ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಸಾಲುಮರದ ತಿಮ್ಮಕ್ಕ, ಪ್ರಮೋದಾ ದೇವಿ ಸೇರಿ ಅನೇಕ ಗಣ್ಯರಿಂದ ದರ್ಶನ
ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆಯ ಸಾರ್ವಜನಿಕ ದರ್ಶನೋತ್ಸವದ ಮೊದಲ ದಿನವೇ ಶಕ್ತಿದೇವತೆಯನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬಂದಿದೆ. ರಾಜಮಾತೆ ಪ್ರಮೋದಾದೇವಿ, ಶತಾಯುಷಿ ಸಾಲುಮರದ ತಿಮ್ಮಕ್ಕ, ಪರಿಷತ್ ಸದಸ್ಯರಾದ ಬೋಜೇಗೌಡ, ಸೂರಜ್ ರೇವಣ್ಣ, ಸಿನಿತಾರೆಯರಾದ ವಶಿಷ್ಟ ಹಾಗೂ ಹರಿಪ್ರಿಯ ಸೇರಿ ಹಲವು ಗಣ್ಯರು ಸೇರಿ ಸಾವಿರ ಸಾವಿರ ಜನರು ದೇವಿ ದರ್ಶನ ಮಾಡಿದರು.
ಹಾಸನ, ಅಕ್ಟೋಬರ್ 26: ಹಾಸನಾಂಬೆ ಸಾರ್ವಜನಿಕ ದರ್ಶನದ ಮೊದಲ ದಿನವೇ ಜನ ಜಾತ್ರೆಯೇ ಹರಿದುಬಂದಿದೆ. ಸರ್ವಾಲಂಕಾರ ಭೂಷಿತೆಯಾಗಿರುವ ದೇವಿಯನ್ನು ಕಣ್ತುಂಬಿಕೊಂಡ ಭಕ್ತರು, ಗರ್ಭಗುಡಿಯಲ್ಲಿ ಎಂದೂ ಆರದ ದೀಪವನ್ನು ನೋಡಿ ವಿಸ್ಮಿತರಾದರು. ಗಣ್ಯಾತಿ ಗಣ್ಯರೂ ಶಕ್ತಿದೇವತೆಯ ದರ್ಶನ ಪಡೆದರು.
ದೇಗುಲದ ಬಾಗಿಲು ತೆರೆದು ದೇಗುಲದ ಸ್ವಚ್ಛತೆ, ದೇವಿಗೆ ಅಲಂಕಾರ ಮತ್ತು ನೈವೇದ್ಯ, ಪೂಜೆಗಳ ಬಳಿಕ ಶುಕ್ರವಾರ ಮುಂಜಾನೆ 4 ಗಂಟೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಮದ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ಬಂದ ಸಹಸ್ರಾರು ಭಕ್ತರು ದೇವಿಯನ್ನು ಕಣ್ತುಂಬಿಕೊಂಡು ಪುನೀತರಾದರು.
ಶುಕ್ರವಾರವಾದ್ದರಿಂದ ಶಕ್ತಿ ದೇವತೆ ದರ್ಶನಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಹೀಗಾಗಿ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಹಾಸನಾಂಬೆಗೆ ನಮಿಸಿದರು. ಮೊದಲ ದಿನವೇ ಬೆಳ್ಳಂಬೆಳಗ್ಗೆ ಆಗಮಿಸಿದ್ದ ಮೈಸೂರಿನ ರಾಜಮಾತೆ ಶ್ರೀಮತಿ ಪ್ರಮೋದಾ ದೇವಿ, ಶತಾಯುಷಿ ಸಾಲುಮರದ ತಿಮ್ಮಕ್ಕ ಹಾಗೂ ಪರಿಷತ್ ಸದಸ್ಯರಾದ ಬೋಜೇಗೌಡ, ಸೂರಜ್ ರೇವಣ್ಣ ಸೇರಿ ಹಲವರು ದರ್ಶನ ಪಡೆದುಕೊಂಡರು.
ದರ್ಶನದ ಬಳಿಕ ಪ್ರಮೋದಾ ದೇವಿ ಮಾತು
ಹಾಸನಾಂಬೆ ದರ್ಶನ ಪಡೆದು ಮಾತನಾಡಿದ ರಾಜಮಾತೆ ಪ್ರಮೋದಾದೇವಿ, ಜಿಲ್ಲಾಡಳಿತ ಆಹ್ವಾನ ನೀಡಿತ್ತು. ಹಾಗಾಗಿ ಬಂದು ದೇವಿ ದರ್ಶನ ಮಾಡಿದ್ದೇನೆ, ನಾಡಿಲ್ಲಿ ಸಮೃದ್ದಿ ನೆಲೆಸಿ ಎಲ್ಲೆಡೆ ನೆಮ್ಮದಿ ನೆಲೆಸಲಿ ಎಂದು ಬೇಡಿಕೊಂಡಿದ್ದೇನೆ ಎಂದರು.
ಹಾಸನಾಂಬ ದರ್ಶನ ಸಮಯ
ಈ ವರ್ಷ ಹಾಸನಾಂಬೆ ದರ್ಶನ ಗುರುವಾರದಿಂದ ಆರಂಗೊಂಡಿದ್ದು ಶುಕ್ರವಾರದಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನಿಡಲಾಗಿದೆ. ಶುಕ್ರವಾರ ಬೆಳಗ್ಗೆಯಿಂದ ರಾತ್ರಿ 8 ಗಂಟೆವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಇದ್ದರೆ ಸಂಜೆ 8 ಗಂಟೆ ಬಳಿಕ ದರ್ಶನ ಕೊನೆಯಾಗಲಿದೆ. ಬಳಿಕ ಮತ್ತೆ ನಾಳೆ ಬೆಳಿಗ್ಗೆ 4 ಗಂಟೆಗೆ ದರ್ಶನ ಆರಂಬವಾದರೆ ನವೆಂಬರ್ 3 ರ ಮುಂಜಾನೆವರೆಗೂ ಕೂಡ ದೇವಿ ದರ್ಶನಕ್ಕೆ ಅವಕಾಶ ಇದೆ. ಈ ವರ್ಷ ರಾಜ್ಯ ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಕಾರಣದಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಅಂದಾಜು 20 ರಿಂದ 25 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯೊಂದಿಗೆ ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದ್ದರೆ, ಮೊದಲ ದಿನವೇ ಹಾಸನಾಂಬೆ ದರ್ಶನಕ್ಕೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದಿದ್ದಾರೆ.
ಹಾಸನಾಂಬ ಸನ್ನಿಧಿಯಲ್ಲಿ ಭಕ್ತರಿಗೆ ಸಕಲ ವ್ಯವಸ್ಥೆ
ಭಕ್ತರ ದರ್ಶನಕ್ಕಾಗಿಬ್ಯಾರಿಕೇಡ್, ನೆರಳು, ನೀರಿನ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತ ಭಕ್ತರಿಗೆ ಏನೂ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಿದೆ. ಶುಕ್ರವಾರ ಕೇವಲ ರಾಜಕೀಯ ನಾಯಕರಲ್ಲದೆ ಸಿನಿತಾರೆಯರಾದ ವಶಿಷ್ಟ ಹಾಗು ಹರಿಪ್ರಿಯ ಸೇರಿ ಹಲವು ಸೆಲೆಬ್ರಿಟಿಗಳು ದೇವಿಯ ದರ್ಶನ ಮಾಡಿದರು. ಬೆಳಿಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಸರತಿ ಸಾಲುಗಳಲ್ಲಿ ನಿಂತು ದೇವಿಯ ದರ್ಶನ, ಆಶೀರ್ವಾದ ಪಡೆದುಕೊಂಡು ಪುನೀತರಾದರು.
ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಹೇಗಿದೆ ವ್ಯವಸ್ಥೆ? ಭಕ್ತರು ಹೇಳೋದೇನು ನೋಡಿ
ಒಟ್ಟಿನಲ್ಲಿ ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ಕಣ್ತುಂಬಿಕೊಳ್ಳಲು ಎಲ್ಲೆಡೆಗಳಿಂದ ಭಕ್ತರು ಆಗಮಿಸುವ ಜೊತೆಗೆ ಗಣ್ಯರು, ಸಿನಿಮಾ ನಟರು ಕೂಡ ದೇವಿಯ ಆಶೀರ್ವಾದ ಪಡೆಯಲು ಹಾಸನದತ್ತ ಬರುತ್ತಿದ್ದಾರೆ. ಒಟ್ಟು 9 ದಿನಗಳು ಭಕ್ತರಿಗೆ ದರ್ಶನಕ್ಕೆ ಅವಕಾಶ ಇದ್ದು ಲಕ್ಷ ಲಕ್ಷ ಭಕ್ತರು ಹಾಸನದತ್ತ ಆಗಮಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ