ಕೆಂಪು ಬಾರ್ಡರ್ನ ಬಿಳಿ ಸೀರೆ, ಹಣೆಯ ಮೇಲೆ ಬಿಂದಿ, ಮುಖದಲ್ಲಿ ನಗು, 19 ವರ್ಷಗಳ ಬಳಿಕ ಕೋಲ್ಕತ್ತಾಗೆ ಬಂದ ತಸ್ಲೀಮಾ ನಸ್ರೀನ್
ಪ್ರಖ್ಯಾತ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ 19 ವರ್ಷಗಳ ಬಳಿಕ ಕೋಲ್ಕತ್ತಾಗೆ ಮರಳಿದ್ದಾರೆ. 2007ರಲ್ಲಿ 'ದ್ವಿಖಂಡಿತೋ' ಪುಸ್ತಕದ ವಿರುದ್ಧದ ಪ್ರತಿಭಟನೆಗಳಿಂದ ಅವರು ನಗರ ತೊರೆಯಬೇಕಾಗಿತ್ತು. ಇದೀಗ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿರುವ ತಸ್ಲೀಮಾ, ಕೋಲ್ಕತ್ತಾ ತನ್ನ ಮನೆ, ಸ್ನೇಹಿತರು, ಭಾವನೆಗಳು ನೆಲೆಸಿದ್ದ ಸ್ಥಳವೆಂದು ಬಣ್ಣಿಸಿದ್ದಾರೆ. ವಾಕ್ ಸ್ವಾತಂತ್ರ್ಯ ಮತ್ತು ಲೇಖಕರ ರಕ್ಷಣೆಯ ಮಹತ್ವವನ್ನು ಅವರು ಪ್ರತಿಪಾದಿಸಿದ್ದಾರೆ.

ಕೋಲ್ಕತ್ತಾ, ಜುಲೈ 31: ಪ್ರಸಿದ್ಧ ಬಾಂಗ್ಲಾದೇಶಿ ಲೇಖಕಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ತಸ್ಲೀಮಾ ನಸ್ರೀನ್ (Taslima Nasreen) ಅವರು ಸುಮಾರು 19 ವರ್ಷಗಳ ನಂತರ ಕೋಲ್ಕತ್ತಾಗೆ ಮರಳಿದ್ದಾರೆ. 2007 ರಲ್ಲಿ ಅವರ ‘ದ್ವಿಖಂಡಿತೋ’ ಪುಸ್ತಕದ ವಿರುದ್ಧ ಭಾರಿ ಪ್ರತಿಭಟನೆ ಹಾಗೂ ಬೆದರಿಕೆಗಳು ವ್ಯಕ್ತವಾದ ನಂತರ ಅವರು ನಗರವನ್ನು ತೊರೆಯಬೇಕಾಗಿತ್ತು. ಇದೀಗ ಪಶ್ಚಿಮ ಬಂಗಾಳದಲ್ಲಿ ಸನ್ನಿವೇಶ ಬದಲಾದ ಬೆನ್ನಲ್ಲೇ, ಆ ಆಗಸ್ಟ್ 1 ರಂದು ಕೋಲ್ಕತ್ತಾದ ರವೀಂದ್ರ ಸದನದಲ್ಲಿ ನಡೆಯಲಿರುವ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಆಗಮಿಸಿದ್ದು, ಅವರಿಗೆ ಭವ್ಯ ಸ್ವಾಗತ ದೊರೆತಿದೆ.
“ನಾನು ಸಂತೋಷ ಮತ್ತು ನೋವು ಎರಡನ್ನೂ ಹೊತ್ತು ಹಿಂತಿರುಗಿದ್ದೇನೆ. ಕೋಲ್ಕತ್ತಾ ನನಗೆ ಕೇವಲ ನಗರವಲ್ಲ; ಅದು ನನ್ನ ಮನೆ, ಸ್ನೇಹಿತರು ಮತ್ತು ಭಾವನೆಗಳು ನೆಲೆಸಿದ್ದ ಸ್ಥಳವಾಗಿತ್ತು. ನನ್ನ ಜೀವನದ 19 ವರ್ಷಗಳನ್ನು ನನ್ನಿಂದ ಕಸಿದುಕೊಳ್ಳಲಾಯಿತು. ಕಳೆದುಹೋದ ಆ ವರ್ಷಗಳನ್ನು ಯಾರೂ ಹಿಂತಿರುಗಿಸಲು ಸಾಧ್ಯವಿಲ್ಲ. ಆದರೂ ನಾನು ಇಲ್ಲಿಗೆ ಅತಿಥಿಯಾಗಿ ಬಂದಿಲ್ಲ, ಬಂಗಾಳದ ಭಾಗವಾಗಿಯೇ ಮರಳಿದ್ದೇನೆ” ಎಂದಿದ್ದಾರೆ.
ಸಿಎಂ ಸುವೇಂದು ಅಧಿಕಾರಿಗೆ ಧನ್ಯವಾದ: ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಿ ತಮಗೆ ಸೂಕ್ತ ಭದ್ರತೆ ಒದಗಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹಾಗೂ ಸಂಘಟಕರಿಗೆ ತಸ್ಲೀಮಾ ಕೃತಜ್ಞತೆ ಸಲ್ಲಿಸಿದರು. ಆಗಸ್ಟ್ 1 ರಂದು ನಡೆಯಲಿರುವ ವೇದಿಕೆಯಲ್ಲಿ ಸಿಎಂ ಸುವೇಂದು ಅಧಿಕಾರಿ ಮತ್ತು ಖ್ಯಾತ ಲೇಖಕ ಶಿರ್ಷೇಂದು ಮುಖೋಪಾಧ್ಯಾಯ ಅವರೊಂದಿಗೆ ಅವರು ವೇದಿಕೆ ಹಂಚಿಕೊಳ್ಳಲಿದ್ದಾರೆ.
ವಾಕ್ ಸ್ವಾತಂತ್ರ್ಯ ಮತ್ತು ಲೇಖಕರ ರಕ್ಷಣೆ: ಮೂಲಭೂತ ಹಕ್ಕುಗಳ ರಕ್ಷಣೆ: “ಬರಹಗಾರರ ಸ್ವಾತಂತ್ರ್ಯ ಮತ್ತು ಸುರಕ್ಷತೆಯು ಯಾವುದೇ ಸರ್ಕಾರದ ಕೃಪೆ ಅಥವಾ ಧಾರ್ಮಿಕ ಗುಂಪುಗಳ ಅನುಮತಿಯನ್ನು ಅವಲಂಬಿಸಿರಬಾರದು. ಭಿನ್ನಾಭಿಪ್ರಾಯಗಳನ್ನು ರಕ್ಷಿಸುವುದೇ ನಿಜವಾದ ವಾಕ್ ಸ್ವಾತಂತ್ರ್ಯ” ಎಂದು ತಸ್ಲೀಮಾ ಪ್ರತಿಪಾದಿಸಿದ್ದಾರೆ.
ಬಾಂಗ್ಲಾದೇಶದಿಂದ ಗಡಿಪಾರು: ಧರ್ಮ, ಮುಸ್ಲಿಂ ಸಮುದಾಯದಲ್ಲಿ ಮಹಿಳಾ ಹಕ್ಕುಗಳು ಹಾಗೂ ಜಾತ್ಯತೀತತೆಯ ಕುರಿತು ಕಠಿಣವಾಗಿ ಬರೆಯುತ್ತಿದ್ದ ತಸ್ಲೀಮಾ ನಸ್ರೀನ್ ಅವರಿಗೆ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಬಂದಿದ್ದರಿಂದ 1994ರಲ್ಲಿ ಬಾಂಗ್ಲಾದೇಶದಿಂದ ಗಡಿಪಾರು ಮಾಡಲಾಗಿತ್ತು. 2007ರಲ್ಲಿ ತೀವ್ರ ಧಾರ್ಮಿಕ ಪ್ರತಿಭಟನೆಗಳು ಎದುರಾದಾಗ ಅವರು ಕೋಲ್ಕತ್ತಾ ತೊರೆದು ದೆಹಲಿಗೆ ತೆರಳಬೇಕಾಯಿತು. 2007 ರ ನಂತರ ಪ್ರಥಮ ಬಾರಿಗೆ ಅವರು ಕೋಲ್ಕತ್ತಾದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




