AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನುಡಿ ನಮನ: ಮಾನವೀಯ ಹೃದಯದ ನಿಷ್ಠುರ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ

HS Doreswamy Obituary: ಹೊಸ ಜಗತ್ತಿಗೆ ಸ್ವೀಕೃತವಾಗಿರುವ ಕಾರ್ಫೋರೇಟ್ ತರಹದ ಸರಕಾರ-ವಿರೋಧಿ ಹೋರಾಟ ವ್ಯವಸ್ಥೆಯನ್ನು ಅವರು ಎಂದೂ ಅಪ್ಪಿಕೊಳ್ಳಲಿಲ್ಲ. ಸ್ಥಾಪಿತ ಹಿತಾಸಕ್ತಿಗೆ ವಿರುದ್ಧ ಧ್ವನಿ ಎತ್ತಬೇಕು ಎಂದರೆ, ಟ್ವಿಟರ್​ನಲ್ಲಿ ಟ್ರೆಂಡ್ ಮಾಡಿ ಹವಾ ಎಬ್ಬಿಸುವ ಒಂದು ಇಂಜಿನ್ನಿನಂತೆ ಕೆಲಸ ಮಾಡಬೇಕು ಎಂಬ ಹೊಸ ಜಗತ್ತಿನ ನಂಬುಗೆಯನ್ನು ಅವರು ಹೊಂದಿರಲಿಲ್ಲ.

ನುಡಿ ನಮನ: ಮಾನವೀಯ ಹೃದಯದ ನಿಷ್ಠುರ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ
ಎಚ್​.ಎಸ್.ದೊರೆಸ್ವಾಮಿ
Follow us
ಡಾ. ಭಾಸ್ಕರ ಹೆಗಡೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 26, 2021 | 6:37 PM

ಬೆಂಗಳೂರಿನ ಜಯನಗರದ ನಾಲ್ಕನೇ ಟಿ ಬ್ಲಾಕ್ ಅಂದರೆ, ಅಲ್ಲಿ ಚಂದದ ಹೊಸ ಮನೆಗಳೇ ಕಾಣುತ್ತವೆ. ಮೂವತ್ತೈದನೇ ರಸ್ತೆ ಬಳಿ ಇರುವ ಹಳದಿ ಬಣ್ಣದ ಮನೆ ಹೊಕ್ಕರೆ ಕೆಂಪು ಆಕ್ಸೈಡ್ ನೆಲ ನಮ್ಮ ಕಾಲನ್ನು ತಣ್ಣಗಾಗಿಸಿ ಸ್ವಾಗತಿಸುತ್ತದೆ. ಅದೊಂದು ರೂಪಕ ಅಲ್ಲ. ಒಳ ಹೊಕ್ಕರೆ ಏನು ಕಾದಿದೆ ಎಂಬುದರ ಸೂಚಕ ಅದು. ಒಳ ಹೊಕ್ಕು ಎಡಕ್ಕೆ ತಿರುಗಿದರೆ ಅಲ್ಲೊಂದು ಕೋಣೆ. ಹಾಗೆ ನೋಡಿದರೆ ಅದು ಸಾಮಾನ್ಯ ಕೋಣೆ: ಕೋಣೆ ತುಂಬಾ ಫೈಲ್​, ಪೇಪರ್, ಪುಸ್ತಕಗಳು. ಕಿಟಕಿ ಕೆಳಗೆ ಹಾಸಿಗೆ. ಅಲ್ಲಿ ಆ ವ್ಯಕ್ತಿ ಮಲಗಿಕೊಂಡು ಓದುತ್ತಾ ಇರುವ ಈ ಚಿತ್ರ ಇನ್ನು ಮುಂದೆ ಇರಲ್ಲ. ಆ ಕೋಣೆ, ಇವತ್ತಿಂದ ಖಾಲಿ, ಖಾಲಿ. ಅಲ್ಲಿ ದಿಂಬಿಗೆ ಒರಗಿಕೊಂಡು ಮಾತಾಡಲು ಅಲ್ಲಿ ಇನ್ನು ಎಚ್.ಎಸ್. ದೊರೆಸ್ವಾಮಿ ಇಲ್ಲ.

ದೊರೆಸ್ವಾಮಿಯವರನ್ನು ಮೂರು ಬಾರಿ ಭೇಟಿ ಮಾಡಿ ಸಂದರ್ಶನ ಮಾಡುತ್ತ ಮಾಡುತ್ತಲೇ ಅವರ ಪ್ರೀತಿಗೆ ಮಾರು ಹೋದವನು ನಾನು. ನನ್ನಂತೆ ಸಾವಿರಾರು ಜನ ಇದೇ ರೀತಿಯ ಅನುಭವ ಪಡೆದುಕೊಂಡವರಿದ್ದಾರೆ. ಓರ್ವ ಯಶಸ್ವೀ ಉದ್ಯಮಿ ಮನೆಗೆ ಜನ ಬರುವಂತೆ, ಹೋರಾಟ ಮಾಡುವವರ ಮನೆಗೂ ಜನ ಬರುತ್ತಲೇ ಇರುತ್ತಾರೆ. ಅಲ್ಲಿ ಕೂಡ ಒಂದು ರಾಜಕೀಯ ತಂತ್ರಗಾರಿಕೆಯ ರೂಪುರೇಷೆ ಹುಟ್ಟುತ್ತಲೇ ಇರುತ್ತದೆ. ಇದು ಸರ್ವೇ ಸಾಮಾನ್ಯ. ದೊರೆಸ್ವಾಮಿಯವರ ಮನೆ ಮಾತ್ರ ಹಾಗಲ್ಲ. ಜನ ಬರುವುದು ಅಪರೂಪವಾಗಿತ್ತು. ಪ್ರಾಯಶಃ ಅವರಿಗೆ ವಯಸ್ಸಾಗಿತ್ತು ಎನ್ನುವುದು ಒಂದು ಕಾರಣ.

ಇನ್ನೊಂದು ಕಾರಣ: ಹೊಸ ಜಗತ್ತಿಗೆ ಸ್ವೀಕೃತವಾಗಿರುವ ಕಾರ್ಫೋರೇಟ್ ತರಹದ ಸರಕಾರ-ವಿರೋಧಿ ಹೋರಾಟ ವ್ಯವಸ್ಥೆಯನ್ನು ಅವರು ಎಂದೂ ಅಪ್ಪಿಕೊಳ್ಳಲಿಲ್ಲ. ಅಥವಾ ಸ್ಥಾಪಿತ ಹಿತಾಸಕ್ತಿಗೆ ವಿರುದ್ಧ ಧ್ವನಿ ಎತ್ತಬೇಕು ಎಂದರೆ, ಟ್ವಿಟರ್​ನಲ್ಲಿ ಟ್ರೆಂಡ್ ಮಾಡಿ ಹವಾ ಎಬ್ಬಿಸುವ ಒಂದು ಇಂಜಿನ್ನಿನಂತೆ ಕೆಲಸ ಮಾಡಬೇಕು ಮತ್ತು ಪ್ರತಿದಿನವೂ ಧ್ವನಿ ಎತ್ತುತ್ತಲೇ ಇರಬೇಕು ಎಂಬ ಹೊಸ ಜಗತ್ತಿನ ನಂಬುಗೆಯನ್ನು ಅವರು ಹೊಂದಿರಲಿಲ್ಲ. ನಾನೋಬ್ಬನೇ ಯಾಕೆ ಹೋರಾಡಬೇಕು? ಎಲ್ಲಾ ಕಡೆ ಕರೀತಾರೆ. ನನಗೆ ಗೊತ್ತು ಯಾವ ಹೋರಾಟಗಾರರು ಎಂಥವರು ಅಂತ, ಎಂದು ಹೇಳಿದ್ದು ಈಗಲೂ ನೆನಪಿದೆ.

ಅವರು ಕೆಲವು ವಿಚಾರದಲ್ಲಿ ನಿಷ್ಠುರರಾಗಿದ್ದರು: ಅಲ್ಲೇ ಹತ್ತಿರ ಇರುವ ಸಂಬಂಧಿಕರು ತಮ್ಮ ಜೊತೆ ಇರಲು ಬನ್ನಿ ಎಂದು ಕರೆದರೂ ಅವರು ಹೋಗಲೇ ಇಲ್ಲ. ಆದರೆ, ಅವರು ತಮ್ಮ ಹೆಂಡತಿ ಬದುಕಿರುವವರೆಗೂ ಸಂಜೆ ಒಂದು ತಾಸು ಅವರ ಜೊತೆ ಕುಳಿತು ಕನ್ನಡ ಸೀರಿಯಲ್ ನೋಡುತ್ತಿದ್ದರು. ಸುತ್ತಲಿನ ಪುಸ್ತಕ, ಪೇಪರ್ ಬೇಜಾರಾದರೆ ಏನು ಮಾಡುತ್ತೀರಾ? ಎಂದು ಕೇಳಿದಾಗ, ನನ್ನ ಹೆಂಡತಿಗೆ ಕೆಲವು ಸೀರಿಯಲ್ ಅಂದ್ರೆ ಇಷ್ಟ. ಅವಳ ಜೊತೆ ಕುಳಿತು ಅದನ್ನು ನೋಡುತ್ತೀನೆ ಎಂದು ಮುಚ್ಚುಮರೆ ಇಲ್ಲದೇ ಹೇಳಿದ್ದರು. ಕೊನೆ ತನಕವೂ ಹೆಂಡತಿ ಬಗ್ಗೆ ತುಂಬಾ ಕಾಳಜಿ ತೆಗೆದುಕೊಂಡಿದ್ದ ಅವರು, ಹೆಂಡತಿಯ ಇಷ್ಟದ ಒಂದು ಸೀರಿಯಲ್​ನ ವಿಚಾರದಲ್ಲಿ ತಮ್ಮ ವಿಚಾರಧಾರೆಯ ನಿಷ್ಠುರತೆಯನ್ನು ಹೆಂಡತಿ ಮೇಲೆ ಹೇರಲಿಲ್ಲ. ಅದು ಅವರ ಹೃದಯ ವೈಶಾಲ್ಯತೆಯನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: HS Doreswamy Passed Away: ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ನಿಧನ

HS DORESWAMY

ಪತ್ನಿ ಲಲಿತಮ್ಮ ಜೊತೆ ದೊರೆಸ್ವಾಮಿ

ಕ್ಯಾಮೆರಾ ಮುಂದೆ ಮಾತನಾಡುವ ದೊರೆಸ್ವಾಮಿ ಬೇರೆ. ವೈಯಕ್ತಿಕವಾಗಿ ಇರುವ ಆ ಜೀವವೇ ಬೇರೆ ಆಗಿತ್ತು. ಅವರ ರೂಮಿನಲ್ಲಿ ದಿಂಬಿಗೆ ತಲೆಕೊಟ್ಟು ಎದುರಿನ ಗೋಡೆ ನೋಡುತ್ತ ಅವರು ಹೇಳುವ ಒಂದೊಂದು ಮಾತು ನಮ್ಮಲ್ಲಿರುವ ಅವರ ಬಗೆಗಿನ ಪ್ರೀತಿ ಹೆಚ್ಚುತ್ತಲೇ ಇರಬೇಕು. ಅಂಥ ವ್ಯಕ್ತಿತ್ವ ಅವರದಾಗಿತ್ತು. ಅವರ ಮನೆಯಲ್ಲಿ ಮಾತನಾಡುವಾಗ ಹಲವಾರು ವಿಚಾರ ಹೇಳುತ್ತಿದ್ದರು. ವಯಸ್ಸಿನ ಪ್ರಭಾವ ಇದ್ದರೂ ಇರಬಹುದು, ಯಾರನ್ನೂ ಅವರು ದ್ವೇಷದಿಂದ ವಿರೋಧಿಸುತ್ತಿರಲಿಲ್ಲ.

ಇದು ಸಾಮಾಜಿಕ ಜಾಲತಾಣದ ಮೂರ್ತಿ ಭಂಜಕರ ಸ್ಟೈಲ್​ಗಿಂತಲೂ ಭಿನ್ನ. ದೊರೆಸ್ವಾಮಿ ಅವರು ಬಿಜೆಪಿಯನ್ನು ವಿರೋಧಿಸುತ್ತಿದ್ದುದು ಎಲ್ಲರಿಗೂ ಗೊತ್ತಿದ್ದುದೆ. ಅದರಲ್ಲಿ ಮುಚ್ಚುಮರೆ ಏನೂ ಇರಲಿಲ್ಲ. ಆದರೆ, ಅವರಿಗೆ ಕಾಂಗ್ರೆಸ್ ಮೇಲೆ ಕೂಡ ತುಂಬಾ ರೇಜಿಗೆ ಇತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಒಂದು ಘಟನೆ ನಡೆಯಿತು. ಇಲ್ಲಿಂದ ಬೆಳಗಾವಿಗೆ ಹೋಗಿ ಒಂದು ಹೋರಾಟದಲ್ಲಿ ಪಾಲ್ಗೊಂಡು ವಾಪಸ್ಸು ಬಂದರು. ಅದು 2016 ರಲ್ಲಿ. ನಾನು ಕೇಳಿದೆ: ಸರ್, ಜಮೀನಿಲ್ಲದ ಬಡವರಿಗೆ ಜಮೀನು ಕೊಡಬೇಕು ಎನ್ನುವ ಹೋರಾಟ ಎಷ್ಟು ಸರಿ? ಅದರಲ್ಲಿ ತಪ್ಪಿಲ್ಲ. ನೋಡೋಣ. ಮುಖ್ಯಮಂತ್ರಿ ಮಾತು ಕೊಟ್ಟಿದ್ದಾರೆ. ಮಾಡ್ತಾರೆ ಅಂತ ಕಾಣುತ್ತೆ ಎಂದರು. ಅದಾಗಿ ಎರಡು ವರ್ಷದ ಮೇಲೆ ಮತ್ತೆ ಕೇಳಿದೆ. ಈ ಮುಖ್ಯಮಂತ್ರಿಗಳು ಏನು ಮಾಡಲಿಲ್ಲ. ಈಗ ಏನು ಮಾಡ್ತೀರಾ? ನಕ್ಕು, ಒಂದು ಮಾತು ಹೇಳಿದ್ದರು: ನಾವು ಹೋರಾಟ ಮುಂದುವರಿಸೋಣ. ಏನು ಮಾಡೋಕೆ ಆಗುತ್ತೆ. ವ್ಯವಸ್ಥೆಯೇ ಹೀಗೆ. ಇವರೂ ಎಲ್ಲರಂತೆ ಆದರಲ್ಲ ಅಂತ ಬೇಸರ, ಎಂದು ಖಡಕ್ಕಾಗಿ ಹೇಳಿದ್ದರು. ಹೋರಾಟದ ಗಳಿಗೆ ಮುಗಿದು ಮನೆಗೆ ಹಿಂದಿರುಗಿ ಆ ಹಾಸಿಗೆ ಮೇಲೆ ಒರಗಿದ್ದಾಗ ಅವರಿಗೆ, ಎಲ್ಲ ರಾಜಕಾರಣಿಗಳ ಹುಳುಕನ್ನು ನೋಡುವ ಒಳಗಣ್ಣು ಇತ್ತು ಎಂಬುದನ್ನು ಗಮನಿಸಲೇಬೇಕು.

ಆಳುವವರ ವಿರುದ್ಧ ಯಾವ ಒಳ ತಂತ್ರಗಾರಿಕೆಯನ್ನು ಮಾಡದಿರುವ ಸಂಸ್ಕೃತಿಯಿಂದ ಬಂದವಾರಾದ್ದರಿಂದಲೇ ಅವರು ಬೆಳಿಗ್ಗೆ ಬಯ್ಯುತ್ತಿದ್ದವರನ್ನು, ಮಧ್ಯಾಹ್ನ ಹೋಗಿ ಭೇಟಿ ಮಾಡಿ ಒಂದು ಅಹವಾಲು ಕೊಟ್ಟು ಬರುವ ಧೈರ್ಯ ಅವರಲ್ಲಿ ಇತ್ತು. ತಮ್ಮ ಹೋರಾಟವನ್ನು ಮತ್ತು ಸಾಮಾನ್ಯ ಜನರಿಗೆ ಧ್ವನಿ ಆಗುವುದೇ ದೇವರ ಪೂಜೆ ಎಂದು ನಂಬಿದ್ದ ಅವರು ಹಾಗಂತ ಕಮ್ಯುನಿಸ್ಟ್ ಆಗಿರಲಿಲ್ಲ. ನಗರದಲ್ಲಿನ ಮನೆಗಳೆಲ್ಲ ಬಾಗಿಲು ಹಾಕಿಕೊಂಡಿರುವ ಸಂಪ್ರದಾಯ ರೂಢಿಸಿಕೊಂಡಿರುವ ಈ ಕಾಲಘಟ್ಟದಲ್ಲಿ, ಗಂಡ ಹೆಂಡತಿ ಇಬ್ಬರೇ ಇರುತ್ತಿದ್ದ ತಮ್ಮ ಮನೆ ಬಾಗಿಲು ತೆರೆದೇ ಇಡುತ್ತಿದ್ದ ದೊರೆಸ್ವಾಮಿ, ಒಂದೇ ದಿನದಲ್ಲಿ ರೂಪಕವಾಗಿಟ್ಟರು.

ಪ್ರಾಯಶಃ ಒಂದು ತಿಂಗಳೊಳಗೆ ಇಬ್ಬರು ಶತಾಯುಷಿಗಳನ್ನು (ಮತ್ತೊಬ್ಬರು, ಜಿ. ವೆಂಕಟಸುಬ್ಬಯ್ಯ) ಕಳೆದುಕೊಂಡ ಕರ್ನಾಟಕ ಲಾಕ್​ಡೌನ್​ಲ್ಲಿದ್ದಾಗಲೇ ಒಂದಿಷ್ಟು ಆತ್ಮ ವಿಮರ್ಶೆ ಮಾಡಿಕೊಳ್ಳಬಹುದು: ನಾವು ಈಗಾಗಲೇ ವೆಂಕಟಸುಬ್ಬಯ್ಯ ಅವರನ್ನು ಮರೆತಿದ್ದೇವೆ. ಲಾಕ್​ಡೌನ್ ಮುಗಿದು ಮತ್ತೆ ಇಲಿಓಟ (Rat Race) ಪ್ರಾರಂಭ ಆದಮೇಲೆ ನಮಗೆ ದೊರೆಸ್ವಾಮಿ ಯಾರು ವೆಂಕಟಸುಬ್ಬಯ್ಯ ಯಾರು ಎಂಬ ನೆನಪು ಇರುವುದಿಲ್ಲ. ಯಾರೆಲ್ಲ ಈ ಇಬ್ಬರನ್ನು ನಾಡಿನ ಸಾಕ್ಷಿಪ್ರಜ್ಞೆ ಎಂದೋ, ದಾರಿದೀಪ ಎಂದು ಹಾಡಿ ಹೊಗಳುತ್ತಿದ್ದಾರೋ ಅವರೇ ಪ್ರಜ್ಞೆ ಇಲ್ಲದ ಪ್ರಜೆಗಳಾಗುವುದರಲ್ಲಿ ಸಂಶಯವೂ ಇಲ್ಲ.

(HS Doreswamy Obituary Here is the profile biography of freedom fighter HS Doreswamy who passed away today)

ಇದನ್ನೂ ಓದಿ: ಬಡತನವೇ ನನ್ನ ಆರೋಗ್ಯದ ಗುಟ್ಟು ಎಂದು ಹೇಳುತ್ತಿದ್ದರು ಎಚ್.ಎಸ್. ದೊರೆಸ್ವಾಮಿ

ಇದನ್ನೂ ಓದಿ: 104ರ ವಯಸ್ಸಿನಲ್ಲಿಯೂ ದೊರೆಸ್ವಾಮಿಯವರಿಗಿದ್ದ ನೈತಿಕ ಸಿಟ್ಟು ನಮ್ಮ ದೇಶದ ಜನತೆಗೆ ಸ್ವಲ್ಪವಾದರೂ ಬರಲಿ

Published On - 6:28 pm, Wed, 26 May 21

ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಕಮಲ್ ಹಾಸನ್ ವಿಚಾರ: ಕಾನೂನು ಕೈಗೆ ತೆಗೆದುಕೊಳ್ಳದಂತೆ ಡಿಕೆಶಿ ಮನವಿ
ಕಮಲ್ ಹಾಸನ್ ವಿಚಾರ: ಕಾನೂನು ಕೈಗೆ ತೆಗೆದುಕೊಳ್ಳದಂತೆ ಡಿಕೆಶಿ ಮನವಿ
ವಿಧಾನಸೌಧದ ಗೇಟ್ ಹತ್ತಿ ಆರ್​ಸಿಬಿ ಅಭಿಮಾನಿಗಳ ಹುಚ್ಚಾಟ
ವಿಧಾನಸೌಧದ ಗೇಟ್ ಹತ್ತಿ ಆರ್​ಸಿಬಿ ಅಭಿಮಾನಿಗಳ ಹುಚ್ಚಾಟ