AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಲಬರ್ಗಾ ವಿವಿ ಭೂಮಿ ಮೇಲೆ ಸರ್ಕಾರದ ಕೆಂಗಣ್ಣು: 18 ಇಲಾಖೆಗಳಿಂದ 300 ಎಕರೆ ನೀಡುವಂತೆ ಮನವಿ

ಕಲ್ಯಾಣ ಕರ್ನಾಟಕದ ಉನ್ನತ ಶಿಕ್ಷಣಕ್ಕಾಗಿ ಸ್ಥಾಪಿತವಾದ ಗುಲಬರ್ಗಾ ವಿಶ್ವವಿದ್ಯಾಲಯದ 794 ಎಕರೆ ಜಮೀನು ಈಗ ವಿವಿಧ ಸರ್ಕಾರಿ ಇಲಾಖೆಗಳ ಕಣ್ಣಿಗೆ ಬಿದ್ದಿದೆ. 18 ಇಲಾಖೆಗಳು ಬಸ್ ನಿಲ್ದಾಣ, ಕ್ರಿಕೆಟ್ ಮೈದಾನ ಸೇರಿ 374 ಎಕರೆ ಜಾಗಕ್ಕೆ ಬೇಡಿಕೆ ಇಟ್ಟಿವೆ. ಆದರೆ, ವಿವಿಯ ಸಿಂಡಿಕೇಟ್ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ವಿಶ್ವವಿದ್ಯಾಲಯ ಮತ್ತು ಸರ್ಕಾರ ನಡುವೆ ಭೂ ವಿವಾದ ತೀವ್ರಗೊಂಡಿದೆ.

ಗುಲಬರ್ಗಾ ವಿವಿ ಭೂಮಿ ಮೇಲೆ ಸರ್ಕಾರದ ಕೆಂಗಣ್ಣು: 18 ಇಲಾಖೆಗಳಿಂದ 300 ಎಕರೆ ನೀಡುವಂತೆ ಮನವಿ
Gulbarga UniversityImage Credit source: google
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on: Mar 10, 2026 | 4:47 PM

Share

ಕಲಬುರಗಿ, ಮಾರ್ಚ್​ 10: ಕಲ್ಯಾಣ‌ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಲಿ ಅಂತ ನೂರಾರು ಎಕರೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ (Gulbarga University) ಸ್ಥಾಪನೆಯಾಗಿದೆ. ಆದರೆ ಇದೀಗ ಅದೇ ನೂರಾರು ಎಕರೆ ಜಮೀನಿನ ಮೇಲೆ ವಿವಿಧ ಸರ್ಕಾರಿ ಇಲಾಖೆಗಳ ಕಣ್ಣು ಬಿದಿದೆ‌. ವಿವಿಯ ಜಾಗದಲ್ಲೇ ಬಸ್ ನಿಲ್ದಾಣ, ಕ್ರಿಕೆಟ್ ಕ್ರಿಡಾಂಗಣ ಸೇರಿದಂತೆ ಹಲವು ಇಲಾಖೆಗಳು ಜಮೀನು ಕೇಳಿವೆ. ಇದು ವಿವಿ ಹಾಗೂ ರಾಜ್ಯ ಸರ್ಕಾರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ವಿಶ್ವವಿದ್ಯಾಲಯದ ಭೂಮಿ ಮೇಲೆ ಸರ್ಕಾರದ ಕೆಂಗಣ್ಣು

ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಬೇಕು ಅಂತಾ, ರಾಜ್ಯ ಸರ್ಕಾರ 1989ರಲ್ಲಿ ಕಲಬುರಗಿ ಹೊರವಲಯದ ಸೇಡಂ ರಸ್ತೆಯಲ್ಲಿ 794 ಎಕರೆ ಪ್ರದೇಶದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಆರಂಭಿಸಿತ್ತು. ಏಷ್ಯಾದಲ್ಲೇ ಅತೀ ದೊಡ್ಡ ಕ್ಯಾಂಪಸ್ ಎನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅದಾದ ಬಳಿಕ ಅದೇ ವಿಶ್ವವಿದ್ಯಾಲಯದ ಭೂಮಿ ಮೇಲೆ ಸರ್ಕಾರದ ಕೆಂಗಣ್ಣು ಬಿಳುತ್ತಲೇ ಇದೆ.‌ ಈಗಾಗಲೇ ಇಎಸ್​ಐ ಆಸ್ಪತ್ರೆಗಾಗಿ 150 ಎಕರೆ ಜಮೀನನ್ನ ಸರ್ಕಾರ ತೆಗೆದುಕೊಂಡಿದೆ. ಅದಾದ ಬಳಿಕ ಇದೀಗ ಮತ್ತೆ ವಿವಿಧ ಇಲಾಖೆಗಳ ಕಣ್ಣು ಬಿದ್ದಿದೆ.

ಇದನ್ನೂ ಓದಿ: Anganwadi Recruitment 2026: ಕಲಬುರಗಿ ಅಂಗನವಾಡಿ ನೇಮಕಾತಿ; 412 ಹುದ್ದೆಗಳಿಗೆ ಅರ್ಜಿ ಆಹ್ವಾನ, 10th ಪಾಸಾಗಿದ್ರೆ ಸಾಕು!

ಇನ್ನುಳಿದ ಜಮೀನಿನ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ, ಕೆಕೆಆರ್​ಡಿ ಕೇಂದ್ರ ಕಚೇರಿ ಸ್ಥಾಪನೆಗಾಗಿ 20 ಎಕರೆ, ಏಮ್ಸ್ ಆಸ್ಪತ್ರೆಗೆ 150 ಎಕರೆ ಅಗ್ನಿಶಾಮಕ ಹಾಗೂ ಸ್ಯಾಟ್ ಲೈಟ್ ಬಸ್ ನಿಲ್ದಾಣಕ್ಕಾಗಿ 8 ಎಕರೆ ಜಮೀನು ನೀಡುವಂತೆ ಒಟ್ಟು 18 ಸರ್ಕಾರಿ ಇಲಾಖೆಗಳು 374 ಎಕರೆ ಜಮೀನು ನೀಡುವಂತೆ ಗುಲಬರ್ಗಾ ವಿವಿಗೆ ಆಯಾ ಇಲಾಖೆ ಮುಖ್ಯಸ್ಥರು ಪತ್ರ ಬರೆದಿದ್ದಾರೆ. ಇದು ಇದೀಗ ವಿಶ್ವವಿದ್ಯಾಲಯಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಏಕೆಂದರೆ ಈಗಾಗಲೇ ಶೈಕ್ಷಣಿಕವಾಗಿ ಬೀದರ್ ಹಾಗೂ ರಾಯಚೂರು ಹೊಸ ವಿಶ್ವವಿದ್ಯಾಲಯವಾಗಿದ್ದು, ವಿದ್ಯಾರ್ಥಿಗಳಿಲ್ಲದೇ ಬಣಗುಡುತ್ತಿದೆ. ಹೀಗಿರುವಾಗ ವಿಶಾಲವಾದ ಕ್ಯಾಂಪಸ್ ಮೇಲೂ ಕಣ್ಣು ಬಿದ್ದಿರುವುದು ವಿಶ್ವವಿದ್ಯಾಲಯವನ್ನ ಚಿಂತೆಗಿಡು ಮಾಡಿದೆ.

ಇನ್ನು 18 ಇಲಾಖೆಗಳು ವಿವಿಯ 374 ಎಕರೆ ಜಮೀನಿಗಾಗಿ ಪ್ರಸ್ತಾವನ್ನೆಯನ್ನು ಈ ಹಿಂದೆ 2024ರ ಜೂನ್​ನಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿಸಲಾಗಿದೆ. ವಿವಿ ಜಮೀನಿನನ್ನ ಬೇರೆ ಇಲಾಖೆಗಳಿಗೆ ಕೊಡುವುದರಿಂದ ವಿವಿಯಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆಯಾಗುತ್ತದೆ ಹಾಗೂ ಈ ಇಲಾಖೆಗಳಿಗೆ ಜಮೀನು ಕೊಡುವುದರಿಂದ ವಿವಿ ಕ್ಯಾಂಪಸ್​ನ ಇಡೀ ಪರಿಸರ ಸಹ ಹಾಳಾಗುವುದರಿಂದ ಒಂದು ಎಕರೆ ಜಮೀನು ಕೊಡದಿರಲು ನಿರ್ಧರಿಸಲಾಗಿತ್ತು.

ಇನ್ನು ಸಿಂಡಿಕೇಟ್​ ಸಭೆಯ ನಿರ್ಣಯದ ಬಳಿಕ ಸಹ ಸಚಿವರ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ. ಹೀಗಾಗಿ ಇತ್ತೀಚೆಗೆ ವಿವಿ ಸಿಂಡಿಕೇಟ್ ಸಭೆ ನಡೆಸಿದ್ದರು ಸಹ ಜಮೀನು ನೀಡುವ ಬಗ್ಗೆ ಯಾವುದೇ ನಿರ್ಧಾರ ಕೈಗೋಳ್ಳದೇ ಸಭೆ ಮುಕ್ತಾಯಗೊಳಿಸಿದ್ದಾರೆ. ಸರ್ಕಾರಿ ಕಚೇರಿಗಳು ಬೇಕಾದರೆ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿ. ಇಲ್ಲ ರೈತರಿಂದ ಜಮೀನು ಖರೀದಿಸಿ ಸರ್ಕಾರಿ ಕಚೇರಿಗಳು ಸ್ಥಾಪಿಸಲಿ. ವಿಶ್ವವಿದ್ಯಾಲಯಲಯದ ಜಮೀನು ಏಕೆ ಬೇಕು ಅಂತ ಹಲವು ಶಿಕ್ಷಣ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಿಷ್ಟು 

ಈ ಮಧ್ಯೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿವಿ ಜಮೀನು ಬೇರೆ ಉದ್ದೇಶಕ್ಕೆ ಬಳುಸುತ್ತಿಲ್ಲ. ಸಾರ್ವಜನಿಕರು ಹಾಗೂ ಬೇರೆ ರೀತಿಯ ಶೈಕ್ಷಣಿಕ ಚಟವಟಿಕೆಗೆ ಕೇಳಿದರೆ ತಪ್ಪೇನು ಎನ್ನುತ್ತಿದ್ದಾರೆ.

ಇದನ್ನೂ ಓದಿ: ಕಲಬರ್ಗಿಯ ಫಿಸಿಯೋಥೆರಪಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಮೌಲ್ಯ, ಮಾನವೀಯ ಮೌಲ್ಯ ಬೋಧಿಸಿದ ಮುನಾವರ್ ಜಮಾ

ಇನ್ನು ದುರಂತ ಅಂದರೆ ವಿಶ್ವವಿದ್ಯಾಲಯಕ್ಕೆ ಜಮೀನು ನೀಡಿದ ರೈತರೇ ಹೆಚ್ಷುವರಿ ಪರಿಹಾರಕ್ಕಾಗಿ ನ್ಯಾಯಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಅದೇ ಜಮೀನು ಪಡೆಯಲು ಸರ್ಕಾರದ ವಿವಿಧ ಇಲಾಖೆಗಳು ನಾ ಮುಂದು, ತಾ ಮುಂದು ಅಂತಾ ರೇಸಿಗೆ ಬಿದಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ವಿವಿ ಸಿಂಡಿಕೇಟ್ ಮುಂದಿನ ದಿನಗಳಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಕಾದುನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us