ಟ್ರಾನ್ಸ್ಫಾರ್ಮರ್ ಖರೀದಿಗೂ ಕೇರಳಕ್ಕೆ ಮಣೆ: ಸಚಿವ ಜಾರ್ಜ್ ಕೊಟ್ಟ ಸಮಜಾಯಿಶಿ ಏನು ಗೊತ್ತೇ?
ಕೇರಳದ ವಯನಾಡಿನಲ್ಲಿ ಆನೆ ದಾಳಿಯಿಂದ ವ್ಯಕ್ತಿ ಮೃತಪಟ್ಟಾಗ ಹಣಕಾಸು ಪರಿಹಾರ ಘೋಷಿಸಿದ್ದು ಹಾಗೂ ಕೇರಳ ಸಿಎಂ ಮಾಡಿದ ಒಂದೇ ಎಕ್ಸ್ ಸಂದೇಶಕ್ಕೆ ಮಣಿದು ಕೋಗಿಲು ಲೇಔಟ್ ನಿರಾಶ್ರಿತರಿಗೆ ಮನೆ ಕೊಡಲು ಸಮ್ಮತಿಸಿದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದೀಗ ರಾಜ್ಯಕ್ಕೆ ಅಗತ್ಯವಿರುವ ಟ್ರಾನ್ಸ್ಫಾರ್ಮರ್ ಖರೀದಿಗೂ ಕೇರಳಕ್ಕೆ ಆರ್ಡರ್ ನೀಡಿರುವ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಇದಕ್ಕೆ ಸಚಿವ ಕೆಜೆ ಜಾರ್ಜ ಸ್ಪಷ್ಟನೆ ಕೊಟ್ಟಿದ್ದಾರೆ.

ಬೆಂಗಳೂರು, ಮಾರ್ಚ್ 9: ರಾಜ್ಯಕ್ಕೆ ಬೇಕಿರುವ ಟ್ರಾನ್ಸ್ಫಾರ್ಮರ್ (Transformers) ಖರೀದಿಗೆ ನೆರೆಯ ಕೇರಳಕ್ಕೆ (Kerala) ಆರ್ಡರ್ ಕೊಟ್ಟ ಬಗ್ಗೆ ವಿಧಾನ ಪರಿಷತ್ನಲ್ಲಿ ಚರ್ಚೆ ನಡೆಯಿತು. ಕೇರಳದ ಸಂಸ್ಥೆಯಿಂದ ಟ್ರಾನ್ಸ್ಫಾರ್ಮರ್ ಖರೀದಿ ಮಾಡಿರುವ ಕುರಿತು ಪರಿಷತ್ ಸದಸ್ಯ ರವಿ ಕುಮಾರ್ ಪ್ರಶ್ನೆ ಎತ್ತಿದರು. ಕರ್ನಾಟಕದ (Karnataka) ಸಂಸ್ಥೆಗಳನ್ನು ಬಿಟ್ಟು ಕೇರಳ ರಾಜ್ಯದ ಸಂಸ್ಥೆಗಳಿಗೆ ಅವಕಾಶ ನೀಡಿರುವುದಕ್ಕೆ ಕಾರಣವೇನು ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಇಂಧನ ಸಚಿವ ಕೆ.ಜೆ ಜಾರ್ಜ್, ಕಡಿಮೆ ದರದಲ್ಲಿ ಟ್ರಾನ್ಸ್ಫಾರ್ಮರ್ ಲಭ್ಯವಾಗುತ್ತಿರುವುದರಿಂದ ಕೇರಳದ ಸಂಸ್ಥೆಯಿಂದ ಖರೀದಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಇದು ಪ್ರಸ್ತುತ ಸರ್ಕಾರದಲ್ಲೇ ನಡೆದಿರುವ ಕ್ರಮವಲ್ಲ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಇದೇ ರೀತಿಯ ಖರೀದಿಗಳು ನಡೆದಿವೆ ಎಂದು ಜಾರ್ಜ್ ಹೇಳಿದರು.
ಟೆಂಡರ್ ಪ್ರಕ್ರಿಯೆಯ ಮೂಲಕವೇ ಟ್ರಾನ್ಸ್ಫಾರ್ಮರ್ಗಳನ್ನು ಖರೀದಿ ಮಾಡಲಾಗುತ್ತದೆ. ಕರ್ನಾಟಕದ ಸಂಸ್ಥೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಸರಬರಾಜು ಲಭ್ಯವಿಲ್ಲದ ಕಾರಣ ಹೆಚ್ಚುವರಿ ಟ್ರಾನ್ಸ್ಫಾರ್ಮರ್ಗಳನ್ನು ಕೇರಳದಿಂದ ಖರೀದಿ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಸಚಿವರು ವಿವರಿಸಿದರು.
ಬೇಡಿಕೆಗೆ ತಕ್ಕಷ್ಟು ಸಿಗುತ್ತಿಲ್ಲ ಟ್ರಾನ್ಸ್ಫಾರ್ಮರ್
ಕವಿಕಾ (ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ) ಸಂಸ್ಥೆಯಲ್ಲಿ ಪ್ರಸ್ತುತ ಸುಮಾರು 15 ಸಾವಿರ ಟ್ರಾನ್ಸ್ಫಾರ್ಮರ್ ಉತ್ಪಾದನೆ ನಡೆಯುತ್ತಿದ್ದು, ಅದನ್ನು 30 ಸಾವಿರಕ್ಕೆ ಹೆಚ್ಚಿಸಲಾಗಿದೆ. ಆದರೆ ರಾಜ್ಯದ ಅವಶ್ಯಕತೆ ಸುಮಾರು 50 ಸಾವಿರ ಟ್ರಾನ್ಸ್ಫಾರ್ಮರ್ಗಳಷ್ಟಿದೆ. ಆದ್ದರಿಂದ ಹೆಚ್ಚುವರಿ ಅಗತ್ಯವನ್ನು ಪೂರೈಸಲು ಕಡಿಮೆ ದರದಲ್ಲಿ ಕೇರಳದ ಸಂಸ್ಥೆಯಿಂದ ಟ್ರಾನ್ಸ್ಫಾರ್ಮರ್ಗಳನ್ನು ಖರೀದಿ ಮಾಡಲಾಗಿದೆ ಎಂದು ಜಾರ್ಜ್ ಮಾಹಿತಿ ನೀಡಿದರು.
ಇದೇ ವೇಳೆ, ಹಣಕಾಸು ಇಲಾಖೆಯ ಅನುಮತಿ ದೊರೆತರೆ ಮಾತ್ರ 4G ವಿನಾಯಿತಿಯಡಿ ಖರೀದಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಕೂಡ ಸಚಿವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಕೋಗಿಲು ನಿವಾಸಿಗಳು ನಿರಾಶ್ರಿತರಲ್ಲ, ಲಕ್ಷಾಧಿಪತಿಗಳು! ಆರೋಪಿಗಳ ಖಾತೆಯಲ್ಲಿ ನಡೆದಿತ್ತು ಕೋಟಿ-ಕೋಟಿ ವ್ಯವಹಾರ
ಈ ಹಿಂದೆ, ವ್ಯಕ್ತಿಯೊಬ್ಬರು ಕೇರಳದ ವಯನಾಡಿನಲ್ಲಿ ಆನೆ ದಾಳಿಯಿಂದ ಮೃತಪಟ್ಟಾಗ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಣಕಾಸು ಪರಿಹಾರ ಘೋಷಿಸಿದ್ದು ವಿವಾದಕ್ಕೆ ಗುರಿಯಾಗಿತ್ತು. ನಂತರ ಕೋಗಿಲು ನಿರಾಶ್ರಿತರ ವಿಚಾರವಾಗಿ ಕೇರಳ ಸಿಎಂ ಎಕ್ಸ್ ಸಂದೇಶ ಪ್ರಕಟಿಸುತ್ತಿದ್ದಂತೆಯೇ ಕರ್ನಾಟಕ ಸರ್ಕಾರ ವಸತಿ ನೀಡುವುದಾಗಿ ಘೋಷಿಸಿದ್ದೂ ಸಹ ಚರ್ಚೆಗೆ ಗ್ರಾಸವಾಗಿತ್ತು. ಹೈಕಮಾಂಡ್ ಅನ್ನು ಮೆಚ್ಚಿಸಲು ಕರ್ನಾಟಕ ಕಾಂಗ್ರೆಸ್ ಹೀಗೆ ಮಾಡುತ್ತಿದೆ ಎಂದು ವಿಪಕ್ಷ ಬಿಜೆಪಿ ಟೀಕಿಸಿತ್ತು. ಇದೀಗ ಟ್ರಾನ್ಸ್ಫಾರ್ಮರ್ ಖರೀದಿ ವಿಚಾರವಾಗಿ ಮತ್ತೆ ವಿವಾದ ಸೃಷ್ಟಿಯಾಗಿದೆ.