ಕರ್ನಾಟಕ ರೈತರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕೇಂದ್ರ ಸಚಿವರನ್ನ ಭೇಟಿ ಮಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ
ರೈತರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಕೇಂದ್ರ ಸಚಿವರನ್ನ ಭೇಟಿ ಮನವಿ ಸಲ್ಲಿಸಿದೆ, ರೈತ ಸಂಘಟನೆಗಳ ಬೇಡಿಕೆಗಳು ಏನು ಎನ್ನುವುದು ಈ ಕೆಳಗಿನಂತಿವೆ.

ನವದೆಹಲಿ: ಕರ್ನಾಟಕದ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಹಾಗೂ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ (Karnataka farmers organizations), ರಾಜ್ಯ ಕಬ್ಬು ಬೆಳೆಗಾರರ ಸಂಘ ಇಂದು(ಫೆಬ್ರವರಿ 03) ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ನವದೆಹಲಿಯ ಸಂಸತ್ ಭವನದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (pralhad joshi) ಮತ್ತು ಶಾಸ್ತ್ರಿಭವನದ ಕಾರ್ಯಾಲಯದಲ್ಲಿ ಕೇಂದ್ರ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ (bhagwanth khuba) ಅವರನ್ನು ಭೇಟಿ ಮಾಡಿದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಮತ್ತು ನಿಯೋಗ ಈ ಕುರಿತು ಮನವಿಯನ್ನು ಸಲ್ಲಿಸಿದೆ.
ಕೇಂದ್ರ ಸರ್ಕಾರ ಆರಂಭಿಸಿರುವ, ಕೊರೊನಾ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿರುವ ಎಲ್ಲ ರೈತ ಉತ್ಪಾದಕ ಸಂಸ್ಥೆಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ಹೊಸ ಸಾಲ ಎಂದು ಪರಿಗಣಿಸಿ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ಮುನ್ನಡೆಸಲು ಪುನಶ್ಚೇತನ ಪ್ಯಾಕೇಜ್ ನೀಡಿ ಪ್ರೋತ್ಸಾಹಿಸಬೇಕು ಎಂದು ರೈತ ಸಂಘಗಳ ಒಕ್ಕೂಟ ಆಗ್ರಹಿಸಿದೆ. ನಿಯೋಗದಲ್ಲಿ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಎತ್ತಿನಗುಡ್ಡ, ಟಿ ನರಸೀಪುರ ತಾಲೂಕು ಉಪಾಧ್ಯಕ್ಷ ನಂಜುಂಡಸ್ವಾಮಿ ಕೂಡ ಇದ್ದರು.
ರೈತ ಸಂಘಟನೆಗಳ ಬೇಡಿಕೆಗಳು ಇಂತಿವೆ
- ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆಗೆ ಶಾಸನಾತ್ಮಕ ಖಾತ್ರಿಯನ್ನು ಒದಗಿಸುವ ಪ್ರಧಾನಮಂತ್ರಿಯವರು ಭರವಸೆ ಕೂಡಲೇ ಈಡೇರಿಸಬೇಕು.
- ಕನಿಷ್ಟ ಬೆಂಬಲ ಬೆಲೆಯಲ್ಲಿ ಖರೀದಿಸುವ ಭತ್ತ, ರಾಗಿ, ಜೋಳ, ತೊಗರಿ ಮತ್ತಿತರ ಧಾನ್ಯಗಳ ಖರೀದಿ ಪ್ರಮಾಣ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು.
- ಕೃಷಿ ಉತ್ಪನ್ನಗಳ ಮೇಲೆ, ರಸಗೊಬ್ಬರ, ಕೀಟನಾಶಕ, ಹನಿ ನೀರಾವರಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್ಟಿ ರದ್ದುಗೊಳಿಸಬೇಕು.
- ಪ್ರಸಕ್ತ ರೈತರ ಸಾಲ ನೀತಿ ಪರಿಷ್ಕರಿಸಿ ಕೃಷಿ ಉತ್ಪಾದನಾ ಸಾಲ ಬಡ್ಡಿ ರಹಿತವಾಗಿ ಒದಗಿಸಬೇಕು. ಕೃಷಿ ಭೂಮಿ ಮೌಲ್ಯದ ಶೇಕಡ 75ರಷ್ಟು ಸಾಲ ನೀಡುವಂತೆ ನೀತಿ ರೂಪಿಸಿ, ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಮಾನದಂಡ ಪರಿಗಣನೆ ಕೈಬಿಡಬೇಕು.
- ಕಬ್ಬಿನ ಎಫ್.ಆರ್.ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು, ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕನಿಷ್ಠ 9:5 ಕ್ಕೆ ಇಳಿಸಬೇಕು.
- ಕಬ್ಬು ಉತ್ಪಾದನಾ ವೆಚ್ಚ ಏರಿಕೆಯಾಗಿರುವ ಕಾರಣ ಎಫ್ಆರ್ಪಿ ದರವನ್ನು 2023-24ನೇ ಸಾಲಿಗೆ ಟನ್ಗೆ 3,500 ರೂಪಾಯಿ ನಿಗದಿ ಮಾಡಬೇಕು.
- ಆಕಸ್ಮಿಕ ಬೆಂಕಿಗೆ ಸುಟ್ಟು ಹೋದ ಕಬ್ಬಿನಿಂದ ಸಕ್ಕರೆ ಕಾರ್ಖಾನೆಗಳು ಶ 25% ರಷ್ಟು ಹಣ ಕಡಿತ ಮಾಡುವುದನ್ನು ನಿಲ್ಲಿಸಬೇಕು.
- ಕಬ್ಬಿನಿಂದ ಎಥನಾಲ್ ನೀತಿ ಬದಲಾಯಿಸಿ, ಮುಕ್ತ ಅವಕಾಶ ಕಲ್ಪಿಸಬೇಕು. ರೈತರ ಬೆಲ್ಲದ ಗಾಣದಲ್ಲಿ ಎಥನಾಲ್ ಉತ್ಪಾದನೆಗೆ ಅವಕಾಶ ಕಲ್ಪಿಸಬೇಕು.
- ಎಲ್ಲ ಕೃಷಿ ಉತ್ಪನ್ನ ಬೆಳೆಗಳಿಗೂ ಫಸಲ್ ಬಿಮಾ ಬೆಳೆ ವಿಮೆ ಯೋಜನೆ ಮಾರಿ ತರಬೇಕು ಈ ಯೋಜನೆಗೆ ಕೆಲವು ತಿದ್ದುಪಡಿಗಳು ಆಗಬೇಕು.
- ಅತಿವೃಷ್ಟಿ-ಅನಾವೃಷ್ಟಿ, ಆಕಸ್ಮಿಕ ಬೆಂಕಿ, ಪ್ರವಾಹ ಹಾನಿ, ಬೆಳೆ ನಾಶ ಪರಿಹಾರ ಮಾನದಂಡ ವೈಜ್ಞಾನಿಕವಾಗಿ ಬದಲಾಗಬೇಕು.
- ವನ್ಯ ಮೃಗ ಸಂರಕ್ಷಣೆ, ಮಾನವ ರಕ್ಷಣಾ ಕಾಯ್ದೆ ಕಾಡು ಪಾಣಿಗಳ ಹಾವಳಿ ತಡೆ ಕಾನೂನು 1972ಕ್ಕೆ ತಿದ್ದುಪಡಿ ತರಬೇಕು.
- ಕಾಡು ಪ್ರಾಣಿಗಳ ದಾಳಿಗೆ ತುತ್ತಾದ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತ 50 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು.
- ಕೇಂದ್ರ ಸರ್ಕಾರ ಆರಂಭಿಸಿರುವ, ಕೊರೊನಾ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿರುವ ಎಲ್ಲ ರೈತ ಉತ್ಪಾದಕ ಸಂಸ್ಥೆಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ಹೊಸ ಸಾಲ ಎಂದು ಪರಿಗಣಿಸಿ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ಮುನ್ನಡೆಸಲು ಪುನಶ್ಚೇತನ ಪ್ಯಾಕೇಜ್ ನೀಡಿ ಪ್ರೋತ್ಸಾಹಿಸಬೇಕು.
