ರೈತರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ: 18 ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ನಿರ್ಧಾರ
ಕರ್ನಾಟಕ ಸರ್ಕಾರವು ರೈತರಿಗೆ 18 ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದೆ. ರಾಗಿ, ಜೋಳ, ಭತ್ತ ಮುಂತಾದ ಬೆಳೆಗಳಿಗೆ ಬೆಲೆ ಏರಿಕೆಯಾಗಿದೆ. ಸೆಪ್ಟೆಂಬರ್ನಿಂದ ನೋಂದಣಿ ಪ್ರಾರಂಭವಾಗಲಿದ್ದು, ಜನವರಿಯಿಂದ ಖರೀದಿ ಆರಂಭವಾಗಲಿದೆ. 7 ಲಕ್ಷ ರೈತರಿಂದ ಖರೀದಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಡಿಜಿಟಲ್ ಮೂಲಕ ಬೆಳೆ ಸರ್ವೆ ಮಾಡಿಸಿ ಬೆಂಬಲ ಬೆಲೆ ನೀಡಲಾಗುವುದು ಎಂದು ತಿಳಿಸಿದೆ.

ಬೆಂಗಳೂರು, ಆಗಸ್ಟ್ 08: ರಾಜ್ಯ ಸರ್ಕಾರ (Karnataka Government) ರೈತರಿಗೆ (Farmers) ಸಿಹಿ ಸುದ್ದಿ ನೀಡಿದೆ. ಕೃಷಿ ಮತ್ತು ತೋಟಗಾರಿಕೆಯ 18 ಉತ್ಪನ್ನಗಳಿಗೆ ಬೆಂಬಲ ಬೆಲೆ (Minimum Support price) ನೀಡಲು ನಿರ್ಧರಿಸಿದೆ. ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಕೃಷಿ ಮತ್ತು ತೋಟಗಾರಿಕೆಯ 18 ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ಸಂಪುಟ ಉಪ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಳೆದ ವರ್ಷ 6.11 ಲಕ್ಷ ರೈತರಿಗೆ 7,135 ಕೋಟಿ ರೂ. ಪಾವತಿ ಮಾಡಲಾಗಿದೆ. ಈ ಬಾರಿ 7 ಲಕ್ಷ ರೈತರಿಂದ ಖರೀದಿ ಮಾಡಲಿದ್ದೇವೆ ಎಂದು ಹೇಳಿದರು.
ಸೆಪ್ಟೆಂಬರ್ನಿಂದ ನೋಂದಣಿ ಕಾರ್ಯ ಪ್ರಾರಂಭ ಮಾಡಲಿದ್ದೇವೆ. ಖರೀದಿಯನ್ನು ಜನವರಿಯಿಂದ ಪ್ರಾರಂಭ ಮಾಡಿಲಿದ್ದೇವೆ. ಮುಂದಿನ ಮಾರ್ಚ್ವರೆಗೂ ಉತ್ಪನ್ನಗಳ ಖರೀದಿ ಮಾಡಲಿದ್ದೇವೆ. 4,846 ರೂ.ಗೆ ಕ್ವಿಂಟಾಲ್ ರಾಗಿ ಖರೀದಿ ಮಾಡಲಿದ್ದೇವೆ. ಈ ಬಾರಿ 596 ರೂ. ಹೆಚ್ಚಳ ಮಾಡಿದ್ದೇವೆ. ಒಬ್ಬರಿಂದ ಹೆಚ್ಚು ಅಂದ್ರೆ 50 ಕ್ವಿಂಟಾಲ್ ಖರೀದಿ ಮಾಡಲಿದ್ದೇವೆ. ರೈತರಿಂದ 3 ಲಕ್ಷ ಮೆಟ್ರಿಕ್ ಟನ್ ಜೋಳ ಖರೀದಿ ಮಾಡುತ್ತೇವೆ. ಪ್ರತಿ ಕ್ವಿಂಟಾಲ್ ಜೋಳಕ್ಕೆ ಈ ವರ್ಷ 2369 ರೂ. ಕೊಡುತ್ತೇವೆ. ಈ ವರ್ಷ 69 ರೂ. ಹೆಚ್ಚುವರಿಯಾಗಿ ಜೋಳಕ್ಕೆ ಕೊಡುತ್ತಿದ್ದೇವೆ. ಭತ್ತವನ್ನು ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಕೃಷಿಯಲ್ಲಿ ಪದವಿ ಪಡೆದು ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿದೆ ಸುವರ್ಣವಕಾಶ
ರೈತರಿಂದ ಬೇಗ ಖರೀದಿ ಮಾಡುವ ಯೋಜನೆ ರೂಪಿಸಿದ್ದೇವೆ. ನೇರವಾಗಿ ರೈತರಿಗೆ ಅನುಕೂಲವಾಗುವಂತೆ ಮಾಡುತ್ತಿದ್ದೇವೆ. ಸಿರಿಧಾನ್ಯಗಳಿಗೂ ಬೆಂಬಲ ಬೆಲೆಕೊಟ್ಟು ಖರೀದಿ ಮಾಡುತ್ತಿದ್ದೇವೆ. ರಾಗಿಗೆ ಇರುವ ಬೆಲೆಯನ್ನೇ ಸಿರಿಧಾನ್ಯಗಳಿಗೆ ಕೊಡಲಿದ್ದೇವೆ. ಸಿರಿಧಾನ್ಯಗಳಿಗೆ ಹೆಚ್ಚುವರಿಯಾಗಿ 114 ರೂ. ಕೊಡುವ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾಪ ಸಲ್ಲಿಸಿದ್ದೇವೆ. ಡಿಜಿಟಲ್ ಮೂಲಕ ಬೆಳೆ ಸರ್ವೆ ಮಾಡಿಸಿ ಬೆಂಬಲ ಬೆಲೆ ಕೊಡಲಿದ್ದೇವೆ ಎಂದರು.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:00 pm, Fri, 8 August 25



