AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರದಲ್ಲಿ ಪಿಂಚಣಿ ಹಣಕ್ಕೂ ಪರದಾಟ: ನಿತ್ಯ ಅಲೆದು ಅಲೆದು ಕಂಗಾಲಾದ ವೃದ್ಧರು, ಅಂಗವಿಕಲ ಪಿಂಚಣಿದಾರರು

ಕೋಲಾರದಲ್ಲಿ ವೃದ್ಧಾಪ್ಯ, ಅಂಗವಿಕಲ ಹಾಗೂ ವಿಧವಾ ವೇತನ ಪಡೆಯಲು ಪಿಂಚಣಿದಾರರು ಅಂಚೆ ಕಚೇರಿಗಳಲ್ಲಿ ತೀವ್ರ ಪರದಾಟ ನಡೆಸುತ್ತಿದ್ದಾರೆ. ಹಣಕ್ಕಾಗಿ ದಿನಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ 30 ರಿಂದ 50 ರೂ. ಕಮಿಷನ್ ನೀಡುವುದು ಅನಿವಾರ್ಯವಾಗಿದೆ. ಹಿರಿ ಜೀವಗಳು ತಮ್ಮ ಹಣಕ್ಕಾಗಿ ನಿತ್ಯ ಅಲೆಯುವಂತಾಗಿದೆ.

ಕೋಲಾರದಲ್ಲಿ ಪಿಂಚಣಿ ಹಣಕ್ಕೂ ಪರದಾಟ: ನಿತ್ಯ ಅಲೆದು ಅಲೆದು ಕಂಗಾಲಾದ ವೃದ್ಧರು, ಅಂಗವಿಕಲ ಪಿಂಚಣಿದಾರರು
ಪಿಂಚಣಿ ಹಣಕ್ಕಾಗಿ ಕಾದು ಕುಳಿತಿರುವ ವೃದ್ಧರುImage Credit source: tv9 kannada
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Apr 08, 2026 | 7:19 PM

Share

ಕೋಲಾರ, ಏಪ್ರಿಲ್​ 08: ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ (pension) ಇವೆಲ್ಲವೂ ಸರ್ಕಾರ ಮನೆ ಬಾಗಿಲಿಗೆ ತಲುಪಬೇಕಾದ ಯೋಜನೆಗಳು. ಆ ಹಣವನ್ನೇ ನಂಬಿ ಹಿರಿಯ ಜೀವಗಳು ಬದುಕುತ್ತಿವೆ. ಆದರೆ ತಮ್ಮ ಹಣಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಡುಬಿಸಿಲಿನಲ್ಲಿ ಅಂಚೆ ಕಚೇರಿ ಬಳಿ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲದೆ ಕಮಿಷನ್ ಕೊಟ್ಟರು ಹಣ ಮಾತ್ರ ಸರಿಯಾದ ಸಮಯಕ್ಕೆ ಸಿಗದಿರುವುದು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಎಲ್ಲಾ ರೀತಿಯ ಪಿಂಚಣಿದಾರರಿಗೆ ಮನೆ ಬಾಗಿಲಿಗೆ ಪಿಂಚಣಿ ಹಣ ತಿಂಗಳ ಒಳಗಾಗಿ ತಲುಪಿಸುತ್ತಿದ್ದೇವೆ,  ಜೊತೆಗೆ ಗ್ಯಾರಂಟಿಗಳ ಮೂಲಕ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇಲ್ಲಿ ತಮ್ಮ ಖಾತೆಯಲ್ಲಿರುವ ಹಣಕ್ಕಾಗಿ ದಿನಗಟ್ಟಲೇ ಕಾದು ವಾಪಸ್ ಹೋಗಬೇಕಿದೆ. ಕೋಲಾರ ಹೊರ ವಲಯದಲ್ಲಿರುವ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಅಂಚೆ ಕಚೇರಿ ಶಾಖೆ ಇದೆ. ಇಲ್ಲಿ ರಮೇಶ್ ಎಂಬ ಪೋಸ್ಟ್‌ ಮಾಸ್ಟರ್‌ ಜೊತೆಗೆ ಒಂದಷ್ಟು ಜನ ಕೆಲಸ ಮಾಡುತ್ತಾರೆ.

ಇದನ್ನೂ ಓದಿ: ಅನ್ನ, ನೀರು ಸಿಗದೇ ವಾನರ ಸೇನೆ ಪರದಾಟ: ಕಂಡಕಂಡವರ ಮೇಲೆ ದಾಳಿ; 15ಕ್ಕೂ ಹೆಚ್ಚು ಜನ್ರರಿಗೆ ಗಾಯ

ಕೋಲಾರ ತಾಲ್ಲೂಕಿನ ವಿನೋಭ ನಗರ, ದೊಡ್ಡ ಹಸಾಳ, ಚಿಕ್ಕ ಹಸಾಳ, ಗಾಜದಿನ್ನೆ, ಪಾಕರಹಳ್ಳಿ, ಈಕಂಬಳ್ಳಿ ಸೇರಿ ಒಂದಷ್ಟು ಗ್ರಾಮಗಳ ಜನರು ಇದೆ ಅಂಚೆ ಕಚೇರಿಗೆ ಬರಬೇಕು. ಆದರೆ ಇಲ್ಲಿ ಕೆಲಸ ಮಾಡುವವರು ಸರಿಯಾದ ಸಮಯಕ್ಕೆ ವೃದ್ಧರು, ಅಂಗವಿಕಲರು, ಮಹಿಳೆಯರಿಗೆ ಪಿಂಚಣಿ ಹಣ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ದಿನಗಟ್ಟಲೇ ಕಾದು ಕುಳಿತರೂ ಹಣ ಇಲ್ಲ ಎಂದು ವಾಪಸ್ ಕಳುಹಿಸುತ್ತಾರೆ.

ಪಿಂಚಣಿದಾರರು ಹೇಳುವುದೇನು?

ಇದು ಪ್ರತಿ ತಿಂಗಳು ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ. ಹಾಗಾಗಿ ಪ್ರತಿನಿತ್ಯ ಇಳಿ ವಯಸ್ಸಿನ ಜೀವಗಳು ಕಚೇರಿಗೆ ಬರುವುದು, ವಾಪಸ್ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ತಮಗೆ ಬರುವ ಒಂದು ಸಾವಿರ ರೂ. ಪಿಂಚಣಿ ಹಣ ಪಡೆಯಲು ನಿತ್ಯ ಪರದಾಟ ಮಾಡಬೇಕಿದೆ ಎಂಬುವುದು ನಂಜಪ್ಪ ಅವರ ಮಾತು.

ಪ್ರತಿ ತಿಂಗಳು ವಿವಿಧ ಪಿಂಚಣಿದಾರರ ಖಾತೆಗಳಿಗೆ ಸರ್ಕಾರದಿಂದ ಹಣ ಹಾಕಲಾಗುತ್ತದೆ. ಹೀಗೆ ಖಾತೆಗಳಿಗೆ ಹಾಕಲಾದ ಹಣವನ್ನು ತೆಗೆದುಕೊಳ್ಳು ಅಂಚೆ ಕಚೇರಿಗೆ ಬರುವ ಪಿಂಚಣಿದಾರರಿಗೆ ಇಲ್ಲಿನ ಅಂಚೆ ಕಚೇರಿಯ ಸಿಬ್ಬಂದಿಗಳು ಹಣ ಇಲ್ಲ, ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಸಬೂಬು ಹೇಳಿ ಕಳಿಸುತ್ತಾರೆ. ಇಳಿವಯಸ್ಸಿನ ವೃದ್ದರು ಅಂಗವಿಕಲರು ತಮ್ಮ ಹಣಕ್ಕಾಗಿ ಅಂಚೆ ಕಚೇರಿಗೆ ಅಲೆದಾಡಬೇಕು. ಒಮ್ಮೊಮ್ಮೆ ಅವರು ಅಂಚೆ ಕಚೇರಿಯಲ್ಲಿ ಇಲ್ಲ ಅಂದರೆ ಅವರು ಬರುವವರೆಗೂ ಕಾಯಬೇಕು. ಅಂಚೆ ಕಚೇರಿಯ ಸುತ್ತಮುತ್ತ ಇರುವ ಮರಗಳ ಕೆಳಗೆ, ಆವರಣದಲ್ಲಿ ಹೀಗೆ ಎಲ್ಲೆಂದರಲ್ಲಿ ಚಾತಕ ಪಕ್ಷಿಗಳಂತೆ ಕಾದು ಕುಳಿತುಕೊಳ್ಳಬೇಕು.

30ರಿಂದ 50 ರೂ ಕಮಿಷನ್

ಸರ್ಕಾರ ಕೊಡುವ ಹಣವನ್ನು ಪಡೆಯಲು ಹಿರಿಯ ಜೀವಗಳು ಪರದಾಡುವ ಸ್ಥಿತಿಯನ್ನು ಕಂಡರೆ ನಿಜಕ್ಕೂ ಅಯ್ಯೋ ಎನ್ನಿಸುತ್ತದೆ. ನಮಗೆ ಇಲ್ಲಿ ಬಂದು ಕಾಯೋದು ಕಷ್ಟವಾಗುತ್ತಿದೆ. ಇಲ್ಲಿ ಕುಡಿಯೋದಕ್ಕೆ ಕನಿಷ್ಟ ನೀರು ಇಲ್ಲ. ನಮ್ಮ ಗ್ರಾಮಗಳಿಗೆ ಬಂದು ಹಣ ಕೊಟ್ಟರೆ ಅನುಕೂಲವಾಗುತ್ತೆ. ಆದರೆ ಅಂಚೆ ಕಚೇರಿ ಬಳಿಗೆ ಬಂದರೆ 1200 ಪಿಂಚಣಿಗೆ 30 ರೂ ಕಮಿಷನ್​ ಹಾಗೂ ಗ್ರಾಮಗಳಿಗೆ ಅವರೇ ಬಂದು ಕೊಟ್ಟರೆ 50 ರೂ ಕಮಿಷನ್​ ಕೊಡಬೇಕಿದೆ. ನಿತ್ಯ ಅಂಚೆ ಕಚೇರಿಗೆ ಬೆಳ್ಳಿಗ್ಗೆ 9 ಗಂಟೆಗೆ ಬಂದು ಕುಳಿತರೆ ಅಂಚೆ ಕಚೇರಿ ಸಿಬ್ಬಂದಿ 12 ಗಂಟೆಗೆ ಹಣ ಇಲ್ಲ ಎಂದು ನೆಪ ಹೇಳುತ್ತಾರೆ. ಹಣ ಸಿಗದೆ ಪಿಂಚಣಿದಾರರು ನಿರಾಸೆಯಿಂದ ವಾಪಸ್​ ತೆರಳುತ್ತಾರೆ.

ಇದನ್ನೂ ಓದಿ: BESCOM Power Cut: ಮಾರ್ಚ್ 22 ರಿಂದ 25 ರ ವರೆಗೆ ಬೆಸ್ಕಾಂ ವ್ಯಾಪ್ತಿಯ ವಿವಿಧೆಡೆ ವಿದ್ಯುತ್ ಕಡಿತ, ವಿವರ ಇಲ್ಲಿದೆ

ಪ್ರತಿ ತಿಂಗಳು ಸರ್ಕಾರ ಕೊಡುವ ಸಾವಿರ ರೂ ಸಣ್ಣ ಹಣವಾಗಿದ್ದರೂ ಅದನ್ನೇ ನಂಬಿಕೊಂಡು ಗಂಜಿ ಕುಡಿಯುವ ಜೀವಕ್ಕೆ ಅದು ದೊಡ್ಡ ಮೊತ್ತ. ಹಾಗಾಗಿ ಇಂತಹ ಹಿರಿಯ, ಅಂಗವಿಕಲರನ್ನ ಅಲೆದಾಡಿಸುವ ಅಂಚೆ ಕಚೇರಿಗಳು, ಪೋಸ್ಟ್ ಮಾಸ್ಟರ್​ಗಳ ವಿರುದ್ಧ ಕ್ರಮಕೈಗೊಂಡು ಇವರ ಆತಂಕ ನಿವಾರಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us