
ಬೆಂಗಳೂರು, ಮೇ 26: ಸಾರ್ವಜನಿಕರಿಗೆ ಇನ್ನು ಮುಂದೆ ತುರ್ತು ಆರೋಗ್ಯ ಸೇವೆಗಳು ಅತ್ಯಂತ ಸುಲಭವಾಗಿ ಮತ್ತು ತ್ವರಿತವಾಗಿ ಲಭ್ಯವಾಗಲಿವೆ. ಆ್ಯಂಬುಲೆನ್ಸ್ (Ambulance) ಸಿಗದೆ ರೋಗಿಗಳು ಪರದಾಡುವ ಸ್ಥಿತಿಗೆ ಮುಕ್ತಿಹಾಡಲು ಮುಂದಾಗಿರುವ ಕರ್ನಾಟಕ ಸರ್ಕಾರ, 108 ಆರೋಗ್ಯ ಕವಚ ಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿದೆ. ಬೆಂಗಳೂರಿನ (Bengaluru) ಬಸವೇಶ್ವರ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ, ದೇಶದಲ್ಲೇ ಪ್ರಥಮ ಮಾದರಿಯ ‘ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ರೂಂ’ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 25ರ ಸೋಮವಾರದಂದು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು. ‘ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ’ ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭವಾಗಿರುವ ಈ ವ್ಯವಸ್ಥೆಯು ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಿದೆ.
ಈ ನೂತನ ಕಮಾಂಡ್ ಸೆಂಟರ್ ಸಾರ್ವಜನಿಕರತುರ್ತು ಅಗತ್ಯಗಳಿಗೆ ಒಂದೇ ಕಂಟ್ರೋಲ್ ರೂಂ ಮೂಲಕ ತಕ್ಷಣ ಸ್ಪಂದಿಸಲಿದೆ. ಗಂಭೀರ ಹಾಗೂ ಸಾಮಾನ್ಯ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಲು ಅಡ್ವಾನ್ಸ್ಡ್ ಲೈಫ್ ಸಪೋರ್ಟ್ (ALS) ಮತ್ತು ಬೇಸಿಕ್ ಲೈಫ್ ಸಪೋರ್ಟ್ (BLS) ಆ್ಯಂಬುಲೆನ್ಸ್ ಕಾರ್ಯಾಚರಣೆಯನ್ನು ಇದು ನಿಯಂತ್ರಿಸಲಿದೆ. ಅಪಘಾತದ ಪ್ರಕರಣಗಳು, ಗರ್ಭಿಣಿಯರ ಆರೈಕೆ ಮತ್ತು ತೀವ್ರ ನಿಗಾ ಅಗತ್ಯವಿರುವ ರೋಗಿಗಳನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಉನ್ನತ ಆರೋಗ್ಯ ಸಂಸ್ಥೆಗೆ ಸುರಕ್ಷಿತವಾಗಿ ರವಾನಿಸಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ.
ದೇಶದ ಮೊದಲ ಸರ್ಕಾರಿ ಸ್ವಾಮ್ಯದ ಅತ್ಯಾಧುನಿಕ ಮಾದರಿಯ ಸಮಗ್ರ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಲೋಕಾರ್ಪಣೆಗೊಳಿಸಿದ ಕ್ಷಣ pic.twitter.com/1HIBxmIwuS
— Siddaramaiah (@siddaramaiah) May 25, 2026
ಇದನ್ನೂ ಓದಿ: ನಮ್ಮ ಮೆಟ್ರೋ ಬ್ಲೂ ಲೈನ್ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ನೀಡಲು ಪ್ಲಾನ್!
ಈ ಹಿಂದೆ ತಾಂತ್ರಿಕ ಅಡಚಣೆಗಳಿಂದಾಗಿ 108 ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಇದನ್ನು ಸುಧಾರಿಸುವಂತೆ ಸಿಎಂ ನೀಡಿದ್ದ ಖಡಕ್ ಸೂಚನೆಯ ಮೇರೆಗೆ ಆರೋಗ್ಯ ಇಲಾಖೆ ಸ್ವತಃ ಜವಾಬ್ದಾರಿ ಹೊತ್ತು ಈ ಹೈಟೆಕ್ ಕೇಂದ್ರವನ್ನು ಸಿದ್ಧಪಡಿಸಿದೆ. ಅತ್ಯಾಧುನಿಕ ಜಿಪಿಎಸ್ ಮತ್ತು ಡಿಜಿಟಲ್ ನೆಟ್ವರ್ಕ್ ಹೊಂದಿರುವ ಈ ಹೊಸ ಕಂಟ್ರೋಲ್ ರೂಂ, ಸಾರ್ವಜನಿಕರ ಕರೆ ಬಂದ ತಕ್ಷಣ ಹತ್ತಿರದ ಆ್ಯಂಬುಲೆನ್ಸ್ ಅನ್ನು ಸ್ಥಳಕ್ಕೆ ರವಾನಿಸುವ ಮೂಲಕ ಅಮೂಲ್ಯ ಪ್ರಾಣಗಳನ್ನು ಉಳಿಸಲು ನೆರವಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 am, Tue, 26 May 26