ಗೃಹ ಆರೋಗ್ಯ ಯೋಜನೆ: ಮುಂದಿನ ತಿಂಗಳಿನಿಂದ ಮನೆ ಮನೆಗೆ ಬರಲಿದೆ ಕ್ಲಿನಿಕ್, ಚಿಕಿತ್ಸೆ ಜೊತೆ ಮನೆ ಬಾಗಿಲಿಗೆ ಉಚಿತ ಔಷಧಿ

Gruha Arogya Scheme: ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಗ್ಯಾರಂಟಿ ಮೇಲೆ ಗ್ಯಾರಂಟಿಗಳನ್ನು ಕೊಟ್ಟು ಉಚಿತ ಯೋಜನೆಗಳನ್ನು ಜಾರಿ ಮಾಡಿದ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಂದು ಗ್ಯಾರಂಟಿ ಮಾದರಿಯ ಯೋಜನೆ ಜಾರಿ ಮಾಡಲು ಮುಂದಾಗಿದೆ. ಜನರಿಗೆ ಆರೋಗ್ಯ ಭಾಗ್ಯ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ. ಆ ಕುರಿತ ವಿವರ ಇಲ್ಲಿದೆ.

ಗೃಹ ಆರೋಗ್ಯ ಯೋಜನೆ: ಮುಂದಿನ ತಿಂಗಳಿನಿಂದ ಮನೆ ಮನೆಗೆ ಬರಲಿದೆ ಕ್ಲಿನಿಕ್, ಚಿಕಿತ್ಸೆ ಜೊತೆ ಮನೆ ಬಾಗಿಲಿಗೆ ಉಚಿತ ಔಷಧಿ
ಗೃಹ ಆರೋಗ್ಯ ಯೋಜನೆ: ಮುಂದಿನ ತಿಂಗಳಿನಿಂದ ಚಿಕಿತ್ಸೆ ಜೊತೆ ಮನೆ ಬಾಗಿಲಿಗೆ ಉಚಿತ ಔಷಧಿ
Updated By: Ganapathi Sharma

Updated on: Aug 24, 2024 | 6:58 PM

ಬೆಂಗಳೂರು, ಆಗಸ್ಟ್​ 24: ಆರೋಗ್ಯವೇ ಭಾಗ್ಯ ಎಂದು ಎಷ್ಟೇ ಹೇಳಿದರೂ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವೇನಲ್ಲ. ಅದರಲ್ಲಿಯೂ ಬಿಪಿ, ಶುಗರ್ ಎಂದರೆ ಸಾಮಾನ್ಯ ಎಂದು ನಿರ್ಲಕ್ಷ್ಯ ಮಾಡುವವರ ಸಂಖ್ಯೆ ಹೆಚ್ಚಳ ಆಗಿದೆ. ಈ ಕಾರಣಕ್ಕಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ‘ಗೃಹ ಆರೋಗ್ಯ’ ಯೋಜನೆ ಜಾರಿ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಕೆ ಮಾಡಲಾಗಿದ್ದು, ಸಚಿವ ಸಂಪುಟದಲ್ಲಿ ಈಗಾಗಲೇ ಅನುಮೋದನೆ ದೊರೆತಿದೆ. ಮುಂದಿನ ತಿಂಗಳಿನಿಂದ ‘ಗೃಹ ಆರೋಗ್ಯ’ ಯೋಜನೆ ಜಾರಿಯಾಗಲಿದೆ.

ಕೋವಿಡ್ ಬಳಿಕ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಂದಲ್ಲ ಒಂದು ವೈರಸ್ ಹಾವಳಿ ಶುರುವಾಗಿದ್ದು ಜನರ ಜೀವ ತಗೆಯುತ್ತಿವೆ. ಅದರಲ್ಲೂ ಕೋಮಾರ್ಬಿಟಿಸ್ ರೋಗಿಗಳು ಸಾಂಕ್ರಾಮಿಕ ಖಾಯಿಲೆಗಳಿಂದ ಪರದಾಡುವಂತಾಗಿದೆ. ಹೆಚ್ಚುತ್ತಿರುವ ಖಾಯಿಲೆಗಳಿಂದ ಜನರ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆರೋಗ್ಯ ಇಲಾಖೆಯು ಬಿಪಿ, ಶುಗರ್, ಕ್ಯಾನ್ಸರ್ ಜೊತೆಗೆ ಕೋಮಾರ್ಬಿಟಿಸ್ ಹೊಂದಿರುವ ರೋಗಿಗಳ ಪಟ್ಟಿ ಮಾಡಿದ್ದು ಇವರಿಗೆಲ್ಲ ಮನೆ ಬಾಗಿಲಿನಲ್ಲಿಯೇ ಚಿಕಿತ್ಸೆ ಹಾಗೂ ಔಷಧ ನೀಡುವ ಯೋಜನೆಗೆ ಆರೋಗ್ಯ ಇಲಾಖೆ ಮುಂದಾಗಿದೆ.

ಯಾರಿಗೆಲ್ಲ ಮನೆಯಲ್ಲೇ ಚಿಕಿತ್ಸೆ?

ಹೃದಯ, ಕಿಡ್ನಿ, ಕ್ಯಾನ್ಸರ್, ಬಿಪಿ, ಮಧುಮೇಹ, ಇಸಿಜಿ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆ ನಡೆಸಿ ಆಯ್ದ ಸಮಸ್ಯೆಗಳಿಗೆ ಅಗತ್ಯವಿರುವಷ್ಟು ಔಷಧಗಳನ್ನು ಸ್ಥಳದಲ್ಲೇ ಉಚಿತವಾಗಿ ನೀಡಲು ಇಲಾಖೆ ಮುಂದಾಗಿದೆ. ಮುಂದಿನ ತಿಂಗಳಿನಿಂದ ರಾಜ್ಯದ ಜನರಿಗೆ ಮನೆ ಮನೆಗೆ ಕ್ಲಿನಿಕ್ ಸೇವೆ ನೀಡಲು ಇಲಾಖೆ ಯೋಜನೆ ಹಾಕಿಕೊಂಡಿದೆ. ಚಿಕಿತ್ಸೆ ಜೊತೆ ಉಚಿತ ಔಷಧಿಯೂ ಮನೆ ಬಾಗಿಲಿಗೆ ಬರಲಿದೆ.

ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಯೋಜನೆ ಜಾರಿ

ಮುಂದಿನ ತಿಂಗಳು ರಾಜಧಾನಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ‘ಗೃಹ ಆರೋಗ್ಯ’ ಯೋಜನೆ ಜಾರಿಗೆ ಆರೋಗ್ಯ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ಪತ್ನಿಗೆ ಕುಡಿತದ ಚಟ ಬಿಡಿಸಲು ರಿಹ್ಯಾಬ್​​ ಕೇಂದ್ರಕ್ಕೆ ಸೇರಿಸಿದ ಗಂಡ: ಹೆಂಡತಿ ಕೆಲಸಗಾರನ ಜೊತೆ ಓಡಿಹೋದಳು!

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗೃಹ ಆರೋಗ್ಯ ಯೋಜನೆ ಜಾರಿ ತರಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಮುಂದಿನ ತಿಂಗಳು ಗೃಹ ಆರೋಗ್ಯ ಯೋಜನೆ ಜಾರಿಯಾಗಲಿದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗೂಂಡುರಾವ್ ತಿಳಿಸಿದ್ದಾರೆ.

ಪ್ರತ್ಯೇಕ ಘಟಕ, ವೈದ್ಯರ ನೇಮಕಾತಿ

‘ಗೃಹ ಆರೋಗ್ಯ’ ಯೋಜನೆ ಜಾರಿಗೆಂದೇ ಮೊಬೈಲ್ ಯೂನಿಟ್, ಪ್ರತ್ಯೇಕ ಸಿಬ್ಬಂದಿ, ವೈದ್ಯರ ನೇಮಕಾತಿಗೆ ಇಲಾಖೆ ಮುಂದಾಗಿದೆ. ಆರಂಭದಲ್ಲಿಯೇ ಖಾಯಿಲೆ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಮೂಲಕ ಬಡ ಜನರ ಸಾವಿನ ಪ್ರಮಾಣ ಕಡಿಮೆ ಮಾಡಿ ಉತ್ತಮ ಆರೋಗ್ಯ ಇರುವಂತೆ ನೋಡಿಕೊಳ್ಳಯವ ಉದ್ದೇಶದಿಂದ ಈ ಯೋಜನೆಗೆ ಜಾರಿಗೆ ಇಲಾಖೆ ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:52 pm, Sat, 24 August 24