ಮಾನವೀಯತೆ ತೋರಿದ್ದಕ್ಕೆ ಈಗ ಅನುಭವಿಸುತ್ತಿದ್ದೇವೆ: ಪಾಕ್ಗೆ ತೆರಳಲು ಸಮಯ ಕೋರಿದ್ದ ಅರ್ಜಿ ವಜಾ
ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಪಾಕಿಸ್ತಾನ ಪ್ರಜೆಗಳಿಗೆ ಭಾರತ ಬಿಟ್ಟು ತೊಲಗಿ ಎಂದು ಆದೇಶ ನೀಡಲಾಗಿತ್ತು. ಇದೆ ವಿಚಾರಕ್ಕೆ ಸಂಬಂಧಪಟ್ಟಂತೆ ಮೈಸೂರಿನಲ್ಲಿ ತಾಯಿ ಜೊತೆ ಇದ್ದ ಮೂರು ಪಾಕಿಸ್ತಾನಿ ಮಕ್ಕಳಿಗೆ ಅತ್ತ ಹೋಗಲು ಆಗದೇ ಇತ್ತ ಇರಲು ಆಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಪಾಕಿಸ್ತಾನಕ್ಕೆ ತೆರಳು ಕಾಲಾವಕಾಶ ನೀಡಬೇಕೆಂದು ಮಕ್ಕಳ ಪರವಾಗಿ ತಾಯಿ ರಿಟ್ ಅರ್ಜಿ ಸಲ್ಲಿಸಿದ್ದು,ಇದೀಗ ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಬೆಂಗಳೂರು, (ಮೇ 08): ಪಾಕಿಸ್ತಾನಕ್ಕೆ (Pakistan) ತೆರಳಲು ಕಾಲಾವಕಾಶ ನೀಡಬೇಕೆಂದು ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ (Karnataka high Court) ವಜಾ ಮಾಡಿದೆ. ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಪಾಕಿಸ್ತಾನ ಪ್ರಜೆಗಳಿಗೆ ಭಾರತ ಬಿಟ್ಟು ತೊಲಗಿ ಎಂದು ಸೂಚನೆ ನೀಡಲಾಗಿದೆ. ಇದರಿಂದ ಮದ್ವೆಗೆಂದು ಮೈಸೂರಿಗೆ (Mysuru) ಬಂದು ತಾಯಿ ಜೊತೆ ಇದ್ದ ಪಾಕಿಸ್ತಾನ ಪೌರತ್ವ ಹೊಂದಿರುವ ಮೂರು ಮಕ್ಕಳು ವಾಪಸ್ ತಮ್ಮ ದೇಶಕ್ಕೆ ತೆರಳಲಾಗದೇ ಕೋರ್ಟ್ ಮೊರೆ ಹೋಗಿದ್ದು, ಪಾಕಿಸ್ತಾನಕ್ಕೆ ತೆರಳು ಸಮಯ ನೀಡುವಂತೆ ಮಕ್ಕಳ ಪರವಾಗಿ ಮೈಸೂರು ಮೂಲದ ತಾಯಿ ರಿಟ್ ಅರ್ಜಿ ಸಲ್ಲಿಸಿದ್ದರು. ಆದ್ರೆ, ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಹೈಕೋರ್ಟ್ ಪೀಠ ವಜಾಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೇ ಮಾನವೀಯತೆ ಆಧಾರದಲ್ಲಿ ಮೇ 15ರವರೆಗೆ ಕಾಲಾವಕಾಶಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಮಾನವೀಯತೆ ತೋರಿದ್ದಕ್ಕೆ ಈಗ ಅನುಭವಿಸುತ್ತಿದ್ದೇವೆ ಎಂದಿದೆ.
ಪಾಕಿಸ್ತಾನಿ ತಂದೆ, ಮೈಸೂರಿನ ತಾಯಿಗೆ ಜನಿಸಿರುವ ಮೂವರು ಮಕ್ಕಳು ಬೀಬಿ ಯಮೀನಾ, ಮೊಹಮ್ಮದ್ ಮುದಸ್ಸಿರ್, ಮೊಹಮ್ಮದ್ ಯೂಸುಫ್ ಪಾಕಿಸ್ತಾನದ ಪೌರತ್ವ ಹೊಂದಿದ್ದಾರೆ. ಹೀಗಾಗಿ ಪಾಕಿಸ್ತಾನಕ್ಕೆ ವಾಪಸ್ ಹೋಗಲು ಸಮಯವಕಾಶ ನೀಡಬೇಕೆಂದು ಕರ್ನಾಟಕ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆದ್ರೆ, ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ. ಕೇಂದ್ರ ಸರ್ಕಾರದ ಪರವಾಗಿ ಡಿಎಸ್ಜಿ ಶಾಂತಿಭೂಷಣ್ ವಾದ ಮಂಡಿಸಿದರು.
ಇದನ್ನೂ ಓದಿ: ಕರೆದೊಯ್ಯಲು ಗಡಿಗೆ ಬಾರದ ಪಾಕ್ ಪತಿರಾಯ: ಮದ್ವೆಗೆಂದು ಮೈಸೂರಿಗೆ ಬಂದಿದ್ದ ಮಹಿಳೆ ತೊಳಲಾಟ
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ 8 ವರ್ಷದ ಬಿಬಿ ಯಾಮಿನಾ, 4 ವರ್ಷದ ಮೊಹಮ್ಮದ್ ಯುದಾಸಿರ್ ಹಾಗೂ 3 ವರ್ಷದ ಮೊಹಮ್ಮದ್ ಯೂಸುಫ್ ಈ ಅರ್ಜಿ ಸಲ್ಲಿಸಿದ್ದಾರೆ. ಈ ಮೂವರು ಪಾಕಿಸ್ತಾನಿ ಪ್ರಜೆಗಳಾಗಿದ್ದಾರೆ. ಇದೀಗ ಈ ಮೂವರು ಮಕ್ಕಳು ತಾವು ಮೈಸೂರನಲ್ಲಿ ಕನಿಷ್ಠ ಮೇ.15ರ ವರೆಗೆ ಇರಲು ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. ಇವರ ತಂದೆ ಬಲೂಚಿಸ್ತಾನದಲ್ಲಿದ್ದು, ತಾಯಿ ರಂಶಾ ಜಹಾನ್ ಜೊತೆ ಮೈಸೂರಿಗೆ ಆಗಮಿಸಿದ್ದರು.
ಏನಿದು ಪ್ರಕರಣ?
ಮೈಸೂರಿನ ರಂಶಾ ಜಹಾನ್ ಅವರು 2015ರಲ್ಲಿ ಸೆಪ್ಟೆಂಬರ್ 9ರಂದು ಪಾಕಿಸ್ತಾನ ಮೂಲದ ಮುಹಮ್ಮದ್ ಫಾರೂಕ್ ಎಂಬುವರ ಜೊತೆ ಪಾಕ್ನ ಪಿಶಿನ್ ಎಂಬಲ್ಲಿ ಷರಿಯತ್ ನಂತೆ ವಿವಾಹವಾಗಿದ್ದರು. ಇವರಿಗೆ ಬೀಬಿ ಯಮೀನಾ, ಮುಹಮ್ಮದ್ ಮುದಸ್ಸಿರ್, ಮುಹಮ್ಮದ್ ಯೂಸುಫ್ ಎನ್ನುವ ಮೂವರು ಮಕ್ಕಳಾಗಿದ್ದು, ಇವರು ಪಾಕಿಸ್ತಾನದ ಪೌರತ್ವ ಹೊಂದಿದ್ದರೆ. ತಾಯಿ ರಂಶಾ ಜಹಾನ್ ಪಾಕ್ ಪೌರತ್ವ ಹೊಂದಿಲ್ಲ.
ಮದ್ವೆಗೆಂದು ಮಕ್ಕಳ ಜತೆ ಮೈಸೂರಿಗೆ ಬಂದಿದ್ದಳು
2025ರ ಜನವರಿ 4 ರಂದು ಭಾರತಕ್ಕೆ ಆಗಮಿಸಿದ್ದ ಮೂವರು ಮಕ್ಕಳು ಹಾಗೂ ರಂಶಾ ಜಹಾನ್ ಫೆಬ್ರವರಿ 17, 2025ಕ್ಕೆ ವೀಸಾ ಅವಧಿ ಅಂತ್ಯಗೊಂಡಿತ್ತು. ಈ ವೇಳೆ ಮತ್ತೆ ಕೆಲ ಕಾರಣಗಳನ್ನು ನೀಡಿ ವೀಸಾ ಅವಧಿ ವಿಸ್ತರಣೆ ಮಾಡಿಸಿಕೊಳ್ಳಲಾಗಿದೆ. ಜೂನ್ 18ರ ವರೆಗೆ ವೀಸಾ ಅವಧಿಯನ್ನು ವಿಸ್ತರಿಸಿಕೊಂಡದ್ದಾರೆ. ಇದರ ನಡುವೆ ಕೇಂದ್ರದ ಸೂಚನೆಯಿಂದ ತಕ್ಷಣವೇ ಮರಳಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದರಿಂದ ಮೇ.12ರಂದು ಮದುವೆ ಕಾರಣ ನೀಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವಾಘ ಗಡಿಗೆ ಹೋಗಿದರೂ ಬಾರದ ಗಂಡ
ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ರಂಶಾ ಜಹಾನ್, ತನ್ನ ಮೂವರು ಮಕ್ಕಳನ್ನು ಪಾಕಿಸ್ತಾನಕ್ಕೆ ಕಳುಹಿಸಿಲು ಮೈಸೂರಿನಿಂದ ವಾಘ ಗಡಿಗೆ ಹೋಗಿದ್ದಳು. ಆದ್ರೆ, ವಾಘಾ ಗಡಿಯಲ್ಲಿ ಫೋನ್ ಮಾಡುತ್ತಾ ಕಾದು ಕುಳಿತರೂ ಗಂಡ ಮುಹಮ್ಮದ್ ಫಾರೂಕ್ ಫೋನ್ ಸ್ವೀಕರಿಸಲೇ ಇಲ್ಲ. ಈ ಬಗ್ಗೆ ಪಾಕಿಸ್ತಾನ ಅಧಿಕಾರಿಗಳು ಸಹ ಪ್ರಯತ್ನಿಸಿದೂ ಅದು ಸಾಧ್ಯವಾಗಿಲ್ಲ. ಹೀಗಾಗಿ ಮಕ್ಕಳನ್ನು ಕರೆದುಕೊಂಡು ಹೋಗಲು ವಾಘ ಗಡಿಗೂ ಬರಲೇ ಇಲ್ಲ. ಹೀಗಾಗಿ ಮಕ್ಕಳನ್ನು ದೇಶದೊಳಗೆ ಕರೆದುಕೊಳ್ಳಲು ಪಾಕ್ ಸೈನಿಕರು ಸಹ ನಿರಾಕರಿಸಿದ್ದರು. ಇದರ ನಡುವೆ ಪತಿ ಮುಹಮ್ಮದ್ ಫಾರೂಕ್, ಕೇವಲ ಮಕ್ಕಳನ್ನು ಕಳುಹಿಸುತ್ತೇನೆಂದರೆ ಬೇಡ. ಮಕ್ಕಳ ಜೊತೆ ಹೆಂಡ್ತಿ ಸಹ ಪಾಕಿಸ್ತಾನಕ್ಕೆ ಬರಬೇಕು ಎಂದು ಷರತ್ತು ಹಾಕಿದ್ದ. ಇದರಿಂದ ವಾಘಾ ಗಡಿಯಲ್ಲಿ ಭಾರಿ ಹೈಡ್ರಾಮವೇ ನಡೆದಿತ್ತು. ಹೀಗಾಗಿ ಕೊನೆಗೆ ಮೂವರು ಮಕ್ಕಳೊಂದಿಗೆ ರಂಶಾ ಜಹಾನ್ ಮೈಸೂರಿಗೆ ಮರಳಿದ್ದರು. ಬಳಿಕ ಪಾಕಿಸ್ತಾನಕ್ಕೆ ತೆರಳಲು ಮಕ್ಕಳಿಗೆ ಸಮಯ ನೀಡಬೇಕೆಂದು ರಿಟ್ ಅರ್ಜಿ ಸಲ್ಲಿಸಿದ್ದರು. ಆದ್ರೆ, ಇದೀಗ ಕೋರ್ಟ್ ಕಾಲಾವಕಾಶ ನೀಡಲು ನಿರಾಕರಿಸಿದೆ.
Published On - 6:56 pm, Thu, 8 May 25