ಕಲಬುರಗಿ: ಲಂಚ ಪಡೆಯುತ್ತಿದ್ದಾಗ ರೆಡ್ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಎಎಸ್ಐ, ಕಾನ್ಸ್ಟೇಬಲ್
ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯ ಎಎಸ್ಐ ಶಿವಶರಣಪ್ಪ ಮತ್ತು ಕಾನ್ಸ್ಟೆಬಲ್ ಜ್ಯೋತಿ ಎಂಬುವವರು ಲಂಚ ಪಡೆಯುತ್ತಿದ್ದಾಗ ರೆಡ್ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳು ಪೋಕ್ಸೋ ಸಂತ್ರಸ್ತೆಯ ತಾಯಿಯಿಂದ 10 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.

ಕಲಬುರಗಿ, ಜೂನ್ 8: ಕಲಬುರಗಿ ನಗರದಲ್ಲಿ ಅತ್ಯಂತ ಅಮಾನವೀಯ ಮತ್ತು ಲಜ್ಜೆಗೆಟ್ಟ ಭ್ರಷ್ಟಾಚಾರದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪೋಕ್ಸೋ (POCSO) ಪ್ರಕರಣದ ಸಂತ್ರಸ್ತೆಯ ತಾಯಿಯಿಂದಲೇ ಲಂಚ ಸ್ವೀಕರಿಸುತ್ತಿದ್ದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (ASI) ಹಾಗೂ ಮಹಿಳಾ ಕಾನ್ಸ್ಟೆಬಲ್ ಅವರನ್ನು ಲೋಕಾಯುಕ್ತ ಪೊಲೀಸರು ಭಾನುವಾರ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಗಳು ಸಂತ್ರಸ್ತೆಯ ತಾಯಿಗೆ ಕಾನೂನು ನೆರವು ನೀಡುವ ನೆಪದಲ್ಲಿ ಲಂಚ ಪಡೆಯುತ್ತಿದ್ದರು.
ಮುಖ್ಯಾಂಶಗಳು
- 10 ಸಾವಿರ ರೂ. ಲಂಚ ಸ್ವೀಕರಿಸುವಾಗ ರೆಡ್ಹ್ಯಾಂಡ್ ಆಗಿ ಅರೆಸ್ಟ್.
- ಕಾನೂನು ನೆರವು ನೀಡುವ ನೆಪದಲ್ಲಿ ಸಂತ್ರಸ್ತೆಯ ತಾಯಿಗೆ ವಂಚನೆ.
- ತಪ್ಪಿಸಿಕೊಳ್ಳಲು ಯತ್ನಿಸಿದ ಎಎಸ್ಐ ಕೂಡ ಬಂಧನ.
ಕಾನೂನು ನೆರವು ನೀಡುವ ನೆಪದಲ್ಲಿ ದೋಚುತ್ತಿದ್ದ ಪೊಲೀಸರು
ಬಂಧಿತ ಆರೋಪಿಗಳು ಪೋಕ್ಸೋ ಸಂತ್ರಸ್ತೆಯ ತಾಯಿಗೆ ನ್ಯಾಯಾಲಯದಲ್ಲಿ ಕಾನೂನು ನೆರವು ಮತ್ತು ರಕ್ಷಣೆ ಒದಗಿಸುವ ನೆಪವೊಡ್ಡಿ 10,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅಷ್ಟೇ ಅಲ್ಲದೆ, ಈ ಮುಂಚೆಯೇ ಸರ್ಕಾರಿ ಅಭಿಯೋಜಕರ (Public Prosecutor) ಶುಲ್ಕ ಎಂದು ಹೇಳಿ ಸಂತ್ರಸ್ತೆಯ ತಾಯಿಯಿಂದ 1,000 ರೂಪಾಯಿ ಹಣವನ್ನು ಪಡೆದಿದ್ದರು ಎಂಬ ಆರೋಪವಿದೆ. ಪೊಲೀಸರ ಈ ಕಿರುಕುಳದಿಂದ ಬೇಸತ್ತ ಮಹಿಳೆ ತಕ್ಷಣವೇ ಕಲಬುರಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಸಿಕ್ಕಿಬಿದ್ದ ಮಹಿಳಾ ಸಿಬ್ಬಂದಿ, ತಪ್ಪಿಸಿ ಓಡಲೆತ್ನಿಸಿದ ಎಎಸ್ಐ ಸೆರೆ
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಅರುಣ್ಕುಮಾರ್ ಮುರಗುಂಡಿ ಹಾಗೂ ಸಿಬ್ಬಂದಿ ವರ್ಗದವರು ಸ್ಟೇಷನ್ ಬಜಾರ್ ಠಾಣೆಯ ಬಳಿ ತೆರಳಿದ್ದರು. ಸಂತ್ರಸ್ತೆಯ ತಾಯಿಯಿಂದ ಮಹಿಳಾ ಕಾನ್ಸ್ಟೆಬಲ್ ಜ್ಯೋತಿ 10,000 ರೂಪಾಯಿ ಲಂಚದ ಹಣವನ್ನು ಪಡೆಯುತ್ತಿದ್ದಂತೆಯೇ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಆಕೆಯನ್ನು (ರೆಡ್ಹ್ಯಾಂಡೆಡ್ ಆಗಿ ವಶಕ್ಕೆ ಪಡೆದಿದ್ದಾರೆ. ಇತ್ತ ಲೋಕಾಯುಕ್ತ ದಾಳಿಯ ಸುಳಿವು ಸಿಗುತ್ತಿದ್ದಂತೆಯೇ ಎಎಸ್ಐ ಶಿವಶರಣಪ್ಪ ಠಾಣೆಯಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಲೋಕಾಯುಕ್ತ ಜಾಗೃತ ದಳವು ಆತನನ್ನು ಬೆನ್ನಟ್ಟಿ ಆಳಂದ ತಾಲೂಕಿನ ಕಡಗಂಚಿ ಎಂಬಲ್ಲಿ ಹೆಡೆಮುರಿ ಕಟ್ಟಿದೆ.
ಇದನ್ನೂ ಓದಿ: ಪಾಕ್ ಉಗ್ರನ ಜೊತೆ ರಾಜ್ಯದ ಇಬ್ಬರ ಲಿಂಕ್: ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲು!
ಲೋಕಾಯುಕ್ತ ಎಸ್ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ. ಬಂಧಿತ ಇಬ್ಬರು ಭ್ರಷ್ಟ ಪೊಲೀಸ್ ಸಿಬ್ಬಂದಿ ವಿರುದ್ಧ ಮೊಕದ್ದಮೆ ಹೂಡಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




