
ಬೆಂಗಳೂರು, ಜುಲೈ 27: ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಸಂಗ್ರಹವು (Karnataka Dam Water Level) ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಜುಲೈ 24ರ ವೇಳೆಗೆ ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟು 419.35 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದ್ದು, ಇದು ಕಳೆದ ಆರು ವರ್ಷಗಳಲ್ಲಿ ಇದೇ ಅವಧಿಯಲ್ಲಿ ದಾಖಲಾಗಿರುವ ಎರಡನೇ ಕನಿಷ್ಠ ಮಟ್ಟವಾಗಿದೆ. 2023ರ ಬರ ವರ್ಷದಲ್ಲಿ ಇದೇ ದಿನಕ್ಕೆ 371.07 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಜಲಾಶಯಗಳ ಒಟ್ಟು ಸಾಮರ್ಥ್ಯ 895.69 ಟಿಎಂಸಿ ಆಗಿದೆ.
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಆಲಮಟ್ಟಿ ಜಲಾಶಯ ಮಾತ್ರ ಹಿಂದಿನ ವರ್ಷಗಳಿಗಿಂತ ಉತ್ತಮ ಸ್ಥಿತಿಯಲ್ಲಿದ್ದು, ಪ್ರಸ್ತುತ 106.33 ಟಿಎಂಸಿ ನೀರು ಸಂಗ್ರಹ ಹೊಂದಿದೆ. ಉಳಿದ ಬಹುತೇಕ ಜಲಾಶಯಗಳಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 25ರಿಂದ 30 ಶೇಕಡಾದವರೆಗೆ ನೀರಿನ ಸಂಗ್ರಹ ಕುಸಿತ ಕಂಡುಬಂದಿದೆ.
ಕಾವೇರಿ ಕಣಿವೆಯ ಹಾರಂಗಿ, ಹೇಮಾವತಿ, ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ಪರಿಸ್ಥಿತಿ ಹೆಚ್ಚು ಚಿಂತಾಜನಕವಾಗಿದೆ. ಇವುಗಳಲ್ಲಿ ಹಾರಂಗಿ ಮಾತ್ರ ತನ್ನ 8.50 ಟಿಎಂಸಿ ಸಾಮರ್ಥ್ಯದ ಎದುರು 7.58 ಟಿಎಂಸಿ ನೀರಿನೊಂದಿಗೆ ತುಸು ಸಮಾಧಾನಕರ ಸ್ಥಿತಿಯಲ್ಲಿದೆ.
ಕೆಆರ್ಎಸ್ ಜಲಾಶಯದಲ್ಲಿ ಜುಲೈ 24, 2025ರಂದು 48.06 ಟಿಎಂಸಿ ನೀರು ಇದ್ದರೆ, ಈ ವರ್ಷ ಕೇವಲ 17.13 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. 2023ರ ಬರ ವರ್ಷದಲ್ಲಿಯೂ ಇದೇ ದಿನ 19.34 ಟಿಎಂಸಿ ನೀರು ಇತ್ತು ಎನ್ನುವುದು ಗಮನಾರ್ಹ. ಈ ಕುಸಿತಕ್ಕೆ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿನ ಮಳೆ ಕೊರತೆಯೇ ಪ್ರಮುಖ ಕಾರಣವಾಗಿದೆ. ಕೊಡಗು ಜಿಲ್ಲೆಯಲ್ಲಿ 45%, ಮೈಸೂರು 58%, ಚಿಕ್ಕಮಗಳೂರು 42%, ಹಾಸನ 33% ಹಾಗೂ ಮಂಡ್ಯದಲ್ಲಿ 27% ಮಳೆ ಕೊರತೆ ದಾಖಲಾಗಿದೆ.
ಕೃಷ್ಣಾ ಕಣಿವೆಯ ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಜಲಾನಯನ ಪ್ರದೇಶಗಳಲ್ಲಿಯೂ ಮಳೆ ಕೊರತೆ ಕಂಡುಬಂದಿದೆ. ಆದರೆ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಉತ್ತಮ ಮಳೆಯಿಂದ ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಾಗಿ ನೀರಿನ ಸಂಗ್ರಹ ಸುಧಾರಿಸಿದೆ. ಇದೇ ವೇಳೆ ಘಟಪ್ರಭಾ ಜಲಾಶಯಕ್ಕೆ ಜುಲೈನಲ್ಲಿ ಉತ್ತಮ ಒಳಹರಿವು ಬಂದಿದ್ದರೂ, ಜುಲೈ 24ರಂದು ಕೇವಲ 27.24 ಟಿಎಂಸಿ ನೀರು ಮಾತ್ರ ಇತ್ತು. ಕಳೆದ ವರ್ಷ ಇದೇ ದಿನ 46.35 ಟಿಎಂಸಿ ನೀರು ಸಂಗ್ರಹವಾಗಿತ್ತು.
ಇತ್ತೀಚೆಗೆ ಕ್ರೆಸ್ಟ್ ಗೇಟ್ಗಳನ್ನು ಬದಲಾಯಿಸಲಾಗಿದ್ದ ತುಂಗಭದ್ರಾ ಜಲಾಶಯದಲ್ಲೂ ಕೇವಲ 29.47 ಟಿಎಂಸಿ ನೀರು ಮಾತ್ರ ಇದೆ. ಇದರ ಗರಿಷ್ಠ ಸಾಮರ್ಥ್ಯ 105.79 ಟಿಎಂಸಿ ಆಗಿದ್ದು, ಕಳೆದ ವರ್ಷ ಇದೇ ದಿನ 78.24 ಟಿಎಂಸಿ ನೀರು ಸಂಗ್ರಹವಾಗಿತ್ತು.
ರಾಜ್ಯದ ಅತಿದೊಡ್ಡ ಜಲಾಶಯವಾದ ಲಿಂಗನಮಕ್ಕಿಯಲ್ಲಿ 151.75 ಟಿಎಂಸಿ ಸಾಮರ್ಥ್ಯದ ಎದುರು ಕೇವಲ 38.76 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಇದು 2023ರ ಬರ ವರ್ಷಕ್ಕಿಂತಲೂ ಸುಮಾರು 10 ಟಿಎಂಸಿ ಕಡಿಮೆ ಎನ್ನಲಾಗಿದೆ. ಅದೇ ರೀತಿ ಸೂಪಾ ಜಲಾಶಯದಲ್ಲಿ ಪ್ರಸ್ತುತ 46.79 ಟಿಎಂಸಿ ನೀರು ಮಾತ್ರ ಇದ್ದು, ಅದರ ಗರಿಷ್ಠ ಸಾಮರ್ಥ್ಯಕ್ಕಿಂತ ಸುಮಾರು 100 ಟಿಎಂಸಿ ಕಡಿಮೆ ನೀರು ಸಂಗ್ರಹವಾಗಿದೆ.
ಜಲಾಶಯಗಳನ್ನು ಎರಡು ವರ್ಷಗಳ ಕುಡಿಯುವ ನೀರಿನ ಅಗತ್ಯ ಹಾಗೂ ಕನಿಷ್ಠ ಒಂದು ಬೆಳೆ ಹಂಗಾಮಿನ ನೀರಾವರಿ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡೇ ನಿರ್ಮಿಸಲಾಗಿದೆ. ಆದರೆ ಸಮರ್ಪಕ ನಿರ್ವಹಣೆ ಮತ್ತು ಯೋಜನೆಯ ಕೊರತೆಯಿಂದಾಗಿ ಜಲಾಶಯಗಳು ನಿರೀಕ್ಷೆಗಿಂತ ಮೊದಲೇ ಖಾಲಿಯಾಗುತ್ತಿವೆ ಎಂದು ಐಎಂಡಿಯ ಮಾಜಿ ಮಹಾನಿರ್ದೇಶಕ ಡಾ. ಕೆ.ಜೆ. ರಮೇಶ್ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ.
ಇದನ್ನೂ ಓದಿ: ಕರಾವಳಿಯ 3 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ, ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಾಧ್ಯತೆ
ಬೇಸಿಗೆ ಬೆಳೆಗಳಿಗೆ ಜಲಾಶಯದ ನೀರನ್ನು ಬಿಡಬಾರದು ಎಂಬ ನಿಯಮ ಇದ್ದರೂ, ರೈತರ ಒತ್ತಡದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಮುಂದಿನ ಹಂಗಾಮಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ ಎಂದು ಡಾ. ಕೆ.ಜೆ. ರಮೇಶ್ ಅಭಿಪ್ರಾಯಪಟ್ಟಿರುವುದನ್ನೂ ವರದಿ ಉಲ್ಲೇಖಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ