ಮಾಜಿ ಕುಲಪತಿಗಳ ಎಡವಟ್ಟು: ಜಾನಪದ ವಿವಿಯಲ್ಲಿ 8 ಕೋರ್ಸ್ಗಳು ರದ್ದು; ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
ಹಾವೇರಿ ಜಾನಪದ ವಿಶ್ವವಿದ್ಯಾಲಯವು ಸರ್ಕಾರ ಹಾಗೂ ರಾಜ್ಯಪಾಲರ ಅನುಮತಿ ಪಡೆಯದೆ 2018-19ರಲ್ಲಿ 8 ಸ್ನಾತಕೋತ್ತರ ಕೋರ್ಸ್ಗಳನ್ನು ಆರಂಭಿಸಿತ್ತು. ಆದರೆ ಮಾಜಿ ಕುಲಪತಿಗಳ ಎಡವಟ್ಟಿನಿಂದಾಗಿ ಇದೀಗ ಉನ್ನತ ಶಿಕ್ಷಣ ಇಲಾಖೆಯು ಈ ಕೋರ್ಸ್ಗಳನ್ನು ಬಂದ್ ಮಾಡುವಂತೆ ಆದೇಶಿಸಿದೆ. ನಿಯಮ ಉಲ್ಲಂಘನೆ ಪರಿಣಾಮ 20ಕ್ಕೂ ಹೆಚ್ಚು ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ಹಾವೇರಿ, ಸೆಪ್ಟೆಂಬರ್ 10: ಜಿಲ್ಲೆಯ ಜಾನಪದ ವಿಶ್ವವಿದ್ಯಾಲಯದಲ್ಲಿ ಒಂದಿಲ್ಲಾ ಒಂದು ಎಡವಟ್ಟುಗಳು ನಡೆಯುತ್ತಿವೆ. ಇದೀಗ ಜಾನಪದ ವಿಶ್ವವಿದ್ಯಾಲಯದಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ಅನುಮತಿ ಪಡೆಯದೆ 8 ಕೋರ್ಸ್ ಪ್ರಾರಂಭಿಸಿತ್ತು. ಆದರೆ ಇದೀಗ ಉನ್ನತ ಶಿಕ್ಷಣ ಇಲಾಖೆ ಕೋರ್ಸ್ ಬಂದ್ ಮಾಡುವಂತೆ ಆದೇಶ ಮಾಡಿದೆ. ಹಾಗಾಗಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಅನುಮೋದನೆ ಪಡೆಯದೇ 8 ಕೋರ್ಸ್ಗಳ ಪ್ರಾರಂಭ
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಗೋಟಗೊಡಿ ಬಳಿಯಿರುವ ಜಾನಪದ ವಿಶ್ವವಿದ್ಯಾಲಯವು 2018-19ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ಅನುಮತಿ ಪಡೆಯದೆಯೇ ಎಂ.ಎ ಅರ್ಥಶಾಸ್ತ್ರ, ಎಂ.ಎ ಕನ್ನಡ ಮತ್ತು ಜಾನಪದ, ಎಂ.ಎ ಇಂಗ್ಲಿಷ್, ಎಂ.ಎ ಸಮಾಜಶಾಸ್ತ್ರ, ಎಂ.ಎಸ್.ಡಬ್ಲ್ಯು, ಪ್ರದರ್ಶನ ಕಲೆ, ದೃಶ್ಯ ಕಲೆ ಹಾಗೂ ಎಂ.ಎ ಮಹಿಳಾ ಅಧ್ಯಯನ ವಿಭಾಗಗಳನ್ನು ಆರಂಭಿಸಿತ್ತು. ಇದೀಗ ಈ ಎಲ್ಲಾ 8 ವಿಷಯಗಳ ಬೋಧನೆಯನ್ನು ತಕ್ಷಣವೇ ನಿಲ್ಲಿಸುವಂತೆ ಉನ್ನತ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
20ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಆತಂಕ
ಕೋರ್ಸ್ಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿರುವ ಹಿನ್ನೆಲೆ ಈ ವಿಭಾಗದಲ್ಲಿ ಕೆಲಸ ಮಾಡುವ ಬೋಧಕ ಮತ್ತು ಬೊಧಕೇತರ ಸೇರಿದಂತೆ 20ಕ್ಕೂ ಅಧಿಕ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ. ‘ಈಗಾಗಲೇ ಸರ್ಕಾರ ಈ ಕೋರ್ಸ್ ಬಂದ್ ಮಾಡಿ ಬೋಧಕ ಮತ್ತು ಬೋಧಕೆತರ ಕೆಲಸದಿಂದ ಬಿಡುಗಡೆ ಮಾಡಲು ಸೂಚನೆ ನೀಡಿದೆ’ ಎಂದು ಸಹಾಯಕ ಕುಲಸಚಿವ ಶಹಜಾನ್ ಮುದಕವಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಲೋನ್ ಕಟ್ಟದ್ದಕ್ಕೆ ಬ್ಯಾಂಕ್ನಿಂದ ಕಾಲೇಜ್ ಸೀಜ್: ಆಯುರ್ವೇದಿಕ್ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ, ಅಹೋರಾತ್ರಿ ಧರಣಿ
ಜಾನಪದ ವಿಶ್ವವಿದ್ಯಾಲಯ ಪ್ರಾರಂಭದಲ್ಲಿ ಜಾನಪದ ಕಲೆ, ಜಾನಪದ ವಿಜ್ಞಾನ, ಜಾನಪದ ಪ್ರವಾಸೋದ್ಯಮ, ಜಾನಪದ ಪತ್ರಿಕೋದ್ಯಮ, ಬುಡಕಟ್ಟು ಮತ್ತು ಮಹಿಳಾ ಅಧ್ಯಯನ ಮತ್ತು ಜಾನಪದ ಸಾಹಿತ್ಯ ಕೋರ್ಸ್ಗಳನ್ನ ನಡೆಸಲು ಅನುಮತಿ ನೀಡಿದೆ. 2018 ಕುಲಪತಿ ಡಿ.ಬಿ.ನಾಯಕ್ ಮತ್ತು ಹಿಂದಿನ ಕುಲಪತಿ ಭಾಸ್ಕರ ಅವರು ಕೋರ್ಸ್ಗಳನ್ನ ಪ್ರಾರಂಭ ಮಾಡಿದ ನಂತರ 2024 ಮತ್ತು 25 ರಲ್ಲಿ ಘಟನೋತ್ತರ ಅನುಮೋದನೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಹೀಗಾಗಿ ನಿಯಮ ಉಲ್ಲಂಘನೆಯಡಿ ಉನ್ನತ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ.
ಪ್ರೊ. ಬೋರಲಿಂಗಯ್ಯ ಸಮಿತಿ ವರದಿ ಮತ್ತು ಕ್ರಮ
ಸರ್ಕಾರವು ಪ್ರೊ ಬೊರಲಿಂಗಯ್ಯ ನೇತ್ರತ್ವದಲ್ಲಿ ಒಂದು ಸಮಿತಿ ರಚನೆ ಮಾಡಿತ್ತು. ಸಮಿತಿ ಪರಿಶೀಲನೆ ನಡೆಸಿ ‘ಜಾನಪದ ವಿಶ್ವವಿದ್ಯಾಲಯದಲ್ಲಿ ಜಾನಪದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತ್ರ ಅಧ್ಯಯನ ನಡೆಯಬೇಕು, ಸಾಮಾನ್ಯ ಕಾಲೇಜುಗಳಂತೆ ಇತರ ವಿಷಯಗಳನ್ನು ಬೋಧಿಸಿದರೆ ಜಾನಪದ ವಿಶ್ವವಿದ್ಯಾಲಯದ ಉದ್ದೇಶವೇ ವ್ಯರ್ಥವಾಗುತ್ತದೆ’ ಎಂದು ವರದಿ ನೀಡಿತ್ತು. ಅದರಂತೆ ಸರ್ಕಾರ ಈ 8 ಕೋರ್ಸ್ಗಳನ್ನು ರದ್ದುಗೊಳಿಸಿದೆ. ಮಾಜಿ ಕುಲಪತಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಶೂ ಭಾಗ್ಯ: ಒಂದೇ ವಾರದಲ್ಲಿ ಬಯಲಾಯ್ತು ಅಸಲಿ ಗುಣಮಟ್ಟ!
ಒಟ್ಟಿನಲ್ಲಿ ಜಾನಪದ ವಿಶ್ವವಿದ್ಯಾಲಯ ಹಳೆಯ ಕುಲಪತಿ ಮಾಡಿದ ಎಡವಟ್ಟಿನಿಂದ ಈಗ 20ಕ್ಕೂ ಅಧಿಕ ಬೋಧಕ ಮತ್ತು ಬೋಧಕೆತರ ಸಿಬ್ಬಂದಿ ಹಾಗೂ 100ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




