ಅನ್ನಭಾಗ್ಯದ ಹಣವೂ ಇಲ್ಲ, ಗೃಹಲಕ್ಷ್ಮೀ ದುಡ್ಡು ಕೊಟ್ಟಿಲ್ಲ: ಭುಗಿಲೆದ್ದ ಆಕ್ರೋಶ

ಪಂಚ ಗ್ಯಾರಂಟಿಗಳು ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಗಳು. ಅದರಲ್ಲೂ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆ ಜಾರಿಗೆ ಮಹಿಳೆಯರು ಫಿದಾ ಆಗಿದ್ದು ಉಂಟು. ನಂತರದ ದಿನಗಳಲ್ಲಿ ಗೃಹಲಕ್ಷ್ಮೀಯರು ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಉಂಟು. ಆದ್ರೆ, ಇದೀಗ ಮತ್ತದೇ ರಗಳೇ ಶುರುವಾಗಿದೆ. ಹೌದು. ಅನ್ನಭಾಗ್ಯದ ಹಣ ಹಾಗೂ ಗೃಹಲಕ್ಷ್ಮೀ ಹಣ ಬಾಕಿ ಉಳಿದುಕೊಂಡಿದೆ.

ಅನ್ನಭಾಗ್ಯದ ಹಣವೂ ಇಲ್ಲ, ಗೃಹಲಕ್ಷ್ಮೀ ದುಡ್ಡು ಕೊಟ್ಟಿಲ್ಲ: ಭುಗಿಲೆದ್ದ ಆಕ್ರೋಶ
Guarantee
Edited By: ವಿವೇಕ ಬಿರಾದಾರ

Updated on: Feb 18, 2025 | 6:33 AM

ಬೆಂಗಳೂರು, (ಫೆಬ್ರವರಿ 17): ಈ ತಿಂಗಳು ಬರುತ್ತೆ. ಮುಂದಿನ ತಿಂಗಳು ಹಾಕುತ್ತಾರೆ ಮಕ್ಕಳು ಫೀಸ್ ಕಟ್ಟಬೇಕು, ಬಾಡಿಗೆ ನೀಡಬೇಕು, ಯಾವಾಗ ಹಾಕುತ್ತಾರೆ ಹಣ ಅಂತ ಕಾದಿದ್ದೇ ಆಯ್ತು. ಒಂದಲ್ಲ, ಎರಡಲ್ಲ, ಮೂರು ತಿಂಗಳು ಕಳೆದರೂ ಅಕೌಂಟ್ ಗೆ ಗ್ಯಾರಂಟಿ ಹಣ ಬಂದಿಲ್ಲ. ಇದೇ ಹಣಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ಫಲಾನುಭವಿಗಳು ಸರ್ಕಾರದ ವಿರುದ್ದ ಅಸಮಾಧಾನ ಹೊರಹಾಕುತ್ತಿದ್ದಾರೆ.

ಅನ್ಯಭಾಗ್ಯದ ಬಿಪಿಎಲ್‌ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲಿಗೆ ನೀಡಲಾಗುತ್ತಿದ್ದ ಹಣವು ಬರೋಬ್ಬರಿ 5 ತಿಂಗಳಿನಿಂದ ಸ್ಥಗಿತಗೊಂಡಿದೆ ಎಂಬ ಆರೋಪ ಕೇಳಿ ಬಂದಿದೆ. ಹಣದ ಬದಲಿಗೆ ಅಕ್ಕಿಯನ್ನೇ ಕೊಡುತ್ತೇವೆ ಎಂದು ಅಧಿಕಾರಿಗಳು ಕಾಗೆ ಹಾರಿಸುತ್ತಿದ್ದಾರೆ ಎಂದು ಫಲಾನುಭವಿಗಳು ಅಲ್ಲಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ..ಇದ್ರಿಂದಾಗಿ ಬಿಪಿಎಲ್‌ ಕಾರ್ಡ್‌ದಾರರಿಗೆ ಅತ್ತ ಹಣವೂ ಇಲ್ಲ, ಇತ್ತ ಅಕ್ಕಿಯೂ ಸಿಗದಂತಾಗಿದೆ. ಇಷ್ಟೇ ಯಾಕೆ ಗ್ಯಾರಂಟಿ ಗಳಲ್ಲಿ ಫೇಮಸ್ ಆಗಿರುವ ಗೃಹಲಕ್ಷ್ಮೀಯದ್ದೇ ಇದೇ ಕತೆ.. ಕಳೆದ ಎರಡ್ಮೂರು ತಿಂಗಳಿಂದ ಮನೆಯ ಗೃಹಲಕ್ಷ್ಮೀ ಯರ ಅಕೌಂಟ್ ಗೆ ಹಣ ಬಂದಿಲ್ವಂತೆ. ಇದರಿಂದ ಮಕ್ಕಳ ಫೀಸು, ಬಾಡಿಗೆ ಸೇರಿ ಕಮಿಟ್ನೆಂಟ್ ಗೆ ಹಣ ನೀಡೋದಕ್ಕೆ ಆಗದಂತಾಗಿದೆಯಂತೆ. ಗ್ಯಾರಂಟಿ ಕುರಿತಾಗಿ ಹಲವು ಬಿಜೆಪಿ ನಾಯಕರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಕಳೆದ ನಾಲ್ಕೈದು ತಿಂಗಳಿಂದ ಸಿಕ್ಕಿಲ್ಲ ಹಣ, ವಿಶ್ರಾಂತಿಯಲ್ಲಿ ಸಚಿವೆ

ರಾಜ್ಯದೆಲ್ಲೆಡೆ ಭುಗಿಲೆದ್ದ ಆಕ್ರೋಶ

ಇನ್ನು ಗೃಹಲಕ್ಷ್ಮೀ ಹಣ ಬಾಕಿ ವಿಚಾರವಾಗಿ ರಾಜ್ಯಾದ್ಯಂತ ಮಹಿಳೆಯರು ಆಕ್ರೋಶ ವ್ಯಕ್ತಪಡಿದ್ದಾರೆ. ಅದರಂತೆ ಬೆಳಗಾವಿಯಲ್ಲಿ ಗೃಹಲಕ್ಷ್ಮಿಯರು ಪ್ರತಿಕ್ರಿಯಿಸಿದ್ದು, ಮೂರು ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ. ಆರು ತಿಂಗಳಿಂದ ಪಡಿತರ ಹಣ ಕೂಡ ಜಮಾವಣೆ ಆಗಿಲ್ಲ. ಯೋಜನೆ ಸಿಗ್ತವೆ ಅಂತಾ ಸರ್ಕಾರ ನಂಬಿ ವೋಟ್ ಹಾಕಿದ್ದರೂ ರಸ್ತೆ ಸೇರಿ ಯಾವುದನ್ನೂ ಕೇಳಿದ್ರೂ ಬರೀ ಹಣ ಇಲ್ಲಾ ಅಂತಾರೆ.
ಗೃಹಲಕ್ಷ್ಮೀ ಹಣದಿಂದ ಜೀವನ ಸಾಗ್ತಿತ್ತು ಹಣ ಹಾಕದಿದ್ರೇ ಹೇಗೆ ಮಾಡೋದು. ಆದಷ್ಟು ಬೇಗ ಹಣ ಜಮಾವಣೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇದೇ ವಿಷಯಕ್ಕೆ ಪರಿಷತ್ ನ ವಿಪಕ್ಷ ನಾಯಕ ಚೆಲುವಾದಿ ನಾರಾಯಣಸ್ವಾಮಿ ಕೆಂಡ ಕಾರಿದ್ದಾರೆ.. ರಾಜ್ಯ ಸರ್ಕಾರದ ವಿರುದ್ದ ಬೆಂಕಿಯುಗುಳಿದ್ದಾರೆ. ಜನ ಕೂಡ ಸರ್ಕಾರದ ವಿರುದ್ದ ಮುನಿಸಿಕೊಂಡಿದ್ದಾರೆ. ಗ್ಯಾರಂಟಿ ಹಣದಿಂದಲೇ ನಿತ್ಯ ಜೀವನ ಸಾಗಿಸುತ್ತಿದ್ದ ಕೆಲವು ಜನರಿಗೆ ದಿಕ್ಕುತೋಚದಂತಾಗಿದೆ. ಅತ್ತ ವಿಪಕ್ಷಗಳ ಆರೋಪಕ್ಕೆ ಸಿಎಂ, ಡಿಸಿಎಂ ನಯವಾಗಿಯೇ ತಿರುಗೇಟು ನೀಡಿ, ಹಣ ಹಾಕುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಯಾವುದನ್ನೂ ನಿಲ್ಲಿಸುವ ಪ್ರಶ್ನೆಯೇ ಇಲ್ಲ

ಅನ್ನಭಾಗ್ಯ, ಗೃಹಲಕ್ಷ್ಮೀ ಹಣ ಬಿಡುಗಡೆ ಆಗಿಲ್ಲ ಎಂಬ ಆರೋಪದ ಸ್ವತಃ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಹಣ ಬಿಡುಗಡೆ ಆಗಿಲ್ಲ ಎಂದು ಯಾರು ಹೇಳಿದ್ದು. ಯಾವುದನ್ನೂ ಕೂಡ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಮೂರು ತಿಂಗಳಿಂದ ಪೆಂಡಿಂಗ್ ಇರೋದು ನನಗೆ ಗೊತ್ತಿಲ್ಲ. ಕೂಡಲೇ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

‘ಅನ್ನಭಾಗ್ಯ’ ಯೋಜನೆಯ 5 ಕೆಜಿ ಅಕ್ಕಿಯ ಹಣ ವಿಳಂಬ ವಿಚಾರದ ಬಗ್ಗೆ ಸಚಿವ ಮುನಿಯಪ್ಪ ಮಾತನಾಡಿ, 2 ತಿಂಗಳ ಹಣ ಮಾತ್ರ ಬಾಕಿ ಇದೆ, ನಾಲ್ಕೈದು ತಿಂಗಳ ಬಾಕಿ ಇಲ್ಲ. ಎರಡೆರಡು ತಿಂಗಳಿಗೆ ಒಂದು ಬಾರಿ ಹಣ ಹಾಕ್ತಿದ್ದೇವೆ. ಇನ್ಮುಂದೆ ಪ್ರತಿ ತಿಂಗಳು ಹಣ ಹಾಕುವುದಕ್ಕೆ ಏರ್ಪಾಡು ಮಾಡುತ್ತೇವೆ. ವಿಪಕ್ಷಗಳು ಟೀಕೆ ಮಾಡಿದ್ರೆ ನಾವು ಸರಿಯಾಗಿ ಕೆಲಸ ಮಾಡೋದು ಎಂದರು.

ಸದ್ಯ ಮೂರ್ನಾಲ್ಕು ತಿಂಗಳಿನಿಂದ ಗೃಹಲಕ್ಷ್ಮೀಯರು ಹಣವಿಲ್ಲದೇ ಒದ್ದಾಡಿದ್ದಾರೆ. ಮಹಿಳೆಯರ ಸಂಕಷ್ಟ ಸರ್ಕಾರಕ್ಕೂ ತಲುಪಿದೆ ಹೀಗಾಗಿ ಫಲಾನುಭವಿಗಳ ಖಾತೆಗೆ ಹಣ ಯಾವಾಗ ಬೀಳುತ್ತೋ ಕಾದು ನೋಡಬೇಕು.

Published On - 8:21 pm, Mon, 17 February 25

Loading...
Unable to load recommendations.
Follow Us