DK Shivakumar Oath Taking Highlights: ಡಿಕೆ ಶಿವಕುಮಾರ್​ ಯುಗಾರಂಭ: ಇಂದಿನ ಪದಗ್ರಹಣದ ಬೆಳವಣಿಗೆಗಳ ಹೈಲೈಟ್ಸ್​​ ​​​

ಡಿಕೆ ಶಿವಕುಮಾರ್ ಪ್ರಮಾಣ ವಚನ ಕಾರ್ಯಕ್ರಮ Highlights: ಸಿದ್ದರಾಮಯ್ಯ ರಾಜೀನಾಮೆ ನಂತರ ಕರ್ನಾಟಕದ 25ನೇ ಸಿಎಂ ಆಗಿ ಡಿ.ಕೆ ಶಿವಕುಮಾರ್​ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 4 ಗಂಟೆ 05 ನಿಮಿಷಕ್ಕೆ ಲೋಕಭವನದಲ್ಲಿ ಪದಗ್ರಹಣ ನೆರವೇರಿತು. ಡಿಕೆ ಶಿವಕುಮಾರ್ ಜೊತೆಗೆ 13 ಜನರು ಸಚಿವ ಸ್ಥಾನವನ್ನು ಅಲಂಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸೇರಿದಂತೆ ದೇಶದ ಪ್ರಮುಖ ಗಣ್ಯರು ಹಾಗೂ ಸರ್ವಧರ್ಮದ 55 ಧರ್ಮಗುರುಗಳು ಭಾಗಿಯಾಗಿದ್ದರು.

DK Shivakumar Oath Taking Highlights: ಡಿಕೆ ಶಿವಕುಮಾರ್​ ಯುಗಾರಂಭ: ಇಂದಿನ ಪದಗ್ರಹಣದ ಬೆಳವಣಿಗೆಗಳ ಹೈಲೈಟ್ಸ್​​  ​​​
ಸಿಎಂ ಡಿಕೆ ಶಿವಕುಮಾರ್​
Image Credit source: tv9 kannada
Edited By:

Updated on: Jun 03, 2026 | 11:05 PM

ಬೆಂಗಳೂರು, ಜೂನ್ 03: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸಿದರು. ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದುಕೊಂಡು ಗಂಗಾಧರ ಅಜ್ಜನ ಹೆಸರಿನಲ್ಲಿ ಡಿಕೆ ಶಿವಕುಮಾರ್ ಪ್ರಮಾಣ ಪ್ರಮಾಣವಚನ ಸ್ವೀಕರಿಸಿದರು. ಇನ್ನು ಈ ವೇಳೆ ವೇದಿಕೆ ಮೇಲೆಯೇ ಶಿವಕುಮಾರ್​ ಸಾಷ್ಟಾಂಗ ನಮಸ್ಕಾರ ಹಾಕಿದರು. ಇನ್ನು ಡಾ. ಬಿಆರ್​ ಅಂಬೇಡ್ಕರ್ ಹೆಸರಿನ ಮೇಲೆ ಉಪಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ ಪ್ರಮಾಣ ವಚನ ಸ್ವೀಕರಿಸಿದರು. ಇದೇ ರೀತಿಯಾಗಿ 12 ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಮಾರಂಭಕ್ಕೆ 10 ಸಾವಿರಕ್ಕೂ ಹೆಚ್ಚು ವಿವಿಐಪಿ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ 1,500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ರಾಹುಲ್ ಗಾಂಧಿ ಸೇರಿದಂತೆ ಧರ್ಮಗುರುಗಳು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

LIVE NEWS & UPDATES

The liveblog has ended.
  • 03 Jun 2026 10:51 PM (IST)

    ನಾಗರಬಾವಿಯ ಅಜ್ಜಯ್ಯನ ಶಾಖಾಮಠಕ್ಕೆ ತೆರಳಿದ ಡಿಕೆ ಶಿವಕುಮಾರ್​

    ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಸದಾಶಿವನಗರದ ನಿವಾಸದಿಂದ ನೇರವಾಗಿ ಬೆಂಗಳೂರಿನ ನಾಗರಬಾವಿಯಲ್ಲಿರುವ ಅಜ್ಜಯ್ಯನ ಶಾಖಾಮಠಕ್ಕೆ ತೆರಳಿದರು. ಅಲ್ಲಿ ಅಜ್ಜಯ್ಯನ ಪಾದುಕೆಯ ಆಶೀರ್ವಾದವನ್ನು ಪಡೆದರು.

  • 03 Jun 2026 10:32 PM (IST)

    ಬಿಕೆ ಹರಿಪ್ರಸಾದ್ ಪಕ್ಷದ ನಿಷ್ಠಾವಂತ ನಾಯಕರು: ಸಿಎಂ

    ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕ ಆಗಿದೆ. ಬಿ.ಕೆ.ಹರಿಪ್ರಸಾದ್ ಪಕ್ಷದ ನಿಷ್ಠಾವಂತ ನಾಯಕರು. ಅವರ ನೇತೃತ್ವದಲ್ಲಿ ಮುಂದೆ ಪಕ್ಷ ಕಟ್ಟುವ ಕೆಲಸ ಮಾಡಬೇಕಿದೆ. ನಮ್ಮ ರೂಟ್ ಮರೆತರೆ ಫ್ರೂಟ್ ಸಿಗಲ್ಲ ಅಂತಾ ಮಾತು ಇದೆ. ಅದಕ್ಕಾಗಿ ನಾನು ನೇರವಾಗಿ ಇಲ್ಲಿಗೆ ಬಂದಿದ್ದೇನೆ. ನನ್ನ ಅಧ್ಯಕ್ಷತೆ ಅವಧಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ 100 ಕಡೆ ಜಾಗ ಮಾಡಿದ್ದೇವೆ. ಅದೆಲ್ಲದರ ಶಂಕುಸ್ಥಾಪನೆ ಇಂದು ಆಗಬೇಕಾಗಿತ್ತು. ನಾನು ಯಾವಾಗಲೂ ಹೊಸ ಅವಕಾಶಗಳನ್ನು ಹುಡುಕುತ್ತೇನೆ ಎಂದು
    ಅಭಿನಂದನಾ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

  • 03 Jun 2026 10:18 PM (IST)

    ಪ್ರಮಾಣವಚನ ಕಾರ್ಯಕ್ರಮ ದೊಡ್ಡದ್ದಾಗಿ ಮಾಡುವ ಪ್ಲ್ಯಾನ್ ಇತ್ತು

    ಪ್ರಮಾಣವಚನ ಕಾರ್ಯಕ್ರಮ ಸ್ಟೇಡಿಯಂ ಅಥವಾ ವಿಧಾನಸೌಧ ಮುಂದೆ ದೊಡ್ಡದ್ದಾಗಿ ಮಾಡುವ ಪ್ಲ್ಯಾನ್ ಇತ್ತು. ಆದರೆ ದೊಡ್ಡ ವಿಚಾರ ಆಗಬಾರದು ಅಂತಾ ಹೈಕಮಾಂಡ್ ಸಲಹೆ ಕೊಟ್ಟಿತ್ತು. ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆಗೆ ಇನ್ನೊಂದು ದಿನ ಮಾಡೋಣ ಎಂದು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

  • 03 Jun 2026 10:08 PM (IST)

    ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ ಎಂದ ಸಿಎಂ

    ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ದಿನ. ಕಾರ್ಯಕರ್ತನ ನೋವು, ದುಃಖ ದುಮ್ಮಾನ ಎಲ್ಲವೂ ಗೊತ್ತಿದೆ. ಎಷ್ಟೋ ಕಾರ್ಯಕರ್ತರಿಗೆ ಅವಕಾಶ ಸಿಗುವುದಿಲ್ಲ. ಪ್ರಮಾಣವಚನ ಸ್ವೀಕಾರದ ಹಿಂದೆ ಬೇಕಾದಷ್ಟು ಶ್ರಮ ಇದೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ ಎಂದಿದ್ದಾರೆ.

  • 03 Jun 2026 09:42 PM (IST)

    ಕೆಪಿಸಿಸಿ ಕಚೇರಿಗೆ ಆಗಮಿಸಿದ ಸಿಎಂ ಡಿಕೆ ಶಿವಕುಮಾರ್​

    ಸಿಎಂ ಡಿಕೆ ಶಿವಕುಮಾರ್​ ವಿಧಾನಸೌಧದಿಂದ ನೇರವಾಗಿ ಕೆಪಿಸಿಸಿ ಕಚೇರಿಗೆ ಆಗಮಿಸಿದರು. ಕಚೇರಿಯ ಉತ್ತರ ದ್ವಾರದಿಂದಲೇ ಸಭಾಂಗಣವನ್ನು ಪ್ರವೇಶಿಸಿದ ಅವರಿಗೆ ಕೆಪಿಸಿಸಿಯ ಭಾರತ್ ಜೋಡೋ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

  • 03 Jun 2026 09:35 PM (IST)

    ಕೆಪಿಸಿಸಿ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್ ನೇಮಕ

    ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್​​ ನೇಮಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಬಿ.ಕೆ. ಹರಿಪ್ರಸಾದ್ ಅವರ ನಿವಾಸಕ್ಕೆ ಆಪ್ತರು, ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರು ಭೇಟಿ ನೀಡಿ ಶುಭ ಕೋರುತ್ತಿದ್ದಾರೆ.

  • 03 Jun 2026 09:02 PM (IST)

    ಭೂ ಗ್ಯಾರಂಟಿ ನಮ್ಮದು ಆರನೇ ಗ್ಯಾರಂಟಿ ಎಂದ ಡಿಕೆ ಶಿವಕುಮಾರ್​

    2,500 ಚದರ ಅಡಿವರೆಗಿನ ಕಟ್ಟಡಗಳಿಗೆ ಒಸಿ ವಿನಾಯಿತಿ ನೀಡಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. 2,500 ಚದರ ಅಡಿ ವಿಸ್ತೀರ್ಣದ ಕಟ್ಟಡಕ್ಕೆ ಅರ್ಜಿ ಸಲ್ಲಿಸಿದವರಿಗೆ ಇದರಿಂದ ರಿಲೀಫ್ ಸಿಗಲಿದೆ. ಜೊತೆಗೆ, ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ‘ಬಿ ಖಾತಾ’ದಿಂದ ‘ಎ ಖಾತೆ’ಗೆ ಪರಿವರ್ತಿಸುವ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ‘ಭೂ ಗ್ಯಾರಂಟಿ ನಮ್ಮ ಆರನೇ ಗ್ಯಾರಂಟಿ’ ಎಂದು ಎಂದಿದ್ದಾರೆ.

  • 03 Jun 2026 08:52 PM (IST)

    ರಸ್ತೆಗಳ ನಿರ್ಮಾಣಕ್ಕೆ ನಿರ್ಧಾರ

    ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆಗಳ ನಿರ್ಮಾಣ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹೇಳಿದರು. ಹಣ ಎಷ್ಟೇ ಖರ್ಚಾಗಲಿ ಇದೆಲ್ಲವನ್ನೂ ಮಾಡೇ ಮಾಡುತ್ತೇವೆ. ಇದು ಡಿ.ಕೆ.ಶಿವಕುಮಾರ್ ಸರ್ಕಾರ ಎಂದು ಹೇಳಿದ್ದಾರೆ.

  • 03 Jun 2026 08:47 PM (IST)

    ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ನೇಮಕ

    ರಾಜ್ಯದಲ್ಲಿ ಉದ್ಯೋಗದ ಸಮಸ್ಯೆ ನಿವಾರಿಸಲು ತೀರ್ಮಾನಿಸಲಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿದರು. ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಎಲ್ಲಾ ಇಲಾಖೆಗಳನ್ನು ಕರೆದು ಕ್ಯಾಲೆಂಡರ್ ಆಫ್ ನೇಮಕಾತಿ ಸಿದ್ಧಪಡಿಸಲಾಗುವುದು ಎಂದರು. ಜೊತೆಗೆ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಸರ್ಕಾರವೇ ನೆರವಾಗಲು ‘ಪ್ರೈವೇಟ್ ಎಂಪ್ಲಾಯ್ಮೆಂಟ್ ಎಕ್ಸ್‌ಚೇಂಜ್ ಸೆಂಟರ್’ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

  • 03 Jun 2026 08:36 PM (IST)

    ಪ್ರತಿ ಪಂಚಾಯಿತಿಗೆ ಭಾರತ್​​ ಜೋಡೋ ಯುವಕ ಸಂಘ

    ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ‘ಭಾರತ್ ಜೋಡೋ ಯುವಕ ಸಂಘ’ ರಚನೆ ಮಾಡುವ ಚಿಂತನೆ ಇದೆ ಎಂದು ಸಿಎಂ ಡಿ.ಕೆ. ಶಿವಕುಮಾರ್​ ಹೇಳಿದರು. ರಾಜ್ಯಾದ್ಯಂತ ಒಟ್ಟು 10 ಸಾವಿರ ಸಂಘಗಳನ್ನು ರಚಿಸಲು ಉದ್ದೇಶಿಸಲಾಗಿದ್ದು, ಪ್ರತಿ ಸಂಘಕ್ಕೆ ಸರ್ಕಾರದಿಂದ 10 ಲಕ್ಷ ರೂ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

  • 03 Jun 2026 08:30 PM (IST)

    ವಿದ್ಯಾರ್ಥಿಗಳಿಗೆ ಫ್ರೀ ಬಸ್​ ಪಾಸ್​

    ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದರು. ಇನ್ಮುಂದೆ ವಿದ್ಯಾರ್ಥಿನಿಯರಂತೆ ವಿದ್ಯಾರ್ಥಿಗಳಿಗೂ ಕೂಡ ಉಚಿತ ಬಸ್ ಪಾಸ್ ಸೌಲಭ್ಯ ದೊರೆಯಲಿದೆ.

  • 03 Jun 2026 08:22 PM (IST)

    ಸಿಎಂ ಕುರ್ಚಿ ನನ್ನದಲ್ಲ, ಜನತೆಯದ್ದು

    ಈ ಸಿಎಂ ಕುರ್ಚಿ ನನ್ನದಲ್ಲ, ಇದು ನಾಡಿನ ಜನತೆಯದ್ದು. ಹೈಕಮಾಂಡ್​ ನಾಯಕರು ನನಗೆ ಈ ಅವಕಾಶವನ್ನ ಕೊಟ್ಟಿದ್ದಾರೆ. ಸ್ವಲ್ಪ ತಡವಾಯಿತು ಆದರೂ ಶುಭ ಗಳಿಗೆ ಬಂತು. ಎಲ್ಲರೂ ಜೊತೆಗೆ ಸೇರಿ ಕೆಲಸ ಮಾಡುತ್ತೇವೆ. ನಾನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವನು. ನಮ್ಮ ಸಂಪುಟ ಸರ್ವ ಜನಾಂಗದ ಶಾಂತಿಯ ತೋಟ ಇದ್ದಂತೆ ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ.

  • 03 Jun 2026 08:18 PM (IST)

    ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದ ಸಿಎಂ

    ಮೊದಲ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ರಾಜ್ಯದ ಜನ ನನ್ನ ಮೇಲೆ ಅಪಾರ ವಿಶ್ವಾಸ, ನಂಬಿಕೆ ಇಟ್ಟಿದ್ದಾರೆ. ಈ ಹಿಂದೆ ನನ್ನ ವಿರುದ್ಧ ಟೀಕೆಗಳು ಕೂಡ ಬಂದಿವೆ. ನನ್ನ ರಾಜಕೀಯ ಅನುಭವ ಬಳಸಿಕೊಂಡು ಕೆಲಸ ಮಾಡುತ್ತೇನೆ. ಅನೇಕ ರಾಜಕೀಯ ತಂತ್ರಗಳಿಗೂ ನಾನು ಸಿಲುಕಿದ್ದೇನೆ. ತಿಹಾರ್​ ಜೈಲಿಗೂ ಸಹ ಹೋಗಿ ಬಂದಿದ್ದೇನೆ ಎಂದರು.

  • 03 Jun 2026 08:15 PM (IST)

    ಮೊದಲ ಸಂಪುಟ ಸಭೆ ಬಳಿಕ ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ

    ಮೊದಲ ಸಂಪುಟ ಸಭೆ ಬಳಿಕ ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ಲೈವ್​ ನೋಡಿ.

  • 03 Jun 2026 07:39 PM (IST)

    ಸುದೀರ್ಘ ಪೋಸ್ಟ್ ಹಂಚಿಕೊಂಡ ಸಿಎಂ ಡಿಕೆ ಶಿವಕುಮಾರ್​

    ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಡಿಕೆ ಶಿವಕುಮಾರ್​ ತಮ್ಮ ಎಕ್ಸ್​ ಖಾತೆಯಲ್ಲಿ ಸುದೀರ್ಘ ಪೋಸ್ಟ್​ ಮಾಡಿದ್ದಾರೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂದು ಹೇಳಿದ್ದಾರೆ.

  • 03 Jun 2026 07:22 PM (IST)

    ಸಿಎಂ ಎಸಿಎಸ್ ಆಗಿ IAS ಅಧಿಕಾರಿ ತುಷಾರ್ ಗಿರಿನಾಥ್ ನೇಮಕ

    ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರನ್ನು ಸಿಎಂ ಡಿಕೆ ಶಿವಕುಮಾರ್​ ಅಪರ ಮುಖ್ಯ ಕಾರ್ಯದರ್ಶಿ (ಎಸಿಎಸ್)ಯಾಗಿ ನೇಮಕ ಮಾಡಲಾಗಿದೆ. ಅವರಿಗೆ ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ಹುದ್ದೆಯ ಹೆಚ್ಚುವರಿ ಹೊಣೆಯನ್ನೂ ವಹಿಸಲಾಗಿದೆ. ಜೊತೆಗೆ ಐಎಎಸ್ ಅಧಿಕಾರಿ ರಾಜೇಂದ್ರ ಚೋಳನ್ ಅವರನ್ನು ಸಿಎಂ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದ್ದು, ಕೆಪಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಹೆಚ್ಚುವರಿ ಹೊಣೆ ನೀಡಲಾಗಿದೆ.

  • 03 Jun 2026 07:12 PM (IST)

    ನೂತನ ಸಿಎಂ ಡಿಕೆ ಶಿವಕುಮಾರ್​ಗೆ ವಿಪಕ್ಷ ನಾಯಕರಿಂದ ಅಭಿನಂದನೆ

    ಸಿಎಂ ಡಿಕೆ ಶಿವಕುಮಾರ್​ಗೆ ವಿಪಕ್ಷ ಬಿಜೆಪಿ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಾಮಾಜಿಕ ಜಾಲತಾಣಗಳ ಮೂಲಕ ಸಿಎಂ ಡಿ.ಕೆ. ಶಿವಕುಮಾರ್​ಗೆ ಅಭಿನಂದನೆ ಸಲ್ಲಿಸಿದ್ದಾರೆ.

  • 03 Jun 2026 07:04 PM (IST)

    ಸಿಎಂ ಆರ್ಥಿಕ ಸಲಹೆಗಾರರಾಗಿ ಎಲ್​ಕೆ ಅತೀಕ್ ನೇಮಕ

    ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಎಲ್.ಕೆ. ಅತೀಕ್ ಅವರನ್ನು ಸಿಎಂ ಡಿಕೆ ಶಿವಕುಮಾರ್​ ಆರ್ಥಿಕ ಸಲಹೆಗಾರರಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ. ಪ್ರಸ್ತುತ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಅಧ್ಯಕ್ಷರಾಗಿರುವ ಎಲ್.ಕೆ. ಅತೀಕ್ ಅವರು, ಈ ಹುದ್ದೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಸಮಾನವಾದ ವೇತನ ಮತ್ತು ಇತರೆ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

  • 03 Jun 2026 06:55 PM (IST)

    ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮೊದಲ ಸಂಪುಟ ಸಭೆ

    ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಮೊದಲ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್, ಸಚಿವರಾದ ಕೆ.ಜೆ. ಜಾರ್ಜ್, ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಡಾ. ಯತೀಂದ್ರ, ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್, ಕೆ.ಎಚ್. ಮುನಿಯಪ್ಪ, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಭೈರತಿ ಸುರೇಶ್ ಹಾಗೂ ಡಾ. ಶರಣಪ್ರಕಾಶ್ ಪಾಟೀಲ್ ಭಾಗವಹಿಸಿದ್ದರು.

  • 03 Jun 2026 06:28 PM (IST)

    ಡಿಕೆ ಶಿವಕುಮಾರ್​ಗೆ ಪ್ರಧಾನಿ ಮೋದಿ ಶುಭಾಶಯ

    ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್​​ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿಯೇ ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಜೊತೆಯಾಗಿ ಕೆಲಸ ಮಾಡೋಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

  • 03 Jun 2026 06:19 PM (IST)

    ವಿಧಾನಸೌಧದ ಮೆಟ್ಟಿಲುಗಳಿಗೆ ಡಿಕೆ ಶಿವಕುಮಾರ್​ ದೀರ್ಘದಂಡ ನಮಸ್ಕಾರ

    ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಡಿ.ಕೆ. ಶಿವಕುಮಾರ್ ಅವರು ಮೊದಲ ಬಾರಿಗೆ ವಿಧಾನಸೌಧಕ್ಕೆ ಆಗಮಿಸಿದರು. ಉತ್ತರ ಬಾಗಿಲಿನ ಮೂಲಕ ವಿಧಾನಸೌಧ ಪ್ರವೇಶಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸೌಧದ ಮೆಟ್ಟಿಲುಗಳಿಗೆ ದೀರ್ಘದಂಡ ನಮಸ್ಕಾರ ಸಲ್ಲಿಸಿ ಒಳಗೆ ತೆರಳಿದರು.

  • 03 Jun 2026 05:21 PM (IST)

    ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ ಪ್ರಮಾಣವಚನ ಸ್ವೀಕಾರ

    ಸಂಪುಟ ದರ್ಜೆ ಸಚಿವರಾಗಿ ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ ಅವರು ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.

  • 03 Jun 2026 05:17 PM (IST)

    ಖಂಡ್ರೆ, ಭೈರತಿ, ಶರಣಪ್ರಕಾಶ್ ಪಾಟೀಲ್ ಪ್ರಮಾಣವಚನ ಸ್ವೀಕಾರ

    ಈಶ್ವರ್ ಖಂಡ್ರೆ ಚನ್ನಬಸವ ಪಟ್ಟ ದೇವರ ಹೆಸರಿನಲ್ಲಿ ಮಂತ್ರಿಗಿರಿ ಪಡೆದರೆ, ಭೈರತಿ ಸುರೇಶ್ ಮತ್ತು ಶರಣಪ್ರಕಾಶ್ ಪಾಟೀಲ್ ದೇವರ ಹೆಸರಿನಲ್ಲಿ ಸಚಿವ ಸ್ಥಾನದ ಗದ್ದುಗೆಗೆ ಏರಿದರು.

  • 03 Jun 2026 05:12 PM (IST)

    ಸಚಿವರಾಗಿ ಡಾ.ಯತೀಂದ್ರ ಪ್ರಮಾಣವಚನ ಸ್ವೀಕಾರ

    ಡಾ. ಯತೀಂದ್ರ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ತಂದೆ ಸಿದ್ದಾರಾಮಯ್ಯ ಕಾಲು ಮುಟ್ಟಿ ನಮಸ್ಕರಿಸಿದರು. ಆಗ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪುತ್ರ ಯತೀಂದ್ರ ಅವರ ಭುಜ ಮುಟ್ಟಿ ಆಶೀರ್ವದಿಸಿದರು.

  • 03 Jun 2026 04:57 PM (IST)

    ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಾ.ಶರಣಪ್ರಕಾಶ್

    ಡಾ. ಶರಣಪ್ರಕಾಶ್ ಪಾಟೀಲ್ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಡಾ. ಶರಣಪ್ರಕಾಶ್ ಪಾಟೀಲ್ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

  • 03 Jun 2026 04:53 PM (IST)

    ಎಂಬಿ ಪಾಟೀಲ್​​, ರಾಮಲಿಂಗಾರೆಡ್ಡಿ ಪ್ರಮಾಣವಚನ ಸ್ವೀಕಾರ

    ಸಂಪುಟದರ್ಜೆ ಸಚಿವರಾಗಿ ಎಂಬಿ ಪಾಟೀಲ್​​ ಮತ್ತು ರಾಮಲಿಂಗಾರೆಡ್ಡಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ವಿಡಿಯೋ ನೋಡಿ.

  • 03 Jun 2026 04:43 PM (IST)

    ಸಚಿವರಾಗಿ ಪ್ರಿಯಾಂಕ್ ಖರ್ಗೆ ಪ್ರಮಾಣವಚನ ಸ್ವೀಕಾರ

    ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಿಯಾಂಕ್ ಖರ್ಗೆ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ “ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ” ಎಂದು ಪ್ರಿಯಾಂಕ್ ಖರ್ಗೆ ಅವರು ಪ್ರಮಾಣವಚನ ಸ್ವೀಕರಿಸಿದರು.

  • 03 Jun 2026 04:26 PM (IST)

    ದೇವರ ಹೆಸರಲ್ಲಿ ಕೆಹೆಚ್​ ಮುನಿಯಪ್ಪ ಪ್ರಮಾಣವಚನ ಸ್ವೀಕರ

    ಲೋಕಭವನದ ಗಾಜಿನಮನೆಯಲ್ಲಿ ಸಂಪುಟ ದರ್ಜೆ ಸಚಿವರಾಗಿ ಕೆ.ಹೆಚ್.ಮುನಿಯಪ್ಪ ಪ್ರಮಾಣವಚನ ಸ್ವೀಕಾರಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದ ಶಾಸಕರಾಗಿರುವ ಕೆ.ಹೆಚ್ ಮುನಿಯಪ್ಪ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

  • 03 Jun 2026 04:20 PM (IST)

    ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ ಸ್ವೀಕಾರ

    ಡಾ ಜಿ ಪರಮೇಶ್ವರ್ ಅವರು ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.  ಡಾ ಬಿಆರ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿರುವುದು ವಿಶೇಷ.

  • 03 Jun 2026 04:16 PM (IST)

    25ನೇ ಸಿಎಂ ಆಗಿ ಪ್ರಮಣವಚನ ಸ್ವೀಕರಿಸಿದ ಡಿಕೆಶಿ

    ನಾನು ಡಿಕೆ ಶಿವಕುಮಾರ್ ಹೆಸರಿನವನಾದ ನಾನು ಎಂದು ಡಿಕೆ ಶಿವಕುಮಾರ್ ಅವರು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಅಜ್ಜ ಗಂಗಾಧರ್ ಅವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

  • 03 Jun 2026 04:13 PM (IST)

    ವಿಶೇಷ ಗಣ್ಯರನ್ನು ಹೂಗುಚ್ಛ ನೀಡಿ ಸ್ವಾಗತಿಸಿದ ಡಿಕೆಶಿ

    ತಮ್ಮ ಪದಗ್ರಹಕ್ಕೆ ಕಾರ್ಯಕ್ರಮಕ್ಕೆ ಆಗಮಸಿದ ರಾಹುಲ್ ಗಾಂಧಿ, ಖರ್ಗೆ, ಸೇರಿದಂತೆ ವಿವಿಧ ರಾಜ್ಯಗಳ ಸಿಎಂ, ಗಣ್ಯರಿಗೆ ಡಿಕೆ ಶಿವಕುಮಾರ್ ಅವರು ಶಾಲು ಹಾಕಿ ಹೂಗುಚ್ಛ ನೀಡಿ ಸ್ವಾಗತಿಸಿದರು.

  • 03 Jun 2026 04:00 PM (IST)

    ಡಿಕೆಶಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಆರಂಭ

    ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಪದಗ್ರಹ ಮಾಡುತ್ತಿದ್ದು, ಲೋಕಭವನದಲ್ಲಿ ಸಮಾರಂಭ ಆರಂಭವಾಗಿದೆ. ವೇದಿಕೆ ರಾಜ್ಯಪಾಲರು ಹಾಗೂ ಡಿಕೆ ಶಿವಕುಮಾರ್ ಆಸೀನರಾಗಿದ್ದಾರೆ.

  • 03 Jun 2026 03:42 PM (IST)

    ಪದಗ್ರಹಣಕ್ಕೆ ಆಗಮಿಸಿದವರನ್ನು ಖುದ್ದು ಸ್ವಾಗತಿಸಿದ ಡಿಕೆಶಿ

    ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಡಿಕೆ ಶಿವಕುಮಾರ್ ಅವರು ಲೋಕಭವನಕ್ಕೆ ಆಗಮಿಸಿದ್ದಾರೆ. ಇನ್ನು ಸಮಾರಂಭಕ್ಕೆ ಆಗಮಿಸಿದ ಕುಟುಂಬ ಸದಸ್ಯರು, ಉದ್ಯಮಿಗಳು, ಚಿತ್ರರಂಗ, ಸಾಮಾಜಿಕ ಕಾರ್ಯಕರ್ತರು, ಪೌರಕಾರ್ಮಿಕರನ್ನು ಸೇರಿದಂತೆ ಗಣ್ಯರನ್ನು ಖುದ್ದು ಭೇಟಿ ಮಾಡಿ ಸ್ವಾಗತ ಮಾಡಿರುವುದು ವಿಶೇಷ. ಇನ್ನು ಇದೇ ವೇಳೆ ವಿವಿಧ ಸಮುದಾಯದ ಸ್ವಾಮೀಜಿಗಳ ಬಳಿ ಹೋಗಿ ಆಶೀರ್ವಾದ ಪಡೆದುಕೊಂಡರು.

  • 03 Jun 2026 03:27 PM (IST)

    ಲೋಕಭವನಕ್ಕೆ ಆಗಮಿಸಿದ ಡಿಕೆ ಶಿವಕುಮಾರ್​

    ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಡಿಕೆ ಶಿವಕುಮಾರ್ ಅವರು ಲೋಕಭವನಕ್ಕೆ ಆಗಮಿಸಿದ್ದಾರೆ. ಇವರ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ನಿಯೋಜಿತ ಡಿಸಿಎಂ ಡಾ.ಪರಮೇಶ್ವರ್​ ಸಹ ಬಂದಿದ್ದಾರೆ.

  • 03 Jun 2026 03:19 PM (IST)

    ಡಿಕೆಶಿ ಪದಗ್ರಹಣಕ್ಕೆ ಹರಿದು ಬರುತ್ತಿರುವ ಜನ,ಟ್ರಾಫಿಕ್ ಜಾಮ್

    ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಕ್ಷಣನೆ ಆರಂಭವಾಗಿದ್ದು, ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಲೋಕಭವನದತ್ತ ಹರಿದುಬರುತ್ತಿದ್ದಾರೆ. ಹೀಗಾಗಿ ವಿಧಾನಸೌಧದ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ವಿಧಾನಸೌಧ-ಲೋಕಭವನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಂಪ್ಲೀಟ್ ಜಾಮ್ ಆಗಿದ್ದು, ಕಣ್ಣು‌ ಹಾಯಿಸಿದಷ್ಟು ದೂರಬಸ್, ಕಾರುಗಳು ಸಾಲುಗಟ್ಟಿ ನಿಂತಿವೆ.

  • 03 Jun 2026 03:16 PM (IST)

    ರಾಹುಲ್ ಸೇರಿದಂತೆ ಕೈ ಹೈಕಮಾಂಡ್ ನಾಯಕರ ಆಗಮನ

    ಡಿಕೆ ಶಿವಕುಮಾರ್ ಪ್ರಮಾಣವಚನಕ್ಕೆ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ಹೈಕಮಾಂಡ್ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಹೆಚ್​​ಎಎಲ್​ ಏರ್​ಪೋರ್ಟ್​ಗೆ ಬಂದಿಳಿದ ರಾಹುಲ್ ಗಾಂಧಿ ಅವರನ್ನು ನಿಯೋಜಿತ ಸ್ಪೀಕರ್ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರು ಸೇರಿದಂತೆ ರಾಜ್ಯ ಕೈ ನಾಯಕರು ಸ್ವಾಗತಿಸಿದರು.

  • 03 Jun 2026 03:01 PM (IST)

    ಲೋಕಭವನದತ್ತ ತೆರಳಿದ ಡಿಕೆಶಿ ಕುಟುಂಬ ಸದಸ್ಯರು

    ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಐತಿಹಾಸಿಕ ಕ್ಷಣಕ್ಕೆ ಕೌಂಟ್‌ಡೌನ್ ಆರಂಭವಾಗಿದ್ದು, ಅವರ ಕುಟುಂಬ ಸದಸ್ಯರು ಕಾರ್ಯಕ್ರಮದತ್ತ ಮುಖ ಮಾಡಿದ್ದಾರೆ. ಈ ಮಹತ್ವದ ಸಮಾರಂಭಕ್ಕೆ ಸಾಕ್ಷಿಯಾಗಲು ಡಿಕೆಶಿ ಅವರ ಪತ್ನಿ ಉಷಾ ಶಿವಕುಮಾರ್, ಪುತ್ರಿಯರಾದ ಐಶ್ವರ್ಯಾ ಮತ್ತು ಆಭರಣ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಸದಾಶಿವನಗರದ ನಿವಾಸದಿಂದ ಈಗಾಗಲೇ ಲೋಕಭವನಕ್ಕೆ ತೆರಳಿದ್ದಾರೆ.

  • 03 Jun 2026 02:27 PM (IST)

    ಪ್ರಮಾಣವಚನಕ್ಕೂ ಮುನ್ನ ತಾಯಿ ಗೌರಮ್ಮ ಅವರ ಆಶೀರ್ವಾದ ಪಡೆದ ಡಿ.ಕೆ.ಶಿವಕುಮಾರ್

    ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ ಅವರು ತಮ್ಮ ತಾಯಿಯ ಆಶೀರ್ವಾದ ಪಡೆದಿದ್ದಾರೆ. ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ಅವರು ತಾಯಿ ಗೌರಮ್ಮ ಅವರ ಪಾದ ಮುಟ್ಟಿ ನಮಸ್ಕರಿಸಿ, ಪ್ರೀತಿಯ ಆಶೀರ್ವಾದ ಪಡೆದರು. ಈ ಮೂಲಕ ತಮ್ಮ ರಾಜಕೀಯ ಜೀವನದ ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ಕ್ಷಣಕ್ಕೂ ಮುನ್ನ ತಾಯಿಯ ಹರಕೆ ಪಡೆದು ಪ್ರಮಾಣವಚನ ಕಾರ್ಯಕ್ರಮಕ್ಕೆ ಸಜ್ಜಾಗಿದ್ದಾರೆ.

  • 03 Jun 2026 02:15 PM (IST)

    ಪ್ರಮಾಣವಚನಕ್ಕೂ ಮುನ್ನ ಆಪ್ತರೊಂದಿಗೆ ಸತೀಶ್ ಜಾರಕಿಹೊಳಿ ಭೋಜನ

    ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮಕ್ಕೂ ಮುನ್ನ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಆಪ್ತರೊಂದಿಗೆ ಊಟ ಮಾಡಿದ್ದಾರೆ. ತಮ್ಮ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಈ ಭೋಜನಕೂಟದಲ್ಲಿ ವಿಶೇಷವಾಗಿ ಪರಿಶಿಷ್ಟ ಪಂಗಡ ಸಮುದಾಯದ ಆಪ್ತ ಶಾಸಕರು ಭಾಗವಹಿಸಿದ್ದರು.

  • 03 Jun 2026 02:02 PM (IST)

    ಪ್ರಮಾಣವಚನಕ್ಕೂ ಮುನ್ನ ಡಿ.ಕೆ ಶಿವಕುಮಾರ್ ನಿವಾಸದಲ್ಲಿ ವಿಶೇಷ ಪೂಜೆ

    ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ, ಅವರ ನಿವಾಸದಲ್ಲಿ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ. ಪ್ರಮಾಣವಚನ ಕಾರ್ಯಕ್ರಮಕ್ಕೂ ಮುನ್ನ ಡಿಕೆಶಿ ಮನೆಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು, ಪೂಜಾ ಸಾಮಗ್ರಿಗಳ ಸಮೇತ ಐದಕ್ಕೂ ಹೆಚ್ಚು ಪುರೋಹಿತರು ಅವರ ನಿವಾಸಕ್ಕೆ ಆಗಮಿಸಿದ್ದಾರೆ. ನೂತನ ಸಿಎಂ ಯಶಸ್ಸಿಗಾಗಿ ಪುರೋಹಿತರ ತಂಡ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ನೆರವೇರಿಸುತ್ತಿದೆ.

  • 03 Jun 2026 01:53 PM (IST)

    ಶಿಡ್ಲಘಟ್ಟದಲ್ಲಿ ಹಬ್ಬದ ವಾತಾವರಣ, ಭರ್ಜರಿ ಬಾಡೂಟ!

    ಸಂಜೆ 4.05ಕ್ಕೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅಭಿಮಾನಿಗಳು ಪಟ್ಟಣದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಹರಕೆ ತೀರಿಸುತ್ತಿದ್ದಾರೆ. ಅಲ್ಲದೆ, ಸಂಭ್ರಮಾಚರಣೆಯ ಅಂಗವಾಗಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ, ಸಿಹಿ ಹಾಗೂ ಭರ್ಜರಿ ಚಿಕನ್-ಮಟನ್ ಬಿರಿಯಾನಿ ವಿತರಿಸಿ ಸಂಭ್ರಮಿಸುತ್ತಿದ್ದಾರೆ.

  • 03 Jun 2026 12:51 PM (IST)

    ಸಚಿವ ಸಂಪುಟದಲ್ಲಿ ಜಾತಿವಾರು ಸಮೀಕರಣ

    ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಜಾತಿವಾರು ಸಮೀಕರಣಕ್ಕೆ ಒತ್ತು ನೀಡಲಾಗಿದೆ. ಒಕ್ಕಲಿಗ, ಲಿಂಗಾಯತ ಮತ್ತು ದಲಿತ ಕೋಟಾದಡಿ ತಲಾ ಮೂವರಿಗೆ ಸಚಿವ ಸ್ಥಾನ ನೀಡಲಾಗಿದ್ದರೆ, ಕುರುಬ ಸಮುದಾಯದ ಇಬ್ಬರಿಗೆ ಸ್ಥಾನ ಸಿಕ್ಕಿದೆ. ಇನ್ನುಳಿದಂತೆ ಎಸ್​​ಟಿ, ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಕೋಟಾದಡಿ ತಲಾ ಒಬ್ಬೊಬ್ಬರಿಗೆ ಸಚಿವ ಸ್ಥಾನ ಹಂಚಿಕೆ ಮಾಡುವ ಮೂಲಕ ಎಲ್ಲ ಸಮುದಾಯಗಳಿಗೂ ಪ್ರಾತಿನಿಧ್ಯ ಕಲ್ಪಿಸಲಾಗಿದೆ.

  • 03 Jun 2026 12:42 PM (IST)

    230 ಬಸ್ ನಿಲ್ದಾಣಗಳಲ್ಲಿ ಡಿಕೆಶಿ ಪ್ರಮಾಣವಚನ ನೇರಪ್ರಸಾರ

    ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಇಂದು ಸಂಜೆ 4:05ಕ್ಕೆ ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಸಾರ್ವಜನಿಕರು ವೀಕ್ಷಿಸಲು ವಾರ್ತಾ ಇಲಾಖೆಯು ‘ವೃತ್ತಿ ಸೊಲ್ಯೂಷನ್ಸ್’ ಸಹಯೋಗದಲ್ಲಿ ರಾಜ್ಯದ ಆಯ್ದ 230 ಸರ್ಕಾರಿ ಬಸ್ ನಿಲ್ದಾಣಗಳ ಡಿಜಿಟಲ್ ಪರದೆಗಳಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಿದೆ. ಇದರಿಂದಾಗಿ ಪ್ರಯಾಣಿಕರು ಹಾಗೂ ಸಾಮಾನ್ಯ ಜನರು ಬಸ್ ನಿಲ್ದಾಣಗಳಲ್ಲೇ ಉಚಿತವಾಗಿ ಕಾರ್ಯಕ್ರಮ ಕಣ್ತುಂಬಿಕೊಳ್ಳಬಹುದು.

  • 03 Jun 2026 12:36 PM (IST)

    ಎಚ್.ಡಿ. ದೇವೇಗೌಡರ ಆಶೀರ್ವಾದ ಪಡೆದ ಡಿಕೆಶಿ

    ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಹಿರಿಯ ಮುತ್ಸದ್ದಿ ದೇವೇಗೌಡರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದ ಡಿಕೆಶಿ, ತಮ್ಮ ರಾಜಕೀಯದ ಮೊದಲ ಎದುರಾಳಿಯ ಮನೆಗೆ ನಡೆದುಕೊಂಡು ಹೋಗಿ ಸೌಹಾರ್ದತೆ ಮೆರೆದಿರುವುದು ಸದ್ಯ ರಾಜ್ಯ ರಾಜಕಾರಣದ ಗಮನ ಸೆಳೆದಿದೆ.

  • 03 Jun 2026 12:21 PM (IST)

    ಜಾತಿವಾರು ಸಮೀಕರಣಕ್ಕೆ ಹೆಚ್ಚಿನ ಆದ್ಯತೆ

    ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂತನ ಸಚಿವ ಸಂಪುಟದಲ್ಲಿ ಜಾತಿವಾರು ಸಮೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಒಕ್ಕಲಿಗ ಕೋಟಾದಡಿ ಸಿಎಂ ಡಿಕ್ಷಿ ಸೇರಿದಂತೆ ಮೂವರಿಗೆ, ಲಿಂಗಾಯತ ಕೋಟಾದಲ್ಲಿ ಮೂವರಿಗೆ ಹಾಗೂ ದಲಿತ ಕೋಟಾದಡಿ ಹಿರಿಯ ನಾಯಕ ಡಾ.ಜಿ. ಪರಮೇಶ್ವರ್ ಸೇರಿದಂತೆ ಮೂವರು ಶಾಸಕರಿಗೆ ಸಚಿವ ಸ್ಥಾನ ಹಂಚಿಕೆ ಮಾಡುವ ಮೂಲಕ ಪ್ರಮುಖ ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯ ಕಲ್ಪಿಸಲಾಗಿದೆ.

  • 03 Jun 2026 12:07 PM (IST)

    ಲೆಕ್ಕಾಚಾರದ ಹೆಜ್ಜೆ ಇಟ್ಟ ಡಿಕೆಶಿ

    ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಡಿ.ಕೆ.ಶಿವಕುಮಾರ್ ಪ್ರಮುಖ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆಯಲು ತಂತ್ರ ರೂಪಿಸಿದ್ದಾರೆ. ಸಿದ್ದರಾಮಯ್ಯ ಆಶೀರ್ವಾದ ಪಡೆದು ಹಿಂದುಳಿದ ವರ್ಗಗಳ ಅಸಮಾಧಾನ ತಣಿಸಲು ಯತ್ನಿಸಿದ್ದರೆ, ವಿಪಕ್ಷ ನಾಯಕ ಯಡಿಯೂರಪ್ಪ ಭೇಟಿ ಮೂಲಕ ಲಿಂಗಾಯತ ಸಮುದಾಯದ ಮನಗೆಲ್ಲಲು ಮುಂದಾಗಿದ್ದಾರೆ. ಜೊತೆಗೆ ಒಕ್ಕಲಿಗ ನಾಯಕತ್ವವನ್ನು ತಮ್ಮ ಹೆಗಲಿಗೇರಿಸಿಕೊಂಡು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ.

  • 03 Jun 2026 11:29 AM (IST)

    ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆಗೆ ಸಚಿವ ಸ್ಥಾನ

    ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಚಿವ ಡಾ. ಜಿ. ಪರಮೇಶ್ವರ್ ಜೊತೆ ಚರ್ಚೆ ನಡೆಸುತ್ತಲೇ, ಸಂಪುಟ ಸೇರಲಿರುವ ನಾಯಕರಿಗೆ ಫೋನ್ ಕರೆ ಮಾಡುತ್ತಿದ್ದಾರೆ. ಹಿರಿಯ ನಾಯಕರಾದ ಶರಣಪ್ರಕಾಶ್ ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ಅವರಿಗೆ ಖುದ್ದಾಗಿ ಕರೆ ಮಾಡಿರುವ ಡಿಕೆಶಿ, ಇಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವಂತೆ ಆಹ್ವಾನ ನೀಡಿದ್ದಾರೆ.

    ಇದನ್ನೂ ಓದಿ ಸತೀಶ್​​ ಜಾರಕಿಹೊಳಿ ಕೈತಪ್ಪಿತಾ ಕೆಪಿಸಿಸಿ ಅಧ್ಯಕ್ಷ ಸ್ಥಾನ? ಬಿ.ಕೆ. ಹರಿಪ್ರಸಾದ್​​ಗೆ ಒಲಿದ ಅದೃಷ್ಟ?

  • 03 Jun 2026 10:48 AM (IST)

    ರಾಮಲಿಂಗಾರೆಡ್ಡಿಗೂ ಸಚಿವ ಸ್ಥಾನ: ಪ್ರಮಾಣವಚನಕ್ಕೆ ಕರೆ ಮಾಡಿದ ಡಿಕೆಶಿ

    ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ಮತ್ತೊಮ್ಮೆ ಸಚಿವರಾಗಲು ಅವಕಾಶ ಸಿಕ್ಕಿದೆ. ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಮಲಿಂಗಾರೆಡ್ಡಿ ಅವರಿಗೆ ಖುದ್ದಾಗಿ ಮೊಬೈಲ್ ಕರೆ ಮಾಡಿ, ಇಂದು ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ. ಈ ಮೂಲಕ ಅವರು ನೂತನ ಸಂಪುಟ ಸೇರುವುದು ಖಚಿತವಾಗಿದೆ.

  • 03 Jun 2026 10:44 AM (IST)

    ಡಿಕೆಶಿ ನಿವಾಸಕ್ಕೆ ಮಾಜಿ ಸಚಿವ ಡಾ. ಜಿ ಪರಮೇಶ್ವರ್ ಭೇಟಿ

    ಡಿ.ಕೆ ಶಿವಕುಮಾರ್ ಅವರು ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ, ಮಾಜಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ನಿಯೋಜಿತ ಸಿಎಂಗೆ ಶುಭಕೋರಿದ್ದು, ಪ್ರಮಾಣವಚನ ಹಾಗೂ ಸಂಪುಟ ರಚನೆಯ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ ಡಿಕೆ ಶಿವಕುಮಾರ್ ಸಂಪುಟದಲ್ಲಿ ಪರಮೇಶ್ವರ್​ಗೆ ಮಾತ್ರ ಉಪಮುಖ್ಯಮಂತ್ರಿ ಸ್ಥಾನ; ಏಕೈಕ ಡಿಸಿಎಂ ಆಗಿ ಪದಗ್ರಹಣ

  • 03 Jun 2026 10:21 AM (IST)

    ಬೆಂಗಳೂರಿಗೆ ಆಗಮಿಸಿದ ಕೇರಳ ಸಂಸದ ಆಂಟೋ ಆಂಟೊನಿ

    ಡಿ.ಕೆ.ಶಿವಕುಮಾರ್ ಅವರ ಸಿಎಂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗಣ್ಯರ ಆಗಮನ ಮುಂದುವರಿದಿದೆ. ಕೇರಳದ ಕಾಂಗ್ರೆಸ್ ಸಂಸದ ಆಂಟೋ ಆಂಟೊನಿ ಅವರು ಇಂದು ಬೆಳಗ್ಗೆ 10 ಗಂಟೆಯ ವಿಮಾನದಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಏರ್‌ಪೋರ್ಟ್‌ನಿಂದ ಅವರು ನೇರವಾಗಿ ಬೆಂಗಳೂರಿನ ಕಾರ್ಯಕ್ರಮದತ್ತ ಪ್ರಯಾಣ ಬೆಳೆಸಿದ್ದಾರೆ.

  • 03 Jun 2026 10:02 AM (IST)

    ಡಿಕೆಶಿ ಪ್ರಮಾಣವಚನಕ್ಕೆ ಬೆಂಗಳೂರಿಗೆ ಆಗಮಿಸಿದ ಜಿತು ಪಟ್ವಾರಿ

    ಡಿ.ಕೆ.ಶಿವಕುಮಾರ್ ಅವರ ಮುಖ್ಯಮಂತ್ರಿ ಪದಗ್ರಹಣ ಮಹೋತ್ಸವದಲ್ಲಿ ಭಾಗಿಯಾಗಲು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಬೆಂಗಳೂರಿಗೆ ಆಗಮಿಸಿದ್ದಾರೆ. ದೇವನಹಳ್ಳಿ ಬಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಅಲ್ಲಿಂದ ನೇರವಾಗಿ ಕೆ.ಕೆ. ಗೆಸ್ಟ್‌ ಹೌಸ್‌ಗೆ ತೆರಳಿದ್ದಾರೆ. ಗಣ್ಯರ ಆಗಮನದಿಂದ ರಾಜಧಾನಿಯಲ್ಲಿ ರಾಜಕೀಯ ಸಂಚಲನ ಹೆಚ್ಚಾಗಿದೆ.

  • 03 Jun 2026 08:56 AM (IST)

    ಸ್ಪೀಕರ್ ಸ್ಥಾನಕ್ಕೆ ಯು.ಟಿ ಖಾದರ್ ಇಂದು ರಾಜೀನಾಮೆ ಸಾಧ್ಯತೆ

    ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಸಚಿವ ಸ್ಥಾನ ಸಿಗುವ ಬಗ್ಗೆ ಅಧಿಕೃತ ಮಾಹಿತಿ ಬಂದ ತಕ್ಷಣ, ಅವರು ಮಧ್ಯಾಹ್ನದ ವೇಳೆಗೆ ಡೆಪ್ಯುಟಿ ಸ್ಪೀಕರ್‌ಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟ ಸೇರಲಿರುವ ಹಿನ್ನೆಲೆಯಲ್ಲಿ ಖಾದರ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

  • 03 Jun 2026 08:43 AM (IST)

    ಲೋಕಭವನ ಸುತ್ತ 2 ಸಾವಿರ ಪೊಲೀಸರಿಂದ ಬಿಗಿ ಬಂದೋಬಸ್ತ್‌

    ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಲೋಕಭವನ ಹಾಗೂ ವಿಧಾನಸೌಧ ಸುತ್ತಮುತ್ತ ಹೈ-ಅಲರ್ಟ್ ಘೋಷಿಸಲಾಗಿದೆ. ಕಮಿಷನರ್ ಸೀಮಂತ್ ಕುಮಾರ್ ನೇತೃತ್ವದಲ್ಲಿ 3 ಜಂಟಿ ಆಯುಕ್ತರು, 20 ಡಿಸಿಪಿಗಳು, ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ 2,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಪ್ರತಿ ಸೆಕ್ಟರ್‌ಗೂ ಓರ್ವ ಡಿಸಿಪಿ ಉಸ್ತುವಾರಿ ವಹಿಸಿದ್ದಾರೆ.

  • 03 Jun 2026 08:41 AM (IST)

    ಪ್ರಮಾಣವಚನಕ್ಕೂ ಮುನ್ನ ಕನಕಪುರಕ್ಕೆ ಡಿ.ಕೆ ಶಿವಕುಮಾರ್ ಭೇಟಿ ಸಾಧ್ಯತೆ

    ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ ಅವರು ಇಂದು ಬೆಳಗ್ಗೆ 10 ಗಂಟೆಯ ನಂತರ ತಮ್ಮ ಕ್ಷೇತ್ರ ಕನಕಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈ ವೇಳೆ ಅವರು ತಮ್ಮ ಮನೆ ದೇವರಾದ ಕೆಂಕೇರಮ್ಮ ಮತ್ತು ಕಬ್ಬಾಳಮ್ಮ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆಯಲಿದ್ದಾರೆ. ಬಳಿಕ ದೊಡ್ಡಆಲಹಳ್ಳಿಗೆ ಪ್ರಯಾಣಿಸಿ, ತಮ್ಮ ತಾಯಿಯ ಆಶೀರ್ವಾದ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

  • 03 Jun 2026 08:37 AM (IST)

    ಮಧ್ಯರಾತ್ರಿ 2 ಗಂಟೆಯವರೆಗೂ ಅಜ್ಜಯ್ಯನ ಮಠದಲ್ಲಿದ್ದ ಡಿಕಿಶಿ

    ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೆಹಲಿಯಿಂದ ಆಗಮಿಸಿದ ಬೆನ್ನಲ್ಲೇ, ಅವರು ಪತ್ನಿ ಸಮೇತರಾಗಿ ನಾಗರಬಾವಿಯ ಅಜ್ಜಯ್ಯನ ಶಾಖಾ ಮಠಕ್ಕೆ ಭೇಟಿ ನೀಡಿದ್ದರು. ಮಧ್ಯರಾತ್ರಿ 11:40 ರಿಂದ 2 ಗಂಟೆಯವರೆಗೆ ಮಠದಲ್ಲಿದ್ದ ಅವರು, ಸಿಎಂ ಪದಗ್ರಹಣ ಹಾಗೂ ಸಂಪುಟ ರಚನೆಯ ಕುರಿತು ಸುದೀರ್ಘ ಚರ್ಚೆ ನಡೆಸಿ ಆಶೀರ್ವಾದ ಪಡೆದರು.

Published On - 8:34 am, Wed, 3 June 26

Follow Us