ಲೋಕಾಯುಕ್ತ ಎಡಿಜಿಪಿ-ಕುಮಾರಸ್ವಾಮಿ ರಾಜಿ ಸಂಧಾನ ವಿಫಲ: ಮತ್ತೆ ವಿಚಾರಣೆ ನಿಗದಿಪಡಿಸಿದ ಕೋರ್ಟ್

ಲೋಕಾಯುಕ್ತ ಎಡಿಜಿಪಿ, ಎಸ್‌ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್ ಮತ್ತು ಅವರ ಕುಟುಂಬಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬೆದರಿಕೆ ಹಾಕಿರುವ ಆರೋಪ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರಕರಣ ಸಂಬಂಧಿಸಿದಂತೆ ಇತ್ಯರ್ಥಪಡಿಸಲು ರಾಜಿ ಸಂಧಾನ ಮಾಡಿಕೊಳ್ಳುವಂತೆ ಹೈಕೋರ್ಟ್ ಸೂಚಿಸಿತ್ತು. ಆದ್ರೆ, ರಾಜಿ ಸಂಧಾನ ವಿಫಲವಾಗಿದೆ. ಹೀಗಾಗಿ ಕೋರ್ಟ್, ಮತ್ತೆ ವಿಚಾರಣೆಯನ್ನು ನಿಗದಿಪಡಿಸಿದೆ.

ಲೋಕಾಯುಕ್ತ ಎಡಿಜಿಪಿ-ಕುಮಾರಸ್ವಾಮಿ ರಾಜಿ ಸಂಧಾನ ವಿಫಲ: ಮತ್ತೆ ವಿಚಾರಣೆ ನಿಗದಿಪಡಿಸಿದ ಕೋರ್ಟ್
ಎಂ.ಚಂದ್ರಶೇಖರ್, ಹೆಚ್.ಡಿ.ಕುಮಾರಸ್ವಾಮಿ
Edited By:

Updated on: Aug 07, 2026 | 6:10 PM

ಬೆಂಗಳೂರು, (ಆಗಸ್ಟ್ 07): ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ (M ChandraShekar) ಮತ್ತು ಕೇಂದ್ರ ಸಚಿವ ಹೆಚ್​​​​ಡಿ ಕುಮಾರಸ್ವಾಮಿ (HD Kumaraswamy) ನಡುವಿನ ರಾಜಿ ಯತ್ನ ಸಂಧಾನ ವಿಫಲವಾಗಿದೆ. ಚಂದ್ರಶೇಖರ್ ದಾಖಲಿಸಿರುವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಸಂಧಾನ ಮಾಡಿಕೊಳ್ಳುವಂತೆ ಹೈಕೋರ್ಟ್ (Karnataka High Court) ಸೂಚಿಸಿದ್ದು, ಇಬ್ಬರನ್ನು ರಾಜಿ ಮಾಡಿಸಲು ಮಧ್ಯಸ್ಥಿಕರೊಬ್ಬರನ್ನು ಸಹ ನೇಮಿಸಿತ್ತು. ಆದ್ರೆ, ಇದೀಗ ರಾಜಿ ಸಂಧಾನ ಯತ್ನ ವಿಫಲವಾಗಿದೆ. ಹೀಗಾಗಿ ಹೈಕೋರ್ಟ್, ಮತ್ತೆ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ಆಗಸ್ಟ್ 20ಕ್ಕೆ ನಿಗದಿಪಡಿಸಿದೆ. ಇದರೊಂದಿಗೆ ಕುಮಾರಸ್ವಾಮಿ ಹಾಗೂ ಚಂದ್ರಶೇಖರ್ ನಡುವಿನ ಕಾನೂನು ಹೋರಾಟ ಮುಂದುವರಿದಿದೆ.

ಎಡಿಜಿಪಿ ಎಂ.ಚಂದ್ರಶೇಖರ್ ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಹೆಚ್‌ಡಿಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ರಾಜಿ ಸಂಧಾನದ ಮೂಲಕ ಕೇಸ್ ಇತ್ಯರ್ಥಕ್ಕೆ ಸಲಹೆ ನೀಡಿತ್ತು.  ಅಲ್ಲದೇ ಇಬ್ಬರ ನಡುವಿನ ಜಗಳ ಇತ್ಯರ್ಥಕ್ಕೆ ಮಧ್ಯಸ್ಥಿಕೆ ಮಾಡಲು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕ್‌ ಅವರನ್ನು ಹೈಕೋರ್ಟ್‌ ಆಯ್ಕೆ ಮಾಡಿ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕ್ಷಮೆಯಾಚನೆಯ ಪ್ರಮಾಣಪತ್ರ ಸಲ್ಲಿಸಬೇಕೆಂದು ಎಡಿಜಿಪಿ ಪರ ವಕೀಲರು ವಾದ ಮಂಡನೆ ಮಾಡಿದರು. ಇದಕ್ಕೆ ಹೆಚ್‌ಡಿಕೆ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕುಮಾರಸ್ವಾಮಿ-ಲೋಕಾಯುಕ್ತ ಎಡಿಜಿಪಿ ಜಟಾಪಟಿ ಕ್ಲೈಮ್ಯಾಕ್ಸ್ ಹಂತಕ್ಕೆ: ರಾಜಿ ಸಂಧಾನಕ್ಕೆ ಸಮ್ಮತಿ

ಪ್ರಕರಣದ ಹಿನ್ನೆಲೆ

ನಿಯಮ ಉಲ್ಲಂಘಿಸಿ ಸಾಯಿ ಮಿನರಲ್ಸ್‌ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪದ ಮೇಲೆ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಚಂದ್ರಶೇಖರ್‌ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದಾದ ಬಳಿಕ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಶಾಸಕ ಸುರೇಶ್‌ ಬಾಬು ಮಾಧ್ಯಮಗಳಲ್ಲಿ ಚಂದ್ರಶೇಖರ್‌ ತಮ್ಮ ವಿರುದ್ಧ ಕೆಲವೊಂದು ಆರೋಪ ಮಾಡಿದ್ದಾರೆ ಎಂದು ಎಡಿಜಿಪಿ ಚಂದ್ರಶೇಖರ್‌ ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸುರೇಶ್‌ ಬಾಬು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಪೊಲೀಸರು ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 223 ಮತ್ತು 224 ಅಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸುರೇಶ್‌ ಬಾಬು ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಇದನ್ನು ರದ್ದು ಕೋರಿ ಕುಮಾರಸ್ವಾಮಿ ಸೇರಿ ಇತರ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us