AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೂ ಬೆಳೆಗಾರರ ಅನ್ನ ಕಸಿದ ಅಕಾಲಿಕ ಮಳೆ: ವರುಣನ ಅಬ್ಬರಕ್ಕೆ ಕೈ ಸುಟ್ಟುಕೊಂಡ ರೈತರು

ಗದಗ ಜಿಲ್ಲೆಯ ಹೂ ಬೆಳೆಗಾರರು ಅಕಾಲಿಕ ಮಳೆಯಿಂದ ಭಾರೀ ನಷ್ಟ ಅನುಭವಿಸಿದ್ದಾರೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಉತ್ತಮ ಆದಾಯ ನಿರೀಕ್ಷಿಸಿದ್ದ ರೈತರಿಗೆ ಮಳೆಯಿಂದ ದೊಡ್ಡ ಹೊಡೆತ ಬಿದ್ದಿದೆ. ಚಂಡು ಹೂ, ಸೇವಂತಿಗೆ, ಮಲ್ಲಿಗೆ ಬೆಲೆ ಕುಸಿದು, ಲಕ್ಷಾಂತರ ರೂಪಾಯಿ ಹೂಡಿಕೆ ಕೈ ಸುಟ್ಟಿದೆ. ರಾಜ್ಯಾದ್ಯಂತ ಬೆಳೆ ಹಾನಿಯಾಗಿದ್ದು, ಪರಿಹಾರಕ್ಕೆ ಬೇಡಿಕೆ ಹೆಚ್ಚಿದೆ.

ಹೂ ಬೆಳೆಗಾರರ ಅನ್ನ ಕಸಿದ ಅಕಾಲಿಕ ಮಳೆ: ವರುಣನ ಅಬ್ಬರಕ್ಕೆ ಕೈ ಸುಟ್ಟುಕೊಂಡ ರೈತರು
ಸಾಂದರ್ಭಿಕ ಚಿತ್ರImage Credit source: Google
ಪ್ರಸನ್ನ ಹೆಗಡೆ
|

Updated on: Mar 22, 2026 | 10:40 AM

Share

ಗದಗ, ಮಾರ್ಚ್​​ 22: ಅಕಾಲಿಕವಾಗಿ ಸುರಿದ ಮಳೆಗೆ ಗದಗ ಜಿಲ್ಲೆಯ ಹೂ ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದಾರೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಉತ್ತಮ ಆದಾಯ ನಿರೀಕ್ಷಿಸಿದ್ದ ರೈತರಿಗೆ ಮಳೆಯಿಂದ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಲಕ್ಕುಂಡಿ, ಕಣವಿ, ಹೊಸೂರು, ದಂಬಳ, ಕಡಕೋಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆದ ಹೂಗಳು ಮಳೆಯಿಂದ ಹೆಚ್ಚು ಹಾನಿಗೊಳಗಾಗಿವೆ. ಈ ಪ್ರದೇಶಗಳಲ್ಲಿ ಬೆಳೆಯುವ ಹೂಗಳು ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧ ಕಡೆ ಸಾಗಾಟವಾಗುತ್ತಿತ್ತು. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಚಂಡು ಹೂ, ಸೇವಂತಿಗೆ ಹಾಗೂ ಮಲ್ಲಿಗೆ ಬೆಳೆದ ರೈತರು ಉತ್ತಮ ಲಾಭದ ನಿರೀಕ್ಷೆಯಲ್ಲಿ ಇದ್ದರು. ಆದರೆ ಮಳೆಯಿಂದ ತೇವಾಂಶಕ್ಕೆ ಹೂಗಳು ಕೊಳೆತು, ರೈತರ ಅನ್ನ ಕಸಿದಿದೆ.

ಕಪ್ಪತ್ತಗುಡ್ಡ ಪಾದಭಾಗದ ಗ್ರಾಮಗಳಲ್ಲಿ ವರ್ಷಪೂರ್ತಿ ಹೂ ಬೆಳೆಯುತ್ತಿದ್ದ ರೈತರು, ಕಳೆದ ದೀಪಾವಳಿಯಲ್ಲಿ ಉತ್ತಮ ಬೆಲೆ ದೊರೆತು ಲಾಭ ಪಡೆದಿದ್ದರು. ಹೀಗಾಗಿ ಯುಗಾದಿ ಮುನ್ನವೇ ಹಲವು ರೈತರು ಚಂಡು ಹೂ, ಸೇವಂತಿಗೆ ಮತ್ತು ಮಲ್ಲಿಗೆ ಬೆಳೆಸಿ, ಪಕ್ಕದ ಜಿಲ್ಲೆಗಳ ಖರೀದಿದಾರರಿಂದ ದೊಡ್ಡ ಆರ್ಡರ್‌ಗಳನ್ನೂ ಪಡೆದಿದ್ದರು. ಆದರೆ ನಾಲ್ಕು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಹೂಗಳು ಹಾಳಾಗಿವೆ. ಸಾಮಾನ್ಯವಾಗಿ ಕಿಲೋಗೆ 300 ರೂ.ಗೆ ಮಾರಾಟವಾಗುತ್ತಿದ್ದ ಮಲ್ಲಿಗೆ ಹೂ ಬೆಲೆ ಈಗ 150ಕ್ಕೆ ಇಳಿದಿದೆ. ಯುಗಾದಿ ಸಮಯದಲ್ಲಿ ಸಾಮಾನ್ಯವಾಗಿ ಇವುಗಳ ಬೆಲೆ 500–700 ರೂ.ವರೆಗೆ ಬೆಲೆ ಏರಿಕೆಯಾಗುತ್ತಿತ್ತು. ಆದರೆ ಈ ಬಾರಿ ಅಕಾಲಿಕ ಮಳೆಯಿಂದ ಬೆಲೆ ಭಾರೀ ಕುಸಿತ ಕಂಡಿದೆ. ಚಂಡು ಹೂ ಸಾಮಾನ್ಯವಾಗಿ ಕೆಜಿಗೆ 350 ರೂ. ಇದ್ದರೆ, ಈಗ ಅವನ್ನು ಕೆಜಿಗೆ 100ಕ್ಕೆ ಮಾರಬೇಕಾದ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿ: ಮದುವೆ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ; ಸಹೋದರರಿಂದಲೇ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು

ಯುಗಾದಿ ಹಬ್ಬದ ವೇಳೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹೆಚ್ಚು ಬೇಡಿಕೆ ಇರುತ್ತಿತ್ತು. ಆದರೆ ಈ ಬಾರಿ ಹೂಗಳ ಗುಣಮಟ್ಟ ಕುಸಿದು, ಬೆಲೆ ಕೂಡ ತಳಮಟ್ಟಕ್ಕೆ ಇಳಿದಿದೆ. ಇದರಿಂದ ಭಾರೀ ನಷ್ಟ ಅನುಭವಿಸಿರೋದಾಗೀ ರೈತರು ಕೂಡ ಅಲವತ್ತುಕೊಂಡಿದ್ದಾರೆ. ಈ ನಡುವೆ ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಉಂಟಾದ ಬೆಳೆ ಹಾನಿಯನ್ನು ಅಂದಾಜಿಸಲು ತಕ್ಷಣ ಸಮೀಕ್ಷೆ ನಡೆಸುವಂತೆ ವಿರೋಧ ಪಕ್ಷ ಬಿಜೆಪಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಮ್ಮ ‘X’ ಪೋಸ್ಟ್‌ನಲ್ಲಿ, 10ಕ್ಕೂ ಹೆಚ್ಚು ಜಿಲ್ಲೆಗಳ 56,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಧಾರವಾಡ, ಹಾವೇರಿ, ಗದಗ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಜೋಳ, ಕಡಲೆ, ಗೋಧಿ, ಮೆಕ್ಕೆಜೋಳ ಬೆಳೆಗಳು ನೀರುಪಾಲಾಗಿವೆ. ಹಾಸನ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾವು, ಹಲಸು ಮತ್ತು ಕಲ್ಲಂಗಡಿ ಬೆಳೆಗಾರರೂ ಕೈ ಸುಟ್ಉಕೊಂಡಿದ್ದಾರೆ. ಹೀಗಾಗಿ ಆಲಿಕಲ್ಲು ಮಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us