ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಏಕೆ ದೆಹಲಿಯ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ?
ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ದೆಹಲಿಯಲ್ಲಿ ನಡೆಯಲಿರುವ 'ಬ್ರಿಕ್ಸ್ ಶೃಂಗಸಭೆ'ಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸುತ್ತಿಲ್ಲ ಎಂದು ರಾಜತಾಂತ್ರಿಕ ಮೂಲಗಳು ಇಂದು ಸ್ಪಷ್ಟಪಡಿಸಿವೆ. 1996ರ 'ಗಂಗಾ ನದಿ ನೀರು ಹಂಚಿಕೆ ಒಪ್ಪಂದವು' ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ. ಆದ್ದರಿಂದ ನವೆಂಬರ್ ಅಥವಾ ಡಿಸೆಂಬರ್ ಆರಂಭದಲ್ಲಿ ದ್ವಿಪಕ್ಷೀಯ ಮಾತುಕತೆಗಾಗಿ ಪ್ರಧಾನಿ ತಾರಿಕ್ ರೆಹಮಾನ್ ದೆಹಲಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತದಲ್ಲಿ ನೆಲೆಸಿರುವುದು ತಾರಿಕ್ ರಹಮಾನ್ ಸರ್ಕಾರಕ್ಕೆ ಅಸಮಾಧಾನ ತಂದಿದೆ.

ನವದೆಹಲಿ, ಸೆಪ್ಟೆಂಬರ್ 10: ಭಾರತದಲ್ಲಿ ನಡೆಯುತ್ತಿರುವ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಪಾಲ್ಗೊಳ್ಳುತ್ತಿಲ್ಲ. ಈ ಬಗ್ಗೆ ಭಾರತದಲ್ಲಿನ ಬಾಂಗ್ಲಾದೇಶ ಸರ್ಕಾರ ಮಾಹಿತಿ ನೀಡಿದ್ದು, “ಪ್ರಧಾನಿ ತಾರಿಕ್ ರೆಹಮಾನ್ ಅವರಿಗೆ ಬ್ರಿಕ್ಸ್ ಶೃಂಗಸಭೆಗೆ ವೈಯಕ್ತಿಕವಾಗಿ ಆಹ್ವಾನವೇ ಬಂದಿಲ್ಲ” ಎಂದು ಬಾಂಗ್ಲಾದೇಶದ ವಿದೇಶಾಂಗ ರಾಜ್ಯ ಸಚಿವ ಹುಮಾಯೂನ್ ಕಬೀರ್ ಸ್ಪಷ್ಟಪಡಿಸಿದ್ದಾರೆ.
ಬಾಂಗ್ಲಾದೇಶದ ವಿದೇಶಾಂಗ ರಾಜ್ಯ ಸಚಿವ ಹುಮಾಯೂನ್ ಕಬೀರ್ ಅವರ ಪ್ರಕಾರ, ಭಾರತವು ಈ ಆಹ್ವಾನವನ್ನು ನಿರ್ದಿಷ್ಟವಾಗಿ ಪ್ರಧಾನಿ ತಾರಿಕ್ ರೆಹಮಾನ್ ಅವರಿಗೆ ಕಳುಹಿಸಿಲ್ಲ, ಬದಲಿಗೆ ಪ್ರಸ್ತುತ ‘ಬಿಮ್ಸ್ಟೆಕ್’ (BIMSTEC) ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಬಾಂಗ್ಲಾದೇಶದ ಪ್ರತಿನಿಧಿಗೆ ಕಳುಹಿಸಿದೆ. ಆದ್ದರಿಂದ, ಶೃಂಗಸಭೆಗೆ ಬಾಂಗ್ಲಾದೇಶ ಸರ್ಕಾರದ ಪರವಾಗಿ ಬೇರೊಬ್ಬ ಅಧಿಕೃತ ಪ್ರತಿನಿಧಿಯನ್ನು ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಗೂ ಮುನ್ನ ಪ್ರಧಾನಿ ಮೋದಿ-ಪುಟಿನ್ ದ್ವಿಪಕ್ಷೀಯ ಮಾತುಕತೆ; ರಷ್ಯಾ ಮಾಹಿತಿ
ಇನ್ನೊಂದೆಡೆ, ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರು ಭಾರತಕ್ಕೆ ಭೇಟಿ ನೀಡಲು ತೀವ್ರ ಆಸಕ್ತಿ ಹೊಂದಿದ್ದಾರೆ. ಆದರೆ, ಈ ಭೇಟಿಯಿಂದ ಸ್ವದೇಶಕ್ಕೆ ಮರಳಿದ ನಂತರ ಜನರಿಗೆ ನೀಡಬಹುದಾದ ರಾಜತಾಂತ್ರಿಕ ಸಾಧನೆಗಳು ಮತ್ತು ಪ್ರಮುಖ ನಿರ್ಧಾರಗಳು ಏನಿರಲಿವೆ ಎಂಬುದರ ಕುರಿತು ಅವರು ಇನ್ನೂ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ.
ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಗೆ ದೆಹಲಿ ಸಜ್ಜು; ಕ್ಸಿ ಜಿನ್ಪಿಂಗ್, ಪುಟಿನ್ಗೆ ಹೇಗಿರಲಿದೆ ಹೋಟೆಲ್ ವ್ಯವಸ್ಥೆ?
ಬಹುಪಕ್ಷೀಯ ಬ್ರಿಕ್ಸ್ ಶೃಂಗಸಭೆಗಿಂತ ಹೆಚ್ಚಾಗಿ, ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಭಾರತಕ್ಕೆ ಕೈಗೊಳ್ಳಲಿರುವ ಪೂರ್ಣ ಪ್ರಮಾಣದ ‘ದ್ವಿಪಕ್ಷೀಯ ಭೇಟಿ’ಯ ಮೇಲೆಯೇ ಬಾಂಗ್ಲಾ ಪ್ರಧಾನಿ ಗಮನ ನೆಟ್ಟಿದ್ದಾರೆ. ಈ ಭೇಟಿಯಲ್ಲಿ ‘ಗಂಗಾ ನದಿ ನೀರು ಹಂಚಿಕೆ ಒಪ್ಪಂದ’ದ ನವೀಕರಣ ಮತ್ತು ಇಂಧನ ಬಿಕ್ಕಟ್ಟು ಪರಿಹಾರದಂತಹ ಮಹತ್ವದ ವಿಷಯಗಳ ಕುರಿತು ನೇರ ಮಾತುಕತೆ ನಡೆಸಲು ಬಾಂಗ್ಲಾದೇಶ ಸರ್ಕಾರ ಯೋಜಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




