AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ ಸ್ಫೋಟ: ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ರಾಜೀನಾಮೆಗೆ ನಿರ್ಧಾರ

ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಏರ್ಪಟ್ಟಿರುವ ಗೊಂದಲ ಇದೀಗ ತಾರಕಕ್ಕೇರಿದೆ. ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಇದೇ ವಿಚಾರವಾಗಿ ನಜೀರ್ ಅಹ್ಮದ್ ಅವರು ಸಭಾಪತಿ ಹೊರಟ್ಟಿಯನ್ನು ಭೇಟಿ ಮಾಡಲಿದ್ದಾರೆ. ಭೇಟಿಗೆ ಸಮಯ ಕೇಳಿದ್ದಾರೆ.

ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ ಸ್ಫೋಟ: ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ರಾಜೀನಾಮೆಗೆ ನಿರ್ಧಾರ
ನಜೀರ್ ಅಹ್ಮದ್, ಸಿಎಂ ಸಿದ್ದರಾಮಯ್ಯ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Mar 27, 2024 | 1:47 PM

Share

ಕೋಲಾರ, ಮಾರ್ಚ್​.27: ಕೋಲಾರ ಲೋಕಸಭಾ ಕ್ಷೇತ್ರದ (Lok Sabha Election) ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಸಚಿವ ಕೆ.ಹೆಚ್​​.ಮುನಿಯಪ್ಪ (KH Muniyappa) ಅವರು ತಮ್ಮ ಅಳಿಯನಿಗೆ ಟಿಕೆಟ್ ನೀಡುವಂತೆ ಪಟ್ಟುಹಿಡಿದಿದ್ದಾರೆ. ರಮೇಶ್​ ಕುಮಾರ್​ ಬಣ ತಾವು ಬೆಂಬಲಿಸುವ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ರಾಜೀನಾಮೆ ನೀಡುವುದಾಗಿ ಐವರು ಶಾಸಕರು ಬೆದರಿಕೆ ಹಾಕಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಸಭೆ ನಡೆಸಿ ಟಿಕೆಟ್​ ಆಕಾಂಕ್ಷಿ ಎಲ್​.ಹನುಮಂತಯ್ಯ ಜೊತೆ ಮಾತುಕತೆ ನಡೆಸಿದರೂ ಭಿನ್ನಮತ ಶಮನಗೊಂಡಿಲ್ಲ. ಇದೀಗ ಸ್ವತಃ ಸಿಎಂ ಸಿದ್ದರಾಮಯ್ಯ (Siddaramaiah) ರಾಜಕೀಯ ಕಾರ್ಯದರ್ಶಿಯೇ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದು ಕಾಂಗ್ರೆಸ್​ಗೆ ಶಾಕ್ ನೀಡಿದೆ.

ಕೋಲಾರ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಬಿಕ್ಕಟ್ಟು ತಾರಕಕ್ಕೇರಿದೆ. ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡುವುದನ್ನು ಖಂಡಿಸಿ ಕೋಲಾರ ಭಾಗದ ಶಾಸಕರು, ಸಚಿವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದರ ಜೊತೆಗೆ ಈಗ MLC ಸ್ಥಾನಕ್ಕೆ ರಾಜೀನಾಮೆ ನೀಡಲು ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ಆಗಿರುವ ನಜೀರ್ ಅಹ್ಮದ್ ನಿರ್ಧಾರ ಮಾಡಿದ್ದಾರೆ. ಕೋಲಾರ ಬಣ ರಾಜಕೀಯ ತಡೆಯುವಲ್ಲಿ ಸಿಎಂ, ಡಿಸಿಎಂ ವಿಫಲರಾಗಿದ್ದಾರೆ. ಕೋಲಾರ ನಾಯಕರ ಪ್ರತಿಷ್ಠೆ ಮುಂದೆ ಸ್ವತಃ ಸಿಎಂ, ಡಿಸಿಎಂ ಫೇಲ್ ಆಗಿದ್ದಾರೆ. ಸಿಎಂ ಅತ್ಯಾಪ್ತರಾಗಿರುವ ಬಹುತೇಕ ಶಾಸಕರು ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.

ಸಭಾಪತಿ ಭೇಟಿಗೆ ಆಗಮಿಸುತ್ತಿರುವ ನಜೀರ್ ಅಹ್ಮದ್

ಇನ್ನು ನಜೀರ್ ಅಹ್ಮದ್ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದು ಸಭಾಪತಿ ಹೊರಟ್ಟಿ ಭೇಟಿಗೆ ಆಗಮಿಸುತ್ತಿದ್ದಾರೆ. ಸಭಾಪತಿ ಹೊರಟ್ಟಿ ಅವರು ಕರೆ ಮಾಡಿ ರಾಜೀನಾಮೆ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ ಸ್ಫೋಟ: ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ರಾಜೀನಾಮೆ ನೀಡುವುದಾಗಿ ಐವರು ಶಾಸಕರು ಬೆದರಿಕೆ

ಬೆಂಗಳೂರಿಗೆ ಬರಲಿರುವ ಯು.ಟಿ.ಖಾದರ್

ಮಂಗಳೂರಿನಲ್ಲಿರುವ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಭೇಟಿಗೆ ಕೋಲಾರ ಶಾಸಕರು ಸಮಾಯವಕಾಶ ಕೇಳಿದ್ದು ಸಚಿವರು, ಶಾಸಕರು ಮಂಗಳೂರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಸದ್ಯ ಯು.ಟಿ. ಖಾದರ್ ಅವರೇ ಬೆಂಗಳೂರಿಗೆ ಬರುವ ಸಾಧ್ಯೆತೆ ಇದ್ದು ಟಿಕೆಟ್ ಕ್ಯಾನ್ಸಲ್ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಸಚಿವ ಎಂ.ಸಿ ಸುಧಾಕರ್, ಕಾಂಗ್ರೆಸ್​ ಶಾಸಕರಾದ ಕೊತ್ತೂರು ಮಂಜುನಾಥ್ & ನಂಜೇಗೌಡ ಟಿಕೆಟ್ ಬುಕ್ ಮಾಡಿದ್ದು ಸಂಜೆ ವಿಮಾನದಲ್ಲಿ ಪ್ರಯಾಣ ಬೆಳೆಸಬೇಕಿತ್ತು. ಸದ್ಯ ಟಿಕೆಟ್ ಕ್ಯಾನ್ಸಲ್ ಮಾಡಲಾಗಿದೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಕೋಲಾರ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಸಮಾಧಾನ ಇರುವುದು ನಿಜ. ಎಡ ಗೈ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಒತ್ತಾಯವಿದೆ. ಕೋಲಾರ ಜಿಲ್ಲೆಯ ಕೈ ನಾಯಕರ ಜೊತೆ ಮಾತಾಡಿದ್ದೇನೆ ಎಂದು ತಿಳಿಸಿದ್ದಾರೆ.

ಕೋಲಾರ ಭಿನ್ನಮತದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್​ಗೆ ಮಾಹಿತಿ

ಕೋಲಾರ ಭಿನ್ನಮತದ ಬಗ್ಗೆ ರಾಜ್ಯ ಕಾಂಗ್ರೆಸ್​ ನಾಯಕರು ಹೈಕಮಾಂಡ್​ಗೆ ಮಾಹಿತಿ ನೀಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲಗೆ ಸಚಿವರು, ಶಾಸಕರು, ಎಂಎಲ್​ಸಿಗಳ ರಾಜೀನಾಮೆ ಕುರಿತು ಮಾಹಿತಿ ರವಾನಿಸಲಾಗಿದ್ದು ರಾಜೀನಾಮೆ ನೀಡದಂತೆ ತಡೆಯಲು ಸುರ್ಜೇವಾಲ ಸೂಚಿಸಿದ್ದಾರೆ. ನಜೀರ್ ಮನವೊಲಿಕೆಗೆ ಭೈರತಿ ಸುರೇಶ್, ಪ್ರದೀಪ್ ಈಶ್ವರ್ ಕೋಲಾರಕ್ಕೆ ಆಗಮಿಸುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:55 pm, Wed, 27 March 24