ಎಲೆ ಜತೆಗೆ ಅಡಿಕೆ ತಿಂದು ಉಗಿಯುವವರು ಈ ಸುದ್ದಿ ಓದಲೇಬೇಕು..!
ಗದಗದ ರಾಚೋಟೇಶ್ವರ ನಗರದಲ್ಲಿ ಅಕ್ರಮವಾಗಿ ಅಡಿಕೆಗೆ ಕೆಂಪು ಬಣ್ಣ ಬೆರೆಸಿ ಮಾರಾಟ ಮಾಡುತ್ತಿದ್ದ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಬಣ್ಣ ಮಿಶ್ರಿತ ಅಡಿಕೆ ಸ್ಥಳೀಯರ ಆರೋಗ್ಯದ ಪರಿಣಾಮ ಬೀರುತ್ತಿದೆ. ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಣ್ಣ ಬೆರೆಸಿದ ಅಡಿಕೆಯ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಸ್ಥಳೀಯರು ಈ ಕ್ರಮಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಗದಗ, ಜುಲೈ 09: ಅಕ್ರಮವಾಗಿ ಅಡಿಕೆಗೆ (Arecanut) ಕೆಂಪು ಬಣ್ಣ ಮಿಶ್ರಣ ಮಾಡಿ, ಮಾರುಕಟ್ಟೆಗೆ ಸಾಗಾಟ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸ್ (Police) ಅಧಿಕಾರಿಗಳು ದಾಳಿ ಮಾಡಿ, ಅಪಾರ ಪ್ರಮಾಣದ ಅಡಿಕೆಯನ್ನು ಜಪ್ತಿ ಮಾಡಿದ್ದಾರೆ. ಗದಗನ (Gadag) ರಾಚೋಟೇಶ್ವರ ನಗರದಲ್ಲಿ ಅಕ್ರಮವಾಗಿ ಅಡಿಕೆಗೆ ಕೆಂಪು ಬಣ್ಣ ಮಿಶ್ರಣ ಮಾಡುವ ದಂಧೆ ನಡೆಯುತ್ತಿತ್ತು. ರಾಚೋಟೇಶ್ವರ ನಗರ ನಿವಾಸಿಗಳ ವಿರೋಧದ ನಡುವೆಯೂ ದತ್ತುಸಾ ಪವಾರ ಎಂಬುವರು ಅಕ್ರಮವಾಗಿ ಇಲ್ಲಿ ಅಡಿಕೆಗೆ ಕೆಂಪು ಬಣ್ಣ ಮಿಶ್ರಣ ಮಾಡುವ ದಂಧೆ ನಡೆಸುತ್ತಿದ್ದರು. ಈ ದಂಧೆ ಇಡೀ ಬಡಾವಣೆಯ ಜನರ ನಿದ್ದೆಗೆಡಿಸಿತ್ತು.
ಅಡಿಕೆಗೆ ಬಣ್ಣ ಮಿಶ್ರಣ ಮಾಡವ ವೇಳೆ ಬಡಾವಣೆ ತುಂಬೆಲ್ಲ ದುರ್ವಾಸನೆ ಹರಡುತ್ತಿತ್ತು. ಇದರಿಂದ ಮಕ್ಕಳು, ವೃದ್ಧರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಿತ್ತು. ಹೀಗಾಗಿ, ಸ್ಥಳೀಯರು ವಿರೋಧ ಮಾಡಿದ್ದರು. ಆದರೆ, ಬಣ್ಣ ಮಿಶ್ರಣ ಮಾಡುವ ಅಡ್ಡೆ ಮಾಲೀಕ ನಗರ ನಿವಾಸಿಗಳಿಗೆ ಬೆದರಕಿ ಹಾಕಿ ತನ್ನ ದಂಧೆಯನ್ನು ಮುಂದುವರೆಸಿದ್ದನು.
ಬಣ್ಣ ಮಿಶ್ರಿತ ಅಡಿಕೆಗೆ ಮಾರುಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇತ್ತು. ಕೆಂಪು ಸುಂದರಿಯಂತೆ ಕಾಣುವ ಅಡಿಕೆಗೆ ಜನ ಮರುಳಾಗಿದ್ದರು. ಮಾಲೀಕ ದತ್ತುಸಾ ಪವಾರ ಕಳಪೆ ಗುಣಮಟ್ಟದ ಅಡಿಕೆಗೆ ಕೆಂಪು ಬಣ್ಣ ಮಿಶ್ರಿಣ ಮಾಡಿ ಮಾರಾಟ ಮಾಡುತ್ತಿದ್ದನು. ಬಣ್ಣ ಮಿಶ್ರಣ ಮಾಡುವ ಸ್ಥಳ ತಿಪ್ಪೆಗುಂಡಿಗಿಂತಲೂ ಕಡಿಯಾಗಿದೆ. ಇಂಥ ಗಲೀಜು ಪ್ರದೇಶದಲ್ಲಿ ಬಣ್ಣ ಮಿಶ್ರಣ ಮಾಡಿದ್ದ ಅಡಿಕೆಗೆಯನ್ನು ಗದಗ ಜನರು ಜಗಿಯುತ್ತಿದ್ದಾರೆ. ಇದರಿಂದ ಬೇಸತ್ತ ಸ್ಥಳೀಯರು ಟಿವಿ9ಗೆ ಮಾಹಿತಿ ನೀಡಿದರು. ಬುಧವಾರ ಟಿವಿ9 ಅಕ್ರಮವಾಗಿ ಅಡಿಕೆಗೆ ಬಣ್ಣ ಮಿಶ್ರಣ ಮಾಡುವ ಕುರಿತು ವಿಸ್ತ್ರತ ವರದಿ ಮಾಡಿತ್ತು.
ಈ ಅಕ್ರಮ ಅಡಿಕೆಗೆ ಬಣ್ಣ ಮಿಶ್ರಣ ಮಾಡುವ ದಂಧೆ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಅಧಿಕಾರಿಗಳು ಈ ಅಕ್ರಮ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ತುಕ್ಕು ಹಿಡಿದ ಸಿಮೆಂಟ್ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರದಲ್ಲಿ ಅಡಿಕೆಗೆ ಬಣ್ಣ ಮಿಶ್ರಣ ಮಾಡಲಾಗುತ್ತದೆ. ಇಂಥ ಅಪಾಯಕಾರಿ ಅಡಿಕೆ ನಿತ್ಯವೂ ಗದಗ ಜನರ ಹೊಟ್ಟೆ ಸೇರುತ್ತಿದೆ.
ಇದನ್ನೂ ಓದಿ: ಗದಗಿನಲ್ಲಿ ಮುಸುಕುದಾರಿ ಕಳ್ಳರ ಗ್ಯಾಂಗ್ ಆ್ಯಕ್ಟಿವ್: ರಾತ್ರೋರಾತ್ರಿ ಮನೆಗೆ ನುಗ್ಗಿ ಕಳ್ಳತನ ಮಾಡಿ ಪರಾರಿ
ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡುತ್ತಿದ್ದಂತೆ, ಗದಗ ಡಿಐಎಸ್ಪಿ ಮುರ್ತುಜಾ ಖಾದ್ರಿ, ಶಹರ ಠಾಣೆಯ ಪಿಎಸ್ಐ ವಿಜಯ ಪವಾರ್, ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಆಹಾರ ಸುರಕ್ಷತಾ ಅಧಿಕಾರಿ ನಾಗರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆಹಾರ ಸುರಕ್ಷತೆಯು ಅಡಿಕೆಗಳ ಮಾದರಿ ಸಂಗ್ರಹ ಮಾಡಿ ಬೆಳಗಾವಿ ಲ್ಯಾಬ್ಗೆ ಕಳುಹಿಸಿಕೊಟ್ಟಿದೆ. ಈ ಅಡಿಕೆ ಅಡ್ಡೆ ಮಾಲೀಕನ ಮೇಲೆ ಆಹಾರ ಸುರಕ್ಷತೆ ಅಡಿಯಲ್ಲಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಕ್ರಮವಾಗಿ ನಡೆಯುತ್ತಿದ್ದ ಅಡಿಕೆ ಅಡ್ಡೆಗೆ ಬೀಗ ಬೀಳುತ್ತಿದ್ದಂತೆ, ನಿವಾಸಿಗಳು ಫುಲ್ ಖುಷಿಯಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Wed, 9 July 25







