AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ತೊಗರಿ, ಈರುಳ್ಳಿ ಬೆಳೆಗೆ ‘ಕಸ್ಕೂಟಾ’ ಮಾರಿಯ ಕಾಟ, ಬೆಳೆ ಕಳೆದುಕೊಂಡು ಕಂಗಾಲಾದ ರೈತರು

ಅತಿವೃಷ್ಟಿಯ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದ ಕಲಬುರಗಿ ಜಿಲ್ಲೆಯ ರೈತರ ಬೆಳೆಗಳಿಗೆ ಈಗ ‘ಕಸ್ಕೂಟಾ’ ಎಂಬ ಪರಾವಲಂಬಿ ರೋಗ ಶಾಪವಾಗಿ ಪರಿಣಮಿಸಿದೆ. ಚಿಂಚೋಳಿ, ಸೇಡಂ ಮತ್ತು ಚಿತ್ತಾಪುರ ಭಾಗದ ಸಾವಿರಾರು ಹೆಕ್ಟೇರ್ ಪ್ರದೇಶದ ತೊಗರಿ ಹಾಗೂ ಈರುಳ್ಳಿ ಬೆಳೆಗಳು ಈ ರೋಗದಿಂದ ನಾಶವಾಗುತ್ತಿವೆ. ವಿದೇಶಿ ಮೂಲದ ಈ ರೋಗಕ್ಕೆ ಸೂಕ್ತ ಮದ್ದಿಲ್ಲದೆ ರೈತರು ಕಂಗಾಲಾಗಿದ್ದು, ಸರ್ಕಾರ ತಕ್ಷಣ ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಕಲಬುರಗಿ: ತೊಗರಿ, ಈರುಳ್ಳಿ ಬೆಳೆಗೆ ‘ಕಸ್ಕೂಟಾ’ ಮಾರಿಯ ಕಾಟ, ಬೆಳೆ ಕಳೆದುಕೊಂಡು ಕಂಗಾಲಾದ ರೈತರು
ರೋಗದಿಂದ ಹಾಳಾದ ಬೆಳೆಯೊಂದಿಗೆ ರೈತರುImage Credit source: tv9
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on: Mar 30, 2026 | 2:22 PM

Share

ಕಲಬುರಗಿ, ಮಾರ್ಚ್ 30: ಕಲಬುರಗಿ (Kalaburagi) ಜಿಲ್ಲೆಯಲ್ಲಿ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ್ದ ರೈತರು ಹಿಂಗಾರು ಹಾಗೂ ಬೇಸಿಗೆ ಬೆಳೆಗಳ ಮೂಲಕ ಬದುಕು ಕಟ್ಟಿಕೊಳ್ಳಬೇಕೆಂದು ನಿರೀಕ್ಷೆ ಇಟ್ಟಿದ್ದರು. ಆದರೆ ಇದೀಗ ‘ಕಸ್ಕೂಟಾ’ ಎಂಬ ರೋಗದಿಂದ ಬೆಳೆಗಳು ನಾಶವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಸಮಸ್ಯೆ ಗಂಭೀರವಾಗಿ ಕಾಣಿಸಿಕೊಂಡಿದೆ. ರೈತರು ತಮ್ಮ ಜಮೀನಿನಲ್ಲಿ ಒಣಗಿ ಹೋಗಿರುವ ತೊಗರಿ ಬೆಳೆಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತೊಗರಿ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳಿಗೆ ಕಸ್ಕೂಟಾ ಎಂಬ ರೋಗ ಆವರಿಸಿ ಬೆಳೆಗಳನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದೆ ಎಂದು ರೈತರು ತಿಳಿಸಿದ್ದಾರೆ.

ಈ ಭಾಗದ ರೈತರು ಈ ಬಾರಿ ಅತಿಯಾದ ಮಳೆಯಿಂದ ಮುಂಗಾರು ಬೆಳೆಗಳನ್ನು ಕಳೆದುಕೊಂಡಿದ್ದರು. ಸಾಲ ಮಾಡಿ ಬೆಳೆದ ಬೆಳೆ ಹಾಳಾದ ಕಾರಣ, ಸಾಲ ತೀರಿಸಲು ಹಾಗೂ ಕುಟುಂಬದ ಜೀವನ ಸಾಗಿಸಲು ಹಿಂಗಾರು ಮತ್ತು ಬೇಸಿಗೆ ಬೆಳೆಗಳ ಮೇಲೆ ನಿರೀಕ್ಷೆ ಇಟ್ಟಿದ್ದರು. ಆದರೆ ಈಗ ಬೆಳೆಗಳು ಕೈಗೆ ಬರುತ್ತವೆ ಎನ್ನುವಷ್ಟರಲ್ಲಿ ಕಸ್ಕೂಟಾ ರೋಗ ವ್ಯಾಪಕವಾಗಿ ಹರಡಿದ್ದು, ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ನಿಂತಲ್ಲೇ ಒಣಗಿಸುತ್ತಿದೆ.

ಸಾಲ ಮಾಡಿ ಬೆಳೆ ಬೆಳೆದ ರೈತರಿಗೆ ಈ ರೋಗ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಹಿಂಗಾರು ಹಾಗೂ ತೋಟಗಾರಿಕೆ ಬೆಳೆಗಳಿಗೂ ಹಾನಿ ಉಂಟಾಗಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಸರ್ಕಾರ ತಕ್ಷಣ ರೈತರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಇಲ್ಲವಾದರೆ ಸಾಲದ ಒತ್ತಡದಿಂದ ಬದುಕು ಸಾಗಿಸಲು ಕಷ್ಟವಾಗುತ್ತದೆ ಎಂದು ತಮ್ಮ ಅಸಹಾಯತೆಯನ್ನು ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಚಿಂಚೋಳಿ, ಚಿತ್ತಾಪುರ ಮತ್ತು ಸೇಡಂ ತಾಲೂಕುಗಳಲ್ಲಿನ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳಿಗೆ ಈ ರೋಗದಿಂದ ಹಾನಿಯಾಗಿದೆ. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೋಗದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಕೃಷಿ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಇದು ವಿದೇಶದಿಂದ ಹರಡಿರುವ ರೋಗವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಕೂಡ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ರೋಗ ತಡೆಗಟ್ಟಲು ಯಾವುದೇ ಕ್ರಿಮಿನಾಶಕ ಅಥವಾ ಔಷಧಿಯನ್ನು ಇನ್ನೂ ನೀಡಿಲ್ಲವೆಂದು ರೈತರು ದೂರಿದ್ದಾರೆ.

ಇದನ್ನೂ ಓದಿ: ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬಿಸಿಲನಾಡು ಕಲಬುರಗಿ: ಧಾರವಾಡ, ವಿಜಯಪುರದಲ್ಲಿ ಅಪಾರ ಬೆಳೆ ನಾಶ

ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವರು ಚಿಂಚೋಳಿ ಭೇಟಿ ನೀಡಿದ ವೇಳೆ ರೈತರು ತಮ್ಮ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದರು. ಆದರೂ ಮೂರು ತಾಲೂಕಿನ ರೈತರಿಗೆ ಇನ್ನೂ ಯಾವುದೇ ಸ್ಪಷ್ಟ ಪರಿಹಾರ ದೊರೆತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us