆ ಸಚಿವರ ಖಾತೆ ಹಂಚಿಕೆ ಪಟ್ಟಿ ರವಾನೆ
- ರಾಜ್ಯಪಾಲರ ಸಹಿ ಬಳಿಕ ಗೆಜೆಟ್ ನೋಟಿಫಿಕೇಶನ್ ಪ್ರಕಟ
ಕೆಲವರಿಗೆ ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಿಭಾಯಿಸಿದ್ದ ಇಲಾಖೆಗಳ ಜವಾಬ್ದಾರಿಯನ್ನೇ ನೀಡಲಾಗಿದೆ. ಇನ್ನು 2013ರಲ್ಲಿ ನಿಭಾಯಿಸಿದ್ದ ಆರೋಗ್ಯ ಇಲಾಖೆ ಖಾತೆಯನ್ನೇ ಯುಟಿ ಖಾದರ್ ಅವರಿಗೆ ನೀಡಲಾಗಿದೆ. ಆದ್ರೆ, ಮುಖ್ಯವಾಗಿ ಗೃಹ ಇಲಾಖೆ ಖಾತೆ ಪ್ರಿಯಾಂಕ್ ಖರ್ಗೆ ಅವರಿಗೆ ನೀಡಲಾಗಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇನ್ನು ಹಿಂದಿನ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಈಗಿನ ಡಿಸಿಎಂ ಪರಮೇಶ್ವರ್ ಅವರಿಗೆ ಕಂದಾಯ ಇಲಾಖೆ ನೀಡಲಾಗಿದೆ.
ಸಚಿವ ಕೃಷ್ಣ ಭೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ (ಜಿಬಿಎ) ನೀಡಲಾಗಿದೆ. ಇನ್ನು ಬೆಂಗಳೂರು ನಗರಭಿವೃದ್ಧಿ ಮೇಲೆ ಕಣ್ಣಿಟ್ಟಿದ್ದ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಇಲಾಖೆ ಜವಾಬ್ದಾರಿ ನೀಡಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಚಿವರ ಖಾತೆ ಹಂಚಿಕೆ ಪಟ್ಟಿ ರವಾನೆ ಮಾಡಲಾಗಿದ್ದು, ರಾಜ್ಯಪಾಲರ ಸಹಿ ಬಳಿಕ ಅಧಿಕೃತ ಗೆಜೆಟ್ ನೋಟಿಫಿಕೇಶನ್ ಪ್ರಕಟವಾಗಲಿದೆ.
ಯಾರಿಗೆ ಯಾವ ಖಾತೆ?
ಡಿಕೆ ಶಿವಕುಮಾರ್ (ಮುಖ್ಯಮಂತ್ರಿ):- ಹಣಕಾಸು ಇಲಾಖೆ, DPAR ಮತ್ತು ಇತರೆ ಎಲ್ಲಾ ಖಾತೆಗಳು.
ಡಾ.ಜಿ.ಪರಮೇಶ್ವರ್ (ಉಪಮುಖ್ಯಮಂತ್ರಿ) :ಕಂದಾಯ ಹಾಗೂ ಕ್ರೀಡಾ ಹಾಗೂ ಯುವಜನ ಸಬಲೀಕರಣ.
ಪ್ರಿಯಾಂಕ್ ಖರ್ಗೆ- ಗೃಹ ಹಾಗೂ ಐಟಿ-ಬಿಟಿ ಇಲಾಖೆ
ಕೆ.ಜೆ.ಜಾರ್ಜ್- ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ
ಎಂ.ಬಿ.ಪಾಟೀಲ್- ಬೃಹತ್ & ಮಧ್ಯಮ ಕೈಗಾರಿಕೆ ಇಲಾಖೆ
ಸತೀಶ್ ಜಾರಕಿಹೊಳಿ– ಲೋಕೋಪಯೋಗಿ ಇಲಾಖೆ
ಕೃಷ್ಣ ಭೈರೇಗೌಡ– ಬೆಂಗಳೂರು ನಗರಾಭಿವೃದ್ಧಿ(ಜಿಬಿಎ)
ರಾಮಲಿಂಗಾರೆಡ್ಡಿ– ಜಲಸಂಪನ್ಮೂಲ ಇಲಾಖೆ
ಕೆ.ಹೆಚ್.ಮುನಿಯಪ್ಪ– ಆಹಾರ & ನಾಗರಿಕ ಸರಬರಾಜು ಇಲಾಖೆ
ಭೈರತಿ ಸುರೇಶ್– ಸಾರಿಗೆ ಇಲಾಖೆ
ಯು.ಟಿ.ಖಾದರ್– ಆರೋಗ್ಯ ಇಲಾಖೆ
ಡಾ.ಯತೀಂದ್ರ ಸಿದ್ದರಾಮಯ್ಯ– ನಗರಾಭಿವೃದ್ಧಿ ಇಲಾಖೆ
ಶರಣಪ್ರಕಾಶ್ ಪಾಟೀಲ್– ವೈದ್ಯಕೀಯ ಶಿಕ್ಷಣ ಇಲಾಖೆ
ಈಶ್ವರ್ ಖಂಡ್ರೆ- ಗ್ರಾಮೀಣಾಭಿವೃದ್ಧಿ ಇಲಾಖೆ
ಕೃಷ್ಣಭೈರೇಗೌಡಗೆ ಲಕ್, ರಾಮಲಿಂಗಾರೆಡ್ಡಿಗೆ ನಿರಾಸೆ
ಇನ್ನು ಸಿದ್ದರಾಮಯ್ಯನವರ ಅವಧಿಯಲ್ಲಿ ಕಂದಾಯ ಸಚಿವರಾಗಿದ್ದ ಕೃಷ್ಣಭೈರೇಗೌಡ ಅವರು ಈ ಬಾರಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದರು. ಇನ್ನೊಂದೆಡೆ ಸಾರಿಗೆ ಸಚಿವರಾದ್ದ ರಾಮಲಿಂಗಾರೆಡ್ಡಿ ಅವರು ಸಹ ಇದೇ ಬೆಂಗಳೂರು ನಗರಾಭಿವೃದ್ಧಿ ಬೇಕೆಂದು ಬೇಡಿಕೆ ಇಟ್ಟಿದ್ದರು. ಈ ಸಂಬಂಧ ರಾಮಲಿಂಗಾರೆಡ್ಡಿ ಬಾರೀ ಕಸರತ್ತು ನಡೆಸಿದ್ದು, ಕೊಡುವುದಾದರೆ ಬೆಂಗಳೂರು ನಗರಾಭಿವೃದ್ಧಿ ಕೊಡಿ ಇಲ್ಲವಾದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಮಟ್ಟಕ್ಕೆ ಹೋಗಿದ್ದರು. ಕೊನೆಗೆ ಸಿಎಂ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮನವೊಲಿಸಿ ಜಲಸಂಪನ್ಮೂಲ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:22 pm, Thu, 4 June 26




