
ನವದೆಹಲಿ, ಡಿಸೆಂಬರ್ 27): ಕರ್ನಾಟಕದಲ್ಲಿ (Karnataka) ಸಿಎಂ ಕುರ್ಚಿ ಚರ್ಚೆ ಜೀವಂತವಿದೆ. ಹೈಕಮಾಂಡ ಹೇಳಿದಂತೆ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar)ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದರೂ ಸಹ ಈ ಬೆಳವಣಿಗೆ ಯಾವ ವಿರಾಮವೂ ಬಿದ್ದಿಲ್ಲ. ಹೀಗಾಗಿ ಇವತ್ತಿನ ಸಿಎಂ ಸಿದ್ದರಾಮಯ್ಯರ ದೆಹಲಿ ಪ್ರವಾಸ ಕಾಂಗ್ರೆಸ್ ಪಾಲಿಗೆ ಕುತೂಹಲದ ವಿಚಾರ. ವಿಷಯ ಅಂದ್ರೆ ಇಂದು (ಡಿಸೆಂಬರ್ 27) ದೆಹಲಿಯ ಇಂದಿರಾ ಭವನದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು, ಘಟಾನುಘಟಿ ಹೈಕಮಾಂಡ್ ನಾಯಕರು ಭಾಗವಹಿಸಿದ್ದರು. ಇದೇ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಇದ್ದು, ಈ ವೇಳೆ ರಾಜ್ಯ ಕಾಂಗ್ರೆಸ್ನಲ್ಲಿನ ಬೆಳವಣಿಗೆಗಳನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಅವರ ಕಿವಿಗೆ ಹಾಕಿದ್ದಾರೆ. ಈ ಮೂಲಕ ಗೊಂದಲ ನಿವಾರಿಸಿಕೊಳ್ಳಲು ಯತ್ನಿಸಿದರಾದರೂ ಅದು ಸಾಧ್ಯವಾಗಿಲ್ಲ.
ಹೌದು…ಸಿಡಬ್ಲ್ಯೂ ಸಭೆಯಲ್ಲಿಂದು ಸಿಎಂ ಸಿದ್ದರಾಮಯ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಚರ್ಚೆ ನಡೆಸಿದ್ದು, ಈ ವೇಳೆ ವೇಣುಗೋಪಾಲ್ ಜನವರಿಯಲ್ಲಿ ಬಂದು ಭೇಟಿ ಆಗುವಂತೆ ಸೂಚಿಸಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯರ ದೆಹಲಿ ಭೇಟಿ ಕೇವಲ CWC ಸಭೆಗಷ್ಟೇ ಸೀಮಿತವಾಗಿದೆ.
ಅಷ್ಟಕ್ಕೂ ವಿಷಯ ಅಂದ್ರೆ, ರಾಜ್ಯದ ಸಿಎಂ ಕುರ್ಚಿ ತೀರ್ಮಾನ ಸದ್ಯ ರಾಹುಲ್ ಗಾಂಧಿ ಬತ್ತಳಿಕೆಯಲ್ಲಿದೆ. ಎಲ್ಲದಕ್ಕೂ ಲೋಕಸಭೆ ವಿಪಕ್ಷ ನಾಯಕನಿಂದ್ಲೇ ಉತ್ತರ ಸಿಗಬೇಕಿದೆ. ಆದರೆ ರಾಹುಲ್ ಗಾಂಧಿ ನಾಳೆ (ಡಿಸೆಂಬರ್ 28) ರಾತ್ರಿ ರಾಹುಲ್ ಗಾಂಧಿ ವಿದೇಶಕ್ಕೆ ತೆರಳುತ್ತಿದ್ದು, ಜನವರಿ 9ರಂದು ಭಾರತಕ್ಕೆ ಮರಳಲಿದ್ದಾರೆ. ಆ ಬಳಿಕ ಕರ್ನಾಟಕ ಸಿಎಂ ಕುರ್ಚಿ ಕದನ ಬ್ರೇಕ್ ಬೀಳಲಿದ್ದು, ಸಿಎಂ ಬದಲಾವಣೆ ಆಗುತ್ತಾರಾ? ಅಥವಾ ಸಿದ್ದರಾಮಯ್ಯ ಬಾಕಿ ಎರಡು ವರ್ಷ ಪೂರ್ಣಗೊಳಿಸುತ್ತಾರಾ ಎಂಬುದು ಗೊತ್ತಾಗಲಿದೆ. ಹೀಗಾಗಿ ರಾಹುಲ್ ಗಾಂಧಿ ವಾಪಾಸಾದ ಬಳಿಕ ಸಿಎಂ ಸಿದ್ದರಾಮಯ್ಯ ಸಂಪುಟ ಪುನಾರಚನೆ ವಿಚಾರಕ್ಕಾಗಿ ದೆಹಲಿಗೆ ತೆರಳಲಿದ್ದಾರೆ. ಅಷ್ಟೇ ಅಲ್ಲದೇ ಸಿಎಂ ಹಾಗೂ ಡಿಸಿಎಂ ಸೇರಿದಂತೆ ಉಭಯ ಬಣದ ನಾಯಕರು ಈ ವೇಳೆ ದೆಹಲಿ ಯಾತ್ರೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಜನವರಿ 15ರ ಬಳಿಕ ರಾಜ್ಯದಲ್ಲಿ ಕ್ಷಿಪ್ರ ಬೆಳವಣಿಗೆ ಆಗುವ ಮುನ್ಸೂಚನೆ ಸಿಕ್ಕಿದೆ.
ಇನ್ನೊಂದೆಡೆ ಡಿಕೆ ಶಿವಕುಮಾರ್, ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿಕೊಂಡು ಮುನ್ನಡೆಯುತ್ತಿದ್ದಾರೆ. ಇನ್ನು ರಾಹುಲ್ ಗಾಂಧಿಗೆ ಸಿದ್ದರಾಮಯ್ಯನವರನ್ನ ಮುಂದುವರೆಸುವ ಮನಸ್ಸಿದೆ. ಇತ್ತ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಗೆ ಡಿಕೆಶಿಯನ್ನು ಸಿಎಂ ಮಾಡಬೇಕೆನ್ನುವ ಮನಸ್ಸಿದ. ಹೀಗಾಗಿ ಡಿಕೆ ಶಿವಕುಮಾರ್, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಮೂಲಕ ರಾಹುಲ್ ಗಾಂಧಿ ಮನವೊಲಿಸುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಕರ್ನಾಟಕ ಸಿಎಂ ಕುರ್ಚಿ ಕದನ ತೀವ್ರ ಕುತೂಹಲ ಮೂಡಿಸಿದ್ದು, ಅಂತಿಮವಾಗಿ ರಾಹುಲ್ ಗಾಂಧಿ ಒಲವು ತೋರುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ. ಒಂದು ವೇಲೆ ಸಿಎಂ ಬದಲಾವಣೆ ಆದರೂ ಆಗದಿದ್ದರೂ ರಾಜಕೀಯ ಆಟ ಶುರುವಾಗುವುದು ಗ್ಯಾರಂಟಿ.