ಡಿಕೆ ಸುರೇಶ್​ ಸೋಲಿಸಿದ್ದು ಸಿದ್ದರಾಮಯ್ಯ: ಉರಿಯುವ ಬೆಂಕಿಗೆ ತುಪ್ಪ ಸುರಿದ ಅಶೋಕ್

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್​​ನ ಡಿಕೆ ಸುರೇಶ್​ ಸೋಲುಕಂಡಿದ್ದು, ರಾಜ್ಯ ರಾಜಕಾರಣದಲ್ಲಿ ಅಚ್ಚರಿಕೆಗೆ ಕಾರಣವಾಗಿದೆ. ಅಲ್ಲದೇ ಡಿಕೆ ಸುರೇಶ್​ ಅವರ ಸೋಲಿಗೆ ಕಾರಣವೇನು ಎನ್ನುವುದರ ಬಗ್ಗೆ ಇನ್ನೂ ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯ ವಿಪಕ್ಷ ನಾಯಕ ಅಶೋಕ್​ ಅವರು ಡಿಕೆ ಸುರೇಶ್​ ಸೋಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್​ನಲ್ಲಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಡಿಕೆ ಸುರೇಶ್​ ಸೋಲಿಸಿದ್ದು ಸಿದ್ದರಾಮಯ್ಯ: ಉರಿಯುವ ಬೆಂಕಿಗೆ ತುಪ್ಪ ಸುರಿದ ಅಶೋಕ್
ಅಶೋಕ್, ಡಿಕೆ ಸುರೇಶ್-ಸಿದ್ದರಾಮಯ್ಯ
Edited By:

Updated on: Jun 28, 2024 | 3:57 PM

ಕೋಲಾರ, (ಜೂನ್ 28): ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್​ ಸೋಲಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಕೋಲಾರದಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅಶೋಕ್, ಡಾ.ಜಿ.ಪರಮೇಶ್ವರ್​ ರೀತಿಯಲ್ಲೇ ಡಿ.ಕೆ.ಸುರೇಶ್​ ಅವರನ್ನು ಸೋಲಿಸಲಾಗಿದೆ. ಡಿಕೆ ಶಿವಕುಮಾರ್​ ಸಿಎಂ ಸ್ಥಾನ ಕೇಳುತ್ತಾರೆ ಎಂದು ಡಿ.ಕೆ.ಸುರೇಶ್​ ಸೋಲಿಸಲಾಗಿದೆ. ಈಗ ಡಿ.ಕೆ.ಶಿವಕುಮಾರ್ ಚದುರಂಗದಾಟ ಶುರು ಮಾಡಿದ್ದಾರೆ. ಹೀಗಾಗಿಯೇ ಸ್ವಾಮೀಜಿ ಬಾಯಲ್ಲಿ ಸಿಎಂ ಸ್ಥಾನದ ವಿಚಾರ ಹೇಳಿಸಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸ್ವಾಮೀಜಿಯವರ ಕಡೆಯಿಂದ ಕೇಳಿಸಿದ್ದು ಡಿಕೆಶಿಯೇ

ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಡಿಕೆಶಿಯವರ ಬಲ ಕುಗ್ಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಕೆ ಸುರೇಶ್ ಅವರ ಸೋಲಿಗೆ ಪರೋಕ್ಷವಾಗಿ ಕಾರಣವಾಗಿದ್ದಾರೆ. ಇದನ್ನು ಮನಗಂಡಿರುವ ಡಿಕೆ ಶಿವಕುಮಾರ್ ಅವರು, ಕಾಂಗ್ರೆಸ್ಸಿನಲ್ಲಿ ತಮ್ಮ ಚದುರಂಗದಾಟ ಶುರು ಮಾಡಿದ್ದಾರೆ. ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ ಒಕ್ಕಲಿಗ ಶ್ರೀಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಂದಲೇ ಸಿಎಂ ಸ್ಥಾನವನ್ನು ಡಿಕೆಶಿಯವರಿಗೆ (ಒಕ್ಕಲಿಗರಿಗೆ) ಬಿಟ್ಟುಕೊಂಡುವಂತೆ ಕೇಳಿಸಿದ್ದಾರೆ. ಇದು ಮೇಲ್ನೋಟಕ್ಕೆ, ಸ್ವಾಮೀಜಿಗಳು ಸಹಜವಾಗಿ ಕೇಳಿರುವ ಪ್ರಶ್ನೆ ಎಂದುಕೊಂಡಿದ್ದರೂ, ಇದರ ಸೂತ್ರಧಾರ ಯಾರೆಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ’’ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರೇ ನೀವು ಸಿಎಂ ಆಗಿ ಕಾರ್ಯನಿರ್ವಹಿಸಿದ್ದು ಸಾಕು. ನೀವು ಧರ್ಮಾತ್ಮರಾಗಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವಂತೆ ಶ್ರೀಗಳಿಂದ ಹೇಳಿಸಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಏನಾದರು ಪಾಪಿನಾ? ಇದರ ಸೂತ್ರಧಾರ ಯಾರೆಂದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ. ಇನ್ನೊಂದು ಕಡೆ 3 ಡಿಸಿಎಂ ಮಾಡಿ ಎಂದು ಗೊಂದಲ ಸೃಷ್ಟಿಸಿದ್ದಾರೆ. ರಾಜ್ಯದಲ್ಲಿ ಗೊಂದಲದಲ್ಲಿರುವ ಈ ಸರ್ಕಾರ ಹೆಚ್ಚು ದಿನ ಇರುವುದಿಲ್ಲ. ಅವರದ್ದೇ ಶಾಸಕರ ಶಾಪದಿಂದ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ ಎಂದು ಅಶೋಕ್ ಭವಿಷ್ಯ ನುಡಿದರು.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಇನ್ನೂ ಮೂರ್ನಾಲ್ಕು ಸಚಿವರ ರಾಜೀನಾಮೆ: ಅಶೋಕ್ ಹೊಸ ಬಾಂಬ್

ಈಗಾಗಲೇ ಹೆಚ್ಚುವರಿ ಡಿಸಿಎಂ ಹಾಗೂ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಕಾಂಗ್ರೆಸ್​​ನಲ್ಲಿ ಬೇರೆ ರೀತಿಯಾದ ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣದ ನಾಯಕರು ತಮ್ಮದೇ ದಾಟಿಯಲ್ಲಿ ಪರೋಕ್ಷವಾಗಿ ಆರೋಪ-ಪ್ರತ್ಯಾರೋಪಗಿಳಿದ್ದಾರೆ. ಹೀಗಾಗಿ ಕಾಂಗ್ರೆಸ್​ನಲ್ಲಿ ನಾಯಕರ ನಡುವೆ ಮುಸುಕಿನ ಗುದ್ದಾಟಗಳು ನಡೆದಿವೆ.

ಇದೀಗ ಇದರ ಮಧ್ಯ ಅಶೋಕ್ ಅವರು, ಡಿಕೆ ಸುರೇಶ್ ಅವರನ್ನು ಸೋಲಿಸಿದ್ದು, ಸಿದ್ದರಾಮಯ್ಯ ಎನ್ನುವ ಗಂಭೀರ ಆರೋಪ ಮಾಡಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Loading...
Unable to load recommendations.
Follow Us