
ಮಡಿಕೇರಿ, ಆಗಸ್ಟ್ 26: ಆಗಸ್ಟ್ ಕೊನೇ ವಾರದಲ್ಲಿ ಕೊಡಗಿನಲ್ಲಿ (Kodagu) ಮಳೆ (Monsoon Rain) ಅಬ್ಬರ ಮುಂದುವರಿದಿದ್ದು, ಹಲವು ಕಡೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದಲ್ಲಿ ಭಾರಿ ಮಳೆಯಿಂದ ಗುಡ್ಡದ ಮಣ್ಣು ರಸ್ತೆಗೆ ಕುಸಿದು ಬಿದ್ದಿದ್ದು, ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಚಾಮುಂಡೇಶ್ವರಿ ನಗರ ಗುಡ್ಡ ಪ್ರದೇಶದಲ್ಲಿರುವುದರಿಂದ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳಿಗೆ ಭೂಕುಸಿತದ ಆತಂಕ ಎದುರಾಗುತ್ತದೆ. ಹಲವು ವರ್ಷಗಳ ಹಿಂದೆ ಗುಡ್ಡವನ್ನು ಕಡಿದು ಮನೆಗಳನ್ನು ನಿರ್ಮಿಸಿರುವ ಪ್ರದೇಶ ಇದಾಗಿದ್ದು, 2018 ಮತ್ತು 2019ರ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಇಲ್ಲಿನ ಹಲವು ಮನೆಗಳು ಕೊಚ್ಚಿಹೋಗಿದ್ದವು. ಅನೇಕ ಕುಟುಂಬಗಳು ನಿರಾಶ್ರಿತರಾಗಿ, ಸರ್ಕಾರದಿಂದ ಪುನರ್ವಸತಿ ಪಡೆದಿದ್ದರೆ, ಕೆಲವು ಕುಟುಂಬಗಳು ಇಂದಿಗೂ ಇದೇ ಪ್ರದೇಶದಲ್ಲಿ ವಾಸಿಸುತ್ತಿವೆ.
ಗುಡ್ಡದ ಒಳಭಾಗದಲ್ಲಿ ಅಳವಡಿಸಿದ್ದ ನೀರಿನ ಪೈಪ್ವೊಂದು ಕೆಲ ದಿನಗಳ ಹಿಂದೆ ಒಡೆದು ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಭಾರಿ ಮಳೆಯಾಗಿದ್ದು, ರಸ್ತೆ ಬದಿಯ ಮಣ್ಣು ಕೊಚ್ಚಿಹೋಗಿ ಗುಡ್ಡ ಕುಸಿದಿದೆ.
ಈ ವೇಳೆ ಸ್ಥಳೀಯ ನಿವಾಸಿ ಪುಂಡಲೀಕ ಅವರ ಸೌದೆ ಶೆಡ್ ಮಣ್ಣಿನೊಂದಿಗೆ ಕೊಚ್ಚಿಹೋಗಿದೆ. ಕಾರು ನಿಲುಗಡೆ ಪ್ರದೇಶವೂ ಮಣ್ಣಿನಿಂದ ಆವೃತವಾಗಿದೆ.
ಗುಡ್ಡ ಕುಸಿಯುವ ಕೆಲವೇ ಸೆಕೆಂಡ್ಗಳ ಮೊದಲು ಸ್ಥಳೀಯ ನಿವಾಸಿ ನೂರ್ ಜಹಾನ್ ಇದೇ ಮಾರ್ಗವಾಗಿ ಸಾಗಿದ್ದರು. ಅವರು ಮೇಲಿನ ರಸ್ತೆಯನ್ನು ತಲುಪಿದ ಕೆಲವೇ ಕ್ಷಣಗಳಲ್ಲಿ ಗುಡ್ಡದ ಮಣ್ಣು ಕುಸಿದು ರಸ್ತೆಗೆ ಬಿದ್ದಿದೆ. ಕೆಲವೇ ಸೆಕೆಂಡ್ಗಳಷ್ಟು ತಡವಾಗಿದ್ದರೂ ಮಣ್ಣು ತಮ್ಮ ಮೇಲೆಯೇ ಕುಸಿದು ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇನ್ನು ಮಡಿಕೇರಿಯ ಮಂಗಳಾದೇವಿ ನಗರದಲ್ಲೂ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ರಸ್ತೆಗೆ ಹರಿದುಬಂದಿದೆ. ರಸ್ತೆಗಳು ಮಳೆ ನೀರಿನಿಂದ ಆವೃತವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ. ಈ ನಡುವೆ ಕೊಡಗಿನಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಭಾರಿ ಮಳೆಗೆ ಮೋಡ ಬಿತ್ತನೆ ಕಾರಣವೇ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಆದರೆ ಈ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:31 pm, Wed, 26 August 26